
ಕುಂದಾಪುರ ಮಿರರ್ ಸುದ್ದಿ…



ಕುಂದಾಪುರ: ಕುಂದಾಪುರ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಪ್ರವರ್ತಿತ ಯಡಾಡಿ- ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ವಿಶ್ವ ಚಿಂತನಾ ದಿನ ಹಾಗೂ ಸಂಸ್ಥಾಪಕರ ದಿನಾಚರಣೆ ಫೆಬ್ರವರಿ 22ರಂದು ವಿದ್ಯಾರಣ್ಯ ಶಾಲಾ ವಠಾರದ ಸುಂದರ ಪರಿಸರ ತಾಣದಲ್ಲಿ ಕಾರ್ಯಕ್ರಮ ನಡೆಯಿತು.
ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಉಡುಪಿ ಜಿಲ್ಲಾ ಮುಖ್ಯ ಆಯುಕ್ತರಾದ ಇಂದ್ರಾಳಿ ಜಯಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು 120 ವರ್ಷಗಳ ಹಿಂದೆ 20 ಸದಸ್ಯರನ್ನು ಸೇರಿಸಿಕೊಂಡು ಸ್ಥಾಪನೆಯಾದ ಸ್ಕೌಟ್ ಅಂಡ್ ಗೈಡ್ಸ್ ಸೇವೆಗೆ ಗೌರವ ಕೊಡುವ ಈ ದಿನದಲ್ಲಿ ವಿದ್ಯಾರ್ಥಿಗಳು ಕೇವಲ ಓದು ಬರಹಕ್ಕೆ ಮಾತ್ರ ಸೀಮಿತರಾಗದೆ ಪ್ರೀತಿ, ಸ್ವಂಯಮನ್ನು ಉತ್ತೇಜಿಸಿಕೊಂಡು ಜಾತಿ, ಧರ್ಮ, ವರ್ಣ ವಿಚಾರದ ಕುರಿತು ವೈಷಮ್ಯವನ್ನು ಹೋಗಲಾಡಿಸಿ ವಿದ್ಯಾರ್ಥಿಗಳು ನಾವೆಲ್ಲರೂ ಸಮಾನರು ಎಂದು ಇತರರೊಂದಿಗೆ ಸೌಹಾರ್ದಯುತ ವಾತಾವರಣದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಕುಂದಾಪುರ ರೇಂಜ್ ಫಾರೆಸ್ಟ್ ಅಧಿಕಾರಿ ರಾಘವೇಂದ್ರ ಎಂ ನಾಯ್ಕ್ ಅವರು ಮಾತನಾಡಿ, ನಾವೆಲ್ಲರೂ ಹಕ್ಕು ಮತ್ತು ಕರ್ತವ್ಯವನ್ನು ಪಾಲಿಸಿಕೊಂಡು ಸಂವಿದಾನದ 51 ಜೆ ಅಡಿಯಲ್ಲಿ ಪರಿಸರದ ಹಕ್ಕಿಗೆ ನಾವೆಲ್ಲರೂ ಬದ್ಧರಾಗಬೇಕು. ಗಿಡಗಳನ್ನು ನೆಡುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ನೀರು ವಿದ್ಯುತ್ ಪೋಲಾಗದಂತೆ ಗಮನದಲ್ಲಿರಿಸಿಕೊಂಡು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಸುಂದರ ಪರಿಸರದೊಂದಿಗೆ ಬದುಕಿದಾಗ ಉತ್ತಮ ಪರಿಸರ ಸ್ನೇಹಿ ನಾಯಕರಾಗಿ ಬೆಳೆಯಬಹುದು ಎಂದರು.
ಉಡುಪಿ- ಶಿವಮೊಗ್ಗ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸಹಾಯಕ ಸಂಘಟನಾ ಆಯುಕ್ತೆ ಶ್ರೀಮತಿ ಸುಮನ್ ಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ನಾಲ್ಕು ಗೋಡೆಯಿಂದ ಹೊರಗೆ ಬಂದು ನಾವು ಹೊರಪ್ರಪಂಚದಲ್ಲಿ ಹೇಗಿರಬೇಕು ಎಂದು ಕಲಿಸಿಕೊಡುವುದೇ ಸ್ಕೌಟ್ ಅಂಡ್ ಗೈಡ್ಸ್ ಇಂತಹ ನಿಸರ್ಗ ಸುಂದರ ಪರಿಸರದಲ್ಲಿ ಮಧ್ಯೆ ಆಯೋಜಿಸಿದ ಕಾರ್ಯಕ್ರಮಕ್ಕೆ ಶಿಕ್ಷಣ ಸಂಸ್ಥೆಯನ್ನು ಶ್ಲಾಘಿಸಿದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಚಟುವಟಿಕೆಗಳ ಮೂಲಕ ಉತ್ತಮ ಶಿಸ್ತು, ಸೇವಾ ಮನೋಭಾವನೆ ಮೈಗೂಡಿಸಿಕೊಂಡಾಗ ಸಹಕಾರ, ಸ್ನೇಹ ಭಾವ ಉನ್ನತ ಮಟ್ಟದಲ್ಲಿ ಬೆಳೆದು, ಈ ಎಲ್ಲಾ ಗುಣಗಳು ಉನ್ನತ ಹುದ್ದೆಗೆ ತರಬೇತಿ ನೀಡುತ್ತದೆ ಎಂದರು.
ವೇದಿಕೆಯಲ್ಲಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕೋಶಾಧಿಕಾರಿ ಭರತ್ ಶೆಟ್ಟಿ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು. ಸುಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲ ರಂಜನ್ ಶೆಟ್ಟಿ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರಣ್ಯ ಕ್ಯಾಂಪಸ್ ವಠಾರದ ಮರ ಗಿಡಗಳ ಮಧ್ಯೆ ಸುಂದರ ಪರಿಸರದಲ್ಲಿ ಅದ್ಭುತ ಸಾಹಸ ಕ್ರೀಡೆಗಳು, ವಿವಿಧ ಮನರಂಜನೆಯ ಆಟಗಳು ಗಮನ ಸೆಳೆಯಿತು. ಬೆಂಕಿಯ ಒಲೆಯಲ್ಲಿ ತಯಾರಿಸಿದ ಮತ್ತು ಬೆಂಕಿ ಇಲ್ಲದೆ ತಯಾರಿಸಿದ ತಿಂಡಿ ತಿನಿಸುಗಳನ್ನು ವಿದ್ಯಾರ್ಥಿಗಳೇ ತಯಾರಿಸಿ ಅತಿಥಿ ಗಣ್ಯರು ರುಚಿಯನ್ನು ಸವಿದರು.
ಕಾರ್ಯಕ್ರಮದ ಆರಂಭದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಹರೀಶ್ ಕಲ್ಯಾಣಪುರ ಸ್ವಾಗತಿಸಿದರು. ಶಿಕ್ಷಕ ರಜತ್ ಭಟ್ ಕಾರ್ಯಕ್ರಮ ನಿರೂಪಿಸಿದರು. ತರಬೇತುದಾರೆ ಪವಿತ್ರ ವಂದಿಸಿದರು.











