ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ ಸಿದ್ದಾಪುರ ಭಾಗದ ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರರಾಗಿದ್ದ ನಾಗೇಶ್ ಗಾಣಿಗ ನೇರಳಕಟ್ಟೆ ಅವರ ಅಕಾಲಿಕ ನಿಧನಕ್ಕೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಅತೀವ ಕಂಬನಿಯೊಂದಿಗೆ, ತೀವ್ರ ಸಂತಾಪ ವ್ಯಕ್ತಪಡಿಸಿದೆ.
ನಾಗೇಶ್ ಗಾಣಿಗ ಅವರು ಹಲವು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಿಷ್ಠೆ ಹಾಗೂ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದ್ದರು. ಗ್ರಾಮೀಣ ಭಾಗದ ಜನರ ಹತ್ತಾರು ಸಮಸ್ಯೆಗಳು, ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳು ಹಾಗೂ ಜನಪರ ವಿಷಯಗಳನ್ನು ತಮ್ಮ ವರದಿಗಳ ಮೂಲಕ ಸಮಾಜದ ಗಮನಕ್ಕೆ ತಂದು, ಅನೇಕ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ್ದಾರೆ.
ಅವರ ಸರಳತೆ, ಸೌಜನ್ಯ, ಕರ್ತವ್ಯನಿಷ್ಠೆ ಹಾಗೂ ಸಾಮಾಜಿಕ ಕಾಳಜಿಯು ಪತ್ರಿಕಾ ವಲಯ, ಸಾರ್ವಜನಿಕರು ಮತ್ತು ಸಾಮಾಜಿಕವಾಗಿ ಅಪಾರ ಗೌರವಕ್ಕೆ ಪಾತ್ರವಾಗಿತ್ತು. ಅವರ ಅಕಾಲಿಕ ಅಗಲಿಕೆಯು ಕುಂದಾಪುರ ಭಾಗದ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಕುಟುಂಬದವರಿಗೆ ಹಾಗೂ ಆತ್ಮೀಯರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಂಘವು ಪ್ರಕಟಣೆಯಲ್ಲಿ ಪ್ರಾರ್ಥಿಸಿದೆ.












