Category: ಸುದ್ದಿ

  • ಕುಂದಾಪುರ :ಪದವಿ ಪರೀಕ್ಷೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿಗೆ ಎಂಟು ರ್ಯಾಂಕ್

    ಕುಂದಾಪುರ :ಪದವಿ ಪರೀಕ್ಷೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿಗೆ ಎಂಟು ರ್ಯಾಂಕ್

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್/ ಅಕ್ಟೋಬರ್ 2022 ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಎಂಟು ರ್ಯಾಂಕ್‍ಗಳು ದೊರಕಿವೆ.

    ಬಿ.ಸಿ.ಎ ಪದವಿ ಪರೀಕ್ಷೆಯಲ್ಲಿ ಬೈಂದೂರು ತಾಲೂಕಿನ ಯಡ್ತೆರೆ ಗ್ರಾಮದ ಗೋವಿಂದ ಪೂಜಾರಿ ಅವರ ಪುತ್ರಿ ದೀಕ್ಷಾ ಅವರಿಗೆ ನಾಲ್ಕನೇ ರ್ಯಾಂಕ್ ಮತ್ತು ಬೈಂದೂರು ತಾಲೂಕಿನ ಕೊಡೇರಿ ಗ್ರಾಮದ ಕೃಷ್ಣ ಪೂಜಾರಿ ಅವರ ಅವರ ಪುತ್ರಿ ರಮಿತಾ ಅವರಿಗೆ ಆರನೇ ರ್ಯಾಂಕ್ ಕುಂದಾಪುರದ ಕಂದಾವರ ಗ್ರಾಮದ ನಾಗಭೂಷಣ ಅವರ ಪುತ್ರಿ ಸ್ಪೂರ್ತಿ ಅವರಿಗೆ ಎಂಟನೇ ರ್ಯಾಂಕ್, ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ರವೀಂದ್ರ ಶೆಟ್ಟಿ ಅವರ ಪುತ್ರ ರಕ್ಷಿತ್ ಕುಮಾರ್ ಶೆಟ್ಟಿ ಅವರಿಗೆ ಒಂಬತ್ತನೇ ರ್ಯಾಂಕ್ ದೊರೆತಿದೆ.

    ಬಿ.ಎಸ್.ಸಿ ಪದವಿ ಪರೀಕ್ಷೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗುರುದತ್ತ ಪೈ ಅವರ ಪುತ್ರ ಸನತ್ ಗುರುದತ್ತ ಪೈ ಅವರಿಗೆ ಏಳನೇ ರ್ಯಾಂಕ್ ದೊರೆತಿದೆ.

    ಬಿ ಕಾಂ ಪರೀಕ್ಷೆಯಲ್ಲಿ ಕುಂದಾಪುರದ ತಾಲೂಕಿನ ಕೋಟೇಶ್ವರ ಗ್ರಾಮದ ಪ್ರಸನ್ನ ಹೆಬ್ಬಾರ್ ಇವರ ಪುತ್ರಿ ಪ್ರತೀಕ್ಷಾ ಇವರಿಗೆ ಒಂಬತ್ತನೇ ರ್ಯಾಂಕ್ ದೊರೆತಿದೆ.

    ಬಿ.ಬಿ.ಎ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಹೆಮ್ಮಾಡಿ ಗ್ರಾಮದ ಅಬ್ದುಲ್ ರೆಹಮಾನ್ ಅವರ ಪುತ್ರಿ ಶಾಹಿನಾ ಅವರಿಗೆ ಆರನೇ ರ್ಯಾಂಕ್ ಮತ್ತು ಕುಂದಾಪುರದ ಆಸ್ಟಿನ್ ಮೆಂಡೊನ್ಸಾ ಅವರ ಪುತ್ರಿ ಅಲಸ್ಟಿನ್ ಮೆಂಡೊನ್ಸಾ ಅವರಿಗೆ ಏಳನೇ ರ್ಯಾಂಕ್ ದೊರೆತಿದೆ.

    ಇವರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿ ಬೋಧಕ ಬೋಧಕೇತರರು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಅಚ್ಲಾಡಿ: ವನದೇವತೆ ಶ್ರೀಯಕ್ಷೇಶ್ವರೀ ದೇಗುಲ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

    ಅಚ್ಲಾಡಿ: ವನದೇವತೆ ಶ್ರೀಯಕ್ಷೇಶ್ವರೀ ದೇಗುಲ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

    ಕುಂದಾಪುರ ಮಿರರ್ ಸುದ್ದಿ…

    ಕೋಟ : ಅಚ್ಲಾಡಿ ಗಾಣಿಗರಬೆಟ್ಟು-ಕೊಲಗೇರಿಯಲ್ಲಿರುವ ಶ್ರೀಯಕ್ಷೇಶ್ವರೀ ಸಪರಿವಾರ ವನದೇವತೆ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಈ ಪ್ರಯುಕ್ತ ಶಿಲಾನ್ಯಾಸ ಕಾರ್ಯಕ್ರಮ ಮಾ.೧೦ರಂದು ಜರಗಿತು.

    ಕೋಟ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಹೊಸ-ಹೊಸ ದೇವಸ್ಥಾನಗಳನ್ನು ನಿರ್ಮಿಸುವುದಕ್ಕಿಂತ ಹಳೆಯ ದೇಗುಲಗಳನ್ನು ಪುನರ್ ನಿರ್ಮಿಸುವುದು ಅತ್ಯಂತ ಪುಣ್ಯದ ಕೆಲಸವಾಗಿದೆ. ಅದೇ ರೀತಿ ಈ ದೇಗುಲದ ಜೀರ್ಣೋದ್ಧಾರದಿಂದ ಊರಿಗೆ ಒಳಿತಾಗಲಿದೆ ಎಂದರು.

    ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಜೀರ್ಣೋದ್ಧಾರದ ಯೋಜನೆಯ ಮಾಹಿತಿ ನೀಡಿ, ಈ ಕ್ಷೇತ್ರವು ಅತ್ಯಂತ ಪುರಾತನವಾಗಿದ್ದು ವನದೇವತೆಯಾಗಿ ಯಕ್ಷೇಶ್ವರೀ ನೆಲೆಸಿದ ಸನ್ನಿಧಿಯಾಗಿದೆ. ದಶಕಗಳ ಹಿಂದೆ ಗುಡಿಯಲ್ಲಿ ದೇವಿಯನ್ನು ಪ್ರತಿಷ್ಢಾಪಿಸಲಾಗಿತ್ತು. ಆದರೆ ಇದೀಗ ಮೂಲದಂತೆ ವನ ದೇವತೆಯಾಗಿ ಯಕ್ಷೇಶ್ವರೀಯನ್ನು ಪ್ರತಿಷ್ಠಾಪಿಸಬೇಕು ಹಾಗೂ ಕ್ಷೇತ್ರವು ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಔದ್ಯೋಗಿಕ ಮುಂತಾದ ಸಮಸ್ಯೆಗಳನ್ನು ಪರಿಹರಿಸುವ ಕಾರಣೀಕ ಸ್ಥಳವಾಗಿದೆ. ಇಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಎಲ್ಲಾ ಕಷ್ಟಗಳು ಶಮನವಾಗುತ್ತದೆ ಎಂದು ತಾಂಬೂಲ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿದೆ. ಅದೇ ರೀತಿ ಕ್ಷೇತ್ರವನ್ನು ನೈಸರ್ಗಿಕವಾಗಿ ನಿರ್ಮಿಸಲು ಯೋಜಿಸಿದ್ದು, ಭಜನಾ ಮಂಟಪ, ಪರಿವಾರ ದೇವರುಗಳ ಪುನರ್ ಪ್ರತಿಷ್ಠೆ ಮೊದಲಾದ ಕಾರ್ಯಕ್ರಮಗಳನ್ನು ಮೊವ್ವತ್ತು ಲಕ್ಷ ಅಂದಾಜು ವೆಚ್ಚದಲ್ಲಿ ಹಾಕಿಕೊಳ್ಳಲಾಗಿದೆ ಎಂದರು.

    ಬೆಂಗಳೂರಿನ ಕ್ಯಾಟರಿಂಗ್ ಉದ್ಯಮಿ ಪ್ರಕಾಶ್ ಶೆಟ್ಟಿ ಉಳ್ಳೂರು, ಉದ್ಯಮಿ ಗಣೇಶ್ ಪ್ರಸಾದ್ ಕಾಂಚನ್ ಶಿರಿಯಾರ, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಜೀರ್ಣೋದ್ಧಾರಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.

    ವಡ್ಡರ್ಸೆ ಗ್ರಾ.ಪಂ. ಸದಸ್ಯ ಚಂದ್ರಶೇಖರ್ ಶೆಟ್ಟಿ ಅಚ್ಲಾಡಿ, ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಸವಿತಾ ಪ್ರಕಾಶ್ ಆಚಾರ್ಯ, ದೇಗುಲದ ಅರ್ಚಕರಾದ ಗಣೇಶ್ ಭಟ್ ಅಚ್ಲಾಡಿ ಹಾಗೂ ಜೀರ್ಣೋದ್ಧಾರ ಸಮಿತಿ, ಆಡಳಿತ ಸಮಿತಿಯ ಮುಖ್ಯಸ್ಥರು ಉಪಸ್ಥಿತರಿದ್ದರು.

    ಜೀರ್ಣೋದ್ಧಾರ ಸಮಿತಿ ಸದಸ್ಯ ಸುಶಾಂತ್ ಶೆಟ್ಟಿ ಅಚ್ಲಾಡಿ ಕಾರ್ಯಕ್ರಮ ನಿರೂಪಿಸಿದರು.

  • ಮಾ.೧೧ರಂದು ಸಾಲಿಗ್ರಾಮದಲ್ಲಿ ಮಾನವಾಧಿಕಾರ ಪರಿಷತ್ ಉದ್ಘಾಟನೆ

    ಮಾ.೧೧ರಂದು ಸಾಲಿಗ್ರಾಮದಲ್ಲಿ ಮಾನವಾಧಿಕಾರ ಪರಿಷತ್ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ವಿಶ್ವ ಮಾನವಾಧಿಕಾರ ಹಕ್ಕು ಲೋಕ ಪರಿಷತ್ ಇದರ ಉಡುಪಿ ಜಿಲ್ಲಾ ಘಟಕದ ಉದ್ಘಾಟನೆ ಮಾ.೧೧ರಂದು ಸಂಜೆ ೫ಗಂಟೆಗೆ ಸಾಲಿಗ್ರಾಮದ ಬಯಲು ರಂಗಮಂದಿರದಲ್ಲಿ ಜರಗಲಿದೆ ಎಂದು ಸಂಸ್ಥೆಯ ನಿಯೋಜಿತ ಅಧ್ಯಕ್ಷ ಶ್ಯಾಮ್‌ಸುಂದರ್ ನಾರಿ ಅವರು ಮಾ.೯ರಂದು ಸಾಲಿಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಡಾ| ಶಂಕರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕುಂದಾಪುರ ಉಪ ವಿಭಾಗಾಽಕಾರಿ ರಶ್ಮಿ ಕಿಶೋರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್ ಮೂರ್ತಿ, ಸಾಲಿಗ್ರಾಮ ದೇಗುಲದ ಅಧ್ಯಕ್ಷ ಡಾ|ಕೆ.ಎಸ್.ಕಾರಂತ್, ಪ.ಪಂ. ಅಧ್ಯಕ್ಷೆ ಸುಲತಾ ಹೆಗ್ಡೆ ಮೊದಲಾದವರು ಉಪಸ್ಥಿತರಿರುವರು, ಸಂಸ್ಥೆಯ ಜಿಲ್ಲಾ ಅಧ್ಯಕ್ಷರಾಗಿ ಶ್ಯಾಮ್‌ಸುಂದರ್ ನಾರಿ, ಪ್ರಧಾನ ಕಾರ್ಯದರ್ಶಿಯಾಗಿ ದೇವೇಂದ್ರ ಸುವರ್ಣ ಅಽಕಾರ ಸ್ವೀಕರಿಸಲಿದ್ದಾರೆ ಎಂದರು. ಕಾರ್ಯಕ್ರಮದ ಪ್ರಯುಕ್ತ ಬೆಳಗ್ಗೆ ೧೦ಗಂಟೆಯಿಂದ ೩ಗಂಟೆ ತನಕ ಆರೋಗ್ಯ ತಪಾಸಣೆ ಉಚಿತ ಶಿಬಿರ ಜರಗಲಿದೆ ಎಂದು ತಿಳಿಸಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಡಾ| ಶಂಕರ್ ಶೆಟ್ಟಿ, ಜಿಲ್ಲಾ ಪದಾಽಕಾರಿಗಳಾದ ಅಶೋಕ್ ಪೂಜಾರಿ ಸಾಲಿಗ್ರಾಮ, ಮಾಧವ ಕಾರ್ಕಡ, ಗಣೇಶ್ ತಿಂಗಳಾಯ, ದೇವೇಂದ್ರ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.

  • ಕುಂದಾಪುರ : ತೆಕ್ಕಟ್ಟೆಯ ಮಾವಿನ ತೋಪಿನಲ್ಲಿ 7ನೇ ಚಿರತೆ ಸೆರೆ – ಆತಂಕದಲ್ಲಿ ಗ್ರಾಮಸ್ಥರು

    ಕುಂದಾಪುರ : ತೆಕ್ಕಟ್ಟೆಯ ಮಾವಿನ ತೋಪಿನಲ್ಲಿ 7ನೇ ಚಿರತೆ ಸೆರೆ – ಆತಂಕದಲ್ಲಿ ಗ್ರಾಮಸ್ಥರು

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಅರೆಬೈಲು ಸತೀಶ ದೇವಾಡಿಗ ಅವರ ಮನೆಯ ಸಾಕು ನಾಯಿಯ ಮೇಲೆ ಚಿರತೆಯೊಂದು ದಾಳಿ ನಡೆಸಲು ಯತ್ನಿಸಿದ ಘಟನೆ ಮಾ.8 ರಂದು ರಾತ್ರಿ ಸಂಭವಿಸಿದ ಹಿನ್ನೆಲೆಯಲ್ಲಿ ನಡೆಸಲಾದ ಆಪರೇಷನ್ ಚೀತಾ ಇಂದು ಮಾರ್ಚ್ 10ರಂದು ಯಶಸ್ವಿಯಾಗಿದೆ. ಆ ಮೂಲಕ ಏಳನೇ ಚಿರತೆಯ ಬಂಧನವಾಗಿದೆ.

    ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಹಾಗೂ ಜನವಸತಿಯಿರುವ ಪ್ರದೇಶದ ಸನಿಹದಲ್ಲೇ ಇರುವ ತೋಪಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚಿರತೆ ಕಾಟ ನಿರಂತರವಾಗಿದ್ದು, ಭಾನುವಾರ ಆರನೇ ಚಿರತೆಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ
    ಬೋನಿಟ್ಟ ಅರಣ್ಯ ಇಲಾಖೆ: ಈ ಭಾಗದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಚಿರತೆ ಕಾಟವಿದ್ದು ಸಾರ್ವಜನಿಕರು ಆತಂಕಿತ ರಾಗಿದ್ದಾರೆ. ಅರಣ್ಯ ಇಲಾಖೆ ಸೆಪ್ಟಂಬರ್ 8ರಂದು ಈ ಜಾಗದಲ್ಲಿ ಬೋನ್ ಇರಿಸಿದ್ದು, ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಉಪವಲಯ ಅರಣ್ಯಾಧಿಕಾರಿ ಉದಯ್, ತೆಕ್ಕಟ್ಟೆ ಗ್ರಾ.ಪಂ ಉಪಾಧ್ಯಕ್ಷ ಸಂಜೀವ ದೇವಾಡಿಗ, ಪಿಡಿಓ ಸುನೀಲ್ ಭೇಟಿ ನೀಡಿದರು.

    4 ವರ್ಷಗಳ ಅಂತರದಲ್ಲಿ 6 ಚಿರತೆ ಸೆರೆ: ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುವುದು ಮಾತ್ರವಲ್ಲದೇ ಹಾಡುಹಗಲೇ ಪ್ರತಕ್ಷವಾಗಿ ಚಿರತೆ ನಿರಂತರವಾಗಿ ಉಪಟಳ ನೀಡುತ್ತಿದ್ದು ಮಾಲಾಡಿಯ ಎಕ್ರೆಗಟ್ಟಲೆ ಇರುವ ಈ ತೋಟದಲ್ಲಿ 2018 ಆಗಸ್ಟ್ ತಿಂಗಳಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಬಳಿಕ ಚಿರತೆ ಆಗ್ಗಾಗೆ ಕಾಣಿಸಿಕೊಳ್ಳುತ್ತಿದ್ದು ಅ.6, 2019, ಡಿ.12, 2019, ಡಿ.24, 2019 ರಲ್ಲಿ ಹಾಗೂ 2022 ರ ಎಪ್ರಿಲ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ‘ಆಪರೇಶನ್ ಚೀತಾ’ ಕಾರ್ಯಾಚರಣೆ ನಡೆಸಿದ ಇಲಾಖೆ ಒಟ್ಟು 6ಚಿರತೆಗಳನ್ನು ಸೆರೆ ಹಿಡಿದಿತ್ತು. ಇದೀಗ ಏಳನೇ ಚಿರತೆ ಬಂಧಿಯಾಗಿದೆ.

    ಆದರೆ ಇಷ್ಟೊಂದು ಚಿರತೆಗಳು ಇಲ್ಲಿ ಕಾಣಿಸಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಚಿರತೆ ಉಪಟಳವಿರುವ ಮಾಲಾಡಿ ತೋಟದ ಬಳಿಯೇ ಸರಕಾರಿ ಶಾಲೆ, ಅಂಗನವಾಡಿ ಹಾಗೂ ದೇವಸ್ಥಾನ ಸೇರಿದಂತೆ ವಸತಿ ಪ್ರದೇಶವಿದೆ. ಆಸುಪಾಸಿನಲ್ಲಿ 50ಕ್ಕೂ ಅಧಿಕ ಮನೆಗಳಿದೆ. ಅಲ್ಲದೇ ಅಪಾಯಕಾರಿಯಾಗಿರುವ ಕಪ್ಪು ಚಿರತೆಯೂ ಕಾಣಿಸಿಕೊಳ್ಳುವುದರ ಜೊತೆಗೆ ನಿರಂತರವಾಗಿ ಚಿರತೆ ಕಾಟದಿಂದ ಇಲ್ಲಿನ ಜನರು ಇದೀಗ ಮತ್ತೆ ಭಯಭೀತರಾಗಿದ್ದಾರೆ.

  • ಬೀಜಾಡಿ -ಮಾ.13ರಂದು ಬೀಜಾಡಿಯಲ್ಲಿ ಏಕಪವಿತ್ರ ನಾಗಮಂಡಲೋತ್ಸವ

    ಬೀಜಾಡಿ -ಮಾ.13ರಂದು ಬೀಜಾಡಿಯಲ್ಲಿ ಏಕಪವಿತ್ರ ನಾಗಮಂಡಲೋತ್ಸವ

    ಕುಂದಾಪುರ ಮಿರರ್ ‌ಸುದ್ದಿ…

    ಕುಂದಾಪುರ :ಶ್ರೀ ವೆಂಕಟಾಚಲಯ್ಯ ಅವಧೂತರ ಆಶೀವ೯ದದೊಂದಿಗೆ ಬೀಜಾಡಿ  ಜಾನಕಿ ಮತ್ತು ರಾಮಚಂದ್ರ ಹಾಗೂ ಕುಟುಂಬಿಕರ ಮೂಲನಾಗಬನದಲ್ಲಿ ಮಾ.13ರಂದು ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಕೆಳಬನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ ಜರುಗಲಿದೆ.

    ವೇದಮೂತಿ೯ ಶ್ರೀ ಮಧುಸೂಧನ ಬಾಯಿರಿ ಮಣೂರು ಇವರ ನೇತೃತ್ವದಲ್ಲಿ ಮಾ.12ರಂದು ಬೆಳಿಗ್ಗೆ ಪ್ರಾರ್ಥನಾ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ, ಗಣೇಶ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಋತ್ವಿಗ್ವರಣೀ ಗಣಯಾಗ, ಪವಮಾನ ಹೋಮ, ಆಯುತ ಸಂಖ್ಯಾತಿಲ ಹೋಮ, ಸಂಜೆ ಶ್ರೀ ದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ವಾಸ್ತು ರಾಕ್ಷೋಘ್ನ ಹೋಮ, ದಿಗ್ಬಲಿ ಕಾರ್ಯಕ್ರಮಗಳು ನಡೆಯಲಿದೆ.
    ಮಾ.13ರಂದು ಬೆಳಿಗ್ಗೆ ಪಂಚ ವಿಂಶತಿದ್ರವ್ಯ ಕಲಶಪೂರ್ವಕ ಕಲಾತತ್ವ ಬ್ರಹ್ಮಕಲಶ ಸ್ಥಾಪನೆ, ಅಧಿವಾಸ ಹೋಮ, ವೇದ ಪಾರಾಯಣ, ವಟುಬ್ರಾಹ್ಮಣ-ಸುವಾಸಿನೀ ಆರಾಧನೆ, ಆಚಾರ್ಯ ಪೂಜೆ, ದಂಪತಿ ಪೂಜೆ, ಶ್ರೀ ದೇವರ ಸಂದರ್ಶನ, ಪಲ್ಲಪೂಜೆ, ಮಧ್ಯಾಹ್ನ ಗಂಟೆ 12.30ಕ್ಕೆ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.
    ಸಂಜೆ ಗಂಟೆ 7ಕ್ಕೆ ನಾಗನಿಗೆ ಹಾಲಿಟ್ಟು ಸೇವೆ, ಮಂಡಲ ಪೂಜೆ, ಏಕಪವಿತ್ರ ನಾಗಮಂಡಲೋತ್ಸವ ನಂತರ ಮಹಾಪ್ರಸಾದದೊಂದಿಗೆ ಮಹಾಮಂತ್ರಾಕ್ಷತೆ ವಿತರಣೆಯಾಗಲಿದೆ.

    ಮಾ.11ರಂದು ಹಸಿರು ಹೊರೆಕಾಣಿಕೆ ಮೆರವಣಿಗೆ:
    ಏಕಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ಮಾ.11ರಂದು ಸಂಜೆ 4.30ರಿಂದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಿಂದ ಹಸಿರು ಹೊರೆಕಾಣಿಕೆ ಹೊರಡಲಿದೆ. ಈ ಹೊರೆಕಾಣಿಕೆ ಮೆರವಣಿಗೆಗೆ ಸಮಾಜ ಗಣ್ಯರು ಹಸಿರು ನಿಶಾನೆ ತೋರಿಸಿ ಭವ್ಯ ಪುರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಈ ಪುರಮೆರವಣಿಗೆಯಲ್ಲಿ ತಟ್ಟಿರಾಯ, ಕೀಲು ಕುದುರೆ, ಪಂಚವಾದ್ಯಗಳು, ಭಜನೆ ನಾಮ ಸಂಕೀತ೯ನೆ,
    ಚಂಡೆವಾದನ, ಕಳಸ ಹಿಡಿದ ಮಹಿಳೆಯರು ಸೇರಿದಂತೆ ಇನ್ನಿತರ ಟ್ಯಾಬ್ಲೋಗಳು ಮೆರವಣಿಗೆಯ ವೈಭವನ್ನು ಹೆಚ್ಚಿಸಲಿದೆ.

    ಮಾ.13ರಂದು ಧಾರ್ಮಿಕ ಸಭೆ.

    ಏಕಪವಿತ್ರ ನಾಗಮಂಡಲೋತ್ಸವದ ಧಾಮಿ೯ಕ ಸಭಾ ಕಾರ್ಯಕ್ರಮವು ಮಾ.13ರಂದು ಸಂಜೆ 4 ಗಂಟೆಗೆ ಜರುಗಲಿದೆ.

    ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಧಾಮಿ೯ಕ ಉಪನ್ಯಾಸ ನೀಡಲಿದ್ದಾರೆ. ಕೋಟೇಶ್ವರ ವಲಯದ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ವಾದಿರಾಜ್ ಹೆಬ್ಬಾರ್, ರೋಟರಿ ಸಹಾಯಕ ಗರ್ವನರ್ ಪ್ರಭಾಕರ್ ಬಿ ಕುಂಭಾಸಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕಲಾಬಳಗದ ವತಿಯಿಂದ ಮಕ್ಕಳ ಯಕ್ಷಗಾನ ಕಂಸ ದಿಗ್ವಿಜಯ ಪ್ರದರ್ಶನಗೊಳ್ಳಲಿದೆ.

  • ಕೋಟ :ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪಂಚವರ್ಣ ಸಾಧಕ ಮಹಿಳಾ ಪುರಸ್ಕಾರ

    ಕೋಟ :ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪಂಚವರ್ಣ ಸಾಧಕ ಮಹಿಳಾ ಪುರಸ್ಕಾರ

    ನಿಸ್ವಾರ್ಥ ಸೇವೆಯೇ ನಮ್ಮ ಜೀವದ ಧ್ಯೇಯವಾಗಲಿ – ಸಮಾಜ ಸೇವಕಿ ಡಾ.ವಾಣಿಶ್ರೀ ಐತಾಳ್

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಜೀವನದಲ್ಲಿ ನಿಸ್ವಾರ್ಥ ಸೇವೆಯೇ ನಮ್ಮ ಮೊದಲ ಆದ್ಯತೆಯಾಗಬೇಕು ಆಗ ಮಾತ್ರ ನಮ್ಮ ಬದುಕಿನಲ್ಲಿ ಸಾರ್ಥಕ್ಯ ಕಾಣಲು ಸಾಧ್ಯ ಎಂದು ಸಮಾಜಸೇವಕಿ ಡಾ.ವಾಣಿಶ್ರೀ ಐತಾಳ್ ಹೇಳಿದರು.

    ಕೋಟದ ಪಂಚವರ್ಣ ಯುವಕ ಮಂಡಲ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪಂಚವರ್ಣ ಸಾಧಕ ಮಹಿಳಾ ಪುರಸ್ಕಾರ ಪಡೆದು ಮಾತನಾಡಿ ಜೀವನದಲ್ಲಿ ಏನಾದರೂ ಗುರಿ ಇರಿಸಿ ಬದುಕಬೇಕು ಅದು ಸಮಾಜದ ಹಿತಕ್ಕೆ ಪೂರಕವಾಗಿ ಇರಬೇಕು ಆ ಮೂಲಕ ಯಶಸ್ಸಿನ ದಾರಿ ಸುಗಮವಾಗಲಿದೆ.ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಗೆ ನಿಂತಿದ್ದಾಳೆ ಇದು ಮಹಿಳಾ ದಿನಾಚರಣೆಗೆ ಅರ್ಥಪೂರ್ಣವಾದ ಬೆಳವಣಿಗೆಯಾಗಿದೆ ಎಂದು ಸನ್ಮಾನ ಗೌರವಗಳು ಇನ್ನಷ್ಟು ಸಮಾಜಮುಖಿ ಕಾರ್ಯಗಳಿಗೆ ವೇಗ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ ಎಂದು ಪಂಚವರ್ಣ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಗಣ್ಯರ ಸಮ್ಮುಖದಲ್ಲಿ ಡಾ.ವಾಣಿಶ್ರೀ ಯವರಿಗೆ ಪಂಚವರ್ಣ ಮಹಿಳಾ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಕೋಟ ಎಸ್‍ಎಲ್‍ಆರ್‍ಎಂ ಘಟಕದ ಮುಖ್ಯಸ್ಥೆ ಲೋಲಾಕ್ಷಿ ಕೊತ್ವಾಲ್ ಪುರುಷ ಪ್ರದಾನ ಸಮಾಜದಲ್ಲಿ ಮಹಿಳೆ ಬಹು ಎತ್ತರಕ್ಕೆ ಬೆಳೆಯುತ್ತಿದ್ದಾಳೆ. ಇದಕ್ಕೆ ಪುರುಷರ ಪ್ರೋತ್ಸಾಹವು ಅಡಗಿದೆ, ಇಂದಿನ ಯುಗ ಮಹಿಳಾ ಯುಗವಾಗಿ ಮಾರ್ಪಾಡುಗೊಂಡಿದೆ.

    ಇಲ್ಲಿ ಮಹಿಳೆ ಸರ್ವಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಸಾಧನೆ ಪಲ್ಲಕ್ಕಿ ಏರುತ್ತಿದ್ದಾಳೆ ಇದೊಂದು ಆರೋಗ್ಯಕರವಾದ ಬೆಳವಣಿಗೆಯಾಗಿದೆ. ಮಹಿಳಾ ದಿನಾಚರಣೆಗಳು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಪಂಚವರ್ಣ ಮಹಿಳಾ ಮಂಡಲ ಸೇವಾ ಕಾರ್ಯಕ್ಕೆ ಬಲ ತುಂಬಿದೆ ಎಂದು ಅಭಿಪ್ರಾಯಪಟ್ಟರು.

    ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ವಹಿಸಿದ್ದರು.

    ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಲತಾ ಎಸ್ ಹೆಗ್ಡೆ, ಪಾಂಡೇಶ್ಚರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲೀಲಾವತಿ ಗಂಗಾಧರ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ, ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ , ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

    ಮಹಿಳಾ ಮಂಡಲದ ಉಪಾಧ್ಯಕ್ಷೆ ಸುಜಾತ ಕುಮಾರ್ ಸನ್ಮಾನಪತ್ರ ವಾಚಿದರು. ಶಕೀಲ ಪೂಜಾರಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸುಜಾತ ಬಾಯರಿ ನಿರೂಪಿಸಿ ವಂದಿಸಿದರು. ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

  • ಶ್ರೀ ಶಾಂಭವೀ ಶಾಲೆ ಹಳೇ ವಿದ್ಯಾರ್ಥಿ ಸಂಘ ರಚನೆ ಸಭೆ

    ಶ್ರೀ ಶಾಂಭವೀ ಶಾಲೆ ಹಳೇ ವಿದ್ಯಾರ್ಥಿ ಸಂಘ ರಚನೆ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಶ್ರೀ ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು ಕೋಟ ಇದರ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಶಾಲಾ ಹಳೇವಿದ್ಯಾರ್ಥಿ ಸಂಘ ರಚನೆ ಅದರ ಪೂರ್ವಭಾವಿ ಸಭೆ ಇದೇ ಬರುವ ಮಾ.19 ರ ಭಾನುವಾರ ಶಾಂಭವೀ ಶಾಲಾ ಸಭಾಂಗಣದಲ್ಲಿ ಪೂರ್ವಾಹ್ನ 10ಗ. ಏರ್ಪಡಿಸಲಾಗಿದೆ.

    ಶಾಲಾ ಹಳೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಲು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಕೋರಿದ್ದಾರೆ.

  • ಮೊಗವೀರ ಯುವ ಸಂಘಟನೆಯಿಂದ ಬೃಹತ್ ರಕ್ತದಾನ ಶಿಬಿರ ಆಯೋಜನೆ

    ಮೊಗವೀರ ಯುವ ಸಂಘಟನೆಯಿಂದ ಬೃಹತ್ ರಕ್ತದಾನ ಶಿಬಿರ ಆಯೋಜನೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಕೋಟ ಘಟಕ ಹಾಗೂ ಮಹಿಳಾ ಘಟಕದ ಡಾ.ಜಿಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ, ಗೀತಾನಂದ ಫೌಂಡೇಶನ್ ಮಣೂರು, ಕೆ.ಎಂ.ಸಿ ಮಣಿಪಾಲ ನೇತ್ರತ್ವದಲ್ಲಿ ಕೋಟ ಗ್ರಾಮಪಂಚಾಯತ್, ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಘಟಕ ಕೋಟ, ಬಾರಿಕೆರೆ ಯುವಕ ಮಂಡಲ ಕೋಟ, ಅರಮವಿಜಯ ಸ್ಪೋಟ್ರ್ಸ್ ಅಂಡ್ ಕಲ್ಚರ್ ಕ್ಲಬ್ ಪಡುಕರೆ, ಅಮೃತ ಯುವಕ ಸಂಘ ಕದ್ರಿಕಟ್ಟು ಕೋಟ ಇವರ ಸಹಯೋಗದೊಂದಿಗೆ ಇದೇ ಬರುವ ಮಾ.12ರಂದು ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ಆಯೋಜಿಸಲಾಗಿದೆ.

    ರಕ್ತದಾನ ನೀಡಲಿಚ್ಛಿಸುವವರು ಅದೇ ದಿನ ಪೂರ್ವಾಹ್ನ 8.30ರಿಂದ2.00ಗ ವರಗೆ ಆಗಮಿಸಿ ನೊಂದಾಯಿಸಿ ರಕ್ತದಾನ ನೀಡಬಹುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

  • ಕುಂದಾಪುರ: ಕುಂದಾಪುರದಲ್ಲಿ ಹೋಳಿ ಹಬ್ಬ ಸಂಭ್ರಮ

    ಕುಂದಾಪುರ: ಕುಂದಾಪುರದಲ್ಲಿ ಹೋಳಿ ಹಬ್ಬ ಸಂಭ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ನಗರದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಂದ ಆಚರಿಸಲಾಯಿತು. ಮಾ.8ರಂದು ಸಂಭ್ರಮದ ಹೋಳಿ ಮೆರವಣಿಗೆ ನಡೆಯಿತು.

    ಹೋಳಿ ಕೊಂಕಣಖಾರ್ವಿ ಸಮಾಜದವರ ಅತೀ ದೊಡ್ಡ ಹಬ್ಬ. ಒಂದು ವಾರವಿಡೀ ನಡೆಯುವ ಹೋಳಿ ಹಬ್ಬದ ಅಂತಿಮ ದಿನವಾಗಿ ಬುಧವಾರ ಬಣ್ಣದ ಹಬ್ಬವನ್ನಾಗಿ ಆಚರಿಸಲಾಯಿತು.

    ಕುಂದಾಪುರದಲ್ಲಿ ನಡೆಯುವ ಹೋಳಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಕೊಂಕಣ ಖಾರ್ವಿ ಸಮಾಜದವರು ಈ ಹಬ್ಬವನ್ನು ಅದ್ದೂರಿಯಿಂದ ಆಚರಿಸುತ್ತಾರೆ. ಪ್ರತಿಯೊಬ್ಬರು ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಖಾರ್ವಿ ಸಮಾಜದ ದೊಡ್ಡ ಹಬ್ಬವನ್ನಾಗಿ ಹೋಳಿ ಕಾಮದಹನವನ್ನು ಆಚರಿಸಿ, ಸಂಭ್ರಮ ಪಡುತ್ತಾರೆ.

    ಮಂಗಳೂರಿನಿಂದ ಗೋವಾದ ತನಕ ನೆಲೆಸಿರುವ ಕೊಂಕಣ ಖಾರ್ವಿ ಸಮಾಜದವರ ದೊಡ್ಡ ಹಬ್ಬವೆಂದರೆ ಅದು ಹೋಳಿ ಕಾಮದಹನ. ಶಕ್ತಿ ಆರಾಧಕರಾದ ಈ ಜನಾಂಗ ಅತೀವ ಧಾರ್ಮಿಕ ಶೃದ್ದೆಯನ್ನು ಹೊಂದಿರುವ ಸಮುದಾಯ. ಕುಂದಾಪುರದ ಖಾರ್ವಿಕೇರಿಯಲ್ಲಿರುವ ಮಹಾಕಾಳಿ ಇವರ ಆರಾಧ್ಯ ದೇವರು. ಇಲ್ಲಿ ನೆಲೆಸಿರುವ ಶ್ರೀ ಮಹಕಾಳಿ, ಮಹಾ ಸರಸ್ವತಿ, ಮಹಾಲಕ್ಷ್ಮೀಯಾಗಿಯೂ ಕಂಗೊಳಿಸುತ್ತಾಳೆ. ಹೋಳಿ ಹಬ್ಬ ಆರಂಭವಾಗುವುದು ಹಾಗೂ ಮುಕ್ತಾಯವಾಗುವುದು ಕೂಡಾ ಈ ದೇವಸ್ಥಾನದಲ್ಲಿಯೇ.

    ಇಲ್ಲಿ 7 ದಿನಗಳ ಕಾಲ ಹೋಳಿಯನ್ನು ಆಚರಿಸಲಾಗುತ್ತದೆ. ಪ್ರಥಮ ದಿನ ಕುಂದಾಪುರದ ಕುಂದೇಶ್ವರ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆರಳಿ ಹೋಳಿ ಮಾಂಡ್ ಕಾರ್ಯಕ್ರಮ ಮಾಡುತ್ತಾರೆ. ‘ಅಡ್ಡೆ ಬೀಳುವುದು’ ಇದರ ವಿಶೇಷ. ನಂತರ ಆಯಾ ಪ್ರದೇಶದಲ್ಲಿ ಚಂದ್ರನ ಬೆಳಕಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕೋಲಾಟ, ನೃತ್ಯ, ಹೋಳಿ ಹಾಡುಗಳನ್ನು ಪ್ರಸ್ತುತ ಪಡಿಸಲಾಗುತ್ತದೆ.

    ಹೋಳಿ ಸುಡುವ ಗದ್ದೆಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರುತ್ತದೆ. 4ನೇ ದಿನ ಹೋಳಿ ಹುಣ್ಣಿಮೆಯಂದು ಹೋಳಿ ಸುಡುವ ಕಾರ್ಯಕ್ರಮ ನಡೆಯುತ್ತದೆ. ಹೋಳಿ ಸುಡುವ ಸಂದರ್ಭ 5ಸಾವಿರಕ್ಕೂ ಮಿಕ್ಕಿ ಜನ ಭಾಗವಹಿಸುತ್ತಾರೆ.

    ಹೋಳಿ ಈಶ್ವರ ಪಾರ್ವತಿ ದೇವಿಯವರ ಆರಾಧನೆ. ಸ್ಮಶಾನವಾಸಿ ಶಿವನ ಸಂಕೇತವಾಗಿ ರುದ್ರಭೂಮಿಗೆ ಭೇಟಿ ನೀಡಲಾಗುತ್ತದೆ.

    ಹೋಳಿಯ 7ನೇ ದಿನವನ್ನು ಬಣ್ಣದ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಸಾವಿರಕ್ಕೂ ಮಿಕ್ಕಿ ಜನ ಸೇರುತ್ತಾರೆ. ಖಾರ್ವಿಕೇರಿಯ ಮಹಾಕಾಳಿ ದೇವಸ್ಥಾನದಲ್ಲಿ ದೇವಿಯ ಎದುರಿಗೆ ವಿವಿಧ ಬಣ್ಣಗಳನಿಟ್ಟು ದೇವಿಗೆ ಅರ್ಪಣೆ, ದೇವಿಗೆ ಬಣ್ಣ ಹಚ್ಚುವ ಮೂಲಕ ಬಣ್ಣದ ಹಬ್ಬಕ್ಕೆ ವಿದ್ಯುಕ್ತ ಚಾಲನೆ ನೀಡಿದ ಬಳಿಕ ವೈಭವದ ಪುರಮೆರವಣಿಗೆ ನಡೆಯುತ್ತದೆ.

    ಇಂದಿನ ಬಣ್ಣ ಬಣ್ಣದ ನವರಂಗಿನ ಮೆರವಣಿಗೆಯಲ್ಲಿ ಇಡೀ ಕುಂದಾಪುರ ರಂಗುರಂಗಾಗಿ ಕಂಡು ಬಂತು. ಎತ್ತ ನೋಡಿದರೂ ಬಣ್ಣದ ಓಕುಳಿ, ಅದ್ಭುತ ಉತ್ಸಾಹ, ಹಾಡು, ಕುಣಿತಗಳ ಜೋಸ್. ಒಟ್ಟಾರೆಯಾಗಿ ಹೋಳಿ ಹಬ್ಬ ಕುಂದಾಪುರದಲ್ಲಿ ವೈಭವಯುತವಾಗಿ ಸಂಪನ್ನ ಗೊಂಡಿತು.

  • ಕುಂದಾಪುರ :ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು – ವಿಶ್ವ ಮಹಿಳಾ ದಿನಾಚರಣೆ :ಸಾಧಕ ಮಹಿಳೆಯರಿಗೆ ಸನ್ಮಾನ

    ಕುಂದಾಪುರ :ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು – ವಿಶ್ವ ಮಹಿಳಾ ದಿನಾಚರಣೆ :ಸಾಧಕ ಮಹಿಳೆಯರಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಕುಂದಾಪುರ ಸಿಟಿ ಜೆಸಿಐ ಹಾಗೂ ಕಾಲೇಜಿನ ಎನ್.ಎಸ್.ಎಸ್. ಘಟಕ, ಮಹಿಳಾ ಸಬಲೀಕರಣ ಘಟಕದ ಆಶ್ರಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಾದ ಶರ್ಮಿಳಾ ಬುತೆಲ್ಲೋ (ಉದ್ಯಮ ಕ್ಷೇತ್ರ), ಜ್ಯೋತಿ (ಕೃಷಿ ಮತ್ತು ಹೈನುಗಾರಿಕೆ), ಶ್ರೀನಿಧಿ ಖಾರ್ವಿ(ಸಾಂಸ್ಕøತಿಕ), ಅಂಕಿತಾ ಸಿ. ಶೇಟ್ (ಬಹುಮುಖ ಪ್ರತಿಭೆ), ಪ್ರತೀಕ್ಷಾ (ಶೈಕ್ಷಣಿಕ), ದಿವ್ಯಾ (ಕ್ರೀಡೆ) ಇವರನ್ನು ಸನ್ಮಾನಿಸಲಾಯಿತು.

    ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಸಂಧ್ಯಾ ನಾಯಕ್ ಮಾತನಾಡಿ ಸಂವಿಧಾನದ ಮಹತ್ವ ಮತ್ತು ಲಿಂಗ ಸಮಾನತೆಯ ಕುರಿತು ಮಾಹಿತಿ ನೀಡಿದರು.

    ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

    ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷೆ ಡಾ| ಸೋನಿ ಡಿ’ಕೋಸ್ಟ ಸ್ವಾಗತಿಸಿದರು. ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕಾಧ್ಯಕ್ಷ ಹುಸೈನ್ ಹೈಕಾಡಿ ಪ್ರಸ್ತಾವಿಸಿ, ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಆಶಯ ನುಡಿಗಳನ್ನಾಡಿದರು. ಜೇಸಿ ಪ್ರೇಮಾ ಡಿ ಚುನ್ಹಾ, ಜೇಸಿ ಸೌರಭಿ ಪೈ, ಮೆಬಲ್ ಡಿ’ಸೋಜ, ಉಪನ್ಯಾಸಕ ಯೋಗೀಶ್ ಶ್ಯಾನುಭೋಗ್, ವಿದ್ಯಾರ್ಥಿಗಳಾದ ವೈಷ್ಣವಿ ಎಮ್.ಎಸ್., ಶ್ರೀನಾಭ ಉಪಾಧ್ಯ ಸನ್ಮಾನಿತರನ್ನು ಪರಿಚಯಿಸಿದರು. ಈ ಸಂದರ್ಭ ಜೇಸಿಐ ವಲಯ ಅಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಹಾಗೂ ಜೇಸಿಐ ಪದಾಧಿಕಾರಿಗಳು ಉಪಸ್ಥಿತರಿದ್ದರು.
    ವಿದ್ಯಾರ್ಥಿನಿ ಶ್ರೀನಿಧಿ ಖಾರ್ವಿ ಭಾವಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ವೀಣಾ ವಿ. ಭಟ್ ವಂದಿಸಿದರು. ಎನ್.ಎಸ್.ಎಸ್. ಸಹ ಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ ನಿರೂಪಿಸಿದರು.