ಕೋಟ : ಇಲ್ಲಿನ ಕೋಟತಟ್ಟು ಪಡುಕರೆ ಟೀಮ್ ಭವಾಬ್ಧಿ ಇವರ ನೇತ್ರತ್ವದಲ್ಲಿ ಹುಟ್ಟೂರ ಸನ್ಮಾನ ಕಾರ್ಯಕ್ರಮದ ಪ್ರಯುಕ್ತ ಕೆ.ಎಂ.ಸಿ ಮಣಿಪಾಲದ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ,ವೈದ್ಯಕೀಯ ತಪಾಸಣಾ ಕಾರ್ಯಕ್ರಮ ಮಂಗಳವಾರ ನಡೆಯಿತು.
ಕಾರ್ಯಕ್ರಮವನ್ನು ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ ಉದ್ಘಾಟಿಸಿದರು.
ಟೀಮ್ ಭವಾಬ್ಧಿ ಅಧ್ಯಕ್ಷ ಪ್ರಸಾದ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ವಿಶ್ವನಾಥ್, ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯರಾದ ವಿದ್ಯಾ ಸಾಲಿಯಾನ್, ಸೀತಾ,ರೋಬರ್ಟ್ ನಾಯಕ್, ಕೋಟ ಸಿ ಎ ಬ್ಯಾಂಕ್ ನಿರ್ದೇಶಕ ರಂಜೀತ್ ಕುಮಾರ್, ಸಂಯೋಜಕ ರವೀಂದ್ರ ತಿಂಗಳಾಯ, ಕೇಶವ ಕರ್ಕೇರ, ಕೆ.ಎಂ.ಸಿ ವೈದ್ಯಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಕೋಟ: ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕಲ್ಮಾಡಿ ಅಂಗನವಾಡಿಯಲ್ಲಿ ಹೋಳಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಪೂರ್ವಾಹ್ನ 10ಗ ಪುಟಾಣಿಗಳು ಅಂಗನವಾಡಿ ಪ್ರವೇಶಿಸುತ್ತಿದ್ದಂತೆ ಇಪ್ಪತ್ತಕ್ಕೂ ಅಧಿಕ ಪುಟಾಣಿಗಳು ಬಣ್ಣ ಬಣ್ಣದ ಓಕುಳಿಯಾಟದಲ್ಲಿ ನಲಿದಾಡಿದರು.
ಸಾಮಾನ್ಯವಾಗಿ ಹೋಳಿ ಹಬ್ಬದಂತೆ ಬೇರೆ ಬೇರೆ ಭಾಗದಲ್ಲಿ ಜನ,ಸಮುದಾಯ ಸಂಭ್ರಮಿಸುತ್ತಾರೆ ಆದರೆ ಅಂಗನವಾಡಿಯಲ್ಲಿ ಅದು ಕಾರಂತರ ವಿಚಾರಧಾರೆ ಪಸರಿಸುವ ಥೀಂ ಪಾರ್ಕನಲ್ಲಿ ಪುಟಾಣಿ ಮಕ್ಕಳ ಹೋಳಿ ಓಕುಳಿ ವಿಶೇಷವಾಗಿ ಗಮನ ಸೆಳೆಯಿತು.
ಪುಟಾಣಿಗಳೊಂದಿಗೆ ನಲಿದಾಡಿದ ಟೀಚರ್
ಹೋಳಿ ಸಂಭ್ರಮದ ಹಿನ್ನಲ್ಲೆಯಲ್ಲಿಕಾರಂತ ಥೀಮ್ ಪಾರ್ಕನಲ್ಲಿ ಮಕ್ಕಳ ಹಸ್ತವನ್ನು ಬಿಳಿ ಕಾಗದದ ಮೇಲೆ ಬಣ್ಣ ಬಣ್ಣದ ಹಸ್ತದ ಅಚ್ಚು ಸಂಗ್ರಹಿಸಲಾಯಿತು. ಮಕ್ಕಳು ಥೀಮ್ ಪಾರ್ಕ್ ಹೊರಾಂಗಣದಲ್ಲಿ ವಿವಿಧ ಬಗೆಯ ಆಟ ಆಡಿ ಕುಶಿಪಟ್ಟವು. ಈ ನಡುವೆ ಪಟಾಣಿಗಳಿಗೆ ಹೋಳಿಯ ಮಹತ್ವ ಸಾರಿದರಲ್ಲದೆ ಅದರ ಗೀತೆಗಳಿಗೆ ಹೆಜ್ಜೆ ಹಾಕಿಸಿದರು. ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ, ಸಹಾಯಕಿ ಶೈಲಜಾ, ಪೋಷಕರು ಉಪಸ್ಥಿತರಿದ್ದರು.
ಕುಂದಾಪುರ: ಪುಸ್ತಕಗಳನ್ನು ಓದುವುದರಿಂದ ಆತ್ಮವಿಶ್ವಾಸ, ಏಕಾಗ್ರತೆ, ಶಿಸ್ತು, ಸೃಜನಶೀಲತೆ ಹೆಚ್ಚುತ್ತದೆ. ಪುಸ್ತುಕಗಳು ಜ್ಞಾನ ಭಂಡಾರವಿದ್ದಂತೆ. ಪುಸ್ತಕಗಳ ಅಧ್ಯಯನದಿಂದ ಜ್ಞಾನವೃದ್ಧಿಯಾಗುವ ಮೂಲಕ ಮಾನವೀಯ ಮೌಲ್ಯಗಳು ಹೆಚ್ಚುತ್ತವೆ ಎಂದು ರೆಡ್ ಕ್ರಾಸ್ ಸಂಸ್ಥೆಯ ಮುತ್ತಯ್ಯ ಶೆಟ್ಟಿ ಹೇಳಿದರು.
ಸಾಹಿತಿ ಪಾರ್ವತಿ ಜಿ ಐತಾಳ್ ಅವರು ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಕೊಡುಗೆಯಾಗಿ ನೀಡಲಾದ ಪುಸ್ತಕಗಳನ್ನು ಶಾಲಾ ಆಡಳಿತ ಮಂಡಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಶಾ ಸಂತೋಷ್ ಶೆಟ್ಟಿ, ಅಂಪಾರು ಮಾಜಿ ಗ್ರಾಮ ಪಂಚಾಯತ್ ಸದಸ್ಯ ರೋಷಣಿ, ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿಗಳಾದ ಅಶೋಕ್ ಎನ್, ಸುಧೀರ್ ಕುಮಾರ್, ರಮೇಶ್ ಪೂಜಾರಿ, ಗಣೇಶ್ ಎಸ್ ಬೀಜಾಡಿ, ಕೆಆರ್ ಎಸ್ ಎಂಇ ಟ್ರಸ್ಟ್ ನ ಅಬ್ದುಲ್ ಜುನೈದ್, ಶಾಲಾ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಸಂಜಿತ್ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ, ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸಲು ಅನುಕೂಲವಾಗುವಂತೆ ಈಗಾಗಲೇ ರಚಿಸಲಾಗಿರುವ ವಿವಿಧ ತಂಡಗಳಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ಜವಾಬ್ದಾರಿಯನ್ನು ಅರಿತು, ಸಮನ್ವಯದಿಂದ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚಿಸಿದರು.
ಅವರು ಇಂದು ಕುಂದಾಪುರದ ಭಂಡಾಕರ್ಸ್ ಕಾಲೇಜಿನಲ್ಲಿ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಸಂಬಂಧಿಸಿದಂತೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲು ಈಗಾಗಲೇ, ಮಾದರಿ ನೀತಿ ಸಂಹಿತೆ, ಸೆಕ್ಟರ್ ಅಧಿಕಾರಿಗಳ ತಂಡ, ಪೊಲೀಸ್ ತಂಡ, ಫ್ಲೈಯಿಂಗ್ ಸ್ಕ್ವಾಡ್ ತಂಡ, ವೀಡಿಯೋ ವೀಕ್ಷಣಾ ತಂಡ ಸೇರಿದಂತೆ ಹಲವು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳಿಗೆ ನಿಯೋಜಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಕರ್ತವ್ಯಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು, ಅದರಂತೆ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಕರ್ತವ್ಯ ನಿರ್ವಹಣೆ ವೇಳೆಯಲ್ಲಿ ಯಾವುದೇ ಗೊಂದಲಗಳಿಗೆ ಅಸ್ಪದ ನೀಡದೇ, ಅಗತ್ಯವಿದ್ದಲ್ಲಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ, ಯಾವುದೇ ಒತ್ತಡಗಳಿಗೆ ಒಳಗಾಗದೇ, ತಮಗೆ ನೀಡಿರುವ ಅಧಿಕಾರವನ್ನು ಚಲಾಯಿಸಿ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಅಕ್ಷಯ್ ಹಾಕೆ ಮಚ್ಚಿಂದ್ರ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ವಿವಿಧ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
ಕುಂದಾಪುರ ಮಿರರ್ ಸುದ್ದಿ… ಕುಂದಾಪುರ: ಶಾಲೆ ಮತ್ತು ದೇವಾಲಯಗಳು ಅಭಿವೃದ್ಧಿಗೊಂಡರೇ ಇಡೀ ಗ್ರಾಮವೇ ಅಭಿವೃದ್ಧಿ ಹೊಂದುತ್ತದೆ. ಈ ನಿಟ್ಟಿನಲ್ಲಿ ಸುದೀರ್ಘ 18 ವರ್ಷಗಳ ಇತಿಹಾಸವಿರುವ ಈ ಶಾಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದೇವಾನಂದ್ ಶೆಟ್ಟಿ ಹೇಳಿದರು.
ಕೋಳ್ಕೆರೆ ರತ್ನಾಕರ್ ಶೆಟ್ಟಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಇವರಿಂದ ನಡೆಸಲ್ಪಟ್ಟ ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ನೂತನ ಆಡಳಿತ ಮಂಡಳಿಯಾದ ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ಗೆ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಈ ಸಂದರ್ಭ ಕೆಆರ್ ಎಸ್ಎಂಇ ಟ್ರಸ್ಟ್ ನ ಅಧ್ಯಕ್ಷೆ ಗಿರಿಜಾ ಆರ್ ಶೆಟ್ಟಿ, ಶಾಲಾ ಸಂಚಾಲಕ ಅರುಣ್ ಕುಮಾರ್ ಶೆಟ್ಟಿ, ಟ್ರಸ್ಟ್ ನ ಸದಸ್ಯರುಗಳಾದ ಅಬ್ದುಲ್ ಜುನೈದ್, ಮೋಸಸ್ ಮನೋಹರ ಇವರು ಶಾಲೆಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ ಇವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.
ನೂತನ ಆಡಳಿತ ಮಂಡಳಿಯಾದ ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಶಾ ಸಂತೋಷ್ ಕುಮಾರ್ ಶೆಟ್ಟಿ, ಅಂಪಾರು ಮಾಜಿ ಗ್ರಾಮ ಪಂಚಾಯತ್ ಸದಸ್ಯ ರೋಷಣಿ, ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿಗಳಾದ ಅಶೋಕ್ ಎನ್, ಸುಧೀರ್ ಕುಮಾರ್, ರಮೇಶ್ ಪೂಜಾರಿ, ಗಣೇಶ್ ಎಸ್ ಬೀಜಾಡಿ, ಶಾಲಾ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಸಂಜಿತ್ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪುರ: ಮಹಿಳೆಯರಲ್ಲಿ ಪ್ರತಿಯೊಂದು ವ್ಯವಸ್ಥೆಯನ್ನು ಯಶಸ್ವಿಯಾಗಿ ಮುನ್ನೆಡೆಸುವ ಸಾಮಥ್ರ್ಯವಿದೆ. ಅದೇ ರೀತಿ ಈ ಸಹಕಾರ ಸಂಘವೂ ಕೂಡಾ ಮಾದರಿಯಾಗಿ ಮೂಡಿಬರಲಿ ಎಂದು ಉದ್ಯಮಿ ಸತೀಶ್ ಕೋಟ್ಯಾನ್ ಹೇಳಿದರು.
ಅವರು ಕುಂದಾಪುರದ ಸುಶಾನ್ ಪ್ಲಾಜಾ ಕಟ್ಟಡದಲ್ಲಿ ಆರಂಭಗೊಂಡ ಶ್ರೀ ನಾರಾಯಣಗುರು ಮಹಿಳಾ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶುಭಾಶಂಸನೆ ನೀಡಿದ ಕೋಡಿ ಶ್ರೀ ಚಕ್ರಮ್ಮ ದೇವಸ್ಥಾನದ ಅಧ್ಯಕ್ಷರಾದ ಗೋಪಾಲ ಪೂಜಾರಿ ಅವರು, ಮಹಿಳೆಯರ ಆರ್ಥಿಕ ಸ್ವಾವಲಂಬನೆಯ ಉದ್ದೇಶದಿಂದ ಆರಂಭವಾಗಿರುವ ಈ ಸಂಘ ದ್ಯೇಯೋದ್ದೇಶದಂತೆ ಯಶಸ್ಸಿನ ಹೆಜ್ಜೆ ಇಡುವ ಮೂಲಕ ಪ್ರಬುದ್ಧವಾಗಿ ಮುನ್ನೆಡೆಯಲಿ ಎಂದರು.
ಸಂಘದ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಸಮಾಜಕ್ಕೆ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಆರಂಭಿಸಲಾಗಿದೆ. ಜಿಲ್ಲಾ ಮಟ್ಟದ ಮಹಿಳಾ ಸಹಕಾರ ಸಂಘವಾಗಿ ಆರಂಭವಾಗಿರುವ ಈ ಸಹಕಾರ ಸಂಘದ ನೇತೃತ್ವದಲ್ಲಿ ಗ್ರಾಮ ಮಟ್ಟದಲ್ಲಿ ಸ್ವಸಹಾಯ ಸಂಘಗಳ ರಚಿಸಿ, ಅದರ ಮೂಲಕ ಮಹಿಳೆಯರಿಗೆ ಸಾಲಸೌಲಭ್ಯ ನೀಡಿ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಲಾಗುವುದು ಎಂದರು.
ಗಣಕೀಕರಣ ವಿಭಾಗವನ್ನು ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಉದ್ಘಾಟಿಸಿದರು. ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸ್ವ-ಸಹಾಯ ವಿವಿಧೋದ್ದೇಶ ಸಹಕಾರ ಸಂಘ ನಿ., ಕೋಟ ಇದರ ಅಧ್ಯಕ್ಷೆ ಸುಧಾ ಎ.ಪೂಜಾರಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾರಾಯಣಗುರು ಮಹಿಳಾ ಸಹಕಾರ ಸಂಘದ ಮುಖ್ಯ ಪ್ರವರ್ತಕರಾದ ಗುಣರತ್ನ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ಪ್ರವರ್ತಕರಾದ ಸುನೇತ್ರಾ ಎಸ್.ಕೋಟ್ಯಾನ್, ನಿರ್ಮಲ ಆರ್.ಪೂಜಾರಿ, ಹೇಮಾವತಿ ಆರ್.ಪೂಜಾರಿ, ಬೇಬಿ ಶ್ರೀಕಾಂತ್, ಕುಸುಮ ರಾಮ ಪೂಜಾರಿ, ಆರತಿ ಜಿ.ಪೂಜಾರಿ, ಜಾನಕಿ ಬಿಲ್ಲವ, ಗಾಯತ್ರಿ, ಅಶ್ವಿನಿ, ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಾ ಉಪಸ್ಥಿತರಿದ್ದರು.
ಪ್ರವರ್ತಕಿ ಸುನೇತ್ರಾ ಎಸ್.ಕೋಟ್ಯಾನ್ ವಂದಿಸಿದರು.ರಾಜೇಶ ಕಡ್ಗಿಮನೆ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪುರ: ಬೈಂದೂರು ಮೂಕಾಂಬಿಕಾ ರೋಡ್ ರೈಲ್ವೇ ನಿಲ್ದಾಣದಲ್ಲಿ ಮುಂಬೈ ಲೋಕಮಾನ್ಯ ತಿಲಕ್ – ಕೊಚುವೆಲಿ – ಮುಂಬೈ ಲೋಕಮಾನ್ಯ ತಿಲಕ್ ಗರೀಬ್ ರಥ ( ರೈಲು ಸಂಖ್ಯೆ 12201/12202) ರೈಲು ವಾರದ ನಾಲ್ಕು ದಿನ ಬೈಂದೂರು ನಿಲ್ದಾಣದಲ್ಲಿ ನಿಲುಗಡೆ ಆದೇಶ ಸಂತಸ ತಂದಿದೆ ಎಂದು ಬೈಂದೂರು ರೈಲ್ವೇ ಯಾತ್ರಿ ಸಂಘದ ಅಧ್ಯಕ್ಷ ಜಯಾನಂದ ಹೋಬಳಿದಾರ ತಿಳಿಸಿದ್ದಾರೆ.
ಗರೀಬ್ ರಥ ರೈಲು ಬೈಂದೂರಿನಲ್ಲಿ ನಿಲುಗಡೆಗೆ ಶ್ರಮವಹಿಸಿದ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹಾಗೂ ಕೇಂದ್ರ ರೈಲ್ವೆ ಮಂತ್ರಿಗಳಾದ ಶ್ರೀ ಅಶ್ವಿನಿ ವೈಶ್ಣವ್ ಅವರಿಗೆ ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘ ಅಭಿನಂದನೆ ಸಲ್ಲಿಸಿದೆ.
ಮುಂಬೈ ಹಾಗೂ ಕೇರಳ ಪ್ರವಾಸ ಮಾಡುವ ಬೈಂದೂರು ತಾಲೂಕಿನ ಪ್ರಯಾಣಿಕರು ಹವಾನಿಯಂತ್ರಿತ ಗರೀಬ್ ರಥ ರೈಲಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿರುವ ಅವರು, ಬೈಂದೂರು ಮೂಕಾಂಬಿಕಾ ರೋಡ್ ನಿಲ್ದಾಣದಲ್ಲಿ ದಾದರ್ ಸೆಂಟ್ರಲ್ ತಿರುನವಲ್ಲಿ ಎಕ್ಸೆಪ್ರೆಸ್, ಎರ್ನಾಕುಲಂ ಹಜ್ರತ್ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲು, ಬೆಂಗಳೂರು ಮೈಸೂರು ಮಂಗಳೂರು ಮುರುಡೇಶ್ವರ ರೈಲು ನಿಲುಗಡೆಗೆ ಆದೇಶವಾಗುವ ನಿರೀಕ್ಷೆಯಿದ್ದು, ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣದ ಮೂಲಸೌಕರ್ಯ ಅಭಿವೃದ್ದಿಗೂ ಸಂಸದ ಹಾಗೂ ಮಾಜೀ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲ್ಲಿನ ರೈಲ್ವೆ ನಿಲ್ದಾಣದ ಸಂಪರ್ಕರಸ್ತೆಗಳೂ 1.75 ಕೋಟಿ ವೆಚ್ಚದಲ್ಲಿ ಅಭಿವೃದ್ದಿಯಾಗುತ್ತಿದೆ. ಸಹಕರಿಸುತ್ತಿರುವ ಸಂಸದರಿಗೆ, ಶಾಸಕರಿಗೆ, ಅಧಿಕಾರಿ ವರ್ಗದವರಿಗೆ ಹಾಗೂ ಬೈಂದೂರಿನ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕುಂದಾಪುರ ಮಿರರ್ ಸುದ್ದಿ… ಉಡುಪಿ: ಇಲ್ಲಿನ ಕೇಂದ್ರೀಯ ವಿದ್ಯಾಲಯ ಮತ್ತು ಸಿಬ್ಬಂದಿ ವಸತಿ ನಿಲಯಗಳ ನಿರ್ಮಾಣಕ್ಕೆ ಕೇಂದ್ರ ಸರಕಾರದ ಶಿಕ್ಷಣ ಮತ್ತು ಕೌಶಲ್ಯ ಇಲಾಖೆ ಸುಮಾರು ರೂ.26.00 ಕೋಟಿ ಅನುದಾನವನ್ನು ಮಂಜೂರು ಮಾಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಹಾಗೂ ಈ ಭಾಗದ ಸಂಸದೆ ಶೋಭಾ ಕರಂದ್ಲಾಜೆಯವರು ತಿಳಿಸಿದ್ದಾರೆ.
ಈಗ ಬಾಡಿಗೆ ಕಟ್ಟಡದಲ್ಲಿ ಕೇಂದ್ರೀಯ ವಿದ್ಯಾಲಯ ನಡೆಯುತ್ತಿದ್ದು, ಉಡುಪಿ ಜಿಲ್ಲೆಯಲ್ಲಿನ ಕೇಂದ್ರೀಯ ವಿದ್ಯಾಲಯ ಮತ್ತು ಸಿಬ್ಬಂದಿ ವಸತಿ ಕಟ್ಟಡಗಳ ಅವಶ್ಯಕತೆ ಬಗ್ಗೆ ಕೇಂದ್ರದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ರವರಲ್ಲಿ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಕೇಂದ್ರದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆ ಅನುದಾನ ಮಂಜೂರು ಮಾಡಿದೆ ಎಂದಿದ್ದಾರೆ
ಒಂದರಿಂದ ಹತ್ತನೆಯ ತರಗತಿಗಳಿಗೆ ತಲಾ ಎರಡು ವಿಭಾಗಗಳುಳ್ಳ ತರಗತಿ ಕೊಠಡಿಗಳು ಮತ್ತು ಒಂಬತ್ತು ಸಿಬ್ಬಂದಿ ವಸತಿಗಳ ಕಟ್ಟಡದ ನಿರ್ಮಾಣಕ್ಕೆ ಈಗಾಗಲೇ ಟೆಂಡರ ಅನುಮೋದನೆಯಾಗಿದ್ದು, ಅತೀ ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದೆಯೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಕರಾವಳಿ ಭಾಗದ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಕೇಂದ್ರದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಗೆ ಸಚಿವೆ ಶೋಭಾ ಕರಂದ್ಲಾಜೆ ಅಭಿನಂದನೆ ತಿಳಿಸಿದ್ದಾರೆ.
ಕುಂದಾಪುರ ಮಿರರ್ ಸುದ್ದಿ… ಕೋಟ: ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿರ್ದೇಶಮದ ಮೇರೆಗೆ ಪ್ರತಿ ತಿಂಗಳ ಶನಿವಾರ ಆಯಾ ಪಂಚಾಯತ್ ವ್ಯಾಪ್ತಿಗಳ ರಸ್ತೆ,ಸಮುದ್ರ ತಟ ಸ್ವಚ್ಛಗೊಳಿಸುವ ಸುತ್ತೋಲೆ ಹೊರಡಿಸಿದ್ದು ಅದರಂತೆ ಕೋಟ ಗ್ರಾಮಪಂಚಾಯತ್ ಶನಿವಾರ ಕೋಟ ಠಾಣೆ ಸಮೀಪ ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿತು.
ಈ ಸಂದರ್ಭದಲ್ಲಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಕಾರ್ಯದರ್ಶಿ ಶೇಖರ್ ಮರವಂತೆ,ಪಂಚಾಯತ್ ಸದಸ್ಯರು,ಎಸ್ ಎಲ್ ಆರ್ ಎಂ ಘಟಕದ ಲೋಲಾಕ್ಷಿ ಕೊತ್ವಾಲ್ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪುರ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಕುಂದಾಪುರ ತ ರೋಬೋಸಾಪ್ಟ್ ಉಡುಪಿ ಇವರು ಕೊಡಮಾಡಿದ ಕಂಪ್ಯೂಟರಗಳ ಹಸ್ತಾಂತರ ಕಾರ್ಯಕ್ರಮವು ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸಂತೋಷ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಅಜಿತ್ ಸಿನಿಯರ್ ಎಗ್ಸಿಕ್ಯೂಟಿವ್ ಇನ್ಪ್ರಾಸ್ಟ್ರೆಕ್ಚರ್ ಆಂಡ್ ಮೈನ್ಟೆನೆಸ್ ರೋಬೋ ಸಾಪ್ಟ್ (Senior Executive Infrastructure and Maintenance) ಇವರು ಸುಮಾರು ಒಂದು ಲಕ್ಷ ಮೂವತೈದು ಸಾವಿರ ಮೊತ್ತದ ಮೂರು ಕಂಪ್ಯೂಟರ್ಗಳು ಮತ್ತು ಮೂರು ಯು ಪಿ ಎಸ್ಗಳನ್ನು ಶಾಲೆಗೆ ಹಸ್ತಾಂತರಿಸಿ ಮಾತನಾಡುತ್ತ ಗ್ರಾಮೀಣ ಪ್ರದೇಶದ ಶಾಲೆಯೊಂದು ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯವಾದುದು” ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು, ಶತಮಾನೋತ್ಸವ ಸಮಿತಿ ಅಧ್ಯಕ್ಷರು ಹಾಗೂ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಸಭಾಪತಿಗಳಾದ ಜಯಕರ ಶೆಟ್ಟಿ ಮೂಡುಬೈಲೂರು, ವಿರೇಂದ್ರ ಸಿನಿಯರ್ ಟೆಕ್ನಿಕಲ್ ಸೂಪರ್ಇನ್ಡೆಂಟ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ, ರೋಬೋಸಾಪ್ಟ್ನ ಎಗ್ಸಿಕ್ಯೂಟಿವ್ ಮ್ಯಾನೇಜರ್ಗಳಾದ ಶರತ್ ಮತ್ತು ರಕ್ಷಿತ್ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗಿರಿಜಾ ಡಿ ಸ್ವಾಗತಿಸಿದರು. ಸಹಶಿಕ್ಷಕ ಆನಂದ ಕುಲಾಲ ಪ್ರಸ್ತಾವನೆಗೈದರು. ಪ್ರೌಢ ಶಾಲಾ ಸಹಶಿಕ್ಷಕ ನಾರಾಯಣ ಅಡಿಗ ವಂದಿಸಿದರು. ಸಹಶಿಕ್ಷಕ ಸಂತೋಷ ಕಾರ್ಯಕ್ರಮ ನಿರೂಪಿಸಿದರು.