ಹೊಸಂಗಡಿ ಗ್ರಾಮಸ್ಥರ ಹಿತರಕ್ಷಣಾ ಸಮಿತಿಯ ವತಿಯಿಂದ ಕಸ್ತೂರಿರಂಗನ್ ವರದಿ ಅನುಷ್ಠಾನ ವಿರುದ್ಧ ಪ್ರತಿಭಟನೆ
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಷ್ಟು ವರ್ಷಗಳ ಹೋರಾಟ ನಡೆದರೂ ಕಸ್ತೂರಿರಂಗನ್ ವರದಿಯ ಸಡಿಲಿಕೆ ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ನಮ್ಮ ಹೋರಾಟದ ತೀವ್ರತೆ ನಿರೀಕ್ಷಿತ ಮತವನ್ನು ತಲುಪದೇ ಇರುವುದು. ಕೇರಳ ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿಯ ಸಡಿಲಿಕೆಗೆ ಎಲ್ಲಾ ಜನಪ್ರತಿನಿಧಿಗಳು ಮತ್ತು ಜನರು ಸಂಘಟಿತವಾಗಿ ಹೋರಾಟ ನಡೆಸಿದ್ದಲ್ಲದೆ ಕೇಂದ್ರ ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಗೆ ಮನದಟ್ಟು ಮಾಡುವ ಮೂಲಕ ಯಶಸ್ಸು ಕಂಡುಕೊಂಡಿದ್ದಾರೆ. ನಮ್ಮ ಹೋರಾಟವು ಕೇರಳ ಮಾದರಿಯಲ್ಲಿ ನಡೆಯಬೇಕಾಗಿದೆ ಆ ನಿಟ್ಟಿನಲ್ಲಿ ಪಕ್ಷಾತೀತವಾಗಿ ಸಂಘಟಿತರಾಗಿ ಸಂಬಂಧ ಪಟ್ಟವರಿಗೆ ಸ್ಥಳೀಯ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಅವರು ಹೊಸಂಗಡಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗಣೇಶೋತ್ಸವ ರಂಗಮಂದಿರದಲ್ಲಿ ಹೊಸಂಗಡಿ ಗ್ರಾಮಸ್ಥರ ಹಿತರಕ್ಷಣಾ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾದ ಕಸ್ತೂರಿರಂಗನ್ ವರದಿ ಅನುಷ್ಠಾನ ವಿರುದ್ಧ ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇದೇ ಸಂದರ್ಭ ಮಾತನಾಡಿದ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ, ಅಧಿಕಾರಿಗಳು ಮತ್ತು ಇಲಾಖೆಗಳು ಸೆಟಲೈಟ್ ಮೂಲಕ ಸರ್ವೇ ಮಾಡಿ ಅಡಿಕೆ ತೋಟ, ತೆಂಗಿನ ತೋಟ, ರಬ್ಬರ್ ತೋಟಗಳನ್ನು ಅರಣ್ಯ ಎಂದು ನಮೂದಿಸಿದ ಪರಿಣಾಮ ಇಂದು ಜನವಸತಿ ಪ್ರದೇಶಗಳಲ್ಲಿ ಕಸ್ತೂರಿರಂಗನ ವರದಿ ಸಮಸ್ಯೆ ಸೃಷ್ಟಿಸುತ್ತಿದೆ. ಇದಕ್ಕೆ ಜನಪ್ರತಿನಿಧಿಗಳು ಮತ್ತು ಜನಸಾಮಾನ್ಯರು ಸಂಘಟಿತರಾಗಿ ಸಂಬಂಧಪಟ್ಟವರಿಗೆ ಜನ ವಸತಿ ಪ್ರದೇಶಗಳ ಬಗ್ಗೆ ಮನವರಿಕೆ ಮಾಡಬೇಕಾಗಿದೆ ಎಂದರು.
ವಕೀಲರಾದ ಸತ್ಯನಾರಾಯಣ ಉಡುಪ ಕಸ್ತೂರಿ ರಂಗನ ವರದಿಯ ಬಗ್ಗೆ ಮಾಹಿತಿ ನೀಡಿದರು. ಶಾಂತಿ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಪಂಚಾಯತ್ ಸದಸ್ಯ ಮಂಜು ಶೆಟ್ಟಿ, ಹಿರಿಯರಾದ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಭುಜಂಗ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು











