ನಿಸ್ವಾರ್ಥ ಸೇವೆಯೇ ನಮ್ಮ ಜೀವದ ಧ್ಯೇಯವಾಗಲಿ – ಸಮಾಜ ಸೇವಕಿ ಡಾ.ವಾಣಿಶ್ರೀ ಐತಾಳ್
ಕುಂದಾಪುರ ಮಿರರ್ ಸುದ್ದಿ…
ಕೋಟ: ಜೀವನದಲ್ಲಿ ನಿಸ್ವಾರ್ಥ ಸೇವೆಯೇ ನಮ್ಮ ಮೊದಲ ಆದ್ಯತೆಯಾಗಬೇಕು ಆಗ ಮಾತ್ರ ನಮ್ಮ ಬದುಕಿನಲ್ಲಿ ಸಾರ್ಥಕ್ಯ ಕಾಣಲು ಸಾಧ್ಯ ಎಂದು ಸಮಾಜಸೇವಕಿ ಡಾ.ವಾಣಿಶ್ರೀ ಐತಾಳ್ ಹೇಳಿದರು.
ಕೋಟದ ಪಂಚವರ್ಣ ಯುವಕ ಮಂಡಲ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪಂಚವರ್ಣ ಸಾಧಕ ಮಹಿಳಾ ಪುರಸ್ಕಾರ ಪಡೆದು ಮಾತನಾಡಿ ಜೀವನದಲ್ಲಿ ಏನಾದರೂ ಗುರಿ ಇರಿಸಿ ಬದುಕಬೇಕು ಅದು ಸಮಾಜದ ಹಿತಕ್ಕೆ ಪೂರಕವಾಗಿ ಇರಬೇಕು ಆ ಮೂಲಕ ಯಶಸ್ಸಿನ ದಾರಿ ಸುಗಮವಾಗಲಿದೆ.ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಗೆ ನಿಂತಿದ್ದಾಳೆ ಇದು ಮಹಿಳಾ ದಿನಾಚರಣೆಗೆ ಅರ್ಥಪೂರ್ಣವಾದ ಬೆಳವಣಿಗೆಯಾಗಿದೆ ಎಂದು ಸನ್ಮಾನ ಗೌರವಗಳು ಇನ್ನಷ್ಟು ಸಮಾಜಮುಖಿ ಕಾರ್ಯಗಳಿಗೆ ವೇಗ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ ಎಂದು ಪಂಚವರ್ಣ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಣ್ಯರ ಸಮ್ಮುಖದಲ್ಲಿ ಡಾ.ವಾಣಿಶ್ರೀ ಯವರಿಗೆ ಪಂಚವರ್ಣ ಮಹಿಳಾ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಕೋಟ ಎಸ್ಎಲ್ಆರ್ಎಂ ಘಟಕದ ಮುಖ್ಯಸ್ಥೆ ಲೋಲಾಕ್ಷಿ ಕೊತ್ವಾಲ್ ಪುರುಷ ಪ್ರದಾನ ಸಮಾಜದಲ್ಲಿ ಮಹಿಳೆ ಬಹು ಎತ್ತರಕ್ಕೆ ಬೆಳೆಯುತ್ತಿದ್ದಾಳೆ. ಇದಕ್ಕೆ ಪುರುಷರ ಪ್ರೋತ್ಸಾಹವು ಅಡಗಿದೆ, ಇಂದಿನ ಯುಗ ಮಹಿಳಾ ಯುಗವಾಗಿ ಮಾರ್ಪಾಡುಗೊಂಡಿದೆ.
ಇಲ್ಲಿ ಮಹಿಳೆ ಸರ್ವಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಸಾಧನೆ ಪಲ್ಲಕ್ಕಿ ಏರುತ್ತಿದ್ದಾಳೆ ಇದೊಂದು ಆರೋಗ್ಯಕರವಾದ ಬೆಳವಣಿಗೆಯಾಗಿದೆ. ಮಹಿಳಾ ದಿನಾಚರಣೆಗಳು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಪಂಚವರ್ಣ ಮಹಿಳಾ ಮಂಡಲ ಸೇವಾ ಕಾರ್ಯಕ್ಕೆ ಬಲ ತುಂಬಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಲತಾ ಎಸ್ ಹೆಗ್ಡೆ, ಪಾಂಡೇಶ್ಚರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲೀಲಾವತಿ ಗಂಗಾಧರ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ, ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ , ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ಮಹಿಳಾ ಮಂಡಲದ ಉಪಾಧ್ಯಕ್ಷೆ ಸುಜಾತ ಕುಮಾರ್ ಸನ್ಮಾನಪತ್ರ ವಾಚಿದರು. ಶಕೀಲ ಪೂಜಾರಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸುಜಾತ ಬಾಯರಿ ನಿರೂಪಿಸಿ ವಂದಿಸಿದರು. ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.











