ಕುಂದಾಪುರ ಮಿರರ್ ಸುದ್ದಿ…
ನವದೆಹಲಿ :2016ರಲ್ಲಿ ಪ್ರಧಾನಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ (PMSMA) ಪ್ರಾರಂಭವಾದಾಗಿನಿಂದ, ಭಾರತದಾದ್ಯಂತ 7.91 ಕೋಟಿಗೂ ಹೆಚ್ಚು ಗರ್ಭಿಣಿಯರು ತಜ್ಞ ವೈದ್ಯರ ನೇತೃತ್ವದಲ್ಲಿ ಉಚಿತವಾಗಿ, ಅಗತ್ಯ ಪ್ರಸವಪೂರ್ವ ಆರೈಕೆ ಪಡೆದಿದ್ದಾರೆ. ಅವರಲ್ಲಿ ಸುಮಾರು 1.24 ಕೋಟಿಗೂ ಹೆಚ್ಚು ಅಧಿಕ ಅಪಾಯದ ಗರ್ಭಧಾರಣೆಯನ್ನು ಸಕಾಲಿಕ ಮೇಲ್ವಿಚಾರಣೆ ಮತ್ತು ವೈದ್ಯಕೀಯ ಹಸ್ತಕ್ಷೇಪಕ್ಕಾಗಿ ಗುರುತಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಕುರಿತಂತೆ ಶಿವಮೊಗ್ಗ ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ (ಪಿಎಂಎಸ್ಎಂಎ) ಅನುಷ್ಠಾನ ಮತ್ತು ಪರಿಣಾಮದ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶ್ರೀಮತಿ ಅನುಪ್ರಿಯಾ ಪಟೇಲ್ ಅವರು ಲೋಕಸಭೆಯಲ್ಲಿ ವಿವರವಾದ ಮಾಹಿತಿ ನೀಡಿದ್ದಾರೆ. ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಾತೃ ಆರೋಗ್ಯ ರಕ್ಷಣಾ ಉಪಕ್ರಮದಲ್ಲಿ ಸಾಧಿಸಲಾಗಿರುವ ಗಮನಾರ್ಹ ಪ್ರಗತಿಯನ್ನು ನೀಡುವ ಸಮಗ್ರ ವಿವರವನ್ನು ಸಚಿವರು ಪ್ರಸಕ್ತ ನಡೆಯುತ್ತಿರುವ ಅಧಿವೇಶನದಲ್ಲಿ ಸಂಸತ್ತಿಗೆ ಒದಗಿಸಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿಯ ಕೆಲವು ಪ್ರಮುಖ ಅಂಶಗಳು
ಕರ್ನಾಟಕದ 35.13 ಲಕ್ಷ ಗರ್ಭಿಣಿಯಾರಿಗೆ ಪ್ರಯೋಜನ:
PMSMA ಅಡಿಯಲ್ಲಿ, ಕರ್ನಾಟಕದಲ್ಲಿ 35,13,527 ಗರ್ಭಿಣಿಯರು ಖಾತ್ರಿಯಾದ, ಉಚಿತ ಮತ್ತು ತಜ್ಞರ ನೇತೃತ್ವದ ಪ್ರಸವಪೂರ್ವ ಆರೈಕೆಯನ್ನು ಪಡೆದಿದ್ದು, ರಾಜ್ಯಾದ್ಯಂತ ತಾಯಂದಿರ ಆರೋಗ್ಯ ಸೇವೆಗಳನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ.
ಗುರುತಿಸಲಾಡಿರುವ 12.28 ಲಕ್ಷಕ್ಕೂ ಹೆಚ್ಚು ಅಧಿಕ ಅಪಾಯದ ಗರ್ಭಧಾರಣೆ: ಈ ಕಾರ್ಯಕ್ರಮದಿಂದಾಗಿ ಕರ್ನಾಟಕದಲ್ಲಿ 12,28,200 ಅಧಿಕ ಅಪಾಯದ ಗರ್ಭಧಾರಣೆಯನ್ನು ಗುರುತಿಸಲಾಗಿದ್ದು, ವಿಸ್ತೃತ ಇ-PMSMA ಯೋಜನೆ ಅಡಿಯಲ್ಲಿ ಸಕಾಲಿಕ ಪತ್ತೆ, ವಿಶೇಷ ಆರೈಕೆ, ಚಿಕಿತ್ಸಾ ಅನುಸರಣೆ ಮತ್ತು ನಿರಂತರ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸಲಾಗಿದ್ದು, ತಾಯಂದಿರ ಆರೈಕೆಯಲ್ಲಿ ಮಹತ್ವಪೂರ್ಣ ಪ್ರಗತಿ ಸಾಧಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಯೋಜನೆಯ ವ್ಯಾಪಕ ಅನುಷ್ಠಾನ: ಶಿವಮೊಗ್ಗ ಜಿಲ್ಲೆಯಲ್ಲಿ, 58,763 ಗರ್ಭಿಣಿಯರು PMSMA ಅಡಿಯಲ್ಲಿ ಪ್ರಸವಪೂರ್ವ ಆರೈಕೆಯಿಂದ ಪ್ರಯೋಜನ ಪಡೆದಿದ್ದು, ಅವರಲ್ಲಿ 21,112 ಅಧಿಕ ಅಪಾಯದ ಗರ್ಭಧಾರಣೆಯನ್ನು ಸಕಾಲಿಕ ಚಿಕಿತ್ಸಾ ಅನುಸರಣೆ ಮತ್ತು ಸೂಕ್ತ ಆರೈಕೆಗಾಗಿ ಗುರುತಿಸಲಾಗಿದೆ.
ತಾಯಿ ಆರೋಗ್ಯ ಸೂಚಕಗಳಲ್ಲಿ ಗಮನಾರ್ಹ ಸುಧಾರಣೆ: ಭಾರತದಾದ್ಯಂತ ತಾಯಿಯ ಆರೋಗ್ಯ ಫಲಿತಾಂಶಗಳಲ್ಲಿ ಗಣನೀಯ ಸುಧಾರಣೆಗಳನ್ನು ಸಾಧಿಸಲಾಗಿದೆ. ತಾಯಿಯ ಮರಣ ಅನುಪಾತ (MMR) ಒಂದು ಲಕ್ಷ ಜೀವಂತ ಜನನಗಳಿಗೆ 130 ರಿಂದ 87 ಕ್ಕೆ ಇಳಿದಿದೆ, ಸಾಂಸ್ಥಿಕವಾದ ಹೆರಿಗೆಗಳು 90.6% ಕ್ಕೆ ಏರಿವೆ, ಇದು ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ನಿರಂತರ ಆದ್ಯತೆಯಿಂದ ದೊರೆತ ಸಕಾರಾತ್ಮಕ ಪರಿಣಾಮಕ್ಕೆ ಸಾಕ್ಷಿಯಾಗಿದೆ.
ತಂತ್ರಜ್ಞಾನ-ಚಾಲಿತ ಮೇಲ್ವಿಚಾರಣೆ ಮತ್ತು ಗ್ರಾಮೀಣ ಸಂಪರ್ಕ
ಗ್ರಾಮೀಣ ಸಂಪರ್ಕ ಮತ್ತು ಅಧಿಕ ಅಪಾಯದ ಗರ್ಭಧಾರಣೆಯ ನಿರ್ವಹಣೆಯ ಕುರಿತು ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಶ್ನೆಗೆ ಉತ್ತರಿಸುತ್ತಾ, ವಿಸ್ತೃತ ಇ-PMSMA ಕಾರ್ಯತಂತ್ರದಡಿಯಲ್ಲಿ, ಗುರುತಿಸಲಾದ ಪ್ರತಿಯೊಂದು ಅಧಿಕ ಅಪಾಯದ ಗರ್ಭಧಾರಣೆ ತಾಯಂದಿರ ಹೆರಿಗೆಯ ನಂತರ 45 ದಿನಗಳವರೆಗೆ ಡಿಜಿಟಲ್ ವೇದಿಕೆಯ ಮೂಲಕ ಟ್ರ್ಯಾಕ್ ಮಾಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಕಾರ್ಯಕ್ರಮದ ಅಡಿಯಲ್ಲಿ ಸ್ವಯಂಚಾಲಿತ SMS ಎಚ್ಚರಿಕೆಗಳು, ಹೆಚ್ಚುವರಿ ಪ್ರಸವಪೂರ್ವ ತಪಾಸಣೆಗಳು, ಮೊದಲ ಉಲ್ಲೇಖ ಘಟಕಗಳಿಗೆ (FRUs) ಉಲ್ಲೇಖ ಸಂಪರ್ಕಗಳು, ASHA ಕಾರ್ಯಕರ್ತರ ಬೆಂಬಲ ಮತ್ತು ಸಾರಿಗೆ ನೆರವು ಮೊದಲಾದವುಗಳನ್ನು, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ತಾಯಂದಿರಿಗೆ ಸಕಾಲಿಕ ಆರೋಗ್ಯ ಸೇವೆಯನ್ನು ಖಚಿತಪಡಿಸಿಕೊಳ್ಳಲು ನೀಡಲಾಗುತ್ತದೆ.
ಹೆಚ್ಚುವರಿ ಚಿಕಿತ್ಸಾ ಅನುಸರಣಾ ಅವಧಿಗಳ ವಿಸ್ತರಣೆ, ಡಿಜಿಟಲ್ ಮೇಲ್ವಿಚಾರಣಾ ವ್ಯವಸ್ಥೆಗಳಲ್ಲಿ ಸುಧಾರಣೆ, ಆರೋಗ್ಯ ಪೂರೈಕೆದಾರರ ಸಾಮರ್ಥ್ಯ ಹೆಚ್ಚಳ, ಮಾಹಿತಿ ಶಿಕ್ಷಣ ಮತ್ತು ಸಂವಹನ, ನಡವಳಿಕೆ ಬದಲಾವಣೆ ಸಂವಹನ ಚಟುವಟಿಕೆಗಳ ಮೂಲಕ ಜಾಗೃತಿ ಮತ್ತು ಖಾಸಗಿ ತಜ್ಞರು ಮತ್ತು ಸ್ವಯಂಸೇವಕ ವೈದ್ಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಮೂಲಕ ಕೇಂದ್ರ ಸರ್ಕಾರ PMSMA ಅನ್ನು ಬಲಪಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸಂಸದ ಬಿ.ವೈ.ರಾಘವೇಂದ್ರ, _”ಪ್ರತಿಯೊಬ್ಬ ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯ, ಸಶಕ್ತ ಮತ್ತು ಸಮೃದ್ಧ ರಾಷ್ಟ್ರವನ್ನು ನಿರ್ಮಿಸಲು ಮೂಲಭೂತ ಅಗತ್ಯವಾಗಿದೆ. ನನ್ನ ಪ್ರಶ್ನೆಗೆ ಕೇಂದ್ರ ನೀಡಿರುವ ಮಾಹಿತಿಯ ಪ್ರಕಾರ, ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ ಮಹತ್ವಪೂರ್ಣ ಪರಿಣಾಮ ನಮ್ಮ ಕಣ್ಣೆದುರಿಗೆ ಇದೆ. ಕರ್ನಾಟಕದಲ್ಲಿ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಯನ್ನು ಗುರುತಿಸಿ, ಅಗತ್ಯ ಚಿಕಿತ್ಸೆ ಮೂಲಕ ತಾಯಂದಿರ ಆರೋಗ್ಯ ರಕ್ಷಣೆ ಮತ್ತು ಸಕಾಲಿಕ ತಜ್ಞರ ನೆರವು ಯೋಜನೆ ಎಷ್ಟು ಪರಿಹಮಕಾರಿಯಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಶಿವಮೊಗ್ಗದಲ್ಲಿ ಸಾವಿರಾರು ತಾಯಂದಿರು ಈ ಉಪಕ್ರಮದಿಂದ ಪ್ರಯೋಜನ ಪಡೆಯುತ್ತಿರುವುದನ್ನು ನಿಜಕ್ಕೂ ಸಮಾಧಾನದ ಸಂಗತಿ. ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಿಗೆ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸಲು, ಸುರಕ್ಷಿತ ತಾಯ್ತನವನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ,”_ ಎಂದು ಹೇಳಿದ್ದಾರೆ.












