ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಸಮಾಜಕ್ಕೆ ಮಾಡುವ ಸೇವೆಯು ಬದುಕನ್ನು ಅವಿಸ್ಮರಣೀಯಗೊಳಿಸುತ್ತದೆ. ರೋಟರಿಯಿಂದ ರಚನಾತ್ಮಕ ಕೆಲಸಗಳ ಜೊತೆಗೆ ಈ ನೆಲ, ಜಲ ಪ್ರಕೃತಿಯನ್ನು ಸಂರಕ್ಷಿಸುವ ಕಾರ್ಯ ಇನ್ನಷ್ಟು ಆಗಬೇಕಿದ್ದು, ಪ್ರತಿಯೋರ್ವ ರೋಟರಿ ಸದಸ್ಯರು ಇದರೊಂದಿಗೆ ಕೈಜೋಡಿಸಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ನಾಮಿನಿ ಬಿ.ಎಂ. ಭಟ್ ಹೇಳಿದರು.
ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ನಡೆದ 2024-25ನೇಸಾಲಿನ ಪದಪ್ರದಾನ ಸಮಾರಂಭದಲ್ಲಿ ರೋಟರಿ ಪದಾಧಿಕಾರಿಗಳಿಗೆ ಪದಪ್ರದಾನಿಸಿ ಮಾತನಾಡಿ, ಮಹಾನ್ ವ್ಯಕ್ತಿಗಳು ಎಂದೆನ್ನಿಸಿಕೊಂಡವರು ಕೇವಲ ಬದುಕಲಿಲ್ಲ. ಬದಲಿಗೆ ಇತಿಹಾಸ ಸೃಷ್ಟಿಸಿ ಹೋದರು. ನಾವು ಮಾಡುವ ಉತ್ತಮ ಕಾರ್ಯದ ಮೂಲಕ ಮಹಾನ್ ಎನ್ನಿಸಿಕೊಳ್ಳುತ್ತೇವೆ. ನಾನು ಎನ್ನುವುದನ್ನು ಬಿಟ್ಟು ನಾವು ಎನ್ನುವ ಸಮಷ್ಟಿ ಪ್ರಜ್ಞೆ ಬೆಳೆದರೆ ಗೆಲುವಿನ ಸಾರಿ ಸುಗಮವಾಗುವುದು ಎಂದರು.
ನೂತನ ಅಧ್ಯಕ್ಷ ಮೋಹನ್ ರೆವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ವಲಯ-1ರ ಸಹಾಯಕ ಗವರ್ನರ್ ಡಾ. ರಾಜೇಂದ್ರ ಶೆಟ್ಟಿ ಕ್ಲಬ್ನ ಬುಲೆಟಿನ್ ಬಿಂದುವಾಣಿ ಬಿಡುಗಡೆಗೊಳಿಸಿದರು. ಐವರು ನೂತನ ಸದಸ್ಯರು ಕ್ಲಬ್ಬಿಗೆ ಸೇರ್ಪಡೆಗೊಂಡರು. ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಳಿಗೆ ಪ್ರತಿಭಾ ಪುರಸ್ಕಾರ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲಿಕಾ ಸಹಾಯಧನ ಹಾಗೂ ಆರೋಗ್ಯ ಸಮಸ್ಯೆ ಉಳ್ಳವರಿಗೆ ವೈದ್ಯಕೀಯ ನೆರವು ನೀಡಲಾಯಿತು.
ಈ ಸಂದರ್ಭದಲ್ಲಿ ಉಪನ್ಯಾಸಕ ಸಾಹಿತಿ ಶ್ರೀಧರ ಶೇಟ್ ಶಿರಾಲಿ, ರೋಟರಿ ವಲಯ ಸೇನಾನಿ ಪ್ರದೀಪ್ ಡಿ. ಕೆ. ಉಪಸ್ಥಿತರಿದ್ದರು.
ಪೂರ್ಣಿಮಾ ಪೈ ಪ್ರಾರ್ಥಿಸಿದರು. ನಿರ್ಗಮನ ಅಧ್ಯಕ್ಷ ಶಿರೂರು ಪ್ರಸಾದ ಪ್ರಭು ಸ್ವಾಗತಿಸಿ, ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನಿರ್ಗಮನ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಹಿಂದಿನ ಸಾಲಿನ ಕಾರ್ಯಚಟುವಟಿಕೆಗಳ ವರದಿ ಮಾಚಿಸಿದರು. ವೈ. ಮಂಗೇಶ ಶ್ಯಾನುಭಾಗ್ ನಿರೂಪಿಸಿ, ನೂತನ ಕಾರ್ಯದರ್ಶಿ ಸುನಿಲ್ ಎಚ್.ಜಿ. ವಂದಿಸಿದರು.











