ಕರ್ಣಾಟಕ ಬ್ಯಾಂಕ್ ಸಮಾಜಮುಖಿ ಕಾರ್ಯದಲ್ಲಿ ಮುಂದು -ಡಾ.ವಿದ್ವಾನ್ ವಿಜಯ್ ಮಂಜರ್
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕರ್ಣಾಟಕ ಬ್ಯಾಂಕ್ ರಾಜ್ಯಾದ್ಯಂತ ಮನೆಯ ಬ್ಯಾಂಕ್ ಆಗಿ ಪರಿವರ್ತನೆಗೊಂಡಿದೆ ಇವರ ಸಮಾಜಮುಖಿ ಕಾರ್ಯಕ್ರಮಗಳು ಜನಮೆಚ್ಚುಗೆ ಗಳಿಸಿದೆ ಎಂದು ಪಾಂಡೇಶ್ವರ ಯೋಗ ಗುರು ಇದರ ಮುಖ್ಯಸ್ಥ ಡಾ.ವಿದ್ವಾನ್ ವಿಜಯ ಮಂಜರ್ ಹೇಳಿದರು.
ಬುಧವಾರ ಪಾಂಡೇಶ್ವರದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಕರ್ಣಾಟಕ ಬ್ಯಾಂಕ್ ಕೊಡಮಾಡಿದ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ ಗ್ರಾಮೀಣ ಸರಕಾರಿ ಶಾಲೆಗಳ ಉಳಿವಿನಲ್ಲಿ ಕರ್ಣಾಟಕ ಬ್ಯಾಂಕ್ ಕೊಡುಗೆ ಅನನ್ಯವಾಗಿದೆ, ಸಾಕಷ್ಟು ಶಾಲೆಗಳಿಗೆ ಬಸ್ಸ್, ಕಟ್ಟಡ ಸೇರಿದಂತೆ ವಿವಿಧ ರೀತಿಯಲ್ಲಿ ಸಹಕಾರ ನೀಡುವ ಏಕೈಕ ಬ್ಯಾಂಕ್ ಆಗಿದೆ. ದಾನದಲ್ಲಿ ಶ್ರೇಷ್ಠ ದಾನ ಅನ್ನದಾನ ಎಂಬವುದು ಎಷ್ಟು ಗಮನಾರ್ಹವೊ ಅದೇ ರೀತಿ ವಿದ್ಯಾದಾನ ಅಷ್ಟೆ ಶ್ರೇಷ್ಠತೆಯನ್ನು ಹೊಂದಿದೆ. ನಾವು ಕಲಿತ ಶಾಲೆಗಳನ್ನು ಉಳಿಸಿ ಬೆಳೆಸುವುದರ ಜತೆಗೆ ಪ್ರತಿಫಲಾಪೇಕ್ಷೆ ಇಲ್ಲದೆ ಅದರ ಉಳಿವಿನಲ್ಲಿ ಬಹುಮುಖ್ಯ ಪಾತ್ರ ವಹಿಸಬೇಕು ಎಂದು ಕರೆಕೊಟ್ಟರು.
ಶಾಲೆಗೆ ವಾಹನ ಹಸ್ತಾಂತರಿಸಿ ಮಾತನಾಡಿದ ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಛೇರಿಯ ಮುಖ್ಯ ಪ್ರಭಂಧಕ ಕೆ.ವಾದಿರಾಜ್ ಶತಮಾನ ಕಂಡ ಶಾಲೆಗೆ ಶತಸಂಭ್ರಮದ ಕರ್ಣಾಟಕ ಬ್ಯಾಂಕ್ ಸಹಕಾರ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ನಾವುಗಳು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತು ಈ ಹಂತಕ್ಕೆ ತಲುಪಿದೆ ಅದರ ಬಗ್ಗೆ ಕೀಳರಿಮೆ ಬಿಡಿ, ತಮ್ಮ ತಮ್ಮ ಊರಿನ ಶಾಲೆಗಳ ಉಳಿವಿಗೆ ಪಣತೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಫಾದರ ಸುನಿಲ್ ಡಿಸಿಲ್ವ ಇವರಿಗೆ ಕರ್ಣಾಟಕ ಬ್ಯಾಂಕ್ ನ ಪ್ರಾದೇಶಿಕ ಕಛೇರಿಯ ಮುಖ್ಯ ಪ್ರಬಂಧಕ ವಾದಿರಾಜ್ ಕೀ ಯನ್ನು ಹಸ್ತಾಂತರಿಸಿದರು.
ಇದೇ ವೇಳೆ ಶಾಲಾ ಆಡಳಿತ ಮಂಡಳಿಯ ವತಿಯಿಂದ
ಕರ್ಣಾಟಕ ಬ್ಯಾಂಕ್ ಎಜಿಎಂ ಕೆ.ವಾದಿರಾಜ್ ಹಾಗೂ ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ ಉಪಾಧ್ಯಾಯ ಇವರುಗಳನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು.
ಕರ್ಣಾಟಕ ಬ್ಯಾಂಕ್ ಐರೋಡಿ ಶಾಖೆಯ ಪ್ರಬಂಧಕ ಮಂಜುನಾಥ ಶೇಟ್, ಅರವಿಂದ ಮೋಟಾರ್ಸ್ ನ ಮಾರ್ಕೆಟಿಂಗ್ ವಿಭಾಗದ ರಾಕೇಶ್ ಇವರುಗಳನ್ನು ಗುರುತಿಸಿ ಗೌರವಿಸಲಾಯಿತು.
ಸಭೆಯಲ್ಲಿ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ಪೂಜಾರಿ , ಶಾಲಾ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೂರಾಲು ನಾರಾಯಣ ಮಡಿ, ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ರವೀಶ್ ಶ್ರೀಯಾನ್, ಶಾಲಾ ಎಸ್ ಡಿ ಎಂಸಿ ಅಧ್ಯಕ್ಷೆ ಸುಜಾತ ವೆಂಕಟೇಶ ಪೂಜಾರಿ, ಪಾಂಡೇಶ್ವರ ಪಂಚಾಯತ್ ಸದಸ್ಯ ಪ್ರತಾಪ್ ಶೆಟ್ಟಿ ಸಾಸ್ತಾನ ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ ಪ್ರಾಸ್ತಾವನೆ ಸಲ್ಲಿಸಿದರು. ಶಾಲಾ ಮುಖ್ಯ ಶಿಕ್ಷಕ ಕೃಷ್ಣ ಪೂಜಾರಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸುನಿಲ್ ಪೂಜಾರಿ ನಿರೂಪಿಸಿ ವಂದಿಸಿದರು.











