ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ಕೋಟೇಶ್ವರ ತಂಙಳ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ 16ನೇ ವರ್ಷದ ಹುಬ್ಬುರ್ರಸೂಲ್ ಬುರ್ದಾ ಮಜ್ಲಿಸ್ ಹಾಗೂ ವಾರ್ಷಿಕ ಮಹಾಸಮ್ಮೇಳನದ ಘೋಷಣಾ ಸಮಾವೇಶವು ಆ. 8 ರಂದು ಶನಿವಾರ ಐಬಿಟಿ ಗಾರ್ಡನ್, ಮೂಡಗೋಪಾಡಿಯಲ್ಲಿ ಸಯ್ಯಿದ್ ಅಬ್ದುರ್ರಹ್ಮಾನ್ ತಂಙಳ್ ಉಚ್ಚಿಲ ಅವರ ದುಆದೊಂದಿಗೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ SJU ಅಧ್ಯಕ್ಷ B.A. ಇಸ್ಮಾಯಿಲ್ ಮದನಿ ಮಾವಿನಕಟ್ಟೆ ಮಾತನಾಡಿ, ಮಧ್ಯ ಕೇರಳದ ಕೊಳತ್ತೂರಿನಿಂದ ಆಗಮಿಸಿದ ಕೋಟೇಶ್ವರ ತಂಙಳ್ ಅವರು ಕಳೆದ ಎರಡು ದಶಕಗಳಿಂದ ಕುಂದಾಪುರ ತಾಲೂಕಿನಲ್ಲಿ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಹುಬ್ಬುರ್ರಸೂಲ್ ಕಾರ್ಯಕ್ರಮಗಳ ಮೂಲಕ ಪ್ರವಾದಿ ಪ್ರೇಮದ ಸಂದೇಶವನ್ನು ಜನಮನಕ್ಕೆ ತಲುಪಿಸುವುದರ ಜೊತೆಗೆ, ಐಬಿಟಿ ಗಾರ್ಡನ್ ಸಂಸ್ಥೆಯ ಮೂಲಕ ಮಕ್ಕಳ ಹಾಗೂ ಮಹಿಳಾ ವಿದ್ಯಾರ್ಥಿನಿಯರಿಗೆ ಧಾರ್ಮಿಕ ಮತ್ತು ಶೈಕ್ಷಣಿಕ ಜ್ಞಾನ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದೇಶ KCF ನಾಯಕ ಆಸಿಫ್ ಗೂಡಿನಬಳಿ ಅವರು ಗಣ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಐಬಿಟಿ ಗಾರ್ಡನ್ ಪರವಾಗಿ ಅವರನ್ನು ಸ್ಮರಣಿಕೆ ಹಾಗೂ ಶಾಲು ಹೊದಿಸಿ ಗೌರವಿಸಲಾಯಿತು.
ಉಡುಪಿ ಜಿಲ್ಲಾ ಸುನ್ನಿ ಕೋ-ಆರ್ಡಿನೇಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ರಝ್ವಿ ಅಲ್-ಫುರ್ಖಾನಿ ಕಲ್ಕಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಫಾಈಯ್ಯಾ ಜುಮ್ಮಾ ಮಸೀದಿ ಮೂಡುಗೋಪಾಡಿ ಖತೀಬ್ ರಮೀಝ್ ಜೌಹರಿ, ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಂಗಳೂರು ಮುದರ್ರಿಸ್ ಸಿದ್ದೀಕ್ ಸಖಾಫಿ ಹಾಗೂ ಮೊಹಿಯುದ್ದೀನ್ ಜುಮ್ಮಾ ಮಸೀದಿ ಕನ್ಯಾನ ಕೋಡಿ ಉಸ್ತಾದ್ ಸಿದ್ದೀಕ್ ಸಖಾಫಿ ಪಡುಕರೆ ಆಶಂಸೆ ನುಡಿದರು.
ಐಬಿಟಿ ಗಾರ್ಡನ್ ಕೋಶಾಧಿಕಾರಿ BSF ರಫೀಕ್ ಹಂಗಳೂರು ಹಾಗೂ RJM ಮೂಡುಗೋಪಾಡಿ ಗೌರವಾಧ್ಯಕ್ಷ G. ಮುಹಮ್ಮದ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು ಶುಭ ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಐಬಿಟಿ ಗಾರ್ಡನ್ ಚೇರ್ಮನ್ ಸಯ್ಯಿದ್ ಜಾಫರ್ ಅಸ್ಸಖಾಫ್ ಕೋಟೇಶ್ವರ ತಂಙಳ್ ಅವರು 2008ರಿಂದ ಕುಂದಾಪುರ ತಾಲೂಕಿನಲ್ಲಿ ಸಾಗಿಬಂದ ತಮ್ಮ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಪಯಣವನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ನವೆಂಬರ್ 28ರಂದು ಶನಿವಾರ ನಡೆಯಲಿರುವ 16ನೇ ಹುಬ್ಬುರ್ರಸೂಲ್ ಗ್ರ್ಯಾಂಡ್ ಬುರ್ದಾ ಕಾನ್ಫರೆನ್ಸ್ನ ದಿನಾಂಕವನ್ನು ಪೋಸ್ಟರ್ ಪ್ರದರ್ಶಿಸುವ ಮೂಲಕ ಅಧಿಕೃತವಾಗಿ ಘೋಷಿಸಲಾಯಿತು. ಕಳೆದ ಆರು ವರ್ಷಗಳಿಂದ ನೀಡಲಾಗುತ್ತಿರುವ ಇಮಾಮ್ ಬೂಸೀರಿ ಹುಬ್ಬುರ್ರಸೂಲ್ ಅವಾರ್ಡ್ ಅನ್ನು ಈ ಬಾರಿ ಸಮಸ್ತದ ಉಪಾಧ್ಯಕ್ಷರಾದ K.S. ಆಟಕೋಯ ತಂಙಳ್ ಕುಂಬೋಳ್ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಐಬಿಟಿ ಗಾರ್ಡನ್ ಅಕಾಡೆಮಿಕ್ ಡೈರೆಕ್ಟರ್ ಸಯ್ಯಿದ್ ಹುಸೈನ್ ಶಾಮಿರ್ ಅಸ್ಸಖಾಫ್, ಪ್ರಿನ್ಸಿಪಾಲ್ ಸಯ್ಯಿದ್ ಅಲಿ ಯಾಸಿರ್ ಅಸ್ಸಖಾಫ್ ಅಹ್ಸನಿ, ಉಡುಪಿ ಜಿಲ್ಲೆ KMJ ಅಧ್ಯಕ್ಷ BSF ರಫೀಕ್ ಹಾಜಿ, ಐಬಿಟಿ ಗಾರ್ಡನ್ ಬಿಲ್ಡಿಂಗ್ ಸಮಿತಿ ಅಧ್ಯಕ್ಷ ಶಾಬಾನ್ ಹಂಗಳೂರು, ಉದ್ಯಮಿ ಮುಸ್ತಫಾ ಹಾಜಿ ಕೋಡಿ, ಕರ್ನಾಟಕ ರಾಜ್ಯ SMA ಕೋಶಾಧಿಕಾರಿ ಮನ್ಸೂರ್ ಕೋಡಿ, B.A. ಮೊಹಮ್ಮದ್ ಹಾಜಿ, ಕುಂಞಿ ಮೋನಾಕ M. ಕೋಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಐಬಿಟಿ ಗಾರ್ಡನ್ ಪ್ರಧಾನ ಕಾರ್ಯದರ್ಶಿ B.M. ಅಬ್ದುಲ್ ನಾಸಿರ್ ಮೂಡುಗೋಪಾಡಿ ಸ್ವಾಗತಿಸಿದರು. ಮ್ಯಾನೇಜರ್ ಅಮೀರ್ ಖಾನ್ ಅಹ್ಸನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.












