ಕುಂದಾಪುರ :ಪಂಚಗ್ಯಾರಂಟಿ ಬಗ್ಗೆ ಬಹಳಷ್ಟು ಅಪಪ್ರಚಾರಗಳು ನಡೆದಿದ್ದರೂ ಗ್ಯಾರಂಟಿ ಯೋಜನೆ ಯಶಸ್ವಿ

ಪಂಚಗ್ಯಾರಂಟಿ ಯೋಜನೆಯಲ್ಲಿ ತಾಲೂಕಿಗೆ ರೂ.5,01,22,07,979 ಬಿಡುಗಡೆ – ಎಚ್.ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಮುಖ್ಯಮಂತ್ರಿ ಮತ್ತು ಉಪಮುಖ್ಯ ಮಂತ್ರಿಗಳ ಘೋಷಣೆ ಮಾಡಿರುವ ಪಂಚ ಗ್ಯಾರಂಟಿಯನ್ನು ಯಥಾವತ್ತಾಗಿ ಜಾರಿಗೊಳಿಸಿದ್ದಾರೆ. ಯಾವುದೇ ವಿರೋಧವಿದ್ದರೂ ಯಾವುದೇ ಯೋಜನೆಯನ್ನು ಸ್ಥಗಿತ ಮಾಡದೆ ಇಡೀ ರಾಜ್ಯದಲ್ಲಿ ಅನುಷ್ಠಾನ ಮಾಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಯೋಜನ ಮತ್ತು ಅತಿ ಹೆಚ್ಚು ಅನುದಾನವನ್ನು ಕುಂದಾಪುರ ತಾಲೂಕು ಪಡೆದಿದೆ. ಗ್ಯಾರಂಟಿ ಬಗ್ಗೆ ಬಹಳಷ್ಟು ಅಪಪ್ರಚಾರಗಳು ನಡೆದಿದ್ದರೂ ಗ್ಯಾರಂಟಿ ಯೋಜನೆ ಯಶಸ್ವಿಯಾಗಿದೆ. ಗ್ಯಾರಂಟಿಯಿಂದ ತಲಾ ಆದಾಯ ಹೆಚ್ಚಾಗಿದೆ. ಬಡವರು, ದೀನದಲಿತರನ್ನು ಮೇಲಕ್ಕೆತ್ತುವಲ್ಲಿ ಗ್ಯಾರಂಟಿ ಯೋಜನೆ ಸಫಲವಾಗಿದೆ. ತಾಲೂಕು ಮಟ್ಟದಲ್ಲಿ ಯುವನಿಧಿ ಶಿಬಿರ, ಅದಾಲತ್ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.
ಕುಂದಾಪುರದ ತಾಲೂಕು ಪಂಚಾಯತ್‍ನಲ್ಲಿ ಶನಿವಾರ ನಡೆದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಧ ಗ್ಯಾರಂಟಿ ಯೋಜನೆಗಳಲ್ಲಿ ಜನವರಿ ತಿಂಗಳಿನಲ್ಲಿ ಒಟ್ಟು 20,20,57,584 ರೂ. ಬಂದಿದ್ದು, ಯುವನಿಧಿಯಲ್ಲಿ 39,81,000 ರೂ., ಗೃಹಲಕ್ಷ್ಮೀ ಯೋಜನೆಯಲ್ಲಿ 1,99,04,432 ರೂ., ಗೃಹಜ್ಯೋತಿಯಲ್ಲಿ 4,49,31,317 ರೂ., ಶಕ್ತಿ ಯೋಜನೆಯಲ್ಲಿ 3,00,87,902 ರೂ., ಅನ್ನಭಾಗ್ಯದಲ್ಲಿ 2,23,69,365 ರೂ. ಬಂದಿದೆ. ಈವರೆಗೆ ಒಟ್ಟು 501,22,07,979 ರೂ. ಬಂದಿದೆ ಎಂದು ಅವರು ಮಾಹಿತಿ ನೀಡಿದರು.
ಶೆಟ್ರಕಟ್ಟೆ ಸಮೀಪ ನಡೆದ ಕೆಎಸ್‍ಆರ್‍ಟಿಸಿ-ಟಿಪ್ಪರ್ ಅಪಘಾತದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ 21 ಲಕ್ಷ ಮತ್ತು ಕುಂದಾಪುರ ಆದರ್ಶ ಆಸ್ಪತ್ರೆಗೆ 80 ಸಾವಿರ ರೂ. ನೀಡಲಾಗಿದೆ. ಗಾಯಾಳುಗಳಿಗೆ ಪರಿಹಾರದ ನ್ಯಾಯಾಲಯದಲ್ಲಿ ತೀರ್ಮಾನಗೊಳ್ಳಲಿದೆ ಎಂದು ಕೆಎಸ್‍ಆರ್‍ಟಿಸಿ ಡಿಪೋ ಮ್ಯಾನೇಜರ್ ಉದಯ ಶೆಟ್ಟಿ ಮಾಹಿತಿ ನೀಡಿದರು.
ಉಡುಪಿಯಿಂದ ಜಡ್ಡಿನಗದ್ದೆ ಕಳೆಸಂಕದವರೆಗೆ ಒಂದು ಸರಕಾರಿ ಬಸ್ ಮಾತ್ರ ಸಂಚರಿಸುತ್ತಿದೆ ಎಂದು ವಸುಂಧರ ಹೆಗ್ಡೆ ಹೇಳಿದರೆ, ಸರಕಾರಿ ಬಸ್ ವ್ಯವಸ್ಥೆ ಸರಿಪಡಿಸುವಂತೆ ಅನೇಕ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಸದಸ್ಯ ಜಹೀದ್ ನಾಕುದಾ, ಗಂಗೊಳ್ಳಿ-ಬೈಂದೂರು ನಡುವೆ ಸರಕಾರಿ ಬಸ್ ಸಂಚಾರ ಪ್ರಾರಂಭಿಸುವಂತೆ ಮನವಿ ಮಾಡಿದರು. ಬೈಂದೂರಿನಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ನಿಮಾಣಗೊಂಡ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ನಿರುಪಯುಕ್ತವಾಗಿದೆ ಎಂದು ಸದಸ್ಯ ನಾರಾಯಣ ಆಚಾರ್ ಆರೋಪಿಸಿದರು. ಚಾಲಕ, ನಿರ್ವಾಹಕ, ಮ್ಯಾಕಾನಿಕ್ ಹಾಗೂ ಬಸ್‍ಗಳ ಕೊರತೆಯಿಂದ ಹೊಸ ಮಾರ್ಗದಲ್ಲಿ ಬಸ್ ಓಡಾಟ ಪ್ರಾರಂಭಿಸುವುದು ಸಾಧ್ಯವಿಲ್ಲ ಎಂದು ಡಿಪೋ ಮ್ಯಾನೇಜರ್ ತಿಳಿಸಿದರು.
ತಾಲೂಕಿನಲ್ಲಿ ಅನಿಯಮಿತ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಮಂಗಳವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಅಲ್ಲಲ್ಲಿ ಅನಧಿಕೃತವಾಗಿ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಮಕ್ಕಳಿಗೆ ಹಾಗೂ ಜನರಿಗೆ ತೊಂದರೆಯಾಗುತ್ತಿದೆ. ಕಳೆದ ವರ್ಷ ಮಕ್ಕಳ ಪರೀಕ್ಷಾ ಸಮಯದಲ್ಲಿ ವಿದ್ಯುತ್ ಕಡಿತ ಮಾಡದೆ ಸಹಕಾರ ನೀಡಲಾಗಿತ್ತು. ಆದ್ದರಿಂದ ಮಕ್ಕಳ ವಿದ್ಯಾಭ್ಯಾಸ ದೃಷ್ಟಿಯಿಂದ ಈ ಸಮಯದಲ್ಲಿ ಲೋಡ್ ಶೆಡ್ಡಿಂಗ್ ಮಾಡಬಾರದು ಎಂದು ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಹೇಳಿದರು.
ವಿದ್ಯುತ್ ಮಾರ್ಗದಲ್ಲಿ ದೋಷ ಕಂಡು ಬಂದಾಗ ಲೈನ್‍ಮ್ಯಾನ್‍ಗಳು ಸಿಗುತ್ತಿಲ್ಲ, ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯದೆ ರಸ್ತೆ ಬದಿಯಲ್ಲಿ ಮನೆಗಳು ನಿರ್ಮಾಣವಾಗುತ್ತಿದ್ದರೂ ಮೆಸ್ಕಾಂ ಈ ಬಗ್ಗೆ ಮೌನ ವಹಿಸಿದೆ ಎಂದು ಸದಸ್ಯ ವಸುಂಧರ ಹೆಗ್ಡೆ ಆರೋಪಿಸಿದರೆ, ಗಂಗೊಳ್ಳಿಯಲ್ಲಿ ರಾತ್ರಿ ವೇಳೆ ಲೈನ್‍ಮ್ಯಾನ್‍ಗಳನ್ನು ನಿಯೋಜನೆ ಮಾಡಬೇಕೆಂದು ಜಹೀರ್ ನಾಕುದಾ ಒತ್ತಾಯಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಭಾನುವಾರ ಕೂಡ ಪಡಿತರ ವಿತರಣೆ ಮಾಡಬೇಕೆಂದು ವಸುಂಧರ ಹೆಗ್ಡೆ, ಮಂಜು ಕೊಠಾರಿ ಆಗ್ರಹಿಸಿದರು. 200 ಪಡಿತರ ಚೀಟಿ ಇದ್ದರೆ, ಆ ಪೈಕಿ ಶೇ.40ರಷ್ಟು ಪ.ಜಾತಿ, ಪ.ಪಂಗಡದವರು ಇದ್ದರೆ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ ಇದೆ ಎಂದು ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಹೇಳಿದರು. ಯುವನಿಧಿ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ತಾಲೂಕಿನಲ್ಲಿ ಅತಿ ಹೆಚ್ಚು ನೊಂದಣಿ ನಡೆದಿದೆ ಎಂದು ಅವರು ಹೇಳಿದರು.
ಸದಸ್ಯರಾದ ಅಭಿಜಿತ್ ಪೂಜಾರಿ, ಚಂದ್ರ ಕಾಂಚನ್, ವಾಣಿ ಆರ್.ಶೆಟ್ಟಿ, ಆಶಾ ಕರ್ವಾಲೋ, ನಾರಾಯಣ ಆಚಾರ್, ಗಣೇಶ್, ಸವಿತಾ ಪೂಜಾರಿ, ಅರುಣ್, ತಾಲೂಕು ಪಂಚಾಯತ್ ಇಒ ಮಹೇಶ್ ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *

More posts