ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬೈಂದೂರು ಮೂಕಾಂಬಿಕಾ ರೋಡ್ ರೈಲ್ವೇ ನಿಲ್ದಾಣದಲ್ಲಿ ಮುಂಬೈ ಲೋಕಮಾನ್ಯ ತಿಲಕ್ – ಕೊಚುವೆಲಿ – ಮುಂಬೈ ಲೋಕಮಾನ್ಯ ತಿಲಕ್ ಗರೀಬ್ ರಥ ( ರೈಲು ಸಂಖ್ಯೆ 12201/12202) ರೈಲು ವಾರದ ನಾಲ್ಕು ದಿನ ಬೈಂದೂರು ನಿಲ್ದಾಣದಲ್ಲಿ ನಿಲುಗಡೆ ಆದೇಶ ಸಂತಸ ತಂದಿದೆ ಎಂದು ಬೈಂದೂರು ರೈಲ್ವೇ ಯಾತ್ರಿ ಸಂಘದ ಅಧ್ಯಕ್ಷ ಜಯಾನಂದ ಹೋಬಳಿದಾರ ತಿಳಿಸಿದ್ದಾರೆ.
ಗರೀಬ್ ರಥ ರೈಲು ಬೈಂದೂರಿನಲ್ಲಿ ನಿಲುಗಡೆಗೆ ಶ್ರಮವಹಿಸಿದ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹಾಗೂ ಕೇಂದ್ರ ರೈಲ್ವೆ ಮಂತ್ರಿಗಳಾದ ಶ್ರೀ ಅಶ್ವಿನಿ ವೈಶ್ಣವ್ ಅವರಿಗೆ ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘ ಅಭಿನಂದನೆ ಸಲ್ಲಿಸಿದೆ.
ಮುಂಬೈ ಹಾಗೂ ಕೇರಳ ಪ್ರವಾಸ ಮಾಡುವ ಬೈಂದೂರು ತಾಲೂಕಿನ ಪ್ರಯಾಣಿಕರು ಹವಾನಿಯಂತ್ರಿತ ಗರೀಬ್ ರಥ ರೈಲಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿರುವ ಅವರು, ಬೈಂದೂರು ಮೂಕಾಂಬಿಕಾ ರೋಡ್ ನಿಲ್ದಾಣದಲ್ಲಿ ದಾದರ್ ಸೆಂಟ್ರಲ್ ತಿರುನವಲ್ಲಿ ಎಕ್ಸೆಪ್ರೆಸ್, ಎರ್ನಾಕುಲಂ ಹಜ್ರತ್ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲು, ಬೆಂಗಳೂರು ಮೈಸೂರು ಮಂಗಳೂರು ಮುರುಡೇಶ್ವರ ರೈಲು ನಿಲುಗಡೆಗೆ ಆದೇಶವಾಗುವ ನಿರೀಕ್ಷೆಯಿದ್ದು, ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣದ ಮೂಲಸೌಕರ್ಯ ಅಭಿವೃದ್ದಿಗೂ ಸಂಸದ ಹಾಗೂ ಮಾಜೀ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲ್ಲಿನ ರೈಲ್ವೆ ನಿಲ್ದಾಣದ ಸಂಪರ್ಕರಸ್ತೆಗಳೂ 1.75 ಕೋಟಿ ವೆಚ್ಚದಲ್ಲಿ ಅಭಿವೃದ್ದಿಯಾಗುತ್ತಿದೆ. ಸಹಕರಿಸುತ್ತಿರುವ ಸಂಸದರಿಗೆ, ಶಾಸಕರಿಗೆ, ಅಧಿಕಾರಿ ವರ್ಗದವರಿಗೆ ಹಾಗೂ ಬೈಂದೂರಿನ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.











