ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಶಿಕ್ಷಣದಲ್ಲಿ ಅಂಕ ಪಡೆಯುವುದಷ್ಟೇ ಪ್ರಮುಖವಲ್ಲ, ನಾಯಕತ್ವ, ಶಿಸ್ತು ಎಲ್ಲವೂ ಕೂಡಾ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಸಾಧನೆಯನ್ನು ಉತ್ತೇಜಿಸುವ ಕಾರ್ಯ ಶ್ರೇಷ್ಠವಾದುದು. ಸಿದ್ಧಾಪುರದ ಸರಸ್ವತಿ ವಿದ್ಯಾಲಯ ಇವತ್ತು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ಯಶಸ್ಸಿನ ಪಯಣ ನಿಲ್ಲಬಾರದು ನಿರಂತರವಾಗಿರಬೇಕು ಎಂದು ಡಾ.ಎ.ವಿ ಬಾಳಿಗ ಆಸ್ಪತ್ರೆಯ ಮನೋವೈದ್ಯರಾದ ಡಾ.ಪಿ.ವಿ ಭಂಡಾರಿ ಹೇಳಿದರು.
ಅವರು ಶನಿವಾರದಂದು ಸಿದ್ದಾಪುರ ಸರಸ್ವತಿ ವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳ ಸಹಮಿಲನ ‘ನವಚೇತನ’, ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಮರೆಯಬೇಡ, ಮುರಿಯಬೇಡ, ಮೆರೆಯಬೇಡ ಎನ್ನುವ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಕಲಿತ ಶಾಲೆಯನ್ನು ಯಾವತ್ತೂ ಮರೆಯಬಾರದು. ಜೀವನದಲ್ಲಿ ಉನ್ನತ ಸ್ಥಾನಕ್ಕೇರಿದಾಗ ಶಾಲೆಯ ಅವಶ್ಯತೆಗಳಿಗೆ ಸ್ಪಂದಿಸುವ ಗುಣ ಮೈಗೂಡಿಸಿಕೊಳ್ಳಬೇಕು, ಕಲಿತ ಶಾಲೆಯ ಸಹಪಾಠಿಗಳನ ಬಾಂಧವ್ಯವನ್ನು ಯಾವತ್ತೂ ಮುರಿಯಬಾರದು. ಜೀವನದಲ್ಲಿ ಎಷ್ಟೇ ದೊಡ ಸ್ಥಾನಕ್ಕೇರಿದರೂ ಕಲಿತ ಶಾಲೆ, ಊರು, ಸ್ನೇಹಿತರನ್ನು ಮರೆತು ಮೆರೆಯಬಾರದು ಎಂದರು.
ಸಿದ್ದಾಪುರದ ಸರಸ್ವತಿ ವಿದ್ಯಾಲಯ ಯಶಸ್ವಿ 21 ವರ್ಷಗಳನ್ನು ಪೂರೈಸಿದ್ದು, 2011ರಿಂದ ಎಸ್.ಎಸ್.ಎಲ್.ಸಿಯನ್ನು 12 ಬ್ಯಾಚ್ಗಳನ್ನು ಮುಗಿಸಿದ್ದಾರೆ. ನಿರಂತರ ಶೇ.100 ಫಲಿತಾಂಶವನ್ನು ದಾಖಲಿಸುತ್ತಾ ಬಂದಿರುವ ಸಂಸ್ಥೆಗೆ 21 ವರ್ಷ ತುಂಬಿದ ಸಂದರ್ಭದಲ್ಲಿ 2011ರಿಂದ ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಹಮಿಲನ ‘ನವಚೇತನ’ ಕಾರ್ಯಕ್ರಮ ದಲ್ಲಿ ನೂತನ ಹಳೆ ವಿದ್ಯಾರ್ಥಿಗಳ ಸಂಘವನ್ನು ರಚನೆ ಮಾಡಲಾಯಿತು.
ಸರಸ್ವತಿ ವಿದ್ಯಾಲಯದ ಆಡಳಿತ ಸಮಿತಿ ಸಂಚಾಲಕರಾದ ದಕ್ಕೇರಬಾಳು ಗೋಪಾಲಕೃಷ್ಣ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಶ್ವಸ್ಥ ಮಂಡಳಿ ಸದಸ್ಯರಾದ ಟಿ.ಜಿ ಪಾಂಡುರಂಗ ಪೈ, ಲಕ್ಮಣ್ ರೈ ಪ್ರಭು, ವಾಸುದೇವ್ ಉಡುಪ, ರಾಮ್ ರೈ ಕಾಮತ್, ಮಂಜುನಾಥ್ ಕಾಮತ್, ವಿತೋಭಾ ಶಣೈ, ವಿನಾಯಕ ಶಣೈ, ಗೋಪಿನಾಥ್ ಕಾಮತ್, ಪಾಂಡುರಂಗ ಕಾಮತ್, ಶ್ರೀನಾಥ್ ಪೈ, ರತ್ನಾಕರ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಅಕ್ಷತಾ ಸ್ವಾಗತಿಸಿ, ಶಾಲೆಯ ಪ್ರಾಶುಂಪಾಲರಾದ ಪ್ರಿಯಾ ಶಾಲೆಯ ವರದಿಯನ್ನು ವಾಚಿಸಿದರು. ಪ್ರಶಾಂತ್ ಪಿ. ವಂದಿಸಿದರು. ಪ್ರಜ್ಜಾ ಕಾರ್ಯಕ್ರಮ ನಿರೂಪಿಸಿದರು.












