ಜಾಗೃತಿ ಮೂಡಿಸುವಲ್ಲಿ ಮಾಧ್ಯಮ ಪರಿಣಾಮಕಾರಿ : ಡಾ| ಪ್ರೇಮಾನಂದ್

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಪತ್ರಿಕಾ ಮಾಧ್ಯಮಗಳು ಜನಮುಖಿಯಾಗಿ ಪರಿಣಾಮಕಾರಿಯಾದ ಪಾತ್ರ ವಹಿಸುತ್ತವೆ. ಪತ್ರಿಕೆಗಳು ನೀಡುವ ಎಚ್ಚರಿಕೆ, ಜಾಗೃತಿ ಹೆಚ್ಚು ಪರಿಣಾಮ ಬೀರುತ್ತದೆ. ಕುಂದಾಪುರದ ಪತ್ರಕರ್ತರು ಧನಾತ್ಮಕವಾದ ಸುದ್ಧಿ ನೀಡುವಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿದ್ದು, ಇದು ಎಲ್ಲರಿಗೂ ಮಾದರಿ ಎಂದು ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರೇಮಾನಂದ ಹೇಳಿದರು.
ಅವರು ಮಂಗಳವಾರ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಂಡಾರ್ಕಾರ್ಸ್ ಕಾಲೇಜಿನ ರಾಧಾಬಾಯಿ ಹಾಲ್ನಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆಯನ್ನು ಗ್ರಾಮೋಪೋನ್ ನ ಧ್ವನಿಗೆ ಚಾಲನೆ ನೀಡುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಇತ್ತೀಚೆಗೆ ಹಂದಿಗಳ ಸರಣಿ ಸಾವಿನ ಬಗ್ಗೆ ಪತ್ರಿಕೆಗಳು ತೋರಿಸಿದ ಕಾಳಜಿಯನ್ನು ಶ್ಲಾಘಿಸಿದ ಅವರು, ಪತ್ರಿಕಾ ವಿತರಕರ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ಪತ್ರಿಕೆಗಳ ಓದುಗರ ಸಂಖ್ಯೆಯೂ ಕಡಿಮೆಯಾಗಬಹುದು. ಪತ್ರಿಕಾ ವಿತರಕರಿಗೆ ಉತ್ತೇಜನ, ಜೀವನ ಭದ್ರತೆ ನೀಡುವ ಕಾರ್ಯಗಳು ಆಗಬೇಕಾಗಿದೆ ಎಂದವರು ಹೇಳಿದರು.
ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪತ್ರಿಕಾ ದಿನಾಚರಣೆಯ ಅಂಗವಾಗಿ ಕೆಯುಡಬ್ಲ್ಯುಜೆ 2024 ನೇ ಸಾಲಿನ ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪ್ರಶಾಂತ ಪಾದೆ ಅವರಿಗೆ ಪತ್ರಿಕೋದ್ಯಮ ದಿನದ ಗೌರವ ಸಲ್ಲಿಸಲಾಯಿತು.
ಹಿರಿಯ ಪತ್ರಕರ್ತ, ವಿಜಯ ಕರ್ನಾಟಕ ಮಂಗಳೂರು ವಿಭಾಗದ ಹಿರಿಯ ವರದಿಗಾರ ಮುಹಮ್ಮದ್ ಆರಿಫ್ ವಿಶೇಷ ಉಪನ್ಯಾಸ ನೀಡಿ, ವಿದ್ಯಾರ್ಥಿದಿಸೆಯಿಂದಲೇ ಪತ್ರಿಕೆಯ ಓದುವ ಹಸಿವು ಆರಂಭವಾಗಬೇಕು. ಪತ್ರಿಕಾ ಓದುವಿಕೆ ನೀಡುವ ಅನುಭವ ಬಹುದೊಡ್ಡದು. ಜೀವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪತ್ರಿಕೆಯ ಓದು ಸಹಕಾರಿಯಾಗಬಲ್ಲದು. ಪತ್ರಿಕೆಗಳನ್ನು ಉಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ದೊಡ್ಡದು ಎಂದರು.
ಮಾಧ್ಯಮಗಳಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಬಹಳಷ್ಟು ವಿಭಾಗಳು ತೆರೆದುಕೊಂಡಿವೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹಳಷ್ಟು ಪತ್ರಿಕೆಗಳು ಕೆಲಸ ಮಾಡಿವೆ. ಪತ್ರಿಕೆಗಳ ಸುದ್ಧಿ ಶಾಶ್ವತ. ಒಮ್ಮೆ ಪ್ರಕಟಗೊಂಡ ಬಳಿಕ ಅದು ಯಾವತ್ತಿಗೂ ಪ್ರಚಲಿತದಲ್ಲಿರುತ್ತದೆ. ಎಲ್ಲ ವಿಷಯಗಳನ್ನು ಒಗ್ಗೂಡಿಸಿಕೊಡುವುದು ಪತ್ರಿಕಾ ಮಾಧ್ಯಮ ಮಾತ್ರ. ಹಾಗಾಗಿ ಪತ್ರಿಕೆಗಳು ತಮ್ಮ ಮಹತ್ವಿಕೆ, ವಿಶ್ವಾಸಾರ್ಹತೆಯನ್ನು ಇಂದಿಗೂ ಉಳಿಸಿಕೊಂಡಿವೆ. ಸಾಮಾಜಿಕ ಜಾಲತಾಣಗಳು ಹೆಚ್ಚು ಆಕರ್ಷಿತವಾದರೂ ಕೂಡಾ ಧಾವಂತದಲ್ಲಿ ಜೊಳ್ಳು ವಿಷಯಗಳನ್ನೇ ಹೆಚ್ಚು ಬಿತ್ತರಿಸುತ್ತೀವೆ. ಅವು ಗಟ್ಟಿತನವಿಲ್ಲದೆ ಅಷ್ಟೇ ವೇಗವಾಗಿ ಮರೆಯಾಗಿ ಬಿಡುತ್ತವೆ. ಆದರೆ ಸುದ್ಧಿಯೊಂದರ ನಿಖರತೆ, ವಸ್ತುನಿಷ್ಠತೆ ದೊರಕುವುದು ಪತ್ರಿಕೆಗಳಿಂದ ಮಾತ್ರ. ಪ್ರಪಂಚ ಜ್ಞಾನ ನೀಡುವುದರ ಜೊತೆಗೆ ಜೀವನದ ಮಹತ್ವದ ಹಂತದಲ್ಲಿ ನೆರವಾಗುವುದು, ಸಮಾಜದಲ್ಲಿ ಬದಲಾವಣೆ, ಜಾಗೃತಿಗಳಿಗೆ ಸೇತುವಾಗುವುದು ಪತ್ರಿಕೆಗಳು ಎಂದರು.
ಕುಂದಾಪುರ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂಜಾ ನಾಯ್ಕ್, ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನೂಪ್ ಕುಮಾರ್, ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ| ಶುಭಕರಾಚಾರಿ, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ| ಸರೋಜಾ ಎಂ., ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ (ಸುಜಿ ಕುರ್ಯ) ಮಾತನಾಡಿದರು.
ಜಿಲ್ಲಾ ಕಾರ್ಯದರ್ಶಿ ಟಿ. ಲೋಕೇಶ್ ಆಚಾರ್ಯ ತೆಕ್ಕಟ್ಟೆ, ಕಾರ್ಯಕಾರಿ ಸಮಿತಿಯ ರಾಘವೇಂದ್ರ ಪೈ, ಚಂದ್ರಮ ತಲ್ಲೂರು, ಯೋಗೀಶ್ ಕುಂಭಾಶಿ ಉಪಸ್ಥಿತರಿದ್ದರು.
ಇತ್ತೀಚೆಗೆ ಅಗಲಿದ ಪತ್ರಕರ್ತ ದಿ.ನಾಗೇಶ ಗಾಣಿಗರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕಾಲೇಜಿನ ವಿದ್ಯಾರ್ಥಿನಿಯರಾದ ಅನ್ವಿತಾ, ಅಶ್ವಿನಿ ಪ್ರಾರ್ಥನೆ ನೆರವೇರಿಸಿದರು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಶ್ರೀಕಾಂತ ಹೆಮ್ಮಾಡಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್. ಬೀಜಾಡಿ ವಂದಿಸಿದರು. ಪತ್ರಕರ್ತೆ ಅಕ್ಷತಾ ಗಿರೀಶ್ ಕಾರ್ಯಕ್ರಮ ನಿರ್ವಹಿಸಿದರು












