ಲೋಕಸಭೆಯಲ್ಲಿ ಅಂಚೆ ಕಚೇರಿಗಳ ಬಲವರ್ಧನೆ ಹಾಗೂ ಹಣಕಾಸು ಒಳಗೊಳ್ಳುವಿಕೆ ವಿಷಯ ಪ್ರಸ್ತಾಪಿಸಿದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ – ಕ್ಷೇತ್ರದ ಹೊಸ ಅಂಚೆ ಕಚೇರಿ ಕಟ್ಟಡಗಳಿಗೆ ಅನುದಾನ ಕೋರಿ ಕೇಂದ್ರಕ್ಕೆ ಮನವಿ

0
260

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ಅವರು, ಕರ್ನಾಟಕದಲ್ಲಿ ಅಂಚೆ ಕಚೇರಿಗಳು ವಹಿಸುತ್ತಿರುವ ಮಹತ್ವದ ಪಾತ್ರ, ಹಣಕಾಸು ಒಳಗೊಳ್ಳುವಿಕೆ ಹಾಗೂ ಗ್ರಾಮೀಣ ಸೇವಾ ವಿತರಣೆ ಕುರಿತು ಲೋಕಸಭೆಯಲ್ಲಿ ಪ್ರಶ್ನೆ ಎತ್ತಿದ್ದಾರೆ. ಅಂಚೆ ಕಚೇರಿಗಳ ಮೂಲಕ ಬ್ಯಾಂಕಿಂಗ್, ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (DBT), ಡಿಜಿಟಲ್ ಸೇವೆಗಳು ಹಾಗೂ ಲಾಸ್ಟ್–ಮೈಲ್ ಡೆಲಿವರಿ ಬಲಪಡಿಸುವ ಕುರಿತು ಅವರು ಸರ್ಕಾರದ ಗಮನ ಸೆಳೆದರು.

ಈ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಂವಹನ ಸಚಿವಾಲಯದ ರಾಜ್ಯ ಸಚಿವರು, ಕರ್ನಾಟಕದಲ್ಲಿ ಅಂಚೆ ಕಚೇರಿಗಳು ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಮೂಲಕ ಹಣಕಾಸು ಒಳಗೊಳ್ಳುವಿಕೆ ಮತ್ತು ಗ್ರಾಮೀಣ ಆರ್ಥಿಕ ಚಟುವಟಿಕೆಗಳು ಬಲಪಡಿಸಲಾಗುತ್ತಿವೆ ಎಂದು ಸದನಕ್ಕೆ ತಿಳಿಸಿದರು. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 48.5 ಲಕ್ಷಕ್ಕೂ ಹೆಚ್ಚು IPPB ಖಾತೆಗಳು ತೆರೆಯಲ್ಪಟ್ಟಿದ್ದು, 28,000 ಕೋಟಿಗೂ ಅಧಿಕ ಮೊತ್ತದ 23 ಕೋಟಿ ಡಿಬಿಟಿ ವ್ಯವಹಾರಗಳು ಅಂಚೆ ಕಚೇರಿಗಳ ಮೂಲಕ ನೆರವೇರಿವೆ ಎಂದು ಸಚಿವರು ವಿವರಿಸಿದರು. ರಾಜ್ಯದ ಎಲ್ಲಾ ಅಂಚೆ ಕಚೇರಿಗಳು ಈಗ ಕೋರ್ ಬ್ಯಾಂಕಿಂಗ್ ಸೊಲ್ಯೂಷನ್ (CBS) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದೂ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಲಾಸ್ಟ್–ಮೈಲ್ ಸೇವೆಗಳನ್ನು ಬಲಪಡಿಸುವ ಉದ್ದೇಶದಿಂದ ಅಂಚೆ ರಸ್ತೆ ಸಾರಿಗೆ ಜಾಲ, ತಂತ್ರಜ್ಞಾನ ಆಧಾರಿತ ವಿತರಣೆ ವ್ಯವಸ್ಥೆ, ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ, ಪಾರ್ಸೆಲ್ ಮತ್ತು ಇ–ಕಾಮರ್ಸ್ ಸಂಪರ್ಕ ವಿಸ್ತರಣೆ ಸೇರಿದಂತೆ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಸಚಿವರು ಹೇಳಿದರು.

Click Here

ಕ್ಷೇತ್ರದ ಹೊಸ ಅಂಚೆ ಕಚೇರಿ ಕಟ್ಟಡಗಳಿಗೆ ಅನುದಾನ ಕೋರಿ ಕೇಂದ್ರಕ್ಕೆ ಮನವಿ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಶಿವಮೊಗ್ಗ ನಗರ ಪ್ರದೇಶ, ಮಲೆನಾಡು ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಕರಾವಳಿ ಪ್ರದೇಶಗಳಲ್ಲಿ ಸ್ವಂತ ನಿವೇಶನವಿದ್ದು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಚೆ ಕಚೇರಿಗಳಿಗೆ ಶಾಶ್ವತ ಕಟ್ಟಡಗಳ ನಿರ್ಮಾಣಕ್ಕಾಗಿ ಅಗತ್ಯ ಅನುದಾನ ಮಂಜೂರಿ ಕೋರಿ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ. ಕ್ಷೇತ್ರದ ಹಲವಾರು ಕಡೆಗಳಲ್ಲಿ ಅಂಚೆ ಕಚೇರಿಗಳು ಪ್ರಸ್ತುತ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಅಗತ್ಯ ಭೂಮಿಯನ್ನು ಗುರುತಿಸಿ ಒದಗಿಸಲಾಗಿದೆ, ಇದರಿಂದ ಶಾಶ್ವತ ಅಂಚೆ ಕಚೇರಿ ಸ್ಥಾಪನೆಗೆ ಅಗತ್ಯ ಪೂರ್ವಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಸಚಿವರ ಗಮನಕ್ಕೆ ತಂದಿರುತ್ತಾರೆ.
ಅನುದಾನ ಕೋರಿರುವ ಪ್ರಮುಖ ಸ್ಥಳಗಳಲ್ಲಿ ಶಿವಮೊಗ್ಗ ಜಿಲ್ಲೆಯ 14 ಸ್ಥಳಗಳು ಹಾಗೂ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಬೈಂದೂರು ತಾಲೂಕಿನ ಶಿರೂರು, ನಾವುಂದ ಹಾಗೂ ಕುಂದಾಪುರ ತಾಲೂಕಿನ ತ್ರಾಸಿ ಸೇರಿವೆ.
ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಬಿ.ವೈ. ರಾಘವೇಂದ್ರ ಅವರು, “ಇಂದಿನ ಅಂಚೆ ಕಚೇರಿಗಳು ಕೇವಲ ಪತ್ರ ವಿತರಣೆಗೆ ಸೀಮಿತವಾಗಿಲ್ಲ. ಬ್ಯಾಂಕಿಂಗ್, ಪಿಂಚಣಿ, ವಿಮೆ, ಡಿಬಿಟಿ ಹಾಗೂ ಹಣಕಾಸು ಸಬಲೀಕರಣದ ಪ್ರಮುಖ ಸಾರ್ವಜನಿಕ ಸೇವಾ ಕೇಂದ್ರಗಳಾಗಿ ರೂಪಾಂತರಗೊಂಡಿವೆ. ಶಿವಮೊಗ್ಗದ ಮಲೆನಾಡು, ಗ್ರಾಮೀಣ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಕರಾವಳಿ ಪ್ರದೇಶಗಳಲ್ಲಿ ಶಾಶ್ವತ ಅಂಚೆ ಕಚೇರಿ ಕಟ್ಟಡಗಳು ನಿರ್ಮಾಣವಾದರೆ ಜನಸಾಮಾನ್ಯರಿಗೆ ಹಾಗೂ ಅಂಚೆ ಸಿಬ್ಬಂದಿಗೆ ಹೆಚ್ಚಿನ ಅನುಕೂಲವಾಗಲಿದೆ” ಎಂದು ಹೇಳಿದರು.

ಕೇಂದ್ರ ಸಚಿವಾಲಯವು ಈ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಗಣಿಸುವ ಭರವಸೆ ನೀಡಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಸಾರ್ವಜನಿಕ ಸೇವೆಗಳ ವಿಸ್ತರಣೆ ಮತ್ತು ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರ ಮುಂದುವರಿಯಲಿದೆ ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Click Here

LEAVE A REPLY

Please enter your comment!
Please enter your name here