ಕೋಡಿ ಗ್ರಾ.ಪಂ. ಜಲಜೀವನ್ ಯೋಜನೆ, ಕೋಡಿ ಗ್ರಾಮದಲ್ಲಿ 24×7 ನೀರು ಸರಬರಾಜು ಗ್ರಾಮ ಘೋಷಣೆ ಕಾರ್ಯಕ್ರಮಕ್ಕೆ ಚಾಲನೆ

0
542

ಬಹು ಕ್ಷೇತ್ರದಲ್ಲಿ ಕೋಡಿ ಗ್ರಾಮಪಂಚಾಯತ್ ಮುಂಚೂಣಿ – ಶಾಸಕ ಕಿರಣ್ ಕುಮಾರ್ ಕೊಡ್ಗಿ

ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ: ಒಂದು ಗ್ರಾಮಪಂಚಾಯತ್ ಬಹುಕ್ಷೇತ್ರದಲ್ಲಿ ಮುಂಚೂಣಿಗೆ ಬರುವುದು ಸುಲಭದ ಮಾತಲ್ಲ. ಈ ದಿಸೆಯಲ್ಲಿ ಕೋಡಿ ಗ್ರಾಮಪಂಚಾಯತ್ ವಿವಿಧ ಯೋಜನೆಗಳ ಅನುಷ್ಠಾನಗಳ ಮೂಲಕ ದಿಟ್ಟ ಹೆಜ್ಜೆ ಇರಿಸಿದೆ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಮಂಗಳವಾರ ಕೋಡಿ ಗ್ರಾಮಪಂಚಾಯತ್‍ನಲ್ಲಿ ಜಿಲ್ಲಾ ಪಂಚಾಯತ್ ಉಡುಪಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಉಡುಪಿ ಕೋಡಿ ಗ್ರಾಮ ಪಂಚಾಯತ್, ಬ್ರಹ್ಮಾವರ ತಾಲೂಕು ಪಂಚಾಯತ್ ಇವರ ಆಶ್ರಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಜಲಜೀವನ ಮಿಷನ್ ಯೋಜನೆಯಡಿ ಕೋಡಿ ಗ್ರಾಮದಲ್ಲಿ 24×7 ನೀರು ಸರಬರಾಜು ಗ್ರಾಮ ಘೋಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೋಡಿ ಗ್ರಾಮಪಂಚಾಯತ್ ಪ್ರಧಾನಮಂತ್ರಿಗಳ ಪ್ರತಿ ಕಾರ್ಯವನ್ನು ಯಶಸ್ಸಿನತ್ತ ಕೊಂಡ್ಯೋಯ್ದು ದಿನದ 24ಗಂಟೆ ನೀರುಣಿಸುವ ಯೋಜನೆಯನ್ನು ಅನುಷ್ಠಾನ ಅಸಮಾನ್ಯ ಕಾರ್ಯವನ್ನು ಸಾಧಿಸಿದ್ದಾರೆ. ಅದರಲ್ಲೂ ಪಂಚವರ್ಣ ಸಂಘಟನೆ, ಗೀತಾನಂದ ಫೌಂಡೇಶನ್ ಸಹಕಾರ ಪಡೆದು ಇಡೀ ಗ್ರಾಮ ಹಸಿರಿಕರಣಗೊಳಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಪ್ರಶಂಸಿದರು

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತಾನಾಡಿ ಗ್ರಾಮಪಂಚಾಯತ್‍ನಲ್ಲಿ ಕ್ರೀಯಾಶೀಲ ಅಭಿವೃದ್ಧಿ ಅಧಿಕಾರಿಯಾಗಿ ರವೀಂದ್ರ ರಾವ್ ಕರ್ಯನಿರ್ವಹಿಸುತ್ತಿದ್ದು, ಈ ಅನುಷ್ಠಾನಕ್ಕೆ ರೂವಾರಿಯಾಗಿಸಲು ಸಾಧ್ಯವಾಗಿದೆ. ಅಲ್ಲದೆ ತ್ಯಾಜ್ಯ ಮತ್ತು ವ್ಯಸನ ಮುಕ್ತವಾಗುವುದರ ಜತೆಗೆ ಒಂದು ಕಾಲದಲ್ಲಿ ನೀರಿಗಾಗಿ ಧರಣಿಗೈದ ಪಂಚಾಯತ್ ಇಂದು ಗ್ರಾಮಪಂಚಾಯತ್ ವ್ಯಾಪ್ತಿಯ ಪ್ರತಿ ಮನೆಗೆ ನೀರುಣಿಸುವ ಕಾರ್ಯ ಗ್ರಾಮಪಂಚಾಯತ್ ಹಿರಿಮೆಗೆ ಕಾರಣವಾಗಿದೆ. ಇದು ಸುಲಭದ ಕಾರ್ಯವಲ್ಲ ಇದರ ಹಿಂದೆ ಒಗ್ಗಟ್ಟಿನ ಶಕ್ತಿ ಇದೆ ಎಂದು ಬಣ್ಣಿಸಿದರು.

ಇದೇ ವೇಳೆ ರತ್ನಾಕರ ಮನೆಯಲ್ಲಿ ಟ್ಯಾಪ್ ತಿರುಗಿಸುವ ಮೂಲಕ ಜಲಜೀವನ್ ಅನುಷ್ಠಾನಕ್ಕೆ ಚಾಲನೆ ನೀಡಿದರು.

ರಾಜ್ಯ ಸರಕಾರದ ನಲ್‍ಜಲ್ ಮಿತ್ರ ಸಿಂಪ್ಯೋಟರ್ ಹಸ್ತಾಂತರಿಸಿ ಚಾಲನೆ ನೀಡಲಾಯಿತು. ನೀರು ಟ್ಯಾಂಕಿ ನಿರ್ಮಿಸಲು ಸ್ಥಳಾವಕಾಶ ನೀಡಿದವರನ್ನು ಗುರುತಿಸಿ ಗೌರವಿಸಲಾಯಿತು.

ಹಸಿರು ಜೀವ ಯೋಜನೆಯ ಸಮಾರೋಪದ ಹಿನ್ನಲ್ಲೆಯಲ್ಲಿ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಗಿಡ ನೆಟ್ಟು ಅಂಗನವಾಡಿ ಹಾಗೂ ಪಂಚಾಯತ್ ಪ್ರತಿನಿಧಿಗಳನ್ನು ಹುರಿದುಂಬಿಸಿದರು.

ಸಭಾ ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ವಾಟರ್‍ಮೆನ್ ರವಿಚಂದ್ರ, ಕರುಣಾಕರ ಮತ್ತು ಹಸಿರುಜೀವ ಕಾರ್ಯಕ್ರಮದ ಅನುಷ್ಠಾನಕ್ಕೆ ಸಹಕರಿಸಿದ ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ, ಪಂಚವರ್ಣದ ಪರವಾಗಿ ರವೀಂದ್ರ ಕೋಟ ಇವರನ್ನು ಸನ್ಮಾನಿಸಲಾಯಿತು.

ಗ್ರಾಮಪಂಚಾಯತ್ ಮಟ್ಟದಲ್ಲಿ ದಿನವಿಡೀ ಕುಡಿಯುವ ನೀರಿನ ಅವಕಾಶ ಕಲ್ಪಿಸಿದ ಪಂಚಾಯತ್‍ಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.

ಸಭೆಯ ಅಧ್ಯಕ್ಷತೆಯನ್ನು ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಜಿ.ಪಂ. ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳಿ, ಯೋಜನಾಧಿಕಾರಿ ಉದಯ ಕುಮಾರ್ ಶೆಟ್ಟಿ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭ್ಯಂತರ ವೆಂಕಟೇಶಮೂರ್ತಿ, ಬ್ರಹ್ಮಾವರ ತಾ.ಪಂ. ಇಒ ಎಚ್. ವಿ ಇಬ್ರಾಹಿಂಪುರ, ಪಂಚಾಯತ್ ಉಪಾಧ್ಯಕ್ಷ ಪ್ರಸಾದ್ ತಿಂಗಳಾಯ, ನೆಹರು ಕೇಂದ್ರದ ಅಧಿಕಾರಿ ಉಲ್ಲಾಸ್, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಪಂಚಾಯತ್ ಪ್ರತಿನಿಧಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಪಂಚಾಯತ್ ಸದಸ್ಯ ಪ್ರಭಾಕರ ಮೆಂಡನ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ನಿರೂಪಿಸಿ ಪ್ರಾಸ್ತಾವನೆ ಸಲ್ಲಿಸಿದರು. ಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ ವಂದಿಸಿದರು.

Click Here

LEAVE A REPLY

Please enter your comment!
Please enter your name here