ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ 2 ವರ್ಷಗಳಿಂದ ವಸತಿ ಯೋಜನೆಯಡಿ ಗ್ರಾಮ ಪಂಚಾಯತ್ಗಳಿಗೆ ಈ ತನಕ ಒಂದು ಮನೆಗಳನ್ನು ಸಹ ಮಂಜೂರು ಮಾಡಿಲ್ಲ. ಆದ್ದರಿಂದ ವಸತಿ ಯೋಜನೆಯಡಿ ಕೂಡಲೇ ಪ್ರತಿ ಗ್ರಾಮ ಪಂಚಾಯತಗೆ 100 ಮನೆ ಮಂಜೂರು ಮಾಡಬೇಕೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಸರಕಾರವನ್ನು ಆಗ್ರಹಿಸಿದ್ದಾರೆ.

ವಸತಿ ಯೋಜನೆಯಡಿ 4 ತಿಂಗಳ ಹಿಂದೆ ಪ್ರತಿ ಗ್ರಾಮ ಪಂಚಾಯತ್ಗಳಿಗೆ ಮಂಜೂರು ಮಾಡಿದ 20 ಮನೆಗಳ ಆದೇಶ ಸರಕಾರ ಹಿಂತೆಗೆದುಕೊಂಡಿದೆ.ಗ್ರಾಮ ಪಂಚಾಯತ ಫಲಾನುಭವಿಗಳ ಆಯ್ಕೆ ಮಾಡಿ ವಸತಿ ನಿಗಮಕ್ಕೆ ಕಳುಹಿಸಿದ ನಂತರ ಫಲಾನುಭವಿಗಳು ಮನೆ ಪ್ರಾರಂಭಿಸಿ ಪಂಚಾಂಗ ಗೋಡೆ ಹಂತ ತಲುಪಿದೆ. ನಂತರ ಸಕಾರಣವಿಲ್ಲದೆ ಸರಕಾರ ಮನೆ ಮಂಜೂರಾತಿ ಆದೇಶ ರದ್ದು ಮಾಡಿರುವುದರಿಂದ ಬಡ ಫಲಾನುಭವಿಗಳು ಆತಂಕದಲ್ಲಿದ್ದಾರೆ. ಮನೆಗಳು ಪ್ರಗತಿ ಹಂತದಲ್ಲೇ ನಿಂತಿವೆ. ಈ ಕುರಿತು ಬಿಜೆಪಿ ಶಾಸಕರು, ಸಂಸದರು, ಸಚಿವರು ಮೌನಕ್ಕೆ ಶರಣಾಗಿದ್ದಾರೆ. ಇದರಿಂದ ಸಮಾಜದ ಕಟ್ಟ ಕಡೆಯ ಬಡವರ ಬಗ್ಗೆ ಬಿಜೆಪಿಯ ಕಾಳಜಿ ಎಷ್ಟು ಎಂದು ತೋರಿಸುತ್ತದೆ. ವಸತಿ ಯೋಜನೆಗಳಿಗೆ ಕಡಿಮೆ ದರದಲ್ಲಿ ಮರಳು ಪೊರೈಸುತ್ತೇವೆ ಎಂದ ಸರಕಾರ ಮರಳು ಪೊರೈಸಿಲ್ಲ. ಕಟ್ಟಡ ಸಾಮಗ್ರಿಗಳ ದರ ಗಗನಕ್ಕೇರಿದೆ. ಆದ್ದರಿಂದ ಮನೆಗಳ ಘಟಕ ವೆಚ್ಚ ಹೆಚ್ಚಿಸಬೇಕು.
ಕಳೆದ 2 ವರ್ಷಗಳಿಂದ ವಸತಿ ಯೋಜನೆಯಡಿ ಮನೆ ನೀಡದ ಮತ್ತು ಮಂಜೂರಾಗಿ ವಾಪಸ್ ಪಡೆದ ಮನೆ ಸೇರಿ ಪ್ರತಿ ಗ್ರಾಮ ಪಂಚಾಯತಗೆ ವಸತಿ ಯೋಜನೆಯಡಿ 100 ಮನೆ ಮಂಜೂರಾತಿ ಮಾಡಬೇಕೆಂದು ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಆಗ್ರಹಿಸಿದ್ದಾರೆ.











