ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಆಯುರ್ವೇದಕ್ಕೆ ವಿಶಿಷ್ಠವಾದ ಮಾನ್ಯತೆ ಮತ್ತು ವಿಪುಲ ಅವಕಾಶಗಳಿವೆ. ನಮ್ಮ ಬದುಕನ್ನು ಆವರಿಸಿಕೊಂಡಿರುವಂತಹ ಎಲ್ಲಾ ವೈದ್ಯಕೀಯ ವ್ಯವಸ್ಥೆಗಳ ನಡುವೆ ಆಯುರ್ವೇದ ಎನ್ನುವುದು ಬಹುದೊಡ್ಡ ಎತ್ತರದ ವ್ಯವಸ್ಥೆಯಾಗಿ ಉಳಿದಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಆಯುಷ್ ವಿಭಾಗವನ್ನು ಹೆಚ್ಚು ಮಾಡುವುದರ ಜೊತೆಯಲ್ಲಿ ಆಯುರ್ವೇದಕ್ಕೆ ಹೆಚ್ಚು ಒತ್ತು ನೀಡಬೇಕು. ಆಯುರ್ವೇದವನ್ನು ಬೆಳಸುವ ನಿಟ್ಟನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಹಲವು ಯೋಚನೆ ಮತ್ತು ಯೋಜನೆಗಳನ್ನು ರೂಪಿಸಿಕೊಂಡಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಈಗಲ್ಸ್ ಕ್ರಿಕೆಟ್ ಕ್ಲಬ್ ಮತ್ತು ಕುಂದಾಪುರ ರೂರಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ ಇವರ ಸಹಯೋಗದಲ್ಲಿ ಕುಂಭಾಸಿ ಗ್ರಾಮ ಪಂಚಾಯತ್ ಪ್ರಾಯೋಜಕತ್ವದಲ್ಲಿ ಭಾನುವಾರ ಕುಂಭಾಸಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿದ ಆಯುರ್ವೇದ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.



ಕುಂಭಾಸಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಎಸ್ ರಾವ್ ಬಲೂನ್ಗಳನ್ನು ಆಗಸಕ್ಕೆ ಹಾರಿ ಬಿಡುವುದರ ಮೂಲಕ ವೈದ್ಯಕೀಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ತೆಕ್ಕಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಶ್ರೀ ಮೂಕಾಂಬಿಕಾ ತಾಲೂಕು ಮಹಿಳಾ ಒಕ್ಕೂಟ ಅಧ್ಯಕ್ಷೆ ರಾಧಾದಾಸ್, ಕುಂಭಾಸಿ ಪಂಚಾಯತ್ ಉಪಾಧ್ಯಕ್ಷ ಜಗದೀಶ್ ರಾವ್, ಪಿಡಿಒ ಜಯರಾಮ್ ಶೆಟ್ಟಿ, ಸದಸ್ಯ ಸುನೀಲ್ ಶೆಟ್ಟಿ, ಈಗಲ್ಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಸುನೀಲ್, ಸಂಘಟಕ ಅರ್ಜುನ್ದಾಸ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕುಂದಾಪುರ ರೂರಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ ಪ್ರಾಂಶುಪಾಲ ಡಾ.ಶ್ರೀ.ಪ್ರಸನ್ನ ಐತಾಳ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಹಿರಿಯ ವಕೀಲ ರವಿಕಿರಣ್ ಮುರ್ಡೇಶ್ವರ ಇವರನ್ನು ಸಂಘಟನೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ತೀಕ್ ಕಾಂಚನ್ ಪ್ರಾರ್ಥಿಸಿದರು. ಪ್ರದೀಪ್ ಆಚಾರ್ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ಶ್ರೀ.ಪ್ರಸನ್ನ ಐತಾಳ್ ಪ್ರಾಸ್ತಾವಿಕ ಮಾತನಾಡಿದರು. ಸಂದೇಶ್ ಶೆಟ್ಟಿ ಸಲ್ವಾಡಿ ಕಾರ್ಯಕ್ರಮ ನಿರ್ವಹಿಸಿದರು. ಯತೀಶ್ ವಂದಿಸಿದರು.











