Category: ಸುದ್ದಿ

  • ಕೊಲ್ಲೂರು :ಶಿಕ್ಷಣದ ಹೊರತಾಗಿ ವ್ಯವಹರಿಸುವ ಶಿಕ್ಷಕರನ್ನು ಸರಿದಾರಿಗೆ ತರಲು ಬದ್ಧ – ಶಿಕ್ಷಣ ಸಚಿವ ಮಧು ಬಂಗಾರಪ್ಪ

    ಕೊಲ್ಲೂರು :ಶಿಕ್ಷಣದ ಹೊರತಾಗಿ ವ್ಯವಹರಿಸುವ ಶಿಕ್ಷಕರನ್ನು ಸರಿದಾರಿಗೆ ತರಲು ಬದ್ಧ – ಶಿಕ್ಷಣ ಸಚಿವ ಮಧು ಬಂಗಾರಪ್ಪ

    ಕುಂದಾಪುರ ಮಿರರ್ ‌ಸುದ್ದಿ…
    ಕುಂದಾಪುರ: ಮಕ್ಕಳೆಂದರೆ ದೇವರು. 76 ಸಾವಿರ ಶಾಲೆಗಳಲ್ಲಿ ಓದುವ 1 ಕೋಟಿ 20 ಲಕ್ಷ ವಿದ್ಯಾರ್ಥಿಗಳ ಸೇವೆ ಮಾಡುವ ಭಾಗ್ಯ ನನಗೆ ಸಿಕ್ಕಿದೆ. ಶಿಕ್ಷಣ ಇಲಾಖೆಯ ಹಣ ಮಕ್ಕಳ ಶಿಕ್ಷಣಕ್ಕೆ ಮೀಸಲಾಗಿರುತ್ತದೆ. ಶಿಕ್ಷಕರು ಮಕ್ಕಳ ಶಿಕ್ಷಣ ದೈಹಿಕ ಶಿಕ್ಷಣದ ಹೊರತಾಗಿ ಬೇರೆ ವ್ಯವಹಾರಗಳ ಕಡೆಗೆ ತಲೆ ಹಾಕಿದರೆ ಅದನ್ನು ನಿಯಂತ್ರಿಸುವುದು ಹೇಗೆಂದು ನನಗೆ ಗೊತ್ತಿದೆ ಮತ್ತು ಅಂತಹಾ ಶಿಕ್ಷಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವೆ ಎಂದು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
    ಕೊಲ್ಲೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ನಮ್ಮ ಸರ್ಕಾರ ಮಕ್ಕಳ ಪೌಷ್ಟಿಕತೆಗೆ ಆದ್ಯತೆ ನೀಡಿದ್ದು, ಪ್ರತಿ ದಿನ ಎರಡು ಮೊಟ್ಟೆ ನೀಡಲಾಗುತ್ತಿದೆ. ಪ್ರತೀ ವರ್ಷ 500 ಶಾಲೆಯಂತೆ 3000 ಕೆಪಿಎಸ್ ಶಾಲೆಗಳನ್ನು ತೆರುವು ಯೋಜನೆ ಇದೆ ಎಂದರು. ಸರ್ಕಾರಿ ಶಾಲೆಯ ಮಕ್ಕಳಿ ನೀಟ್ ಕೋಚಿಂಗ್ ಉಚಿತವಾಗಿ ನೀಡುವ ಯೋಜನೆಯ ಬಗ್ಗೆ ಚಿಂತಿಸಲಾಗುತ್ತಿದೆ.

    ಪ್ರಣಾಳಿಕೆ ಉಪಾಧ್ಯಕ್ಷನಾಗಿದ್ದ ಖುಷಿ ಇದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ರಾಜಕೀಯ ಮಾಡುತ್ತಿದೆ. ಅಯೋಧ್ಯಾ ರಾಮ ನಮ್ಮದು ಎಂದು ಬಿಂಬಿಸಿ ಚುನಾವಣೆ ಎದುರಿಸುತ್ತಿದ್ದಾರೆ. ಆದರೆ ನಾವು ಹೇಳುತ್ತೇವೆ ದೇಶದ ಉಳಿದೆಲ್ಲಾ ರಾಮ ನಮ್ಮದು. ಈ ಬಾರಿ ಕಾರವಾರ, ಉಡುಪಿ ಚಿಕ್ಕ ಮಗಳೂರು, ದಕ್ಷಿಣ ಕನ್ನಡ ಚುನಾವಣೆ ಉಸ್ತುವಾರಿ ನಾನು ವಹಿಸಿದ್ದು, ಮೂರು ಕ್ಷೇತ್ರಗ:ಳಲ್ಲಿ ಯಾರೇ ಅಭ್ಯರ್ಥಿಗಳಾದರೂ ಒಮ್ಮತದಿಂದ ಚುನಾವಣೆ ಎದುರಿಸಿ ಗೆಲವು ಸಾಧಿಸುತ್ತೇವೆ ಎಂದರು. ನಾರಾಯಣ ಗುರುಗಳ ಅಕಾಡೆಮಿ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದ ಅವರು, ಹಿಂದುಳಿದ ವರ್ಗಗಳ ಆಯೋಗದ ವರದಿ ಜ್ಯಾರಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದವರು ಇದೇ ಸಂದರ್ಭ ಹೇಳಿದರು. ಸುದ್ಧಿ ಗೋಷ್ಟಿಯಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ಹಾಗೂ ಹಿರಿಯ ಮುಖಂಡರಾದ ರಾಜು ಪೂಜಾರಿ ಮತ್ತು ಬಾಬು ಹೆಗ್ಡೆ, ರಮೇಶ್ ಗಾಣಿಗ ಕೊಲ್ಲೂರು ಮೊದಲಾದವರು ಉಪಸ್ಥಿತರಿದ್ದರು

  • ಹೊಸಂಗಡಿ :ಇಂಧನ ಸಚಿವರಿಂದ ವಾರಾಹಿ ಪ್ರಾಜೆಕ್ಟ್ ವೀಕ್ಷಣೆ : ಅಧಿಕಾರಿಗಳ ಸಭೆ

    ಹೊಸಂಗಡಿ :ಇಂಧನ ಸಚಿವರಿಂದ ವಾರಾಹಿ ಪ್ರಾಜೆಕ್ಟ್ ವೀಕ್ಷಣೆ : ಅಧಿಕಾರಿಗಳ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕರ್ನಾಟಕ ಸರ್ಕಾರದ ಇಂಧನ ಸಚಿವ ಕೆ.ಜೆ. ಜಾರ್ಜ್ ಭಾನುವಾರ ಹೊಸಂಗಡಿ ಗ್ರಾಮದ ವಾರಾಹಿ ಪವರ್ ಹೌಸ್ಗೆ ಭೇಟಿ ನೀಡಿ, ವಾರಾಹಿ ಪ್ರಾಜೆಕ್ಟ್ ವೀಕ್ಷಣೆ ನಡೆಸಿದ ಬಳಿಕ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭ ನೀರಿನ ಮರುಬಳಕೆಯಿಂದ ವಿದ್ಯುತ್ ಉತ್ಪಾದಿಸುವ ಪಂಪ್ಡ್ ಸ್ಟೋರೇಜ್ ಪ್ಲಾಂಟ್ನ ಸ್ಥಳ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಮಾಣಿ ಡ್ಯಾಂನಲ್ಲಿರುವ ನೀರಿನ ಶೇಖರಣೆ, ಕೆಪಿಸಿಯಲ್ಲಿ ವಿದ್ಯುತ್ ಉತ್ಪಾದನೆ, ವಿದ್ಯುತ್ ಉತ್ಪಾದನೆಯ ಅನಂತರ ಹೊರಗೆ ಹರಿಯುವ ನೀರಿನ ಪ್ರಮಾಣ, ಹೊಸಂದಾಗಿ ನಿರ್ಮಿಸಲಿರುವ ವಾರಾಹಿ ಪಂಪ್ಡ್ ಸ್ಟೋರೇಜ್ ಪ್ಲಾಂಟ್ನ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದರು.

    ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ಕರ್ನಾಟಕ ಇಂಧನ ಸಚಿವಾಲಯವು ತೆಹ್ರಿ ಹೈಡ್ರೊ ಡೆವಲಪ್ಮೆಂಟ್ ಕಾರ್ಪೋರೇಶನ್ನೊಂದಿಗೆ ವಿವಿಧ ವಿದ್ಯುತ್ ಯೋಜನೆಗಳ ಒಪ್ಪಂದ ನಡೆದಿದೆ. ಈ ಒಪ್ಪಂದದಲ್ಲಿ ವಾರಾಹಿ ಪಂಪ್ಡ್ ಸ್ಟೋರೇಜ್ ಪ್ಲಾಂಟ್ ಕೂಡ ಒಂದಾಗಿದೆ. ಈ ಯೋಜನೆಯು ವಾರಾಹಿ ನದಿಯಲ್ಲಿ ಹೊಸದಾಗಿ ಡ್ಯಾಂ ನಿರ್ಮಾಣ ಮಾಡಿ, ನೀರನ್ನು ಲಿಫ್ಟ್ ಮಾಡಿ, ಪುನಃ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳುವ ಯೋಜನೆಯಾಗಿದೆ. ಈ ಯೋಜನೆಯಿಂದ ವಾರಾಹಿ ಮೂಲ ಯೋಜನೆಗೆ ಮತ್ತು ನದಿಯಲ್ಲಿ ನೀರು ಹರಿಯಲ್ಲು ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದರು.

    ವಾರಾಹಿ ಕೆಪಿಸಿ ಮುಖ್ಯ ಅಭಿಯಂತರ(ವಿದ್ಯುತ್) ಉದಯ ನಾಯಕ್, ಮುಖ್ಯ ಅಭಿಯಂತರ(ಕಾಮಗಾರಿ) ಮೋಹನ್, ಅಧೀಕ್ಷಕ ಅಭಿಯಂತರ(ವಿದ್ಯುತ್) ಮಹೇಶ್ ಬಿ.ಸಿ., ಅಧೀಕ್ಷಕ ಅಭಿಯಂತರ (ಕಾಮಗಾರಿ) ಪ್ರಕಾಶ್, ಕಾರ್ಯನಿರ್ವಾಹಕ ಅಭಿಯಂತರರಾದ ಹರೀಶ್ ಕೆ., ರವಿಪ್ರಕಾಶ್. ಕೆಪಿಟಿಸಿಎಲ್ ಎಂಡಿ ಪಂಕಜ್ ಪಾಂಡೆ, ಎಸ್ಇಇ ರವಿಕಾಂತ್ ಕಾಮತ್, ಎಇಇ ಪ್ರಶಾಂತ್, ಮೆಸ್ಕಾಂ ಕುಂದಾಪುರ ಇಇ ಗುರುಪ್ರಸಾದ್ ಭಟ್, ಶಂಕರನಾರಾಯಣ ಎಇಇ ಪ್ರವೀಣ್ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.
    ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮತ್ತು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಪ್ರದೀಪಕುಮಾರ ಶೆಟ್ಟಿ ಗುಡಿಬೆಟ್ಟು, ಮೆಸ್ಕಾಂ ಮಾಜಿ ನಿರ್ದೇಶಕ ಸಂಪಿಗೇಡಿ ಸಂಜೀವ ಶೆಟ್ಟಿ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮಹಮ್ಮದ್ ಹನೀಫ್, ಜಿ.ಪಿ. ಮಹಮ್ಮದ್, ಸ್ಥಳೀಯ ಮುಖಂಡರಾದ ತೊಂಬಟ್ಟು ಶ್ರೀನಿವಾಸ ಪೂಜಾರಿ, ಹರ್ಷ ಶೆಟ್ಟಿ ತೊಂಬಟ್ಟು, ಸಂತೋಷ್ ಶೆಟ್ಟಿ ಹೊಸಂಗಡಿ, ಮಂಜುನಾಥ ಕುಲಾಲ ಜನ್ಸಾಲೆ, ಸತೀಶಕುಮಾರ ಶೆಟ್ಟಿ ಕಡ್ರಿ ಮೊದಲಾದವರು ಉಪಸ್ಥಿತರಿದ್ದರು.

  • ಕೋಟ: ಗ್ರಾಮ ಸರ್ಕಾರದ “ಹೊಳಪು2024” ಸ್ವಾಗತ ಗೋಪುರ ಟೀ ಶರ್ಟ್ ಬಿಡುಗಡೆ

    ಕೋಟ: ಗ್ರಾಮ ಸರ್ಕಾರದ “ಹೊಳಪು2024” ಸ್ವಾಗತ ಗೋಪುರ ಟೀ ಶರ್ಟ್ ಬಿಡುಗಡೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಫೆಬ್ರವರಿ 10ರಂದು ಕೋಟದಲ್ಲಿ ನಡೆಯಲಿರುವ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಪಂಚಾಯತ್‌ರಾಜ್ ನಗರ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಉತ್ಸವ ‘ಹೊಳಪು- 2024’ ಗ್ರಾಮ ಸರಕಾರದ ದಿಬ್ಬಣದ ಅಂಗವಾಗಿ ಶನಿವಾರ ಡಾ. ಶಿವರಾಮ ಕಾರಂತ ಮಹಾದ್ವಾರವನ್ನು ಹಾಗೂ ಟೀ ಶರ್ಟ್ ಬಿಡುಗಡೆ ಕಾರ್ಯಕ್ರಮ ಕೋಟ ವಿವೇಕ ಹೈಸ್ಕೂಲಿನಲ್ಲಿ ನಡೆಯಿತು.

    ಸ್ವಾಗತಗೋಪುರವನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಿ,ಟೀ ಶರ್ಟ್ಬಿಡುಗಡೆಗೊಳಿಸಿದರು. ಬಳಿಕ ಹೊಳಪು ಕಾರ್ಯಕ್ರಮ ರೂಪುರೇಷೆಗಳ ಕುರಿತು ಚರ್ಚೆ ನಡೆಯಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಒಟ್ಟು 377 ಗ್ರಾಮ ಪಂಚಾಯತ್‌ಗಳು ಹಾಗೂ 17 ನಗರ ಸ್ಥಳೀಯಾಡಳಿತ ಸಂಸ್ಥೆಗಳ 6,000ಕ್ಕೂ ಅಧಿಕ ಜನಪ್ರತಿನಿಧಿಗಳು ಹಾಗೂ ಸಾವಿರಾರು ಅಧಿಕಾರಿ ಸಿಬ್ಬಂದಿಗಳು ಹೊಳಪು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಗ್ರಾಪಂ ಅಧ್ಯಕ್ಷರು,
    ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ನಾವುಡ, ಪಂಚಾಯತ್ ಸದಸ್ಯ ಗೌತಮ್ ಅಲ್ತಾರು, ಗೋಪಾಡಿ ಪಂಚಾಯತ ಅಧ್ಯಕ್ಷ ಸುರೇಶ ಶೆಟ್ಟಿ, ವಾಸುಪೂಜಾರಿ, ವಿಠ್ಠಲ ಪೂಜಾರಿ
    ಕಾರಂತ ಪ್ರತಿಷ್ಠಾನ ದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹರೀಶ್ ಶೆಟ್ಟಿ ಸ್ವಾಗತಿಸಿ, ನರೇಂದ್ರ ಕುಮಾರ್ ಕೋಟ ವಂದಿಸಿದರು.

  • ಸರ್ಕಾರೀ ಭೂಮಿ ಲಭ್ಯತೆ ಪರಿಶೀಲಿಸಿ ಕೊರಗ ಸಮುದಾಯಕ್ಕೆ ಭೂಮಿ ಹಂಚಿಕೆ – ಉಡುಪಿ ಡಿ.ಸಿ

    ಸರ್ಕಾರೀ ಭೂಮಿ ಲಭ್ಯತೆ ಪರಿಶೀಲಿಸಿ ಕೊರಗ ಸಮುದಾಯಕ್ಕೆ ಭೂಮಿ ಹಂಚಿಕೆ – ಉಡುಪಿ ಡಿ.ಸಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕಳೆದ ಮೂವತ್ತು ವರ್ಷಗಳ ಹಿಂದೆ ಸರ್ಕಾರಕ್ಕೆ ನೀಡಲಾದ ಮಹಮ್ಮದ್ ಪೀರ್ ವರದಿಯಂತೆ ಕೊರಗ ಸಮುದಾಯಗಳಿಗೆ ನೀಡಲು ಬೇಕಾದಷ್ಟು ಸರ್ಕಾರೀ ಭೂಮಿ ಲಭ್ಯವಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರ್ ಹೇಳಿದ್ದಾರೆ. ಅವರು ನಾಡಾ – ಪಡುಕೋಣೆಯಲ್ಲಿ ನಡೆದ ಬುಟ್ಟಿ ತಯಾರಿಕೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

    ಸರ್ಕಾರೀ ಭೂಮಿಗಳ ಲಭ್ಯತೆ ಬಗ್ಗೆ ಕಂದಾಯ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿಯನ್ನು ಆಧರಿಸಿ ಭೂಮಿ ಹಂಚಿಕೆ ಮಾಡಲಾಗುತ್ತದೆ. ಇನ್ನು ಕೆಲವರು ಅಕ್ರಮ ಸಕ್ರಮದಡಿಯಲ್ಲಿಯೂ ಅರ್ಜಿ ಸಲ್ಲಿಸಿದ್ದು, ಪರಿಶೀಲನೆ ನಡೆಸಿ ಕಾರ್ಯಗತಗೊಳಿಸಲಾಗುತ್ತದೆ ಎಂದರು. ಮಾರಸ್ವಾಮಿ – ನಾಡಾ ರಸ್ತೆ ಸಂಪರ್ಕಕ್ಕೆ ಸೇತುವೆ ನಿರ್ಮಿಸಲಾಗಿದ್ದರೂ ಸೇತುವೆಗೆ ಸರಿಯಾದ ಸಂಪರ್ಕ ರಸ್ತೆ ನಿರ್ಮಾಣ ಮಾಡಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸೇನಾಪುರ ಗ್ರಾಮವನ್ನು ಹೊಸಾಡು ಪಂಚಾಯಿತಿಗೆ ಸೇರಿಸಿದ್ದರೂ ತೀವ್ರ ವಿರೋಧ ವ್ಯಕ್ತವಾಗಿದ್ದು, ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆದಿಲ್ಲ. ಎಂದು ಕೆಲಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಪರಿಶೀಲನೆ ನಡೆಯುತ್ತಿದೆ ಎಂದರು. ಕಾರ್ಕಳದ ಪರಶುರಾಮ ಥೀಂ ಪಾರ್ಕಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಜಿಲ್ಲಾಧಿಕಾರಿ ಉತ್ತರಿಸಲು ನಿರಾಕರಿಸಿದರು.

  • ರಾಜ್ಯ ಸರ್ಕಾರದ ಕಾಮಗಾರಿಗಳಿಗೆ ಮಂಜೂರಾದ ಅನುದಾನ ಬಿಡುಗಡೆ ಮಾಡಲಿ – ಶಾಸಕ ಗಂಟಿಹೊಳೆ ಆಗ್ರಹ

    ರಾಜ್ಯ ಸರ್ಕಾರದ ಕಾಮಗಾರಿಗಳಿಗೆ ಮಂಜೂರಾದ ಅನುದಾನ ಬಿಡುಗಡೆ ಮಾಡಲಿ – ಶಾಸಕ ಗಂಟಿಹೊಳೆ ಆಗ್ರಹ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ರಾಜ್ಯ ಸರ್ಕಾರ ಈ ಹಿಂದೆ ಕಾಮಗಾರಿಗಳಿಗೆ ಮಂಜೂರಾದ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ ತಕ್ಷಣ ರಾಜ್ಯ ಸರ್ಕಾರದ ಎಚ್ಚೆತ್ತುಕೊಂಡು ಅನುದಾನ ಬಿಡುಗಡೆ ಮಾಡಬೆಕು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹಿಸಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕೆಲವೆಡೆ ಚುನಾವಣೆ ಬಹಿಷ್ಕಾರದ ಬ್ಯಾನರ್ ಬಿದ್ದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಹಿಷ್ಕಾರದ ಬ್ಯಾನರ್ ಹಾಕಿರುವ ಪ್ರದೇಶಗಳಲ್ಲಿ ಬಾಖಿಯಾಗಿರುವ ಕಾಮಗಾರಿಗಳು ಈಗಾಗಲೇ ಮಂಜೂರಾಗಿರುವ ರಸ್ತೆಗಳು. ಹೊಸ ಸರ್ಕಾರದ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಸಮಸ್ಯೆಯಾಗಿದೆ ಎಂದರು

    ಇದೇ ಸಂದರ್ಭ ಮಾತನಾಡಿದ ಅವರು, ಬೈಂದೂರು ತಾಲೂಕಿನಲ್ಲಿ ಶೇ 60 ಸಿಬ್ಬಂದಿಗಳ ಕೊರತೆಯಿದೆ. ಇದರಿಂದಾಗಿ 94 ಸಿ ಹಕ್ಕು ಪತ್ರ ಸೇರಿದಂತೆ ಜನ ಸಾಮಾನ್ಯರಿಗೆ ಮೂಲಭೂತ ಸಮಸ್ಯೆಗಳ ಸಮಸ್ಯೆಗೆ ಸರ್ಕಾರದ ಸ್ಪಂದಿಸುತ್ತಿಲ್ಲ ಎಂದು ಹರಿ ಹಾಯ್ದಿದ್ದಾರೆ. ಪಂಚಗಂಗಾ ರೈಲಿಗೆ ಹೆಚ್ಚುವರಿ ಬೋಗಿಗಳಿಂದ ಸಮಯ ವಿಳಂಬವಾಗುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆಂಗಲೂರು ಮಂಗಲುರು ರೈಲು ರಸ್ತೆಯಲ್ಲಿ 22 ಬೋಗಿಗಳಿಗೆ ಸಂಚರಿಸಲು ಅವಕಾಶ ಇದ್ದು, ಅದನ್ನು ಅನುಷ್ಠಾನಗೊಳಿಸಲು ಒತ್ತಾಯಿಸಲಾಗಿದೆ. ಯಾವುದೇ ಸಮಯ ವಿಳಂಬವಾಗದಂತೆ ಬೋಗಿಗಳನ್ನು ಹೆಚ್ಚಿಸಲು ವಿನಂತಿಸಲಾಗಿದೆ. ಅಲ್ಲದೇ ಹೆಚ್ಚುವರಿ ರೈಲು ಸಂಚಾರಕ್ಕೆ ಮತ್ತು ವಾರದಲ್ಲಿ ಎರಡು ಅಥವಾ ಮೂರು ದಿನ ಹೆಚ್ಚುವರಿ ರೈಲು ಸಂಚರಿಸುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.

    ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಉಸ್ತುವಾರಿ ನೀಡಿದ್ದು ಈ ಜವಾಬ್ಧಾರಿಯನ್ನು ಸಂತೋಷದಿಂದ ನಿಭಾಯಿಸುತ್ತೇನೆ. ಈ ಹಿಮದೆ ತೆಲಂಗಾಣ ಚುನಾವಣೆಯಲ್ಲಿಯೂ ಎರಡು ಕ್ಷೇತ್ರಗಳ ಉಸ್ತುವಾರಿ ವಹಿಸಿದ ಅನುಭವವಿದೆ ಎಂದಿರುವ ಅವರು, ಪಕ್ಷ ನೀಡಿದ ಜವಾಬ್ಧಾರಿಯನ್ನು ನಿಷ್ಟೆಯಿಂದ ಮಾಡಿಕೊಂಡು ಬಂದಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದರು.

  • ಕುಂದಾಪುರ: ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಪ್ರತಿಭೆ ಗಾರ್ಗಿದೇವಿಗೆ ಪುರಮೆರವಣಿಗೆ

    ಕುಂದಾಪುರ: ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಪ್ರತಿಭೆ ಗಾರ್ಗಿದೇವಿಗೆ ಪುರಮೆರವಣಿಗೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ದಿಲ್ಲಿಯಲ್ಲಿ ಜನವರಿ 26ರಂದು ನಡೆದ 75ನೇ ಗಣರಾಜ್ಯೋತ್ಸವದ ಪಥಸ೦ಚಲನದಲ್ಲಿ ಭಾಗವಹಿಸಿದ ಕುಂದಾಪುರದ ಪ್ರತಿಭೆ, ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ವಿದ್ಯಾರ್ಥಿನಿ, ಹೆಚ್.ಎಂ.ಎಂ. ಮತ್ತು ವಿ.ಕೆ.ಆರ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಗಾರ್ಗಿದೇವಿಗೆ ಶಾಲಾಡಳಿತ ವತಿಯಿಂದ ಅದ್ಧೂರಿ ಪುರಮೆರವಣಿಗೆ ನಡೆಯಿತು.

    ಶುಕ್ರವಾರ ಬೆಳಿಗ್ಗೆ ಕುಂದಾಪುರದ ಶಾಸ್ತ್ರೀ ವೃತ್ತದಿಂದ ತೆರೆದ ವಾಹನದಲ್ಲಿ ಆರಂಭಗೊಂಡ ಮೆರವಣಿಗೆ ಪಾರಿಜಾತಾ ವೃತ್ತ, ಹಳೆ ಬಸ್ ನಿಲ್ದಾಣದ ಮೂಲಕ ಸಾಗಿ ಹೊಸ ಬಸ್ ನಿಲ್ದಾಣದಲ್ಲಿ ತಿರುಗಿ ಮತ್ತೆ ಶಾಸ್ತ್ರೀ ವೃತ್ತದಲ್ಲಿ ಸಮಾಪ್ತಿಗೊಂಡಿತು. ಈ ಸಂದರ್ಭ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪೋಷಕರು, ಶಾಲಾ ಆಡಳಿತ ಮಂಡಳಿ, ಶಿಕ್ಷಕ ಶಿಕ್ಷಕೇತರ ವರ್ಗ ಸಾರ್ವಜನಿಕರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
    ಸಂದರ್ಭ ಪ್ರತಿಕ್ರಿಯಿಸಿರುವ ಗಾರ್ಗೀದೇವಿ ,ನಿರೀಕ್ಷೆ ಮಾಡದೇ ದೊರೆತ ಅವಕಾಶ. ಇದು ದೊರೆಯಲು ನಮ್ಮ ಶಾಲೆ ಹಾಗೂ ಮನೆಯವರ ಪ್ರೋತ್ಸಾಹ ಕಾರಣ. ಕಲಾ ಪ್ರಕಾರಕ್ಕೆ ಸಂದ ಗೌರವ. ಬದುಕಿನ ಅವಿಸ್ಮರಣೀಯ ಘಟನೆ ಎಂದಿದ್ದಾರೆ. ಪ್ರದಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ನಡೆದ ಪರೀಕ್ಷಾ ಪೇ ಚರ್ಚಾ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ನೀಡಿರುವ ಗಾರ್ಗೀದೇವಿ 2023-24ನೇ ಸಾಲಿನ ರಾಷ್ಟ್ರಮಟ್ಟದ ಕಲೋತ್ಸವ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.

  • ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಂದ ಲೋಕಾರ್ಪಣೆ ಪಿಎಂ ನರೇಂದ್ರ ಮೋದಿ ಕುರಿತ ಚಿತ್ರಣವುಳ್ಳ ಪುಸ್ತಕ ಅಂಧರಿಗಾಗಿ ಪ್ರಾಮೀಸ್ಡ್ ನೇಷನ್ ಪುಸ್ತಕ ಬಿಡುಗಡೆ

    ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಂದ ಲೋಕಾರ್ಪಣೆ ಪಿಎಂ ನರೇಂದ್ರ ಮೋದಿ ಕುರಿತ ಚಿತ್ರಣವುಳ್ಳ ಪುಸ್ತಕ ಅಂಧರಿಗಾಗಿ ಪ್ರಾಮೀಸ್ಡ್ ನೇಷನ್ ಪುಸ್ತಕ ಬಿಡುಗಡೆ

    ಕುಂದಾಪುರ ಮಿರರ್ ಸುದ್ದಿ…

    ನವದೆಹಲಿ: ದೇಶದ ಏಳು ಕೋಟಿ ಅಂಧರು, ದೃಷ್ಟಿದೋಷ ಇರುವವರು ಪ್ರಧಾನಿ ನರೇಂದ್ರ ಮೋದಿಯವರ ಜೀವನ, ಕಾರ್ಯ ಮತ್ತು ನಾಯಕತ್ವದ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಹುಬ್ಬಳ್ಳಿ ಮೂಲದ ಟೀಮ್ ಸೆನ್ಸ್ ಎಸೆನ್ಸ್ ಸಂಸ್ಥೆಯು ಬ್ರೈಲ್ ಲಿಪಿಯಲ್ಲಿ ಸಿದ್ಧಪಡಿಸಿದ ‘ಎ ಪ್ರಾಮೀಸ್ಡ್ ನೇಷನ್ ಹಾನರೇಬಲ್ ಶ್ರೀ ನರೇಂದ್ರ ಮೋದಿ- ದ ಮೇಕರ್ ಆ್ ನ್ಯೂ ಇಂಡಿಯಾ’ ಎಂಬ ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಲೋಕಾರ್ಪಣೆಗೊಳಿಸಿದರು. ವಿಆರ್‌ಎಲ್ ಸಮೂಹ ಸಂಸ್ಥೆಯ ಸಹಯೋಗ ಮತ್ತು ಪ್ರಾಯೋಜಕತ್ವದಲ್ಲಿ ಈ ಪುಸ್ತಕ ಹೊರತರಲಾಗಿದೆ.

    ದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಆನಂದ ಸಂಕೇಶ್ವರ ಮತ್ತು ಟೀಮ್ ಸೆನ್ಸ್ ಎಸೆನ್ಸ್ ಸಂಸ್ಥೆಯ ಸಂಸ್ಥಾಪಕಿಯರಾದ ರುಷಾಲಿ ದೋಶಿ ಮತ್ತು ಯಶ್ವಿ ಭಂಡಾರಿ ಉಪಸ್ಥಿತಿಯಲ್ಲಿ ಕೇಂದ್ರ ಸಚಿವ ಅಮಿತ್ ಷಾ ಪುಸ್ತಕ ಬಿಡುಗಡೆಗೊಳಿಸಿದರು.

    ‘ದೇಶದ ಎರಡೂವರೆ ಲಕ್ಷ ಅಂಧ ಮಕ್ಕಳು ಹಾಗೂ ಕಣ್ಣಿನ ಸಮಸ್ಯೆ ಎದುರಿಸುತ್ತಿರುವ 7 ಕೋಟಿ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಈ ಪುಸ್ತಕದಿಂದ ಸಾಕಷ್ಟು ಮಾಹಿತಿ ಪಡೆದುಕೊಳ್ಳಬಹುದು. ಇದು ನಿಜಕ್ಕೂ ಸಾಹಸಮಯ ಕೆಲಸ. ವಿಆರ್‌ಎಲ್ ಸಂಸ್ಥೆ ಮತ್ತು ಟೀಮ್ ಸೆನ್ಸ್ ಎಸೆನ್ಸ್ ಸಂಸ್ಥೆಗೆ ಅಭಿನಂದನೆಗಳು’ ಎಂದು ಅಮಿತ್ ಷಾ ಮೆಚ್ಚುಗೆ ವ್ಯಕ್ತಪಡಿಸಿದರು.

    ‘ಪ್ರಧಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷಗಳಲ್ಲಿ ದೇಶದ ನಾಗರಿಕ ಮೌಲ್ಯ ಮತ್ತು ಸಾಂಸ್ಕೃತಿಕ ತತ್ವಗಳನ್ನು ಪುನರುಜ್ಜೀವನಗೊಳಿಸಿ, ಹೊಸ ಭಾರತದ ಸೌಧವನ್ನು ನಿರ್ಮಾಣ ಮಾಡಿದ್ದಾರೆ. ಈ ಹಾದಿಯಲ್ಲಿ ಮೋದಿಯವರು ಭಾರತದ ಅಂತರಂಗದ ಜಗತ್ತನ್ನು ಮತ್ತಷ್ಟು ಜಾಗೃತಗೊಳಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟ ಅಮಿತ್ ಷಾ, ಈ ಪುಸ್ತಕ ಬ್ರೈಲ್ ಲಿಪಿಯಲ್ಲಿದೆ. ಮೋದಿಯವರ ಜೀವನ, ಕಾರ್ಯ, ಮಾಡಿದ ಸಾಧನೆಗಳ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.

    ಅಂಧರಿಗಾಗಿ ಶ್ರಮಿಸಬೇಕೆಂಬ ಉದ್ದೇಶ
    ಯಶ್ವಿ ಭಂಡಾರಿ ಮತ್ತು ರುಷಾಲಿ ದೋಶಿ 2019ರಲ್ಲಿ ಸೆನ್ಸ್ ಎಸೆನ್ಸ್ ಸಂಸ್ಥೆ ಹುಟ್ಟು ಹಾಕಿದರು. ಕರೊನಾ ಮಹಾಮಾರಿ ಕಾಲದಲ್ಲಿ ದೃಷ್ಟಿ ದೋಷವುಳ್ಳವರ ಸಲುವಾಗಿ ಕೆಲಸ ಮಾಡಲು ಶುರು ಮಾಡಿದ್ದರು. ಈಗಾಗಲೇ, ‘ಲವ್ ಯುವರ್ ಐಸ್’ ಎಂಬ ಯೋಜನೆ ಮೂಲಕ ರೈಲ್ವೆ ನಿಲ್ದಾಣಗಳಲ್ಲಿ ದೃಷ್ಟಿ ದೋಷವಿದ್ದವರ ನೆರವಿಗೆ ಧಾವಿಸಿದ್ದಾರೆ. ಸ್ಪರ್ಶಜ್ಞಾನದಿಂದ ತಿಳಿಯಬಹುದಾದ ಮ್ಯಾಪ್, ಬ್ರೈಲ್ ಸೈನ್ ಬೋರ್ಡ್‌ಗಳನ್ನೊಳಗೊಂಡಿರುವ ಪುಸ್ತಕ ಇದಾಗಿದ್ದು, ಧಾರವಾಡ ಮತ್ತು ಬೆಳಗಾವಿ ರೈಲ್ವೆ ನಿಲ್ದಾಣಗಳಲ್ಲಿ ಕಾಣಬಹುದಾಗಿದೆ. ಇದನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು 2022ರ ಅಕ್ಟೋಬರ್ 11ರಂದು ಬಿಡುಗಡೆಗೊಳಿಸಿದ್ದರು. ಅದೇ ರೀತಿ, ಮ್ಯಾಜಿಕಲ್ ಡಾಟ್ಸ್ ಎಂಬ ನಿಯತಕಾಲಿಕವನ್ನು ಕೂಡ ಸೆನ್ಸ್ ಎಸೆನ್ಸ್ ಸಂಸ್ಥೆ ಹೊರತಂದಿದೆ. ಇದನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು 2021ರ ಆಗಸ್ಟ್ 30ರಂದು ಬಿಡುಗಡೆ ಮಾಡಿದ್ದರು. ಬ್ರೈಲ್ ಲಿಪಿಯಲ್ಲಿರುವ ಕರ್ನಾಟಕದ ಮೊಟ್ಟಮೊದಲ ಮ್ಯಾಗಜೀನ್ ಇದಾಗಿದ್ದು, ಅಂಧ ವಿದ್ಯಾರ್ಥಿಗಳಿರುವ ಅನೇಕ ಶಾಲೆಗಳಿಗೂ ಪೂರೈಸಲಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಚಿತ್ರಣ
    ಪ್ರಧಾನಿ ನರೇಂದ್ರ ಮೋದಿ ತಮ್ಮ ನಾಯಕತ್ವದಲ್ಲಿ ದೇಶವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿರುವುದರಿಂದ, ದೇಶದ ಅನೇಕರಿಗೆ ಅವರು ಪ್ರೇರಣಾದಾಯಿಯಾಗಿದ್ದಾರೆ. ಹೀಗಾಗಿ, ಈ ಸಾಧಕ ಪ್ರಧಾನಿ ಬಗ್ಗೆ ಅಂಧ ಮಕ್ಕಳೂ ತಿಳಿದುಕೊಳ್ಳು ವಂತಾಗಬೇಕು ಎಂಬ ಉದ್ದೇಶದಿಂದ ಈ ಪುಸ್ತಕ ಸಿದ್ಧಪಡಿಸಲು ಮುಂದಾದೆವು. ಪುಸ್ತಕ ರೂಪಿಸಲು ಕಳೆದ ಹಲವು ತಿಂಗಳುಗಳಿಂದ ಸಾಕಷ್ಟು ಶ್ರಮಿಸಿದ್ದೇವೆ. ನಮ್ಮನ್ನು ಪ್ರೋತ್ಸಾಹಿಸಿದ ವಿಆರ್‌ಎಲ್ ಸಂಸ್ಥೆಯ ಎಂಡಿ ಡಾ. ಆನಂದ ಸಂಕೇಶ್ವರ ಅವರಿಗೂ ನಾವು ಆಭಾರಿಯಾಗಿದ್ದೇವೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ರಾಜೀವ್ ಚಂದ್ರಶೇಖರ್, ಅರ್ಜುನ್ ರಾಮ್ ಮೇಘ್ವಾಲ್, ಸ್ಮೃತಿ ಇರಾನಿ, ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಆರ್‌ಎಸ್‌ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ, ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಸೇರಿ ಹಲವರು ನಮ್ಮ ಕೆಲಸಕ್ಕೆ ಬೆಂಬಲ ನೀಡಿದ್ದಾರೆ ಎಂದು ರುಷಾಲಿ ದೋಶಿ ಮತ್ತು ಯಶ್ವಿ ಭಂಡಾರಿ ಹೇಳಿದ್ದಾರೆ.

    ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿ. ವತಿಯಿಂದ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅಡಿಯಲ್ಲಿ ನಾವು ಆರೋಗ್ಯ, ಶಿಕ್ಷಣ, ಕ್ರೀಡಾ ಕ್ಷೇತ್ರಗಳಲ್ಲಿ ಹಲವು ಜನರ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆಗೆ ಪ್ರಯತ್ನಿಸಿದ್ದೇವೆ. ಈ ಕೆಲಸಗಳ ಧನಾತ್ಮಕ ಪರಿಣಾಮಗಳ ಬಗ್ಗೆ ನಮಗೆ ಹೆಮ್ಮೆಯಿದೆ. ಸಮಾಜದ ಪ್ರತಿಯೊಬ್ಬರ ಏಳಿಗೆಗೆ ನಮ್ಮ ಶ್ರಮ, ಪ್ರಯತ್ನಗಳನ್ನು ಮುಂದುವರಿಸುತ್ತಲೇ ಇರುತ್ತೇವೆ. ಪ್ರಧಾನಿ ಅವರ ಜೀವನ ಸಾಧನೆ ಮತ್ತು ಅವರ ಕೈಂಕರ್ಯಗಳು ಅಂಧರಿಗೂ ಪ್ರೇರಣೆ ಆಗಲಿ ಎನ್ನುವ ಸದುದ್ದೇಶದಿಂದ ಈ ಪುಸ್ತಕ ಪ್ರಕಟಿಸಲು ನೆರವಾಗಿದ್ದೇವೆ. ಪುಸ್ತಕವು ದೇಶದ ಕೋಟ್ಯಂತರ ದೃಷ್ಟಿ ದೋಷವುಳ್ಳವರಿಗೆ ನೆರವಾಗಬಹುದು ಎಂಬುದು ನಮ್ಮ ಭಾವನೆ. – ಡಾ. ಆನಂದ ಸಂಕೇಶ್ವರ
    ವ್ಯವಸ್ಥಾಪಕ ನಿರ್ದೇಶಕರು, ವಿಆರ್‌ಎಲ್ ಸಮೂಹ ಸಂಸ್ಥೆ

     

  • ಕುಂದಾಪುರ :ಬಿ. ಬಿ. ಹೆಗ್ಡೆ ಕಾಲೇಜಿನ ರೋವರ್ಸ್ ಸ್ವಯಂ ಸೇವಕ ವಿನಯ್‌ಗೆ ರಾಜ್ಯಪಾಲರಿಂದ ರಾಜ್ಯ ಪುರಸ್ಕಾರ

    ಕುಂದಾಪುರ :ಬಿ. ಬಿ. ಹೆಗ್ಡೆ ಕಾಲೇಜಿನ ರೋವರ್ಸ್ ಸ್ವಯಂ ಸೇವಕ ವಿನಯ್‌ಗೆ ರಾಜ್ಯಪಾಲರಿಂದ ರಾಜ್ಯ ಪುರಸ್ಕಾರ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಬೆಂಗಳೂರಿನ ರಾಜಭವನದಲ್ಲಿ ಇತ್ತೀಚೆಗೆ ನಡೆದ ಸ್ಕೌಟ್ ಹಾಗೂ ಗೈಡ್ಸ್ ರಾಜ್ಯ ಪುರಸ್ಕಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಸ್ವಯಂ ಸೇವಕ ವಿನಯ್ ಇವರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಶಸ್ತಿ ಪತ್ರ ಪ್ರದಾನ ಮಾಡಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಎಮ್. ಸುಕುಮಾರ್ ಶೆಟ್ಟಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಕೋರಿದ್ದಾರೆ.

  • ಕಾಸನಗುಂದು – ಅಂಗನವಾಡಿ ಕಾರ್ಯಕರ್ತೆಗೆ ಬಿಳ್ಕೋಡುಗೆ

    ಕಾಸನಗುಂದು – ಅಂಗನವಾಡಿ ಕಾರ್ಯಕರ್ತೆಗೆ ಬಿಳ್ಕೋಡುಗೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: 28 ವರ್ಷಗಳ ಕಾಲ ಕಾಸನಗುಂದು ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವೃತ್ತಿ ಜೀವನದಿಂದ ನಿವೃತ್ತಿ ಹೊಂದಿದ ಜೂಲಿಯನ ರೊಡ್ರಿಗಸ್ ಅವರಿಗೆ ಅಂಗನವಾಡಿ ವಲಯ ಮಟ್ಟದ ಬೀಳ್ಕೊಡುಗೆ ಸಮಾರಂಭವನ್ನು ಕೋಟ ಕಲ್ಮಾಡಿ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.

    ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಮೀನಾಕ್ಷಿ ಮಾತನಾಡಿ ಯಾವುದೇ ರೀತಿಯ ಕರ್ತವ್ಯ ಲೋಪವಿಲ್ಲದೆ ಸುಧೀರ್ಘ ಸೇವೆ ಸಲ್ಲಿಸಿದ ಇವರ ಕರ್ತವ್ಯ ನಿಷ್ಠೆ ಎಲ್ಲರಿಗೂ ಮಾರ್ಗದರ್ಶನವಾಗಿದೆ ಎಂದರು. ಕೋಟ ವಲಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಉಪಸ್ಥಿತರಿದ್ದರು. ಕೋಟ ಕಲ್ಮಾಡಿ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

  • ಕೋಟ ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ 32ನೇ ಮಾಲಿಕೆ ಕೋಡಿ ಸದಾಶಿವ ಐತಾಳರಿಗೆ ಪಂಚವರ್ಣ ರೈತ ಪ್ರಶಸ್ತಿ ಪ್ರದಾನ

    ಕೋಟ ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ 32ನೇ ಮಾಲಿಕೆ ಕೋಡಿ ಸದಾಶಿವ ಐತಾಳರಿಗೆ ಪಂಚವರ್ಣ ರೈತ ಪ್ರಶಸ್ತಿ ಪ್ರದಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಪಂಚವರ್ಣ ಯುವಕ ಮಂಡಲ ಕೋಟ, ಪಂಚವರ್ಣ ಮಹಿಳಾ ಮಂಡಲ ಕೋಟ ಆಶ್ರಯದಲ್ಲಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ಗೀತಾನಂದ ಫೌಂಡೇಶನ್ ಮಣೂರು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದ 32ನೇ ಸಂಚಿಕೆಯಲ್ಲಿ ಸಾಧಕ ರೈತರಿಗೆ ಪಂಚವರ್ಣ ರೈತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೋಡಿ ಕನ್ಯಾಣದಲ್ಲಿ ಇತ್ತಿಚಿಗೆ ಜರಗಿತು.

    ಈ ಸಂದರ್ಭ ಕೋಡಿ ಕನ್ಯಾಣದ ಸಿಗಡಿ ಸೇರಿದಂತೆ ವಿವಿಧ ಬಗೆಯ ಕೃಷಿ ಕಾಯಕ ನಡೆಸುವ ಸದಾಶಿವ ಐತಾಳ ಇವರಿಗೆ ಸಾಧಕ ರೈತ ಪುರಸ್ಕಾರ ನೀಡಿ ಅವರ ಪತ್ನಿ ಸುಗುಣಾ ಐತಾಳರ ಜತೆ ಗೌರವಿಸಲಾಯಿತು.

    ಉಡುಪಿ ಎಪಿಎಂಸಿ ಮಾಜಿ ಉಪಾಧ್ಯಕ್ಷ ಕೋಡಿ ಕೃಷ್ಣ ಪೂಜಾರಿ ಮಾತನಾಡಿ, ಸದಾಶಿವ ಐತಾಳರು ಅಪರೂಪದ ಸಿಗಡಿ ಕೃಷಿ ಕೈಗೊಳ್ಳುವ ಮೂಲಕ ಈ ಭಾಗದಲ್ಲಿ ಯಶಸ್ವಿಯಾದವರು. ಕೃಷಿ ಜ್ಞಾನ ಅಪಾರ ವಾಗಿದ್ದು ಓರ್ವ ಕೃಷಿ ವಿಜ್ಞಾನಿಗೆ ಇರಬೇಕಾದ ಪಾಂಡಿತ್ಯ ಇವರಲ್ಲಿದೆ ಎಂದರು.

    ಸದಾಶಿವ ಐತಾಳರು ಮಾತನಾಡಿ, ರೈತನಿಗೆ ತಾಳ್ಮೆ ಆವಿಷ್ಕಾರಿ ಮನೋಭಾವ, ಸವಾಲುಗಳನ್ನು ಸ್ವೀಕರಿಸುವ ಗುಣ ಅಗತ್ಯ. ಇವೆಲ್ಲವೂ ಇದ್ದರೆ ಹೊಸತನ ಅಳವಡಿಸಿ ಯಶಸ್ವಿಯಾಗಬಹುದು ಎಂದರು.

    ಕೋಟ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

    ಕೋಡಿ ಗ್ರಾ.ಪಂ. ಅಧ್ಯಕ್ಷೆ ಗೀತಾ ಖಾರ್ವಿ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಕಾರ್ಯದರ್ಶಿ ಜಿ. ತಿಮ್ಮ ಪೂಜಾರಿ, ಕರ್ಣಾಟಕ ಬ್ಯಾಂಕ್ ನಿವೃತ್ತ ಉದ್ಯೋಗಿ ಕೋಡಿ ಚಂದ್ರಶೇಖರ ನಾವಡ, ಕೋಡಿ ಗ್ರಾ.ಪಂ. ಸದಸ್ಯ ಪ್ರಭಾಕರ ಮೆಂಡನ್, ಅಂಥೋನಿ ಡಿ’ಸೋಜಾ, ಹಂದಾಡಿ ಗ್ರಾ.ಪಂ. ಕಾರ್ಯದರ್ಶಿ ಪೂರ್ಣಿಮಾ ಅಧಿಕಾರಿ, ರೈತಧ್ವನಿ ಅಧ್ಯಕ್ಷ ಜಯರಾಮ್ ಶೆಟ್ಟಿ ಕಾರ್ಕಡ ಗೆಳೆಯರ ಬಳಗದ ಜಗದೀಶ್ ಆಚಾರ್ಯ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ ಉಪಸ್ಥಿತರಿದ್ದರು.

    ಮಹಿಳಾ ಮಂಡಲದ ಸ್ಥಾಪಕಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ, ಕಾರ್ಯಾಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವಿಸಿ, ಸದಸ್ಯ ಕಾರ್ತಿಕ ಎನ್.ಗಾಣಿಗ ಸಮ್ಮಾನಿತರನ್ನು ಪರಿಚಯಿಸಿ,ಮಹಿಳಾ ಮಂಡಲದ ಸಂಚಾಲಕಿ ಸುಜಾತಾ ಎಂ ಬಾಯರಿ ನಿರೂಪಿಸಿದರು.ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು.