ಕುಂದಾಪುರಕ್ಕೆ ದಿನದ 24 ಗಂಟೆ ನಿರಂತರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಾಮಗಾರಿ ಪೂರ್ಣ, ಶೀಘ್ರ ಹಸ್ತಾಂತರ

0
459

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ದಿ ಮತ್ತು ಹಣಕಾಸು ನಿಗಮ ನಿ., (ಕೆಯುಐಡಿಎಫ್‍ಸಿ) ಮೂಲಕ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ದಿನದ 24 ಗಂಟೆ ನಿರಂತರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯ ಜಲಸಿರಿ ಕಾಮಗಾರಿ ಪೂರ್ಣಗೊಂಡಿದೆ. ಈ ಬಗ್ಗೆ ಸೋಮವಾರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಅಧಿಕಾರಿಗಳು ಈ ಬಗ್ಗೆ ವಿಸ್ತ್ತೃತ ಮಾಹಿತಿ ನೀಡಿದರು.

ಕೆಯುಐಡಿಎಫ್‍ಸಿಯ ಮಂಜುನಾಥ ಅವರು ಯೋಜನೆ ಪ್ರಗತಿಯ ಬಗ್ಗೆ ಮಾಹಿತಿ ನೀಡಿ, ಒಟ್ಟು 35.50 ಕೋಟಿ ವೆಚ್ಚದ ಯೋಜನೆ ಇದಾಗಿದ್ದು ಲಕ್ಷ್ಮೀ ಸಿವಿಲ್ ಇಂಜಿನಿಯರಿಂಗ್ ಸರ್ವೀಸಸ್ ಪ್ರೈ ಲಿ ಕಂಪೆನಿ ಕಾಮಗಾರಿ ನಡೆಸಿದೆ. 8 ವರ್ಷದ ಅವಧಿಗೆ ಕಾರ್ಯಾಚರಣೆ ಮತ್ತು ನಿರ್ವಹಣೆಯ ಒಳಗೊಂಡ ಕಾಮಗಾರಿ ಇದಾಗಿದೆ. 2022ರ ಜುಲೈಗೆ ಶೇ.100 ಭೌತಿಕ ಕಾಮಗಾರಿ ಮುಗಿದಿದೆ ಎಂದರು.

ಜಪ್ತಿಯ ನೀರಿನ ಶುದ್ಧೀಕರಣ ಘಟಕದ ಮೂಲಕ ಪಟ್ಟಣಕ್ಕೆ ಹಾದು ಬರುವ ಮುಖ್ಯ ಕೊಳವೆ ಮಾರ್ಗದಿಂದ ಸ್ಥಳೀಯ ಗ್ರಾ.ಪಂ.ಗಳಿಗೂ ನೀರಿನ ಸರಬರಾಜು ಮಾಡಲಾಗುತ್ತಿದೆ. 8 ವರ್ಷಗಳ ನಿರ್ವಹಣಾ ಅವಧಿಯಲ್ಲಿ ಗುತ್ತಿಗೆ ಸಂಸ್ಥೆ ಜಾಕ್‍ವೆಲ್, ನೀರು ಶುದ್ಧೀಕರಣ ಘಟಕ, ನೀರಿನ 5 ಮೇಲ್ಮಟ್ಟದ ಜಲಸಂಗ್ರಹಹಾರಗಳು 127 ಕಿ.ಮೀ ಕೊಳವೆ ಮಾರ್ಗದ ನಿರ್ವಹಣೆಯನ್ನು ನಿರ್ವಹಿಸಲಿದೆ.
ಈಗಾಗಲೇ 2021ರ ಸೆಪ್ಟೆಂಬರ್‍ನಲ್ಲಿ ಗ್ರಾಹಕರ ಸೇವಾ ಕೇಂದ್ರ ಆರಂಭಿಸಲಾಗಿದ್ದು ಇಲ್ಲಿಯ ವರೆಗೆ 582 ದೂರುಗಳನ್ನು ದಾಖಲಿಸಿಕೊಂಡು 581 ದೂರುಗಳನ್ನು ಸರಿಪಡಿಸಲಾಗಿದೆ. ಒಟ್ಟು ನಳ ಸಂಪರ್ಕಗಳ ಸಂಖ್ಯೆ-4080, ಹಿಂದಿನ ಸಂಪರ್ಕಗಳ ಸಂಖ್ಯೆ 2750, ಹೊಸ ಅಳವಡಿಕೆ 1330 ಆಗಿದೆ. ನೀರಿನ ಸಂಪರ್ಕಗಳು ಹೆಚ್ಚಾಗುತ್ತಿರುವುದರಿಂದ ನೀರಿಗೆ ತೆರಿಗೆ ಪಾವತಿಯಲ್ಲಿ ಹೆಚ್ಚಳವಾಗಿದೆ ಎಂದರು.

ಕನಿಷ್ಠ 7 ಮೀಟರ್ ಎತ್ತರದ ತನಕ ಒತ್ತಡದೊಂದಿಗೆ ನಿರಂತರ ನೀರು ಪೂರೈಕೆಯಾಗುತ್ತಿದೆ. ನೀರು ಪೋಲಾಗುವುದು ಇದರಿಂದ ತಪ್ಪುತ್ತದೆ. ನೀರು ಸೋರುವಿಕೆ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಕುಂದಾಪುರದಲ್ಲಿ ಈ ಯೋಜನೆ ಯಶಸ್ವಿಯಾಗಿ ಅನುಷ್ಟಾನವಾಗಿರುವುದರಿಂದ ಇದೊಂದು ಮಾದರಿಯಾಗಿ ಬೇರೆ ಬೇರೆ ಪೌರಾಡಳಿತ ಸಂಸ್ಥೆಗಳಿಗೆ ಮಾದರಿಯಾಗಲಿದೆ ಎಂದರು.

Click Here

ಈಗಾಗಲೇ ಸಂಸ್ಥೆ 10 ಮೀಟರ್ ತನಕ ಉಚಿತವಾಗಿ ಪೈಪ್‍ಲೈನ್ ಮಾಡಿಕೊಡುತ್ತಿದ್ದು ಉಳಿಕೆ ದೂರವನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ನಿವಾಸಿಗಳು ಅಳವಡಿಕೆ ಮಾಡಿಕೊಂಡಲ್ಲಿ ಸದಾ ಶುದ್ಧ ಕುಡಿಯುವ ನೀರು ದೊರೆಯುತ್ತದೆ. ಮೀಟರ್ ಅಳವಡಿಕೆ ಮಾಡಿರುವುದರಿಂದ ಬಳಸಿದ ನೀರಿಗೆ ಮಾತ್ರ ಶುಲ್ಕ ಪಾವತಿಸಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸದಸ್ಯ ಮೋಹನದಾಸ ಶೆಣೈ ಸರ್ಕಾರದ ಯೋಜನೆಗಳನ್ನು ಕುಂದಾಪುರ ಪುರಸಭಾ ಹಿಂದಿನಿಂದಲೂ ಪ್ರಥಮತಃವಾಗಿ ಅನುಷ್ಠಾನಿಸುತ್ತಾ ಬಂದಿದೆ. ಈ ಯೋಜನೆಯಲ್ಲಿಯೂ ಕೂಡಾ ಅಷ್ಟೇ ಪುರಸಭೆ ವ್ಯಾಪ್ತಿಯ ನಾಗರಿಕರ ಜವವ್ದಾರಿಯೂ ಮುಖ್ಯವಾಗಿದ್ದು ಹೆಚ್ಚಿನ ಸಂಪರ್ಕಗಳು ಆಗಬೇಕು. ಆಗ ಆದಾಯ ಹೆಚ್ಚಳವಾಗಿ ಮರುಪಾವತಿಗೆ ಸುಲಭವಾಗುತ್ತದೆ. ಹಾಗೆಯೇ ಉತ್ತಮ ನಿರ್ವಹಣೆಯನ್ನು ಸಂಸ್ಥೆ ನೀಡಬೇಕು. ದೂರುಗಳನ್ನು ತಕ್ಷಣ ಸರಿಪಡಿಸುವ ಕೆಲಸ ಗುತ್ತಿಗೆ ಸಂಸ್ಥೆ ಮಾಡಬೇಕು ಎಂದರು.

ಕೋಡಿ ವಾರ್ಡ್ ಆಶ್ಫಕ್ ಮಾತನಾಡಿ, ಪೈಪ್‍ಲೈನ್ ಮಾಡಿದ ಪ್ರದೇಶದಲ್ಲಿ ಮರಳು ತುಂಬಿಸುವ ಕೆಲಸ ಬಾಕಿ ಇದೆ. ಅದಷ್ಟು ಬೇಗ ಸರಿಪಡಿಸಿಕೊಡಬೇಕು ಎಂದರು. ಕಮಲ ಮಂಜುನಾಥ ಮಾತನಾಡಿ ಪೈಪ್ ಅಳವಡಿಕೆ ಸಂದರ್ಭ ಕೋಡಿ ರಾಮಮಂದಿರ ಹತ್ತಿರ ರಸ್ತೆ ಹಾಳಾಗಿದ್ದು ಸರಿಪಡಿಸಿಕೊಡಬೇಕು ಎಂದರು. ಸಂತೋಷ್ ಕುಮಾರ್ ಶೆಟ್ಟಿ ಅರೆಬರೆ ಕಾಮಗಾರಿಯಾಗಬಾರದು. ಪೂರ್ಣಗೊಳ್ಳಬೇಕು, ತಕ್ಷಣ ಸ್ಪಂದಿಸುವ ಮನಸ್ಥಿತಿ ಹೊಂದಬೇಕು ಎಂದರು. ಪ್ರಭಾಕರ, ಶ್ರೀಧರ ಶೇರೆಗಾರ್, ಪ್ರಭಾವತಿ ಶೆಟ್ಟಿ, ಶೇಖರ ಪೂಜಾರಿ, ಶ್ವೇತಾ, ವನಿತಾ ಬಿಲ್ಲವ, ರಾಘವೇಂದ್ರ ಖಾರ್ವಿ, ದೇವಕಿ ಸಣ್ಣಯ್ಯ, ರತ್ನಾಕರ ಕುಂದಾಪುರ ಮೊದಲಾದ ಸದಸ್ಯ ತಮ್ಮ ವಾರ್ಡಿನಲ್ಲಿನ ಲೋಪದೋಷಗಳ ಗಮನ ಸಳೆದರು.

ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ ದೇವಾಡಿಗ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here