ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಭಾರತೀಯ ಪಾಕ ಪದ್ದತಿಯ ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ಮಹತ್ವ ಹಾಗೂ ಪ್ರಾದೇಶಿಕ ವೈವಿಧ್ಯತೆಯನ್ನು ಪರಿಚಯಿಸುವ ಜೊತೆಗೆ ನಮ್ಮ ಅಡುಗೆ ಮನೆಯು ಯಾವ ರೀತಿಯಲ್ಲಿ ಹಬ್ಬಗಳು, ಆಚರಣೆಗಳು ಮತ್ತು ಸಾಮಾಜಿಕ ಕೂಟಗಳೊಂದಿಗೆ ಸಮ್ಮಿಳಿತಗೊಂಡಿದೆ ಎನ್ನುವುದನ್ನು ಪರಿಚಯಿಸುವ ಉದ್ದೇಶದಿಂದ ಮಳೆಗಾಲದ ತಿನಿಸುಗಳ “ಆಸಾಡಿ ತೊಡು” ಎಂಬ ತಲೆಬರಹದ ಅಡಿಯಲ್ಲಿ ವಿಶಿಷ್ಟ ಕಾರ್ಯಕ್ರಮವನ್ನು ಅಂಪಾರಿನ ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿತ್ತು .
ಈ ಕಾರ್ಯಕ್ರಮವು ಪೋಷಕರ ಸಂಪೂರ್ಣ ಸಹಕಾರದಿಂದಾಗಿ ಅದ್ಭುತವಾಗಿ ಮೂಡಿಬಂತು. ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ಸಾಂಪ್ರದಾಯಿಕ ಅಪರೂಪದ ಮಳೆಗಾಲದ ತಿಂಡಿ ತಿನಿಸುಗಳನ್ನು ಪರಿಚಯಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ನೆರವೇರಿಸಿದರು. ಟ್ರಸ್ಟ್ ನ ಖಜಾಂಚಿ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಮತ್ತು ನಿರ್ದೇಶಕರಾದ ಉಮೇಶ್ ಕೊಠಾರಿ ಇವರು ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ, ಮಾತನಾಡಿದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಇವರು ಮಳೆಗಾಲದ ಭಯಂಕರ ಗಾಳಿ ಮಳೆ ವಿದ್ಯುತ್ ಅಭಾವದ ನಡುವೆಯೂ, ತಮ್ಮ ದೈನಂದಿನ ಕೆಲಸದ ಒತ್ತಡದ ನಡುವೆ ಇದಕ್ಕಾಗಿ ಸಮಯ ಮೀಸಲಿಟ್ಟು ಪ್ರೀತಿಯಿಂದ ಬಹು ಬಗೆಯ ಶುಚಿಯಾದ ರುಚಿಕರವಾದ ತಿನಿಸುಗಳನ್ನು ಮಾಡಿ ಕಳುಹಿಸಿದ ಪೋಷಕರಿಗೆ ಸಂಸ್ಥೆಯ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು. ಸಂಸ್ಥೆಯು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಪ್ರದಾಯ, ಹೆಮ್ಮೆಯ ಇತಿಹಾಸವನ್ನು ಪರಿಚಯಿಸುತ್ತಿದೆ ಎಂದರು.
ಖಜಾಂಚಿ ಶ್ರೀಯುತ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಇವರು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಮೌಲ್ಯಗಳನ್ನು ತಮ್ಮ ಮಕ್ಕಳಿಗೆ ನೀಡಿ ಸರ್ವತೋಮುಖ ಬೆಳವಣಿಗೆಗೆ ಸಂಸ್ಥೆಯು ಸದಾ ಶ್ರಮಿಸುತ್ತಿದೆ ಎಂದು ತಿಳಿಸಿದರು.
ನಿರ್ದೇಶಕರಾದ ಉಮೇಶ್ ಕೊಠಾರಿ ಇವರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಅಗತ್ಯ ಹಾಗೂ ಪೋಷಕರ ಸಹಕಾರವೂ ಅತ್ಯಗತ್ಯ ಎಂದು ತಿಳಿಸಿದರು .
ಸಂಸ್ಥೆಯ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಇವರು ಪೋಷಕರ ಉತ್ಸಾಹ ಭರಿತ ತೊಡಗಿಸಿಕೊಳ್ಳುವಿಕೆಯನ್ನು ಹೃತ್ಪೂರ್ವಕವಾಗಿ ಪ್ರಶಂಸಿಸಿದರು.
ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ -ಶಿಕ್ಷಕಿಯರು, ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.











