ಕುಂದಾಪುರ ಮಿರರ್ ಸುದ್ದಿ…
ಕೋಟ: ನಮ್ಮನ್ನು ಆಳುವವರು ರೈತರ ಸಮಸ್ಯೆ ಆಲಿಸುವುದಿಲ್ಲ,ರೈತ ಬೆಳೆದ ಬೆಳೆಗೆ ಸಮರ್ಪಕ ದರ ನಿಗದಿಪಡಿಸಿಲ್ಲ ಇದರಿಂದ ರೈತ ಸಮುದಾಯ ಉಳಿಯಲು ಸಾಧ್ಯವೇ ಎಂದು ಯುವ ಸಾಧಕ ಕೃಷಿಕ ರಾಜೇಶ್ ಕಾಂಚನ್ ಕೊರವಡಿ ಪ್ರಶ್ನಿಸಿದ್ದಾರೆ.

ಅವರು ಕೋಟದ ಪಂಚವರ್ಣ ಯುವಕ ಮಂಡಲ ಕೋಟ ಇವರ ನೇತ್ರತ್ವದಲ್ಲಿ ರೈತಧ್ವನಿ ಸಂಘ ಕೋಟ, ಗಿಳಿಯಾರು ಯುವಕ ಮಂಡಲ ಗಿಳಿಯಾರು, ಗೀತಾನಂದ ಫೌಂಡೇಶನ್ ಮಣೂರು,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಮಣೂರು ಫ್ರೆಂಡ್ಸ್ ಮಣೂರು,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ 12ನೇ ಸರಣಿ ಮಾಲಿಕೆ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಬೇಳೂರಿನ ಯುವ ಸಾಧಕಿ ಕೃಷಿಕೆ ನಿಶಾ ದೇವಡಿಗ ಇವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಸಮಗ್ರ ಕೃಷಿ ಪದ್ದತಿಯಿಂದ ಯಶಸ್ಸು ಸಾಧ್ಯ ಈ ನಿಟ್ಟಿನಲ್ಲಿ ಯುವ ಸಮುದಾಯ ಹೆಚ್ಚು ಹೆಚ್ಚು ಕೃಷಿಕಾಯಕದಲ್ಲಿ ತೋಡಗಿಕೊಳ್ಳುವಂತ್ತಾಗಬೇಕು ಆ ಮೂಲಕ ರೈತ ಪ್ರದಾನದೇಶ ಎಂಬುವುದನ್ನು ಮತ್ತೊಮ್ಮೆ ಸಾಬೀತುಪಡಿಸಬೇಕಿದೆ.ಪ್ರಸ್ತುತ ಕಾಲಘಟ್ಟದಲ್ಲಿ ರೈತ ಬೆಳೆದ ಯಾವುದೇ ಬೆಳೆಗೂ ಸರಕಾರ ನಿಗದಿತ ನಿರ್ದಿಷ್ಟ ದರ ನಿಗದಿಪಡಿಸಬೇಕು ತನ್ಮೂಲಕ ರೈತನಿಗೆ ನೈತಿಕವಾಗಿ ಬೆಂಬಲ ಸೂಚಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಕೋಟ ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ ಮಾತನಾಡಿ ಸರಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ಕೃಷಿ ಕ್ಷೇತ್ರಕ್ಕೆ ಇಲ್ಲ ಯಾಕೆ,ರೈತ ಸಮುದಾಯ ಇದರಿಂದ ವಂಚಿತಗೊಂಡ ಬಗ್ಗೆ ಖೇದ ವ್ಯಕ್ತಪಡಿಸಿ ರಾಜ್ಯ ಹಾಗೂ ಕೇಂದ್ರ ಕೃಷಿ ಕ್ಷೇತ್ರವನ್ನು ಪ್ರದಾನವನ್ನಾಗಿಸಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅದ್ಯತೆ ನೀಡಬೇಕು,ಇತ್ತೀಚಿಗಿನ ದಿನಗಳ ಕೃಷಿ ಲಾಭದಾಯಕವಾಗಿಸಲು ಹಲವು ರೀತಿಯ ವಿನೂತನ ಆಧುನಿಕ ಪದ್ದತಿಯನ್ನು ಅನುಸರಿಸಿಕೊಳ್ಳಬೇಕು ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಇದಕ್ಕೆ ನಿಶಾ ದೇವಾಡಿಗ ಎಂಬ ಯುವ ಪ್ರತಿಭೆಯೇ ಸಾಕ್ಷಿ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ರೈತ ಯುವ ಸಾಧಕಿ ಬೇಳೂರು ನಿಶಾ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೇಳೂರು ಪರಿಸರದ ಸಾಮಾಜಿಕ ಕಾರ್ಯಕರ್ತ ಸತೀಶ್ ಶೆಟ್ಟಿ ಗುಳ್ಳಾಡಿ,ಪಾಂಡೇಶ್ವರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಸ್ಕರ್ ಶೆಟ್ಟಿ ಮಣೂರು,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಶ್ರೀಕಾಂತ್ ಶೆಣೈ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇದರ ಭಾರತಿ ಮಯ್ಯ,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ,ಗಿಳಿಯಾರು ಯುವಕ ಮಂಡಲದ ಗೌರವ ಸಲಹೆಗಾರ ರಾಘವೇಂದ್ರ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
ವಿಪ್ರ ಮಹಿಳಾ ಬಳಗದ ಸುಜಾತ ಬಾಯಿರಿ ಸ್ವಾಗತಿಸಿ ಪ್ರಾಸ್ತಾವಿಸಿದರು.ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿ ವಂದಿಸಿದರು.
ವಿಶೇಷತೆ
ಇದೇ ಮೊದಲ ಬಾರಿಗೆ ಮಹಿಳಾ ರೈತಸಾಧಕಿಯನ್ನು ಗುರಿತಿಸಿ ಗೌರವಿಸಲಾಗಿದ್ದು,ಈ ಸಂದರ್ಭದಲ್ಲಿ ಅರಸಿನ ಕುಂಕುಮವನ್ನು ಹಣೆಗಿಟ್ಟು,ಗಲ್ಲಕ್ಕೆ ಸವರಿ,ಸೋಬಾನೆ ಹಾಡು ಹಾಡಿ,ಆರತಿ ಬೆಳಗಿ ,ಕೃಷಿ ಪರಿಕರಗಳನ್ನಿಟ್ಟು ಗೌರವಿಸಲಾಗಿದೆ.
ನಿಶಾ ದೇವಾಡಿಗ ಮಾತು:-
ತಂದೆಯ ನಿಧನದ ನಂತರ ಕೃಷಿ ಕಾಯಕಕ್ಕೆ ಧುಮುಕಿದ್ದೇನೆ ಶೈಕ್ಷಣಿಕ ನಡುವೆಯೂ ಕೃಷಿ ಕಾಯಕದಲ್ಲಿ ಪಳಗಿದ್ದೇನೆ,ಇದಕ್ಕೆ ತಾಯಿಯ ಪ್ರೇರಣೆ ಗ್ರಾಮಸ್ಥರ ಸಹಕಾರವು ಅಡಗಿದೆ.ಯುವ ಸಮುದಾಯ ಹೆಚ್ಚು ಹೆಚ್ಚು ಕೃಷಿ ಕಾಯಕದಲ್ಲಿ ತೋಡಗಿಕೊಳ್ಳಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.











