ಕುಂದಾಪುರ :ಕಾರ್ಮಿಕ ಕಲ್ಯಾಣ ಮಂಡಳಿಯ ಹಣ ದುರ್ಬಳಕೆಗೆ ಅವಕಾಶ ಕೊಡೆವು – ಸುರೇಶ ಕಲ್ಲಾಗರ

ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದಿಂದ ಪ್ರತಿಭಟನಾ ಧರಣಿ

Video:

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕಾರ್ಮಿಕ ಕಲ್ಯಾಣ ಮಂಡಳಿ ರಚನೆ ಮಾಡಿರುವುದು 1996ರಲ್ಲಿ ಎಡಪಕ್ಷಗಳ ಬೆಂಬಲದಿಂದ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ. ಇದೀಗ ಬಿಜೆಪಿ ಸರ್ಕಾರ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿನ 12 ಸಾವಿರ ಕೋಟಿಯ ಮೇಲೆ ಕಣ್ಣಿಟ್ಟಿದೆ. ಕಾರ್ಮಿಕ ಮಂಡಳಿಯ ಹಣ ಯಾವುದೇ ಕಾರಣಕ್ಕೂ ದುರ್ಬಳಕೆಯಾಗಬಾರದು ಅದು ಕಾರ್ಮಿಕರ ಶ್ರೇಯೋಭಿವೃದ್ದಿಗೆ ಬಳಕೆಯಾಗಬೇಕು ಎಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ ಕಲ್ಲಾಗರ ಹೇಳಿದರು.

ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ( ಸಿಡಬ್ಲ್ಯುಎಫ್‍ಐ-ಸಿಐಟಿಯು) ನೇತೃತ್ವದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಶೈಕ್ಷಣಿಕ ಧನಸಹಾಯ ಪಡೆಯಲು ಕುಟುಂಬ ಐಡಿ ಕಡ್ಡಾಯಗೊಳಿಸಿರುವುದನ್ನು ಹಿಂಪಡೆಯಲು- ನಿಯಮಾವಳಿ ಸರಳಗೊಳಿಸಲು ಆಗ್ರಹಿಸಿ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ನಡೆದ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದರು.
ಕಟ್ಟಡ ನಿರ್ಮಾಣ ಕಾರ್ಮಿಕರು ಈ ದೇಶವನ್ನು ಕಟ್ಟುವವರು ಎಂದು ಸುಪ್ರೀಂಕೋರ್ಟ್ ಹೇಳಿದೆ. ನಿರ್ಮಾಣ ಕಾರ್ಮಿಕರ ಸಲುವಾಗಿ ಇರುವ ಹಣ ರಾಜಕೀಯ ಉದ್ದೇಶಗಳಿಗೆ ಬಳಕೆ ಮಾಡಬಾರದು ಎಂದೂ ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿದೆ. ಸಾಮಾಜಿಕ ಬದ್ದತೆಯಿಂದ ಸರ್ಕಾರ ಕಾರ್ಮಿಕರ ಹಿತದೃಷ್ಟಿಗೆ ಒತ್ತು ನೀಡಬೇಕು ಎಂದರು.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು 2022-23 ನೇ ಸಾಲಿನ ಶೈಕ್ಷಣಿಕ ಧನಸಹಾಯ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಮಂಡಳಿ ಕಳೆದ ಹಲವು ವರ್ಷಗಳಿಂದ ಅರ್ಜಿ ಸಲ್ಲಿಸುವ ವಿಧಾನಗಳನ್ನು ಹಲವು ಬಾರಿ ನಿಯಮಾವಳಿ ಬದಲಾಯಿಸುತ್ತಾ ಬಂದಿರುತ್ತದೆ. ಹೀಗೆ ದಿಡೀರ್ ಬದಲಾವಣೆ ಮಾಡುವಾಗ ನೋಂದಾಯಿತ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಯಾವುದೇ ಮಾಹಿತಿ ನೀಡುವುದೇ ಕಡೆಗಣಿಸಲಾಗುತ್ತಿದೆ.

ಈ ಬಾರಿಯೂ ಶೈಕ್ಷಣಿಕ ಧನಸಹಾಯ ಅರ್ಜಿ ಸಲ್ಲಿಸಲು ಹಲವು ಬದಲಾವಣೆ ಮಾಡಿರುವುದು ಕಟ್ಟಡ ಕಾರ್ಮಿಕರ ಮಕ್ಕಳನ್ನು ಶೈಕ್ಷಣಿಕ ಧನಸಹಾಯದಿಂದ ವಂಚಿಸುವ ಕ್ರಮವಾಗಿದೆ. ಈ ನಿಯಮಗಳನ್ನು ಮಂಡಳಿ ಪರಿಶೀಲಿಸಿ ಸರಳಗೊಳಿಸಲು ಕ್ರಮವಹಿಸಿ ಶೈಕ್ಷಣಿಕ ಧನಸಹಾಯ ಪಡೆಯಲು ಅನುಕೂಲ ಮಾಡಬೇಕೆಂದು ಮನವಿ ಮಾಡಿದರು.

ಕರೋನ ನಂತರದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಟೂಲ್ ಕಿಟ್, ಶಾಲಾ ಕಿಟ್ ಗಳನ್ನು ಕೆಲವು ಕಂಪೆನಿಗಳಿಂದ ವಿಪರೀತವಾಗಿ ಖರೀದಿಸಲಾಗಿದೆ. ಈ ಖರೀದಿಯಲ್ಲಿ ಕಮಿಷನ್ ಗಳು ಹಾಗೂ ವ್ಯಾಪಕ ಭ್ರಷ್ಟಾಚಾರ ತನಿಖೆಗೆ ಒಳಪಡಿಸಬೇಕು. ಅಲ್ಲದೇ ಈ ಕಿಟ್ ಗಳನ್ನು ಅತಿ ಹೆಚ್ಚು ನಕಲಿ ಕಾರ್ಮಿಕರು ಪಡೆದಿರುವ ಬಗ್ಗೆ ತನಿಖೆ ನಡೆಸಿ ಮಂಡಳಿ ಹಣ ರಕ್ಷಿಸಬೇಕು ಎಂದರು.

ಮಂಡಳಿಯ ನಕಲಿ ಕಾರ್ಮಿಕರ ಪತ್ತೆ ಹಚ್ಚುವ ಆಂದೋಲನ ಯಶಸ್ವಿಯಾಗಿಲ್ಲ ಇಂದು ಕೆಲವು ಖಾಸಗಿ ವ್ಯಕ್ತಿಗಳು ಕೆಲವು ನಕಲಿ ಅಸಲಿ ಕಾರ್ಮಿಕರನ್ನು ವಂಚಿಸಿ ಗುರುತು ಚೀಟಿ ನೋಂದಣಿ ಮಾಡಿಕೊಡಲು ಖಾಸಗಿ ಸೈಬರ್ ಗಳ ಜೊತೆ ಕೆಲವು ಕಾರ್ಮಿಕ ಇಲಾಖೆ ಜೊತೆ ಶಾಮೀಲಾಗಿ ಸಾವಿರಾರು ರೂಪಾಯಿಗಳನ್ನು ವಸೂಲಿ ಮಾಡಿ ರಶೀದಿಗಳು ನೀಡದೇ ದಂಧೆ ನಡೆಸಿ ವಿಪರೀತ ನಕಲಿ ಕಾರ್ಡುಗಳನ್ನು ಮಾಡಲಾಗುತ್ತಿದೆ ಇಂತವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ, ಪ್ರಧಾನ ಕಾರ್ಯದರ್ಶಿ ಸಂತೋಷ ಹೆಮ್ಮಾಡಿ, ಕಾರ್ಮಿಕ ಮುಖಂಡರಾದ ಕೆ.ಶಂಕರ್ ಮೊದಲಾದವರು ಭಾಗವಹಿಸಿದ್ದರು.

Comments

Leave a Reply

Your email address will not be published. Required fields are marked *

More posts