ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸಮಾಜದ ಬದ್ಧತೆ, ತಿಳುವಳಿಕೆ, ಮಾಹಿತಿ ನೀಡುವ ಕೆಲಸವನ್ನು ಪತ್ರಕರ್ತ ಮಾಡುತ್ತಾನೆ. ಸ್ವಂತಕ್ಕೆ ಸತ್ತು ಜಗತ್ತಿಗೆ ಬದುಕುವವರು ಪತ್ರಕರ್ತರು. ಸಮಾಜದ ಸಂವೇಧನೆ ಎನಿಸಿಕೊಂಡ ಪತ್ರಕರ್ತರ ಸೇವೆಯನ್ನು ಸಮಾಜ ಗುರುತಿಸಬೇಕು ಎಂದು ನಟ, ನಿರ್ದೇಶಕ, ಅಂತರಾಷ್ಟ್ರೀಯ ಜಾದೂಗಾರ, ಓಂ ಗಣೇಶ ಉಪ್ಪುಂದ ಅಭಿಪ್ರಾಯ ಪಟ್ಟವರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಜೇಸಿ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಟೈಪ್ ರೈಟರ್ ಯಂತ್ರವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪತ್ರಿಕೋದ್ಯಮ ತುಂಬಾ ಬದಲಾವಣೆ ಕಂಡುಕೊಂಡಿದೆ.ಆಗ ಸಹನೆಯಿತ್ತು. ಇವತ್ತು ವೇಗದ ಮನಸ್ಥಿತಿಗೆ ಪತ್ರಿಕಾರಂಗವೂ ಹೊರತಾಗಿಲ್ಲ. ಜನರ ಚಿಂತನೆಗಳನ್ನು ವ್ಯವಸ್ಥೆಗಳ ಮುಂದಿಡುವ ಸಮಾಜದ ನೋವಿಗೆ ಸ್ಪಂದಿಸುವ ಪತ್ರಕರ್ತನ ಆರ್ಥಿಕ ಸ್ಥಿತಿ ಮಾತ್ರ ಇನ್ನೂ ಸುಧಾಕರಣೆ ಆಗಿಲ್ಲ. ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ರಂಗವನ್ನು ನಾಲ್ಕನೆ ಅಂಗವೆಂದು ಹೇಳುತ್ತೇವೆ. ಆದರೆ ಇವತ್ತು ಪ್ರಾಥಮಿಕ ಶಾಲೆಯ ಶಿಕ್ಷಕರು ಪಡೆಯುವ ವೇತನವೂ ಪತ್ರಕರ್ತರಿಗೆ ಸಿಗುತ್ತಿಲ್ಲ. ಸಮಾಜ ಅಭಿವೃದ್ಧಿಗೆ ಸದಾ ಶ್ರಮಿಸುವ ಪತ್ರಕರ್ತರನ್ನು ಸಮಾಜವೇ ಪತ್ರಿಕಾ ದಿನಾಚರಣೆಗಳ ಆಚರಿಸುವ ಮೂಲಕ ಗೌರವಿಸುವ ಕೆಲಸ ಮಾಡಬೇಕಿತ್ತು. ಆದರೆ ಇವತ್ತು ಪತ್ರಿಕಾ ದಿನಾಚರಣೆಯನ್ನು ಪತ್ರಕರ್ತರೇ ಆಚರಿಸಿಕೊಳ್ಳುವ ಸಂದಿಗ್ದತೆಗೆ ಒದಗಿದೆ ಎಂದರು.
ಸಮಾಜಕ್ಕೆ ಮಾಹಿತಿ ಕೊಡುವ, ವ್ಯವಸ್ಥೆಯನ್ನು ಎಚ್ಚರಿಸುವ, ಜನರ ನೋವು ನಲಿವುಗಳಿಗೆ ಸದಾ ಜತೆಯಾಗುವ ಪತ್ರಕರ್ತರು ತಮ್ಮ ಬಗ್ಗೆಯೂ ಯೋಚನೆ ಮಾಡಬೇಕು. ಪತ್ರಕರ್ತರಲ್ಲೂ ಕೂಡಾ ಅದ್ಭುತವಾದ ಬರೆಯುವ ಪತ್ರಿಭೆಗಳಿರುತ್ತದೆ. ವೃತ್ತಿ ಒತ್ತಡದಲ್ಲಿ ಅವರ ಪತ್ರಿಭೆ ಮರೆಯಾಗಬಾರದು. ಪ್ರತಿಭೆಯ ವಿಕಾಸಕ್ಕೂ ಅವರು ಸಮಯ ನೀಡಬೇಕು ಎಂದರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ ಅವರಿಗೆ ಪತ್ರಿಕಾ ದಿನದ ಗೌರವಾರ್ಪಣೆ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಸೂಪರ್ ಗ್ರೇಡ್ ವಿದ್ಯುತ್ ಗುತ್ತಿಗೆದಾರರಾದ ಕೆ.ಆರ್ ನಾಯ್ಕ್ ಮಾತನಾಡಿ, ಪತ್ರಕರ್ತರ ವೃತ್ತಿ ಮಹತ್ತವದ್ದು. ಸಮಾಜಕ್ಕೆ ಪತ್ರಿಕಾರಂಗದ ಕೊಡುಗೆಯೂ ಮಹತ್ತರದಾಗಿದೆ ಎಂದು ಅಭಿಪ್ರಾಯ ಪಟ್ಟರು. ಕುಂದಾಪುರ ಅಂಚೆ ಇಲಾಖೆ ಎಎಸ್ಪಿ ಸತೀಶ್ ಅವರು ಭಾರತೀಯ ಅಂಚೆ ಇಲಾಖೆಯ ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮೆ, ಗ್ರಾಮೀಣ ಅಂಚೆ ವಿಮೆ, ಅಂಚೆ ವಿಮಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗ್ರಾಮೀಣ ಸಾಧಕರನ್ನು ಗುರುತಿಸುವ ಕೆಲಸ ಆಗಬೇಕು. ಅದೆಷ್ಟೋ ಪತ್ರಕರ್ತರು ನೀಡಿದ ಕೊಡುಗೆ ಸಾಕಷ್ಟಿದೆ. ಅದನ್ನು ಸಂಬಂಧಪಟ್ಟವರು ಗುರುತಿಸಬೇಕು. ಪತ್ರಕರ್ತರು ತನ್ನ ವರದಿಯ ಮೂಲಕವೇ ಗುರುತಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ, ಉಪಾಧ್ಯಕ್ಷ ಚಂದ್ರಮ ತಲ್ಲೂರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್.ಬೀಜಾಡಿ ಸ್ವಾಗತಿಸಿ, ವಂದಿಸಿದರು. ಪ್ರಶಾಂತ್ ಪಾದೆ ಸನ್ಮಾನ ಪತ್ರ ವಾಚಿಸಿದರು. ಶ್ರೀಕಾಂತ್ ಹೆಮ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಸಹಕಾರ ನೀಡಿದವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭಾರತೀಯ ಅಂಚೆ ಇಲಾಖೆ ಕುಂದಾಪುರ ವಿಭಾಗ ವತಿಯಿಂದ ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮೆ, ಆಧಾರ್ ನೋಂದಣಿ ಹಾಗೂ ತಿದ್ದುಪಡಿ ನಡೆಯಿತು.











