“ನನ್ನ ಸಹೋದರಿ” ಲೋಗೋ ಅನಾವರಣ ಮತ್ತು ಜಾಗೃತಿ ಕಾರ್ಯಕ್ರಮ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬಡತನದ ಕಾರಣಕ್ಕೆ ಹೆಣ್ಣುಮಕ್ಕಳ ಮದುವೆ ನಿಂತುಹೋಗದಂತೆ “ನನ್ನ ಸಹೋದರಿ” ಕೆಲಸ ಮಾಡುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ರಫೀಕ್ ಮಾಸ್ಟರ್ ಹೇಳಿದರು.

ಅವರು ಮಾರ್ಚ್ 17ರಂದು ತೆಕ್ಕಟ್ಟೆಯ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್ ನಲ್ಲಿ “ನನ್ನ ಸಹೋದರಿ” ಕಾರ್ಯಕ್ರಮದ ಲೋಗೋ ಅನಾವರಣ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬಡತನದ ಕಾರಣದಿಂದಾಗಿ ಮದುವೆಯಾಗಲು ಸಾಧ್ಯವಾಗದ ಸಮುದಾಯದ ಸಹೋದರಿಯರ ಪರಿಸ್ಥಿತಿ ಮತ್ತು ಸಮಾಜದ ಜವಾಬ್ದಾರಿಗಳ ಬಗ್ಗೆ ವಿವರಿಸಿದರು. ಶ್ರೀಮಂತರು ಬಡ ಹೆಣ್ಣುಮಕ್ಕಳನ್ನು ತನ್ನ ಸಹೋದರಿ ಎಂಬ ಭಾವನೆಯೊಂದಿಗೆ ಮದುವೆಯ ಜವಾಬ್ದಾರಿವಹಿಸುವಂತೆ ಕರೆ ನೀಡಿದರು.

ನನ್ನ ಸಹೋದರಿ ಯೋಜನೆಯ ಅಧ್ಯಕ್ಷ ಅಬ್ದುಲ್ ಖಾದರ್ ಮೂಡಗೋಪಾಡಿಯವರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮೌ/ ಝಮೀರ್ ಅಹ್ಮದ್ ರಶಾದಿಯವರ ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಧ್ಯಕ್ಷ ಅಬ್ದುಲ್ ಖಾದರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಯ್ಯದ್ ಜಾಫರ್ ತಂಙಲ್ ಕೋಟೇಶ್ವರ ಮತ್ತು ಮೌಲಾನಾ ಉಬೈದುಲ್ಲಾ ನದ್ವೀ ಕಂಡ್ಲೂರು ಸಂಸ್ಥೆಯ ಲೋಗೋ ಅನಾವರಣಗೊಳಿಸಿ ಶುಭ ಹಾರೈಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಉದ್ಯಮಿ ಮತ್ತು ಸಮಾಜ ಸೇವಕ ಅಬ್ದುಲ್ ಸತ್ತಾರ್ ಕೋಟೇಶ್ವರ ಹಾಗೂ ಸೌದಿ ಅರೇಬಿಯಾದ ಉದ್ಯಮಿ ಮೊಹಮ್ಮದ್ ಆಸಿಫ್ ಪಾರಂಪಳ್ಳಿಯವರನ್ನು ‘ನನ್ನ ಸಹೋದರಿ’ ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ವಂದಿಸಿದರು ಮತ್ತು ಹುಸೇನ್ ಹೈಕಾಡಿ ಕಾರ್ಯಕ್ರಮ ನಿರೂಪಿಸಿದರು. ಕುಂದಾಪುರ ವಲಯದ ಜಮಾಅತ್ ಹೊಣೆಗಾರರು, ಸಾಮಾಜಿಕ ಕಾರ್ಯಕರ್ತರು, ಗಣ್ಯ ವ್ಯಕ್ತಿಗಳು ಭಾಗವಹಿಸಿದರು.

Comments

Leave a Reply

Your email address will not be published. Required fields are marked *

More posts