Category: ಸುದ್ದಿ

  • ಚಿತ್ತೂರು :ಸಹಕಾರ ಸಂಸ್ಥೆಗಳಲ್ಲಿ ಪಾರದರ್ಶಕ ವ್ಯವಹಾರ – ಡಾ.ಎಂ.ಎನ್ ರಾಜೇಂದ್ರ ಕುಮಾರ್

    ಚಿತ್ತೂರು :ಸಹಕಾರ ಸಂಸ್ಥೆಗಳಲ್ಲಿ ಪಾರದರ್ಶಕ ವ್ಯವಹಾರ – ಡಾ.ಎಂ.ಎನ್ ರಾಜೇಂದ್ರ ಕುಮಾರ್

    ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘ ನಿ., ವಂಡ್ಸೆ ಇದರ ಗೋದಾಮು ಕಟ್ಟಡ ಮತ್ತು ನೂತನ ಚಿತ್ತೂರು ಶಾಖೆ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘ ನಿ., ವಂಡ್ಸೆ ಇದರ ಗೋದಾಮು ಕಟ್ಟಡ ಉದ್ಘಾಟನೆ ಮತ್ತು ನೂತನ ಚಿತ್ತೂರು ಶಾಖೆ ಉದ್ಘಾಟನೆ ಮಾ.4 ಶನಿವಾರ ನಡೆಯಿತು.

    ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷರಾದ ಡಾ.ಎಮ್.ಎನ್.ರಾಜೇಂದ್ರ ಕುಮಾರ್ ಚಿತ್ತೂರು ಶಾಖೆಯನ್ನು ಉದ್ಘಾಟಿಸಿ, ಸಹಕಾರ ಸಂಘಗಳು ಪಾರದರ್ಶಕವಾದ ಸೇವೆಯ ಮೂಲಕ ವಿಶ್ವಾಸ ಗಳಿಸಿವೆ. ಇಲ್ಲಿ ಬಡ್ಡಿದರ, ಸದಸ್ಯರಿಗೆ ಸಿಗುವ ಸೇವೆ ಎಲ್ಲವೂ ಕೂಡಾ ಪಾರದರ್ಶಕವಾಗಿ ತಿಳಿಸಲಾಗುತ್ತದೆ. ಇವತ್ತು ಸಹಕಾರ ಕ್ಷೇತ್ರ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತಿದೆ. ಕಳೆದ 28 ವರ್ಷಗಳಲ್ಲಿ ಅವಿಭಜಿತ ದ.ಕ ಜಿಲ್ಲೆಯ ರೈತರು ಕೃಷಿಸಾಲವನ್ನು ಸರಿಯಾಗಿ ಮರುಪಾವತಿ ಮಾಡುವ ಮೂಲಕ ದೇಶದಲ್ಲಿ ಪ್ರಥಮ ಸ್ಥಾನದಲ್ಲಿವೆ. ಅವಿಭಜಿತ ಜಿಲ್ಲೆಯ ಸಹಕಾರ ಸಂಘಗಳು ಕೂಡಾ ಲಾಭದಾಯಕವಾಗಿ ಮುನ್ನೆಡೆಯುತ್ತಿದೆ ಎಂದರು.

    ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘ ಇವತ್ತು ಆರು ಗ್ರಾಮಗಳ ವ್ಯಾಪ್ತಿಯಲ್ಲಿ ನಾಲ್ಕು ಶಾಖೆಗಳ ಮೂಲಕ ಸೇವೆ ನೀಡುತ್ತಿದೆ. ಸರ್ಕಾರದ ಸಾಲಮನ್ನಾ ಆದಾಗ ಈ ಸಂಘದ ವ್ಯಾಪ್ತಿಯಲ್ಲಿ 6.5 ಕೋಟಿ ಸಾಲಮನ್ನವಾಗಿದೆ ಎಂದರು.

    ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ಗೋದಾಮು ಕಟ್ಟಡ ಉದ್ಘಾಟಿಸಿ, ಮಂಜಯ್ಯ ಶೆಟ್ಟರು ಬಹಳಷ್ಟು ಉತ್ತುಂಗಕ್ಕೇರಿಸಿದ್ದಾರೆ. ಈ ಭಾಗದ ಬಲಾಢ್ಯ ಸಹಕಾರ ಸಂಘವಾಗಿ ಬೆಳೆದಿದೆ. ಈ ಸಂಘವನ್ನು ಆರಂಭಿಸಿ, ಮುನ್ನೆಡೆಸಿದ ಎಲ್ಲರ ಶ್ರಮವೂ ಶ್ಲಾಘನಾರ್ಹ ಎಂದರು.

    ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಅಧ್ಯಕ್ಷತೆ ವಹಿಸಿದ್ದರು.
    ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್.ರಾಜು ಪೂಜಾರಿ, ಎಮ್.ಮಹೇಶ ಹೆಗ್ಡೆ ಮೊಳಹಳ್ಳಿ, ದೇವಿಪ್ರಸಾದ ಶೆಟ್ಟಿ, ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಸದಾಶಿವ ಶೆಟ್ಟಿ ಸಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

    ಸಂಘದ ಉಪಾಧ್ಯಕ್ಷ ಜಗನ್ನಾಥ ಶೆಟ್ಟಿ ಹೊಸೂರು, ನಿರ್ದೇಶಕರಾದ ಕೆ.ಭುಜಂಗ ಶೆಟ್ಟಿ ಕೆರಾಡಿ, ಐ.ಗೋವರ್ದನ್ ಶೆಟ್ಟಿ ಇಡೂರು, ಬಿ.ರಾಮ ಹೊಸೂರು, ಸಂಜೀವ ಪೂಜಾರಿ ವಂಡ್ಸೆ, ಎ.ಜಯರಾಮ ಶೆಟ್ಟಿ ವಂಡ್ಸೆ, ಶೀನಪ್ಪ ಶೆಟ್ಟಿ ಹೊಸೂರು, ಕೃಷ್ಣಯ್ಯ ಆಚಾರ್ ಚಿತ್ತೂರು, ಶ್ರೀಮತಿ ಕಸ್ತೂರಿ ಎಸ್.ಶೆಟ್ಟಿ ಚಿತ್ತೂರು, ರಾಜೇಶ ಶೆಟ್ಟಿ ಚಿತ್ತೂರು, ಸುನೀಲ್ ನಾಯ್ಕ್ ಕೆರಾಡಿ, ಶ್ರೀಮತಿ ನಾಗರತ್ನ ಶೆಟ್ಟಿ ಹೊಸೂರು, ಕೆ.ಶೇಖರ ಶೆಟ್ಟಿ ಬೆಳ್ಳಾಲ, ಶಿವಪ್ಪ ಶೆಟ್ಟಿ ಇಡೂರು, ವಲಯ ಮೇಲ್ವಿಚಾರಕ ಉದಯ ಶೆಟ್ಟಿ ಎ ಉಪಸ್ಥಿತರಿದ್ದರು.

    ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಜಿ.ಪೂಜಾರಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

  • ಮರವಂತೆ – ಶ್ರೀ ರಾಮ ಮಂದಿರ ಮರವಂತೆ ರಜತ ಮಹೋತ್ಸವ

    ಮರವಂತೆ – ಶ್ರೀ ರಾಮ ಮಂದಿರ ಮರವಂತೆ ರಜತ ಮಹೋತ್ಸವ

    ಮಾ.20ರಿಂದ ಮಾ.31 ರ ತನಕ ಶ್ರೀ ದೇವರ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ಶ್ರೀ ರಾಮ ದೇವರಿಗೆ ಸುವರ್ಣ ಕಿರೀಟ ಹಾಗೂ ಕವಚ ಸಮರ್ಪಣೆ, ಲೋಕಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ, ಮಹಾ ಅನ್ನಸಂತರ್ಪಣೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ಶ್ರೀ ರಾಮ ಮಂದಿರ ಮರವಂತೆ, ಮೀನುಗಾರರ ಸೇವಾ ಸಮಿತಿ ವತಿಯಿಂದ ರಜತ ಮಹೋತ್ಸವ, ಶ್ರೀ ದೇವರ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ಶ್ರೀ ರಾಮ ದೇವರಿಗೆ ಸುವರ್ಣ ಕಿರೀಟ ಹಾಗೂ ಕವಚ ಸಮರ್ಪಣೆ, ಲೋಕಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ, ಮಹಾ ಅನ್ನಸಂತರ್ಪಣೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವ ಮಾರ್ಚ್ 20ರಿಂದ ಮಾರ್ಚ್ 31ರ ತನಕ ನಡೆಯಲಿದೆ ಎಂದು ಸೇವಾ ಸಮಿತಿ ಅಧ್ಯಕ್ಷರಾದ ವಾಸುದೇವ ಹೇಳಿದರು.

    ಅವರು ಮರವಂತೆಯ ಶ್ರೀರಾಮ ಮಂದಿರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

    ಮಾ.21ರಿಂದ ಮಾ.24ರ ತನಕ ಶ್ರೀರಾಮ ಮಂದಿರದಲ್ಲಿ ಅಷ್ಠಬಂಧ, ಪ್ರತಿಷ್ಠಾ ಹಾಗೂ ಬ್ರಹ್ಮಕಲಶೋತ್ಸವ ಮತ್ತು ಸುವರ್ಣ ಕಿರೀಟ ಹಾಗೂ ಕವಚ ಸಮರ್ಪಣೆ ಕಾರ್ಯಕ್ರಮವು ಕೆ.ವಿದ್ವಾನ ಚಂದ್ರಶೇಖರ ಸೋಮಾಯಾಜಿ ಹಾಗೂ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮ ಶ್ರೀ ರಾಮಚಂದ್ರಪುರ ಮಠ ಹೊಸನಗರ ಇವರ ನೇತೃತ್ವದಲ್ಲಿ ನಡೆಯಲಿದೆ ಎಂದರು.

    ಮಾ.21ರಂದು ಧಾರ್ಮಿಕ ಕಾರ್ಯಕ್ರಮಗಳ ಆರಂಭ, ಮಾ.22ರಂದು ಬೆಳಿಗ್ಗೆ 6.15ಕ್ಕೆ ಅಷ್ಠಬಂಧಪೂರ್ವಕ ಶ್ರೀ ರಾಮದೇವರ ಪುನಃಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ 3 ಗಂಟೆಗೆ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಶ್ರೀರಾಮ ದೇವರಿಗೆ ಸುವರ್ಣ ಕಿರೀಟ ಮತ್ತು ಕವಚ ಧಾರಣೆ, ಸಮುದ್ರ ರಾಜನಿಗೆ ಸಮುದ್ರ ಆರತಿ ಕಾರ್ಯಕ್ರಮ ನಡೆಯಲಿದೆ.
    6 ಗಂಟೆಗೆ ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ, ಧಾರ್ಮಿಕ ಚಿಂತಕರಾದ ಮೀಡಿಯಾ ಮಾಸ್ಟರ್, ಪ್ರಧಾನ ಸಂಪಾದಕರಾದ ರಾಘವೇಂದ್ರ ಎಚ್.ಎಸ್, ಪತ್ರಕರ್ತರು, ವಾಗ್ಮಿಗಳು ಆಗಿರುವ ಲಕ್ಷ್ಮೀ ರಾಜಕುಮಾರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ ಕಾರವಾರ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪಶುವೈದ್ಯರಾದ ಡಾ.ನಾಗರಾಜ, ಮುಳುಗು ತಜ್ಞ ದಿನೇಶ ಖಾರ್ವಿ ಗಂಗೊಳ್ಳಿ, ಅಂತರಾಷ್ಟ್ರೀಯ ಯೋಗಪಟು ಧನ್ವಿ ಮರವಂತೆ ಅವರನ್ನು ಸನ್ಮಾನಿಸಲಾಗುವುದು.
    ರಾತ್ರಿ 9 ಗಂಟೆಗೆ ಆದರ್ಶ ಗೋಖುಲೆ ನಿರೂಪಣೆಯ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ಪುಣ್ಯ ಭೂಮಿ ಭಾರತ ನಡೆಯಲಿದೆ.

    ಮಾ.23ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಬೆಳಿಗ್ಗೆ 10-30ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಶ್ರೀ ರಾಮಚಂದ್ರಪುರ ಮಠ ಹೊಸನಗರ ಆಶೀರ್ವಚನ ನೀಡಲಿದ್ದಾರೆ. ವಿದ್ಯಾವಾಚ್ಛಸ್ಪತಿ ಡಾ.ಅರಳು ಮಲ್ಲಿಗೆ ಪಾರ್ಥ ಸಾರಥಿ ಧಾರ್ಮಿಕ ಚಿಂತನೆ ನೆರವೇರಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಅಪ್ಪಣ್ಣ ಹೆಗ್ಡೆ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಂಜೆ 5.30ಕ್ಕೆ ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಸಂಜೆ 6 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

    ಈ ಸಂದರ್ಭದಲ್ಲಿ ಮಾಜಿ ಶಾಸಕ ಲಕ್ಷ್ಮೀನಾರಾಯಣ ಶೇರುಗಾರ್, ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಎಸ್.ಜನಾರ್ದನ ಮರವಂತೆ, ಚಿತ್ರ ಸಾಹಿತಿ ಪ್ರಮೋದ ಮರವಂತೆ, ಮುಳುಗು ತಜ್ಞ ಈಶ್ವರ ಮಲ್ಪೆ ಅವರನ್ನು ಸನ್ಮಾನಿಸಲಾಗುವುದು.

    ರಾತ್ರಿ 9 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಝೀ ಕನ್ನಡ ವಾಹಿನಿಯ ಮಡೆನೂರು ಮನು ಇವೆಂಟ್ಸ್ ನೇತೃತ್ವದಲ್ಲಿ ಕಾಮಿಡಿ ಕಿಲಾಡಿಗಳು, ಸರಿಗಮಪ, ಡಿ.ಕೆ.ಡಿ ಕಲಾವಿದರಿಂದ ಹಾಡು ನೃತ್ಯ, ಕಾಮಿಡಿ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.

    ಮಾ.24ರಂದು ಬೆಳಿಗ್ಗೆ 10-15ಕ್ಕೆ ಶ್ರೀರಾಮ ಭಜನಾ ದೀಪ ಸ್ಥಾಪನೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4.30 ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಾಣಿಲ ಮಠ ಮಂಗಳೂರು ಇಲ್ಲಿನ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವೇದ ವೇದಾಂಗ ಶಿಕ್ಷಣ ಚಿಂತಕಿ ಉಪನ್ಯಾಸಕಿ ಅಮೃತವರ್ಷಿಣಿ ಉಮೇಶ, ಧಾರ್ಮಿಕ ಚಿಂತಕರಾದ ಡಾ.ಆರತಿ ಬಿ.ವಿ ಧಾರ್ಮಿಕ ಚಿಂತನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮತ್ಸ್ಯೋದ್ಯಮಿ ಪಿ.ದಿನಕರ ಖಾರ್ವಿ, ಪರ್ಸಿನ ಬೋಟ್ ಮಾಲಕರು ವಸಂತ ಮೇಸ್ತ ಅವರನ್ನು ಸನ್ಮಾನಿಸಲಾಗುವುದು. ರಾತ್ರಿ 8.30ಕ್ಕೆ ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ರಾತ್ರಿ 10-30ಕ್ಕೆ ಶಿವದೂತ ಗುಳಿಗ ವಿಭಿನ್ನ ಶೈಲಿಯ ಕನ್ನಡ ನಾಟಕ ನಡೆಯಲಿದೆ.
    ಮಾ.25ರಂದು ಶನಿವಾರ ಸಂಜೆ 4.30ಕ್ಕೆ ವಿವಿಧ ವೇಷಭೂಷಣಗೊಳಿಂದ ಕೂಡಿದ ಭವ್ಯ ಮೆರವಣಿಗೆ ಮೂಲಕ ಶ್ರೀ ಸೀತಾರಾಮ ಕಲ್ಯಾಣೋತ್ಸವಕ್ಕೆ ಶ್ರೀ ರಾಮ ದೇವರ ಆಗಮನ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಕೊಪ್ಪಳ ಗವಿಸಿದ್ಧೇಶ್ವರ ಮಠದ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ರಾತ್ರಿ 8 ಗಂಟೆಗೆ ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಬೆಂಗಳೂರು ಶಿವಪ್ರಿಯ ಸ್ಕೂಲ್ ಆಫ್ ಡ್ಯಾನ್ಸ್ ಅರ್ಪಿಸುವ ಹನುಮಾನ ಡ್ಯಾನ್ಸ್ ಡ್ರಾಮ ಪ್ರೊಡೆಕ್ಷನ್ ಇವರಿಂದ ಕಲಾ ಆರತಿ ರತ್ನ ಗುರು ಡಾ. ಸಂಜಯ ಶಾಂತಾರಾಮ ಮತ್ತು ತಂಡದವರಿಂದ ನೃತ್ಯ ವೈಭವ ನಡೆಯಲಿದೆ.

    ಮಾ.26ರಂದು ಸಂಜೆ 5.30ಕ್ಕೆ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಶ್ರೀ ಸ್ವಾಮಿಗಳು ಶ್ರೀ ಸಂಸ್ಥಾನ ಗೋಕರ್ಣ-ಶ್ರೀ ರಾಮಚಂದ್ರ ಮಠ ಹೊಸನಗರ ಇವರ ಮಾರ್ಗದರ್ಶನದಲ್ಲಿ ಲೋಕಕಲ್ಯಾಣಾರ್ಥಕವಾಗಿ ತ್ರೇತಾಯುಗದ ಮಹಾ ದೃಶ್ಯ ವೈಭವ ಸೀತಾರಾಮ ಕಲ್ಯಾಣೋತ್ಸವ ನಡೆಯಲಿದೆ. ರಾತ್ರಿ 9 ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ.

    ಮಾ.30 ಗುರುವಾರ ಬೆಳಿಗ್ಗೆ ಅಖಂಡ ಏಕಾಹ ಭಜನೆ, ಮಧ್ಯಾಹ್ನ 12-30ಕ್ಕೆ ಅನ್ನಸಂತರ್ಪಣೆ, ಸಂಜೆ 4.30ಕ್ಕೆ ಪುರಮೆರಣಿಗೆ ನಡೆಯಲಿದೆ. ಮಾ.31ರಂದು ಬೆಳಿಗ್ಗೆ 11 ಗಂಟೆಗೆ ಭಜನಾ ಮಂಗಲೋತ್ಸವ, ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದರು.

    ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸುರೇಶ ಖಾರ್ವಿ, ಜಿ.ಹೊನ್ನ ಖಾರ್ವಿ, ಶ್ರೀಧರ, ಪಿ.ಚಂದ್ರ ಖಾರ್ವಿ, ಈಶ್ವರ ಖಾರ್ವಿ,ಪಿ.ದಿನಕರ ಖಾರ್ವಿ, ಸಂಜೀವ ಖಾರ್ವಿ, ಲೋಕೇಶ್ ಖಾರ್ವಿ, ಭಾಸ್ಕರ ಮೊದಲಾದವರು ಉಪಸ್ಥಿತರಿದ್ದರು.

    ಇದೇ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆ ಅನಾವರಣಗೊಳಿಸಲಾಯಿತು.

  • ಶಂಕರನಾರಾಯಣ : ಆಭಿವೃದ್ಧಿಯ ಪಥದತ್ತ ಬೈಂದೂರು ಕ್ಷೇತ್ರ – ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ

    ಶಂಕರನಾರಾಯಣ : ಆಭಿವೃದ್ಧಿಯ ಪಥದತ್ತ ಬೈಂದೂರು ಕ್ಷೇತ್ರ – ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ

    ಕುಂದಾಪುರ ಮಿರರ್ ಸುದ್ದಿ…

    Video:

    ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ಸರ್ವತೋಮುಖ ಅಬಿವೃದ್ಧಿ ಸಾಧಿಸುತ್ತಿದೆ ಎಂದು ಬೈಂದೂರು ಶಾಸಕ ಬಿ. ಎಂ.ಸುಕುಮಾರ ಶೆಟ್ಟಿ ಹೇಳಿದರು.

    ಶಂಕರನಾರಾಯಣ ಗ್ರಾಮದ ಸೌಡದಲ್ಲಿ ರೂ.24.95ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಸ್ವಂತ ಕಟ್ಟಡದ ಶಿಲಾನ್ಯಾಸ ನೆರವೆರಿಸಿ ಮಾತನಾಡಿದರು.

    ಬೈಂದೂರು ವಿಧಾನಸಭಾ‌ ಕ್ಷೇತ್ರದಲ್ಲಿ ಈಗಾಗಲೇ 3000 ಕೋಟಿ ಅಭಿವೃದ್ಧಿಯ ಕೆಲಸ ಆಗಿದೆ. ಪ್ರತಿ ಮನೆಗೆ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಕೃಷಿ ಚಟುವಟಿಕೆಗೆ ಏತ ನೀರಾವರಿ ಯೋಜನೆ, 2000 ಕುಟುಂಬಕ್ಕೆ ಮನೆ ನೀವೆಶನ, ಪ್ರತಿ ಮನೆಗೆ ಬೆಳಕು ಯೋಜನೆ, ವೆಂಟೇಡ್ ಡ್ಯಾಮ್, ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಾಗಿದೆ ಎಂದವರು ಹೇಳಿದರು.

    ಉಡುಪಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನೀರ್ದೇಶಕಿ ಅನಿತಾ ಮಡ್ಲೂರು, ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ಜಿಲ್ಲಾ ಸಮನ್ವಯ ಅಧಿಕಾರಿ ಪೂರ್ಣಿಮಾ, ಶಂಕರನಾರಾಯಣ ಗ್ರಾ.ಪಂ.ಅಧ್ಯಕ್ಷೆ ಗೀತಾ ಮೋಗವೀರ, ಉಪಾಧ್ಯಕ್ಷ ರವಿಕುಲಾಲ್, ಸಾಮಾಜಿಕ ನ್ಯಾಯಸಮಿತಿಯ ಅಧ್ಯಕ್ಷ ಪಾಂಡು ನಾಯ್ಕ್ ಉಪಸ್ಥಿತರಿದ್ದರು.

    ಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳ್ನಾಡಿದರು. ರವಿ ಕುಲಾಲ್ ವಂದಿಸಿದರು.

  • ಕುಂದಾಪುರ: ಧರ್ಮ ಸಂದೇಶವನ್ನು ಧರ್ಮಗುರುಗಳು ಅರಿತಾಗ ಜಗತ್ತು ಬೆಳಗುವುದು – ನೌಫಲ್‌ ಸಖಾಫಿ ಕಳಸ

    ಕುಂದಾಪುರ: ಧರ್ಮ ಸಂದೇಶವನ್ನು ಧರ್ಮಗುರುಗಳು ಅರಿತಾಗ ಜಗತ್ತು ಬೆಳಗುವುದು – ನೌಫಲ್‌ ಸಖಾಫಿ ಕಳಸ

    Video:

    ನವೀಕೃತ ಬದ್ರಿಯಾ ಜುಮ್ಮಾ ಮಸೀದಿ ಉದ್ಘಾಟನೆ, ಸೌಹಾರ್ದ ಸಂಗಮ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಪ್ರತಿಯೊಂದು ಧರ್ಮದಲ್ಲಿಯೂ ಇರುವ ಸಂದೇಶವಾದ ದ್ವೇಷವನ್ನು ತೊಲಗಿಸು, ಪ್ರೀತಿಯನ್ನು ಬೆಳಗಿಸು ಎನ್ನುವ ಅಂಶವನ್ನು ಆಯಾ ಧರ್ಮ ಗುರುಗಳು ಅರಿತುಕೊಳ್ಳಬೇಕು ಮತ್ತು ಅದನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡಬೇಕು. ಆಗ ಜಗತ್ತು ಶಾಂತಿಯನ್ನು ಕಾಣುತ್ತದೆ. ಸತ್ಯದ ಅರಿವಿನೊಂದಿಗೆ ಜಗತ್ತೇ ಬೆಳಗುತ್ತದೆ ಎಂದು ದ್ಸಿಕ್ರಾ ಎಜ್ಯುಕೇಶನ್ ಸೆಂಟರ್ ಮೂಡಬಿದ್ರೆ ಇದರ ಅಧ್ಯಕ್ಷ ನೌಫಲ್ ಸಖಾಫಿ ಕಳಸ ಹೇಳಿದರು.

    ಕುಂದಾಪುರ ತಾಲೂಕಿನ ಸಿದ್ಧಾಪುರದಲ್ಲಿ ಬದ್ರಿಯಾ ಜುಮ್ಮಾ‌ ಮಸೀದಿ ಜನ್ಸಾಲೆ ಇದರ ನವೀಕೃತ ಮಸೀದಿಯ ಉದ್ಘಾಟನೆ ಹಾಗೂ ಸೌಹಾರ್ದ ಸಂಗಮ ಮತ್ತೆ ಅಂತರಾಜ್ಯ ದಫ್ ಸ್ಪರ್ಧೆ ಕಾರ್ಯಕ್ರಮದಲ್ಲಿ ಸೌಹಾರ್ದ ಭಾಷಣ ಮಾಡಿದರು.

    ಯಾವುದೇ ಧರ್ಮ ಏನು ಹೇಳುತ್ತದೆ‌ ಎನ್ನುವುದನ್ನು ಅರಿತು, ಅಧ್ಯಯನ ನಡೆಸಿ ಅದನ್ನು ತಿಳಿಸುವ ಕೆಲಸ ಮಾಡಬೇಕಾಗಿದೆ ಎಂದರು.

    ಕಮಲಶಿಲೆ ದೇವಸ್ಥಾನದ ಆಡಳಿತ ಮೊಕ್ತೇಸರ ಸಚ್ಚಿದಾನಂದ ಛಾತ್ರ ಮಾತನಾಡಿ, ಎಲ್ಲಾ ಧರ್ಮಗಳ ಸಂದೇಶವೂ ಒಂದೇ ಆಗಿದೆ.‌ ಹಿಂದೂ ದೇವಾಲಯಗಳಿಗೆ ದೇಣಿಗೆ ನೀಡಿದ ಎಷ್ಟೂ ಮುಸ್ಲಿಮರು, ಕ್ರೈಸ್ತರೂ ಇದ್ದಾರೆ. ಜೊತೆಯಾಗಿ ಸಾಗಿದಾಗ ಬದುಕು ಸಂಭ್ರಮಿಸುತ್ತದೆ ಎಂದರು.

    ಸಂತ ಅಂತೋನಿ ಕೆರೆಕಟ್ಟೆ ಇದರ ಧರ್ಮಗುರು ಸ್ವಾಮಿ ಸುನಿಲ್ ವೇಗಸ್ ಮಾತನಾಡಿ, ಸಂದೇಶಗಳು ವೇದಿಕೆಗೆ ಸೀಮಿತವಾಗದೇ ಆಚರಣೆಯಲ್ಲಿ ಬಂದಾಗ ಸಾಮರಸ್ಯ ಸಾಧ್ಯ ಎಂದರು.

    ಅಸ್ಸಯಿದ್ ಕೆ.ಎಸ್. ಅಟಕೋಳ ತಂಞಳ್ ಕುಂಬೋಳ್, ಖಾಝೀ ಝೈನುಲ್ ಉಲಾಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಅಸ್ಸಯಿದ್ ಜಾಫರ್ ಅಸ್ಸಖಾಪ್ ತಂಞಳ್ ಕೋಟೇಶ್ವರ ಮಸೀದಿ ಉದ್ಘಾಟನೆಯ ನೇತೃತ್ವ ವಹಿಸಿದ್ದರು.

    ಬಿ.ಜೆ.ಎಂ ಜನ್ಸಾಲೆ ಇದರ ಅಧ್ಯಕ್ಷ ಜನಾಬ್ ಅಬ್ದುಲ್ ಮುನೀರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಖತೀಬ ಅಬ್ದುಲ್ ಮಜೀದ್ ಜೌಹರಿ, ಗೌರವಾಧ್ಯಕ್ಷ ಹಾಜೀ ಉಮರ್ ಸಾಹೇಬ್, ಉದ್ಯಮಿ ಜನಾಬ್ ಅಲ್ತಾಫ್ ಹೆನ್ನಾಬೈಲು, ಉದ್ಯಮಿ ಜನಾಬ್ ಎಸ್.ಎಂ.ಇರ್ಷಾದ್, ಉದ್ಯಮಿ ಮುಸ್ತಾಕ್ ಮೇಲ್ಚಡ್ಡು, ಸಿದ್ಧಾಪುರ, ಸಿದ್ಧಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ‌ ಕುಲಾಲ್, ಮಲೆನಾಡು ಅಭಿವೃದ್ದಿ ಮಂಡಲ ಸದಸ್ಯ ಜಯರಾಂ ಭಂಡಾರಿ, ಬನಶಂಕರಿ ದೇವಸ್ಥಾನ ಉಳ್ಳೂರು 74 ಇದರ ಆಡಳಿತ ಮೊಕ್ತೇಸರ ಸಂಪಿಗೇಡಿ ಸಂಜೀವ ಶೆಟ್ಟಿ,ದುಬೈ ಉದ್ಯಮಿ ಮಹಮ್ಮದ್ ಸಾಹೇಬ್ ಕಿರಿ ಮಂಜೇಶ್ವರ, ಸುನ್ನೀ ಸಂಘಟನೆಗಳ ನಾಯಕರು ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಸ್ಥಪಾಕ ಖತೀಬ್ ಅಬ್ದುಲ್ ಖಾದರ್. ಸಮಾಜ ಸೇವಕ ದಸ್ತಗೀರ್ ಕಂಡ್ಲೂರ್, ಕತಾರ್ ಉದ್ಯಮಿ ಸಿ.ಕೆ.ಫರೋಜ್ ಖಾನ್, ಸಿದ್ದಾಪುರ ಕಾಮತ್ ಹಾರ್ಡವೇರ್ ಮಾಧವ್ ಕಾಮತ್, ಹೆನ್ನಾಬೈಲು ಮಸೀದಿ ಖತೀಬರು ಮೌಲಾನಾ ಶಾ ಆಲಮ್ ರಝ್ಜಿ, ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಅಧ್ಯಕ್ಷ ಬಿಎಸ್ಎಫ್ ರಫಿಕ್ ಗಂಗೋಳ್ಳಿ, ಎಸ.ವೈ.ಎಸ್.ಉಡುಪಿ ಜಿಲ್ಲಾ ಅಧ್ಯಕ್ಷ ಅಡ್ವಕೇಟ್ ಹಮ್ಜತ್ ಹೆಜಮಾಡಿ, ಎಸ್.ಎಂ.ಎ. ಉಡುಪಿ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಮನ್ಸೂರ್ ಕೋಡಿ, ಉಡುಪಿ ಜಿಲ್ಲಾ ನಮ್ಮ ನಾಡು ಒಕ್ಕೂಟದ ಅಧ್ಯಕ್ಷ ಮುಷ್ತಾಕ್ ಅಹಮ್ಮದ್ ಬೆಳ್ವೆ, ಲೇಖಕ ಮುಸ್ತಾಕ್ ಹೆನ್ನಾಬೈಲು, ಶಕೀರ್ ಮಿಸ್ಬಾಹಿ, ರಜಬ್. ಅಶ್ರಫ್ ಉಪಸ್ಥಿತರಿದ್ದರು.

    ಕಟ್ಟಡ ಸಮಿತಿ ಅಧ್ಯಕ್ಷ ಜನಾಬ್ ಎಂ.ಎಸ್. ಮಹಮ್ಮದ್ ಸ್ವಾಗತಿಸಿ, ಇಬ್ರಾಹಿಮ್ ಜೆ. ವಂದಿಸಿದರು.

  • ಕೋಟತಟ್ಟು ಪಡುಕರೆ- ಶಾಲಾ ರಂಗಮಂಟಪ ಕೊಠಡಿ ನಿರ್ಮಾಣಕ್ಕೆ ಶಿಲಾನ್ಯಾಸ

    ಕೋಟತಟ್ಟು ಪಡುಕರೆ- ಶಾಲಾ ರಂಗಮಂಟಪ ಕೊಠಡಿ ನಿರ್ಮಾಣಕ್ಕೆ ಶಿಲಾನ್ಯಾಸ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕೋಟತಟ್ಟು ಪಡುಕರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ನೂತನ ರಂಗಮಂಟಪ ಹಾಗೂ ಕೊಠಡಿ ಶಿಲಾನ್ಯಾಸ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
    ಧಾರ್ಮಿಕ ಕಾರ್ಯಕ್ರಮವನ್ನು ಸಾಲಿಗ್ರಾಮ ವೇ.ಮೂ ಜನಾರ್ದನ ಅಡಿಗ ನೆರವೇರಿಸಿದರು.ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಶಿಲಾನ್ಯಾಸಗೈದರು.

    ಕಾರ್ಯಕ್ರಮದಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್,ಸದಸ್ಯೆ ವಿದ್ಯಾ ಸಾಲಿಯಾನ್, ಕರ್ಣಾಟಕ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ರವೀಂದ್ರನಾಥ ಹಂದೆ,ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಹಂದೆ,ಶಾಲಾ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಿವಮೂರ್ತಿ ಕೆ,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸುಲೇಮಾನ್ , ಉಪಾಧ್ಯಕ್ಷೆ ಶ್ಯಾಮಲ,ಅನಿತಾ,ಶ್ರೀನಿವಾಸ್ ,ಮಾಜಿ ಅಧ್ಯಕ್ಷ ಹುಸೇನ್ ,ಶಾಲಾ ಮುಖ್ಯ ಶಿಕ್ಷಕಿ ಜಾನಕಿ ಭಟ್,ಸಹಶಿಕ್ಷಕರಾದ ಸಂಗೀತ ಕೋಟ್ಯಾನ್ ,ಗಣೇಶ್ ಆಚಾರಿ,ಅರವಿಂದ ಹೆಬ್ಬಾರ್,ಗೌರವ ಶಿಕ್ಷಕಿ ಶೈಲಜಾ,ಗುತ್ತಿಗೆದಾರ ರಹೀಲ್ ಇಬಾಹಿಂ , ಸ್ಥಳೀಯರಾದ ಕೇಶವ ಪುತ್ರನ್,ಅಕ್ಷರದಾಸೋಹ ಸಿಬ್ಬಂದಿಗಳು, ಉಪಸ್ಥಿತರಿದ್ದರು.

  • ಕೋಟ ಗ್ರಾ.ಪಂ. ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಕುರಿತು ಸಭೆ

    ಕೋಟ ಗ್ರಾ.ಪಂ. ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಕುರಿತು ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಕುರಿತು ಸಭೆ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಅಧ್ಯಕ್ಷತೆಯಲ್ಲಿ ಮಂಗಳವಾರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

    ಸಭೆಯಲ್ಲಿ ಕೋಟ ರಾಷ್ಟ್ರೀಯ ಹೆದ್ದಾರಿ ಅಮೃತೇಶ್ವರಿ ಸರ್ಕಲ್ ಬಳಿ ಅಪಘಾತ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

    ಇತ್ತೀಚಿಗೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪಂಚಾಯತ್ ಸಮ್ಮುಖದಲ್ಲಿ ಅಮೃತೇಶ್ವರಿ ಸರ್ಕಲ್ ಬಂದ್ ಗೊಳಿಸುವ ಬಗ್ಗೆ ಸ್ಥಳೀಯ ಅಭಿಪ್ರಾಯ ತೆಗೆದು ನಿರ್ಣಯ ಮಾಡಿ ನೀಡಲು ಸಲಹೆ ನೀಡಿದ್ದಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರಿಹಾರ ಪಡೆದುಕೊಂಡ ಸ್ಥಳಗಳನ್ನು ತೆರವುಗೊಳಿಸಲು ಸಭೆಯಲ್ಲಿ ಸೂಚಿಸಿ ನಿರ್ಣಯ ಕೈಗೊಂಡಿತು. ಈ ಮೂಲಕ ಅಲ್ಲಿನ ವಿವಿಧ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ,ಸರ್ಕಲ್ ಬಳಿ ವಿಭಜಕವನ್ನು ಅಗಲಿಕರಣಗೊಳಿಸಿ ವಾಹನ ನಿಲ್ಲುವಷ್ಟು ವ್ಯವಸ್ಥೆ ಕಲ್ಪಿಸಲು ಕುರಿತಂತೆ ಸರ್ಕಲ್ ಬಳಿ ಹೈಮಾಸ್ಟ್ ಅಳವಡಿಸುವ ಕುರಿತು ಸಭೆ ಸೂಚಿಸಿತು.

    ಸಭೆಯಿಂದ ಹೊರಗುಳಿದ ನವಯುವ ಕಂಪನಿ
    ಸಭೆಯಲ್ಲಿ ನವಯುಗ ಕಂಪನಿ ಅನುಪಸ್ಥಿತಿ ಬಗ್ಗೆ ಪಂಚಾಯತ್ ಆಕ್ರೋಶ ಹೊರಹಾಕಿ ಅವರ ವಿರುದ್ಧ ನೋಟೀಸ್ ಜಾರಿಗೊಳಿಸುವ ನಿರ್ಧಾರ ಕೈಗೊಂಡಿತು.

    ಈ ಕಾರ್ಯಕ್ರಮದಲ್ಲಿ ಪಂಚಾಯತ್ ಸಭಾಂಗಣದ ಮೇಲ್ಭಾಗದ ವಿನ್ಯಾಸದ ಅನುದಾನ ಒದಗಿಸಿದ ಮನೋವೈದ್ಯ ಡಾ.ಸಿ ಪ್ರಕಾಶ್ ತೋಳಾರ್ ,ಕರಾವಳಿ ಓಷಿಯನ್ ಪ್ರಾಡೆಕ್ಟ್ ಪರವಾಗಿ ಸುರೇಂದ್ರ ಪೂಜಾರಿ ಇವರನ್ನು ಅಭಿನಂದಿಸಲಾಯಿತು.
    ಸಭೆಯಲ್ಲಿಆಟೋ ಚಾಲಕ ಸಂಘದ ಪದಾಧಿಕಾರಿಗಳು,ಹಿ.ಜಾ.ವೇ ಕೋಟ ಪದಾಧಿಕಾರಿಗಳು, ಪಂಚಾಯತ್ ಉಪಾಧ್ಯಕ್ಷೆ ಜಯಂತಿ ಪೂಜಾರಿ,ಕೋಟ ಠಾಣಾಧಿಕಾರಿ ಮಧು ಬಿ.ಇ,ಗೋವೆನ್ ಮೆರಿನ್ ಫ್ರೆಶ್ ಪಾಲುದಾರ ಬಿಜು ನಾಯರ್, ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ,ಉದ್ಯಮಿ ಸದಾನಂದ ಪೂಜಾರಿ,ಲಕ್ಷ್ಮೀ ಸೋಮಬಂಗೇರ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಸುನೀತಾ, ಸದಸ್ಯರು ,ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯ ಚಂದ್ರ ಪೂಜಾರಿ ನಿರೂಪಿಸಿದರು.

  • ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ನಬಾರ್ಡ್ ಅಧಿಕಾರಿಗಳೊಂದಿಗೆ ಆಂಧ್ರ ಪ್ರದೇಶ, ಮಧ್ಯಪ್ರದೇಶ, ಅಂಡಮಾನ್, ನಿಕೋಬಾರ್ ಮತ್ತು ಗುಜರಾತ್ ರಾಜ್ಯಗಳ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಮತ್ತು ರಾಜ್ಯ ಸಹಕಾರಿ ಬ್ಯಾಂಕ್ ಅಧಿಕಾರಿಗಳ ಅಧ್ಯಯನ ತಂಡ ಭೇಟಿ

    ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ನಬಾರ್ಡ್ ಅಧಿಕಾರಿಗಳೊಂದಿಗೆ ಆಂಧ್ರ ಪ್ರದೇಶ, ಮಧ್ಯಪ್ರದೇಶ, ಅಂಡಮಾನ್, ನಿಕೋಬಾರ್ ಮತ್ತು ಗುಜರಾತ್ ರಾಜ್ಯಗಳ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಮತ್ತು ರಾಜ್ಯ ಸಹಕಾರಿ ಬ್ಯಾಂಕ್ ಅಧಿಕಾರಿಗಳ ಅಧ್ಯಯನ ತಂಡ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ನಬಾರ್ಡ್‍ನ ಅಧಿಕಾರಿ ಮಂಗಳಾ ಇವರ ನೇತೃತ್ವದಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಬ್ರಹ್ಮಾವರ ವಲಯ ಮೇಲ್ವಿಚಾರಕರಾದ ರಾಜಾರಾಮ ಶೆಟ್ಟಿ ಇವರೊಂದಿಗೆ ಆಂಧ್ರ ಪ್ರದೇಶ, ಮಧ್ಯಪ್ರದೇಶ, ಅಂಡಮಾನ್, ನಿಕೋಬಾರ್ ಮತ್ತು ಗುಜರಾತ್ ರಾಜ್ಯಗಳ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಮತ್ತು ರಾಜ್ಯ ಸಹಕಾರಿ ಬ್ಯಾಂಕ್ ಅಧಿಕಾರಿಗಳು ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಮಂಗಳವಾರ ಭೇಟಿ ನೀಡಿದರು.

    ಈ ಸಂದರ್ಭದಲ್ಲಿ ಸಂಘದ ವ್ಯವಹಾರದ ಅಭಿವೃದ್ಧಿ ಕುರಿತು ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಮಾಹಿತಿ ನೀಡುವಾಗ ಸಂಘವು ನಡೆದು ಬಂದ ದಾರಿ, ಸಂಘದ ಸ್ವಂತ ಕಟ್ಟಡಗಳು, ಗೋದಾಮುಗಳು, ಸದಸ್ಯರಿಗೆ ಸಂಘದಿಂದ ದೊರಕುವ ವಿವಿಧ ಯೋಜನೆಗಳು ಮತ್ತು ಸಂಘದಿಂದ ರೈತ ಸದಸ್ಯರಿಗಾಗಿ ದೊರಕುವ ರೈತ ಸಂಜೀವಿನಿ ಕ್ರೆಡಿಟ್ ಕಾರ್ಡ್ ಸೌಲಭ್ಯದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಸದಸ್ಯತ್ವ, ಸ್ವ ಸಹಾಯ ಸಂಘ ರಚನೆ, ಸದಸ್ಯತ್ವ ವರ್ಗೀಕರಣ, ಉಳಿತಾಯ ಕ್ರೋಢೀಕರಣ, ಸ್ವಸಹಾಯ ಸಂಘಗಳ ಸಾಲಗಳ ಮಿತಿ, ಸಾಲ ವಿತರಣೆ, ವಸೂಲಾತಿ ಮತ್ತು ಸಂಘದ ಮೇಲ್ವಿಚಾರಣೆ ಕುರಿತು ಚರ್ಚಿಸಲಾಯಿತು. ಸಾಲದ ಮಿತಿ, ಉದ್ದೇಶ ಮತ್ತು ಮಂಜೂರಾತಿ ಹಾಗೂ ಸದಸ್ಯರ ಕಲ್ಯಾಣ ನಿಧಿ, ಸಮೃದ್ಧಿ ಕ್ಷೇಮ ನಿಧಿಗಳ ಜೋಡಣೆ ಮತ್ತು ಅನುಷ್ಠಾನದ ಕುರಿತು ವಿವರವಾಗಿ ಚರ್ಚಿಸಲಾಯಿತು. ಸಂಘದ ನೂತನ ವಿಶಿಷ್ಟ ಯೋಜನೆಗಳಲ್ಲಿ ಒಂದಾದ ‘ಸಕಲ’ ಕೃಷಿ ಉಪಕರಣಗಳ ಮಾರಾಟ ಮಳಿಗೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಭೇಟಿ ನೀಡಿದ ಅಧಿಕಾರಿಗಳು ಚರ್ಚೆಯ ಮೂಲಕ ವಿಚಾರ ವಿನಿಮಯ ಮಾಡಿಕೊಂಡು ಸಂಘದ ವ್ಯವಸ್ಥಿತ ಕಾರ್ಯವೈಖರಿ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಅಭಿವೃದ್ಧಿಯನ್ನು ಶ್ಲಾಘಿಸಿದರು.

    ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ ಕುಮಾರ್ ಶೆಟ್ಟಿ ಇವರು ಭೇಟಿ ನೀಡಿದ ಅಧಿಕಾರಿಗಳನ್ನು ಸ್ವಾಗತಿಸಿದರು. ಸಂಘದ ಸಿಬ್ಬಂದಿ ಶಾಲಿನಿ ಹಂದೆ ವಂದನಾರ್ಪಣೆ ನೆರವೇರಿಸಿದರು.

  • ಸಾಧಕರೆಡೆ – ನಮ್ಮನಡೆ ತಿಂಗಳ ಕಾರ್ಯಕ್ರಮ ಶಿವಾನಂದ ಅಡಿಗ ಮಣೂರು ಸನ್ಮಾನ

    ಸಾಧಕರೆಡೆ – ನಮ್ಮನಡೆ ತಿಂಗಳ ಕಾರ್ಯಕ್ರಮ ಶಿವಾನಂದ ಅಡಿಗ ಮಣೂರು ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಶ್ರೀ ಶಾಂತಿಮತೀ ಪ್ರತಿಷ್ಠಾನ ಹಮ್ಮಿಕೊಂಡ ಸಾಧಕರೆಡೆ – ನಮ್ಮನಡೆ ತಿಂಗಳ ಕಾರ್ಯಕ್ರಮದಲ್ಲಿ 2023ರ ಫೆ. ತಿಂಗಳ ಸಾಧಕರಾಗಿ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸಾಮಾಜಿಕ ಕಾರ್ಯಕರ್ತ ಶಿವಾನಂದ ಅಡಿಗ ಮಣೂರು ಇವರನ್ನು ಗೌರವಿಸಲಾಯಿತು.

    ಕೇರಳ ಕೊಲ್ಲಂನ ಅಮ್ಮ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ರಮೇಶ ಅಡಿಗ ಉಪಸ್ಥಿತರಿದ್ದು ಲಲಿತಾ ಸಹಸ್ರನಾಮದ ಮಹತ್ವವನ್ನು ವಿವರಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ಉಮೇಶ ಬಾಯರಿ, ಸದಸ್ಯರಾದ ವನಿತಾ ಉಪಾಧ್ಯ, ಲಕ್ಷ್ಮೀ ಭಟ್ ಹಾಗೂ ಶಿವಾನಂದ ಅಡಿಗರ ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ಶಾಂತಿಮತೀ ಪ್ರತಿಷ್ಠಾನವು ದಶಮಾನೋತ್ಸವದ ಸವಿನೆನಪಿಗಾಗಿ ನಡೆಸುತ್ತಿರುವ ಕೋಟಿ ಗಾಯತ್ರೀ ಜಪ ಹಾಗು ಲಕ್ಷ ಲಲಿತಾ ಸಹಸ್ರನಾಮ ಪಾರಾಯಣದ ಅಭಿಯಾನವು ಈ ಸಂದರ್ಭದಲ್ಲಿ ನಡೆಯಿತು. ಪ್ರತಿಷ್ಠಾನದ ಪ್ರಸನ್ನ ಭಟ್ ಸ್ವಾಗತಿಸಿ ಡಾ| ವಿಜಯ ಮಂಜರ್ ಪ್ರಸ್ತಾವನೆಗೈದರು. ಪ್ರತಿಷ್ಠಾನದ ಅಧ್ಯಕ್ಷ ಸಚ್ಚಿದಾನಂದ ಅಡಿಗರು ಧನ್ಯವಾದಗೈದರು. ರಾಮಚಂದ್ರ ಉಡುಪ ಕಾರ್ಯಕ್ರಮ ನಿರ್ವಹಣೆಗೈದರು.

  • ಐರೋಡಿ- ಸ್ಪೋಕನ್ ಇಂಗ್ಲೀಷ್ ಫಸ್ಟ್ ಕಾರ್ಯಕ್ರಮ

    ಐರೋಡಿ- ಸ್ಪೋಕನ್ ಇಂಗ್ಲೀಷ್ ಫಸ್ಟ್ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಳಿಬೆಟ್ಟು ಐರೋಡಿ, ಸಾಸ್ತಾನ ಇಲ್ಲಿ ಕಾರ್ಯಕ್ರಮದ ಮೊದಲ ಭಾಗದಲ್ಲಿ ಶಾಲೆಯ ಉಪವನಕ್ಕೆ ಹೊಸದಾಗಿ ನಿರ್ಮಿಸಿದ ಆವರಣವನ್ನು ಐರೋಡಿ ಗ್ರಾಮ ಪಂಚಾಯತ್ ಸದಸ್ಯ ಸುಧಾಕರ ಪೂಜಾರಿ ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಸ್ಪೋಕನ್ ಇಂಗ್ಲೀಷ್ ಫಸ್ಟ್ ಕಾರ್ಯಕ್ರಮವನ್ನು ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಪೂರ್ಣಿಮಾರವರು ಸ್ಪೋಕನ್ ಇಂಗ್ಲೀಷ್ ಫಸ್ಟ್ ಪೋಸ್ಟರ್ ಬಿಡುಗಡೆಗೊಳಿಸಿದರು.

    ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಎಸ್‍ಡಿಎಂಸಿ ಉಪಾಧ್ಯಕ್ಷ ವಿಜಯ ಪೂಜಾರಿ, ಸದಸ್ಯ ಶಿವರಾಮ್ ಕುಲಾಲ್, ಪೋಷಕರಾದ ಸುಷ್ಮಾ ಹಾಗೂ ಶಾಲಿನಿ ಉಪಸ್ಥಿತರಿದ್ದರು. ಹಾಗೆ ಕಾರ್ಯಕ್ರಮದಲ್ಲಿ ಸರ್ವ ಎಸ್‍ಡಿಎಂಸಿ ಸದಸ್ಯರು, ಪೋಷಕರು, ಶಿಕ್ಷಕ ವರ್ಗ ಹಾಗೂ ಶಾಲೆಯ ಮಕ್ಕಳು ನೆರೆದಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು 5ನೇ ತರಗತಿ ವಿದ್ಯಾರ್ಥಿನಿಯರಾದ ಕು. ಸ್ಫೂರ್ತಿ ಮತ್ತು ಕು. ಲಕ್ಷ್ಮಿ ಇಂಗ್ಲಿಷ್ ಭಾಷೆಯಲ್ಲಿ ನಡೆಸಿಕೊಟ್ಟರು.

  • ಮಡಾಮಕ್ಕಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಈ ಊರಿಗೆ ಇನ್ನೂ ಸಿಕ್ಕಿಲ್ಲ ಸ್ವಾತಂತ್ರ್ಯ

    ಮಡಾಮಕ್ಕಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಈ ಊರಿಗೆ ಇನ್ನೂ ಸಿಕ್ಕಿಲ್ಲ ಸ್ವಾತಂತ್ರ್ಯ

    ಮಡಾಮಕ್ಕಿ ಪಂಚಾಯತ್ ವ್ಯಾಪ್ತಿಯ ಮೂಲಭೂತ ಸೌಕರ್ಯ ವಂಚಿತ ಕುಂಟಮಕ್ಕಿ, ಕಾರಿಮನೆ, ಹಂಜ, ಎಡಮಲೆ ಪ್ರದೇಶದ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ

    Video:

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮದಲ್ಲಿ ನಾವಿದ್ದೇವೆ. ಆದರೆ, ಈ ಊರಿಗೆ ಸ್ವಾತಂತ್ರ್ಯ ಬಿಡಿ, ಮೂಲಭೂತ ಸೌಕರ್ಯಗಳೇ ಮರೀಚಿಕೆಯಾಗಿದೆ. ಸಿಕ್ಕ ಸಿಕ್ಕವರ ಕೈಕಾಲು ಹಿಡಿದು ಬೇಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.

    ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಆಗುಂಬೆಯನ್ನು ಸಂಪರ್ಕಿಸುವ ಕುಂದಾಪುರ ಸೋಮೇಶ್ವರ ರಸ್ತೆಯಲ್ಲಿ ಕುಂದಾಪುರದಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಮಡಾಮಕ್ಕಿ ಗ್ರಾಮದ ಜನರ ಗೋಳಿನ ಕಥೆಯಿದು.

    ಮಡಾಮಕ್ಕಿ ಪಂಚಾಯತ್ ವ್ಯಾಪ್ತಿಯ ಕುಂಟಮಕ್ಕಿ, ಕಾರಿಮನೆ, ಹಂಜ, ಎಡಮಲೆ ಪ್ರದೇಶ ದಟ್ಟ ಅರಣ್ಯ ಪ್ರದೇಶದ ತಪ್ಪಲು. ಹೇಳಿ ಕೇಳಿ ನಕ್ಸಲ್ ಪೀಡಿತ ಪ್ರದೇಶ. ಲಕ್ಷಾಂತರ ರೂಪಾಯಿಗಳ ನಕ್ಸಲ್ ಪ್ಯಾಕೇಜ್ ಘೋಷಣೆಯಾಗಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇಲ್ಲಿನ ಜನರ ಕಣ್ಣೀರು ಒರೆಸಲು ಯತ್ನಿಸಲೇ ಇಲ್ಲ.

    ಇಲ್ಲಿ ಸುಮಾರು ಮುನ್ನೂರಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯಿದೆ. 100ಕ್ಕೂ ಅಧಿಕ ಮಕ್ಕಳು ಶಾಲೆಗೆ ಹೋಗುವವರಿದ್ದಾರೆ. ಅನಾರೋಗ್ಯ ಕಾಡಿದರೆ 16 ಕಿ.ಮೀ ದೂರದ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೇ ಹೋಗಬೇಕು. 15 ಮನೆಗಳಿಗೆ ಇನ್ನೂ ಹಕ್ಕು ಪತ್ರ ದೊರಕಿಲ್ಲ. ರಸ್ತೆ ಸಂಚಾರದ ಸ್ಥಿತಿ ಹೇಳತೀರದಾಗಿದೆ. ಅಲ್ಲದೇ ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚಾಗಿದೆ.

    ಹಿರಿಯರು, ಗರ್ಭಿಣಿಯರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಕಂಬಳಿ ಬಳಸಿ ಹೊತ್ತುಕೊಂಡೇ ಸಾಗಬೇಕಾದ ಸ್ಥಿತಿ. ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಪ್ರತಿನಿಧಿಗಳು ನವರಂಧ್ರಗಳನ್ನು ಮುಚ್ಚಿಕೊಂಡು ಬಿಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳೆಲ್ಲಾ ಸುಳ್ಳಾಗಿದೆ. ಇದೇ ಕಾರಣಕ್ಕೆ ಈ ಬಾರಿಯ ಮತದಾನವನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಭರವಸೆಗಳು ಬೇಡ, ಅನುಷ್ಟಾನವಷ್ಟೇ ಬೇಕು ಎನ್ನುವುದು ಗ್ರಾಮಸ್ಥರ ಒಕ್ಕೊರಲ ಆಗ್ರಹ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುತ್ತಾರೋ ಕಾದು ನೋಡಬೇಕಿದೆ.