ಕಾರಂತ ಥೀಂ ಪಾರ್ಕ ಬೇಸಿಗೆ ಶಿಬಿರವೇ ವಿಶಿಷ್ಟ, ಅರ್ಥಪೂರ್ಣ- ಪತ್ರಕರ್ತ ರವೀಂದ್ರ ಕೋಟ

ಕುಂದಾಪುರ ಮಿರರ್ ಸುದ್ದಿ…
ಕೋಟ: ಶಿಬಿರಗಳು ಎಲ್ಲೆಡೆ ನಡೆಯುವುದು ಸ್ವಾಭಾವಿಕ ಆದರೆ ಇಲ್ಲಿನ ಕಾರಂತ ಥೀಂ ಪಾರ್ಕನಲ್ಲಿ ನಡೆಯುವ ಬೇಸಿಗೆ ಶಿಬಿರಗಳು ವಿಭಿನ್ನ ಮತ್ತು ಮಕ್ಕಳ ಮನೋವಿಕಾಸಕ್ಕೆ ಸಹಕಾರಿ ಎಂದು ಪತ್ರಕರ್ತ ರವೀಂದ್ರ ಕೋಟ ಅಭಿಪ್ರಾಯಪಟ್ಟರು.
ಏ.25ರಿಂದ ಮೇ 4ರವರೆಗೆ ಕೋಟದ ಡಾ.ಶಿವರಾಮ ಕಾರಂತ ಥೀಂ ಪಾರ್ಕನಲ್ಲಿ ಮಣೂರು ಪಡುಕೆರೆ ಗೀತಾನಂದ ಫೌಂಡೇಶನ್, ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟ ಉಸಿರು, ಕೋಟತಟ್ಟು ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಆಶ್ರಯದಲ್ಲಿ ದಿ.ಕೆ.ಸಿ.ಕುಂದರ್ ಸ್ಮರಣಾರ್ಥ 26ನೇ ವರ್ಷದ ವಿದ್ಯಾರ್ಥಿಗಳ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ಮೊಬೈಲ್ ಕಾಲಘಟ್ಟದಲ್ಲಿ ಮಕ್ಕಳಿಗೆ ಶಿಬಿರಗಳ ಮೂಲಕ ಕೌಶಲ್ಯಾಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಲಿದೆ. ಇಂದಿನ ತಾಪಮಾನದಲ್ಲಿ ಹಸಿರು ಪರಿಸರ, ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಯುವ ಸಮುದಾಯದ ಕುರಿತಂತೆ ಸಮಗ್ರ ಮಾಹಿತಿ ನೀಡಿದರು.
ಇದೇ ವೇಳೆ ಶಿಬಿರಾರ್ಥಿಗಳ ನಾಯಕರಾದ ಪ್ರಥ್ವಿ, ಧನುಶ್ರೀ, ಚಿರಂತನ್, ಶಮಂತ್, ತನ್ವಿ ಇವರಿಗೆ ರವೀಂದ್ರ ಕೋಟ ಶಿಬಿರದ ಫೈಲ್ ಹಸ್ತಾಂತರಿಸಿದರು.
ಶಿವರಾಮ ಕಾರಂತ ಪ್ರತಿಷ್ಠಾನದ ಸದಸ್ಯ ಎಂ ಸುಬ್ರಾಯ ಆಚಾರ್,ಥೀಂ ಪಾರ್ಕ ಗ್ರಂಥಪಾಲಕಿ ಶೈಲಜ, ಕಲ್ಮಾಡಿ ಅಂಗನವಾಡಿ ಸಹಾಯಕಿ ಶೈಲಜ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ವಿವಿಧ ತಂಡಗಳನ್ನು ರಚಿಸಿ ಅವುಗಳಿಗೆ ಹೆಸರನ್ನು ಉಲ್ಲೇಖಿಸಿ ಒಂದೊಂದು ತಂಡಕ್ಕೆ ನಾಯಕತ್ವ ನೀಡಲಾಗಿದೆ. ದಿನವಿಡೀ ಮಕ್ಕಳಿಗೆ ವಿವಿಧ ತರಹದ ಆಟ ಸೇರಿದಂತೆ ಜ್ಞಾನವೃದ್ಧಿಗೆ ಬೇಕಾಗುವ ವಿಚಾರ, ಕಥೆ ಹಲವು ಯೋಜನೆಗಳನ್ನು ಶಿಬಿರಾರ್ಥಿಗಳಿಗೆ ಒದಗಿಸಲಾಗುತ್ತಿದೆ.
ಕಾರ್ಯಕ್ರಮ ಸಂಯೋಜಕ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರೆ, ಸದಸ್ಯ ಶಿಕ್ಷಕ ಸತೀಶ್ ವಡ್ಡರ್ಸೆ ಸ್ವಾಗತಿಸಿ ವಂದಿಸಿದರು.












