ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೋಟೇಶ್ವರ ಪಂಚಾಯತ್ ಸದಸ್ಯ ಲೋಕೇಶ್ ಅಂಕದಕಟ್ಟೆ ಅವರ ನೇತೃತ್ವದಲ್ಲಿ ದಾನಿಗಳಾದ ವತ್ಸಲಾ ದಯಾನಂದ ಶೆಟ್ಟಿ ಅವರ ತುಂಬು ಹೃದಯದ ಸಹಕಾರದೊಂದಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 95 ಶೇಕಡಕ್ಕಿಂತ ಅಧಿಕ ಅಂಕವನ್ನು ಪಡೆದ ಅಂಕದಕಟ್ಟೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ರೋಹಿತ್ ಯು ಶೇರೆಗಾರ್ (96.64%) ಹಾಗು ಅಂಕಿತಾ (95.36%) ಇವರಿಗೆ ಸನ್ಮಾನಿಸಿ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ. ನಾಗೇಶ್, ಕುಂದಾಪುರ ರೂರಲ್ ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಸನ್ನ ಕುಮಾರ್ ಐತಾಳ್ ಹಾಗು ಸಮಾಜ ಸೇವಕ ಡೇವಿಡ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರ ಉನ್ನತ ಶಿಕ್ಷಣದ ಬಗ್ಗೆ ಮಾಹಿತಿ ನೀಡಿ, ಶಿಕ್ಷಣದ ಜೊತೆಜೊತೆಗೆ ಸಮಾಜಕ್ಕಾಗಿ ದುಡಿಯುವ ವ್ಯಕ್ತಿಗಳಾಗಿ ರೂಪುಗೊಳ್ಳಬೇಕೆಂಬ ಸ್ಪೂರ್ತಿದಾಯಕ ಮಾತುಗಳನ್ನಾಡಿ, ಸಾಮಾಜಿಕ ಕಾರ್ಯಕರ್ತ ಹರೀಶ್ ಪೂಜಾರಿ ಅಂಕದಕಟ್ಟೆ, ವಾರ್ಡ್ ಸದಸ್ಯ ಲೋಕೇಶ್ ಅಂಕದಕಟ್ಟೆ ಅವರೊಂದಿಗೆ ಮಕ್ಕಳನ್ನು ಸನ್ಮಾನಿಸಿ ವಿದ್ಯಾರ್ಥಿ ವೇತನ ವಿತರಿಸಿ ಶುಭಹಾರೈಸಿದರು. ಕಾರ್ಯಕ್ರಮಕ್ಕೆ ಸುಧನ್ವಾ ಕೋಚಿಂಗ್ ಸೆಂಟರ್ ಮಾಲಿಕರಾದ ಸಂಗ್ರಾಮ್ ಶೆಟ್ಟಿ ಸ್ಥಳಾವಕಾಶ ಒದಗಿಸಿದರು.
ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಣ ಪ್ರೇಮಿಗಳು, ಊರ ನಾಗರಿಕರು ಉಪಸ್ಥಿತರಿದ್ದರು.











