ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೋಟೇಶ್ವರದ ಶಿವಪುರ ಕ್ಲಿನಿಕ್ನ ವೈದ್ಯ ಡಾ.ಎಸ್.ಪಿ ಆಚಾರ್ಯ (ಪದ್ಮನಾಭ ಆಚಾರ್ಯ) ಮಾರ್ಚ್ 27 ಶುಕ್ರವಾರ ಮಧ್ಯಾಹ್ನ ನಿಧನರಾದರು. ಅವರು 87 ವರ್ಷ ವಯಸ್ಸಾಗಿತ್ತು.
ನಿರಂತರ ಆರು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಅವರು ಆಯುರ್ವೇದ ವೈದ್ಯಕೀಯದ ಜೊತೆಯಲ್ಲಿ ಪ್ರಕೃತಿಯ ಬಗ್ಗೆ ವಿಶೇಷ ಒಲವು ಹೊಂದಿ ಪರಿಸರ ಜಾಗೃತಿಯನ್ನು ಮಾಡುತ್ತಿದ್ದರು. ೧೯೬೦ರಿಂದ ವೈದ್ಯ ವೃತ್ತಿಯ ಜೊತೆಯಲ್ಲಿ ಮಾನವೀಯ ಸೇವೆಯಲ್ಲಿ ಹೆಸರಾಗಿದ್ದರು. ಕೋಟೇಶ್ವರದಲ್ಲಿ ಶಿವಪುರ ಕ್ಲಿನಿಕ್ ಮೂಲಕ ವೈದ್ಯಕೀಯ ಸೇವೆ ನೀಡುತ್ತಿದ್ದ ಅವರು, ಹೋಮಿಯೋಪಥಿ, ಅಲೋಪಥಿಯಲ್ಲಿ ಅನುಭವ ಹೊಂದಿದ್ದರು.
ಸೈಕಲ್ನಲ್ಲಿಯೇ ರೋಗಿಗಳ ಮನೆಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದರು. ಅಂದಿನ ಕಾಲಘಟ್ಟದಲ್ಲಿ ಪ್ರಸೂತಿ ತಜ್ಞರಾಗಿಯೂ ಕಾರ್ಯನಿರ್ವಹಿಸಿದ್ದರು. 30ವರ್ಷಗಳ ಕಾಲ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯರ ಮನೆಗೆ ತೆರಳಿ ಸುರಕ್ಷಿತವಾಗಿ ಹೆರಿಗೆ ಮಾಡಿಸುತ್ತಿದ್ದರು. ಪರಿಸರದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದ ಅವರು ದಿನಕ್ಕೊಂದು ಗಿಡ ನೆಟ್ಟು ಪೋಷಿಸುವ ಅಭಿಯಾನ ಮಾಡಿದ್ದರು. ಸರಳತೆಯ ಮೂಲಕವೇ ಜನಜನಿತರಾಗಿದ್ದರು.
ಅವರ ಪತ್ನಿ ಸಹ ವೈದ್ಯೆಯಾಗಿದ್ದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯನ್ನು ಅಗಲಿದ್ದಾರೆ.












