Category: ಸುದ್ದಿ

  • ಕೋಟ :ಎಸ್‍.ಎಚ್‍.ಆರ್‍.ಎಫ್. ಭೂಮಿಯ ಮೇಲಿನ ಸ್ವರ್ಗ: ನಟಿ ವಿನಯ ಪ್ರಸಾದ್

    ಕೋಟ :ಎಸ್‍.ಎಚ್‍.ಆರ್‍.ಎಫ್. ಭೂಮಿಯ ಮೇಲಿನ ಸ್ವರ್ಗ: ನಟಿ ವಿನಯ ಪ್ರಸಾದ್

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಭೂಮಿಯ ಮೇಲಿನ ಸ್ವರ್ಗ ಎಸ್‍.ಎಚ್‍.ಆರ್‍.ಎಫ್. ಎಸ್‍ಎಚ್‍ಆರ್‍ಎಫ್ ಕೇವಲ ಆಸ್ಪತ್ರೆಯಲ್ಲ. ಇದೊಂದು ಸುಂದರ ಆಧ್ಯಾತ್ಮ ಮತ್ತು ಅತ್ಯುತ್ತಮ ಆರೋಗ್ಯವನ್ನು ಪ್ರತಿಯೊಬ್ಬರಿಗೂ ಕರುಣಿಸಿ ಕೊಡುವ ಅದ್ಭುತ ಕೇಂದ್ರ. ಇಲ್ಲಿನ ಅತಿಥಿ ಸತ್ಕಾರ ಸಹಿತ ಆರೋಗ್ಯಕ್ಕೆ ಒತ್ತು ನೀಡಿ ಹಲವು ರೀತಿಯಲ್ಲಿ ನುರಿತ ವೈದ್ಯರು ನೀಡುವ ಮಾಹಿತಿ ಹಾಗೂ ಚಿಕಿತ್ಸೆ ಮತ್ತು ಯೋಗದ ಮಹತ್ವ ಸಾರುವ ಚಟುವಟಿಕೆಗಳು ಸೇರಿದಂತೆ ಆಧ್ಯಾತ್ಮದ ಪಾಸಿಟಿವ್ ಸ್ಪರ್ಶ ನೀಡುವ ಈ ಯೋಗಬನ ನಮ್ಮ ಜಗತ್ತಿಗೊಂದು ದೊಡ್ಡ ಕೊಡುಗೆ ಎಂದು ದಕ್ಷಿಣ ಭಾರತದ ಜನಪ್ರಿಯ ಚಿತ್ರನಟಿ ವಿನಯ ಪ್ರಸಾದ್ ಹೇಳಿದರು.

    ಸಾಲಿಗ್ರಾಮ ಡಿವೈನ್ ಪಾರ್ಕ್‍ನ ಅಂಗ ಸಂಸ್ಥೆಯಾದ ಕೋಟ ಮೂಡುಗಿಳಿಯಾರಿನ ಯೋಗಬನದಲ್ಲಿರುವ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಟಾನ ಕೇಂದ್ರಕ್ಕೆ ಭೇಟಿ ನೀಡಿ ಜಗತ್ತಿನ ಅತೀ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ನಮಿಸಿ ಸಂಸ್ಥೆಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

    ಈ ಸಂದರ್ಭ ಸಂಸ್ಥೆಯ ವೈದ್ಯಕೀಯ ಆಡಳಿತ ನಿರ್ದೇಶಕ ಡಾ.ವಿವೇಕ್ ಉಡುಪ ವಿನಯ ಪ್ರಸಾದ್ ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಮಾನಸ ವಿವೇಕ್ ಉಡುಪ, ಪ್ರತಿಷ್ಠಾನದ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಕುಂದಾಪುರ :ಗೀತಾಜಯಂತಿ – ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ

    ಕುಂದಾಪುರ :ಗೀತಾಜಯಂತಿ – ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ :ಮದ್ಭಗವದ್ಗೀತಾ ಆಚರಣಾ ಸಮಿತಿಯವರು ಗೀತಾ ಜಯಂತಿಯ ಪ್ರಯುಕ್ತ ಆಯೋಜಿಸಿದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ, ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ಶ್ರುತಿಕಾ ಶೆಟ್ಟಿ ಪ್ರಥಮ ಸ್ಥಾನ, ಕಂಠಪಾಠ(ಶ್ಲೋಕ) ಸ್ಪರ್ಧೆಯಲ್ಲಿ ಪ್ರಥಮ ಪಿ.ಯು‌.ಸಿ ವಿಜ್ಞಾನ ವಿಭಾಗದ ಮಯೂರ್ ಅವಭ್ರತ್ ಪ್ರಥಮ ಸ್ಥಾನ, ಕಂಠಪಾಠ (ಶ್ಲೋಕ) ಸ್ಪರ್ಧೆಯಲ್ಲಿ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ರಕ್ಷಿತಾ ಭಟ್ ದ್ವಿತೀಯ ಸ್ಥಾನ, ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ಸ್ಪಂದನಾ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

    ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

  • ಆನೆಗುಡ್ಡೆ: ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ ಉದ್ಘಾಟನೆ

    ಆನೆಗುಡ್ಡೆ: ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕಲಿಯುಗದ ಈ ಕಾಲದಲ್ಲಿ ಭಜನೆ ನಾಮಸಂಕೀರ್ತನೆಯ ಮೂಲಕ ಅತಿ ಶೀಘ್ರವಾಗಿ ದೇವರ ಅನುಗ್ರಹವನ್ನು ಪಡೆಯಬಹುದು. ಭಜನೆಯಲ್ಲಿ ಯಾವುದೇ ವಿಭಜನೆ ಇಲ್ಲ. ಭಜನೆ ಒಗ್ಗಟ್ಟಿನ ಸಂಕೇತವೆಂದು ಸುರತ್ಕಲ್ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ನುಡಿದರು.

    ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಕುಂಭಾಸಿ ಇವರ ನೇತೃತ್ವದಲ್ಲಿ ಕುಂದಾಪುರ ಭಜನಾ ಮಂಡಳಿಗಳ ಸಹಯೋಗದಲ್ಲಿ ದೇವಳದ ವಠಾರದಲ್ಲಿ ಭಾನುವಾರ ಜರುಗಿದ ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ ಮತ್ತು ಭಕ್ತಿಗಾನ ನೃತ್ಯ ಜೋಡಿ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಶುಭಾಶೀರ್ವಚನ ನೀಡಿದರು.

    ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವಿಶ್ರಾಂತ ಆಡಳಿತ ಮೊಕ್ತೇಸರ ಕೆ.ಸೂರ್ಯನಾರಾಯಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಯುಗದಲ್ಲಿ ಮಾನವನ ಮನಸ್ಸನ್ನು ಸನ್ಮಾರ್ಗಕ್ಕೆ ಕೊಂಡೊಯ್ಯುವಂತೆ ಮಾಡಿದವರು ಪುರಂದಾರ ದಾಸರು. ಹುಟ್ಟು ಸಾವಿನ ನಡುವೆ ಭಗವಂತನ ಅನುಗ್ರಹ ಪಡೆಯುವ ಕೆಲಸವನ್ನು ಮಾಡಬೇಕು. ನಮ್ಮ ಅಂತ್ಯ ಕಾಲದಲ್ಲಿ ನಮ್ಮನ್ನು ಕಾಪಾಡುವುದೇ ನಾವು ಮಾಡಿದ ಪುಣ್ಯದ ಕೆಲಸಗಳು. ಮನುಷ್ಯನ ಜನ್ಮವನ್ನು ಸಾರ್ಥಕ ಪಡೆದುಕೊಳ್ಳುವುದಕ್ಕೆ ಭಜನೆಯೊಂದೇ ಸುಲಭ ಸಾಧನ ಮಾರ್ಗ ಎಂದರು.

    ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಕೆ.ಶ್ರೀರಮಣ ಉಪಾಧ್ಯಾಯ ಇವರು ಭವ್ಯ ಪುರಮೆರವಣಿಗೆಗೆ ಚಾಲನೆ ನೀಡಿ, ವೇದ ಉಪನಿಷತ್ತ್‍ಗಳ ಸಾರವೇ ಈ ಭಜನೆ. ಇತಂಹ ಭಜನೆಯಿಂದ ನಮ್ಮ ಜೀವನವು ಪಾವನವಾಗಲಿದೆ. ಸಮಾಜವನ್ನು ಮುನ್ನಡೆಸಲು ಬೇಕಾಗಿರುವುದೇ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮ. ಭಗವಂತನನ್ನು ನೆನೆಯುವುದೇ ಭಜನೆ. ದಿವ್ಯ ಚೇತನವನ್ನು ನೀಡುವಲ್ಲಿ ಭಜನೆ ಸಹಕರಿಯಾಗುತ್ತದೆ ಎಂದರು.
    ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ಸಮಿತಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂಭಾಸಿ ಗ್ರಾಪಂ ಅಧ್ಯಕ್ಷ ಆನಂದ ಪೂಜಾರಿ ಹೆಗ್ಗೂರಬೆಟ್ಟು, ಧಾರ್ಮಿಕ ಮುಖಂಡರಾದ ಕೊರ್ಗಿ ವಿಠಲ್ ಶೆಟ್ಟಿ, ಬಸವರಾಜ್ ಶೆಟ್ಟಿಗಾರ್, ಶ್ರೀರಾಮ ಕೋಟೇಶ್ವರ ಕಲಾ ಸಂಘದ ಅಧ್ಯಕ್ಷ ಬಿ.ಜಿ ಸೀತಾರಾಮ ಧನ್ಯ ಗೋಪಾಡಿ, ಕುಂದಾಪುರ ಖಾರ್ವಿಕೇರಿ ಮಹಾಕಾಳಿ ದೇವಸ್ಥಾನದ ಜಯಾನಂದ ಖಾರ್ವಿ ಕುಂದಾಪುರ, ದೇವಸ್ಥಾನದ ಮ್ಯಾನೇಜರ್ ನಟೇಶ ಕಾರಂತ ಉಪಸ್ಥಿತರಿದ್ದರು.

    ಈ ಸಂದರ್ಭ ಸಮಿತಿ ವತಿಯಿಂದ ಶ್ರೀಪಾದರನ್ನು ಗೌರವಿಸಲಾಯಿತು. ಆನೆಗುಡ್ಡೆ ಸ್ವಾಗತ ಗೋಪುರದಿಂದ ದೇವಳದ ತನಕ ವಿವಿಧ ಭಜನಾ ಮಂಡಳಿಗಳ ನೇತೃತ್ವದಲ್ಲಿ ಭವ್ಯ ಪುರಮೆರವಣಿಗೆ ನಡೆಯಿತು.

    ಸಂಚಾಲಕ ರಾಘವೇಂದ್ರ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಅಕ್ಷಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಬಾಬಣ್ಣ ಪೂಜಾರಿ ವಂದಿಸಿದರು.

  • ವಕ್ವಾಡಿಯ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ 18ನೇ ವಾರ್ಷಿಕೋತ್ಸವ

    ವಕ್ವಾಡಿಯ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ 18ನೇ ವಾರ್ಷಿಕೋತ್ಸವ

    ಕುಂದಾಪುರ ಮಿರರ್ ಸುದ್ದಿ…


    ಕುಂದಾಪುರ: ಜ್ಞಾನದ ಜೊತೆ ಜೊತೆಯಲ್ಲಿ ಜೀವನ ಮೌಲ್ಯ, ದೇಶದ ಸಂಸ್ಕೃತಿ, ಪರಂಪರೆ, ಸನ್ನಡತೆ, ಮಾನವೀಯತೆಯನ್ನು ಬೆಳೆಸುವ ಶಿಕ್ಷಣ ಇಂದಿನ ಅಗತ್ಯ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ್ ಹೇಳಿದರು.

    ಅವರು ಶನಿವಾರ ವಕ್ವಾಡಿಯ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ 18ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

    ಯುವ ಸಮುದಾಯವನ್ನು ಯಂತ್ರ ಅಂತ ಭಾವಿಸಿಕೊಂಡು ನಮ್ಮ ಕನಸು, ಆಸೆಗಳನ್ನು ಈಡೇರಿಸಲು ಮಾನಸಿಕ ಒತ್ತಡದಲ್ಲಿ ಮುಳುಗಿಸುತ್ತಿದ್ದೇವೆ. ಆದರೆ ಅವರು ತಂದೆ- ತಾಯಂದಿರ ಆಸೆ, ಕನಸುಗಳನ್ನು ಈಡೇರಿಸುವಂತಹ ಯಂತ್ರಗಳಲ್ಲ. ಇತಹ ಒತ್ತಡದಿಂದಲೇ ಎಳೆಯ ಪ್ರಾಯದಲ್ಲೇ ಖಿನ್ನತೆಗೊಳಗಾಗುತ್ತಿದ್ದಾರೆ. ಈ ಬಗ್ಗೆ ಹಿರಿಯರು ಆತ್ಮಾವಲೋಕನ ಮಾಡಬೇಕು. ಮೊಬಲ್ ಎನ್ನುವ ಯಂತ್ರ ನಮ್ಮೆಲ್ಲರನ್ನೂ ಯಂತ್ರವನ್ನಾಗಿಸುತ್ತಿದ್ದು, ನಾವು ಜಾಗರೂಕತೆ ವಹಿಸಿ, ಯುವ ಸಮೂಹಕ್ಕೆ ಮಾದರಿಯಾಗಬೇಕಿದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಸಂಸ್ಥಾಪಕ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ಬ್ರಿಟಿಷ್ ಸರಕಾರವು ನೂರು ವರ್ಷಗಳ ಹಿಂದೆ ಮೆಕಾಲೆ ನೇತೃತ್ವದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಅಸ್ಥಿರಗೊಳಿಸಿದ್ದು, ಅದನ್ನು ಸ್ವಾತಂತ್ರ್ಯ ಸಿಕ್ಕಿ ೭೫ ವರ್ಷ ಕಳೆದರೂ ಇನ್ನೂ ಸರಿಪಡಿಸಲು ಸಾಧ್ಯವಾಗಿಲ್ಲ. ಅದಕ್ಕೆ ಕಾರಣಗಳು ಹಲವಾರು ಇರಬಹುದು ಎಂದರು.

    ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಕಾರ್‍ಯನಿರ್ವಾಹಕರಾದ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್. ಶೆಟ್ಟಿ, ಟ್ರಸ್ಟಿಗಳು, ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು, ಪೋಷಕರು, ಸಿಬಂದಿ ಉಪಸ್ಥಿತರಿದ್ದರು.

    ಪ.ಪೂ. ಕಾಲೇಜಿನ ಪ್ರಾಂಶುಪಾಲ ಅವಿನಾಶ್, ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಮೋಹನ್ ಕೆ. ವರದಿ ವಾಚಿಸಿದರು. ಹರ್ಷಿತಾ ಶೇಟ್ ಸ್ವಾಗತಿಸಿ, ಧವಳ್ ಎಸ್. ಶೆಟ್ಟಿ ವಂದಿಸಿದರು. ಫ್ರೆನಿಟಾ ಡಿಕೋಸ್ಟಾ ಪರಿಚಯಿಸಿ, ಸುಷ್ಮಾ ಎಸ್. ವಿಜೇತರ ಪಟ್ಟಿ ವಾಚಿಸಿದರು. ಶ್ರೀಮಾನ್ ನಿರೂಪಿಸಿದರು

  • ಮರವಂತೆ :ಆರ್ಥಿಕ ಶ್ರೀಮಂತಿಕೆಗಿಂತ ಆರೋಗ್ಯ ಶ್ರೀಮಂತಿಕೆ ಮುಖ್ಯ – ಎಸ್ ಆರ್ ರಶ್ಮಿ

    ಮರವಂತೆ :ಆರ್ಥಿಕ ಶ್ರೀಮಂತಿಕೆಗಿಂತ ಆರೋಗ್ಯ ಶ್ರೀಮಂತಿಕೆ ಮುಖ್ಯ – ಎಸ್ ಆರ್ ರಶ್ಮಿ

    ನಾವುಂದದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ನೀವೆಷ್ಟೇ ಆರ್ಥಿಕ ಶ್ರೀಮಂತಿಕೆಯಿದ್ದರೂ ಆರೋಗ್ಯ ಶ್ರೀಮಂತಿಕೆಯಿಲ್ಲದಿದ್ದರೆ ನೆಮ್ಮದಿಯ ಜೀವನ ಸಾಗಿಸಲಾಗದು ಎಂದು ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್ ಆರ್ ಹೇಳಿದರು.

    ಅವರು ಭಾನುವಾರ ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಹಾಗೂ ಆದರ್ಶ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

    ರಕ್ತದಾನಕ್ಕಿಂತ ಶ್ರೇಷ್ಟ ದಾನ ಇನ್ನೊಂದಿಲ್ಲ. ಆರೋಗ್ಯವಂತ ದೇಹ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿ ಕನಿಷ್ಟ ವರ್ಷಕ್ಕೊಂದು ಬಾರಿಯಾದರೂ ರಕ್ತದಾನ ಮಾಡುವ ಶಪಥ ಮಾಡಬೇಕು. ಅದು ಮಾತ್ರ ರಕ್ತದ ಕೊರತೆಯಿಂದ ಬಳಲುತ್ತಿರುವ ಅದೆಷ್ಟೋ ರೋಗಿಗಳ ಬದುಕಿಗೆ ನಾವು ಕೊಡುವ ಅಮೂಲ್ಯ ದೇಣಿಗೆಯಾಗಬಹುದು ಎಂದವರು ಹೇಳಿದರು.

    ಉಡುಪಿಯ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಚಂದ್ರಶೇಖರ್ ಮಾತನಾಡಿ, ನಿಯಮಿತ ಆಹಾರ, ಆಗಿದ್ದಾಂಗೆ ಆರೋಗ್ಯ ತಪಾಸಣೆ ಹಾಗೂ ಉತ್ತಮ ಆರೋಗ್ಯ ವಿಮೆಯಿಂದ ಆರೋಗ್ಯ ರಕ್ಷಣೆ ಸಾಧ್ಯ ಎಂದರು.

    ಪ್ರತಿಯೊಬ್ಬರ ಆರೋಗ್ಯ ರಕ್ಷಣೆ, ಹಾಗೂ ಸಾಮಾಜಿಕ ಕಾಳಜಿಯಿಂದ ಈ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ತಮ್ನ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಜಾಗೃತರಾಗಬೇಕು. ರೋಗ ಬರುವ ಮೊದಲೇ ವೈದ್ಯಕೀಯ ತಪಾಸಣೆ ಮಾಡಿಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಾಗ ಆರೋಗ್ಯ ರಕ್ಷಣೆ ಸಾಧ್ಯ‌ ಎಂದು ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.

    ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರಿಂದ ಕೊಡಮಾಡುವ ಚೈತನ್ಯ ವಿಮಾ ಪರಿಹಾರ, ಅಪಘಾತದಲ್ಲಿ ಮರಣ ಹೊಂದಿದ ಕುಟುಂಬಕ್ಕೆ ಒಂದು ಲಕ್ಷ ವಿಮಾ ಪರಿಹಾರ ವಿತರಿಸಲಾಯಿತು.

    ಬೈಂದೂರು ತಹಸೀಲ್ದಾರ್ ಪ್ರದೀಪ್ ಆರ್, ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಸಿಇಒ ಪೂರ್ಣಿಮಾ, ರಾಜ್ಯ ಮೇಲ್ವಿಚಾರಕ ಹರಿನಾಥ್, ನಾವುಂದ ಸ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಶಂಕರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರ ಖಾರ್ವಿ, ಖ್ಯಾತ ನರರೋಗ ತಜ್ಞ ಪ್ರೊ.ಎ.ರಾಜ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಎಂ ಚಂದ್ರಶೀಲ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಅಳ್ವೆಗದ್ದೆ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಹಾಗೂ ಎಲ್ಲಾ ನಿರ್ದೇಶಕರು. ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಸಿದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.

  • ಕುಂದಾಪುರ :ಪೊಲೀಸರು – ಪತ್ರಕರ್ತರದು ಥ್ಯಾಂಕ್ಸ್ ಲೆಸ್ ಕಾರ್ಯ : ಎಎಸ್ಪಿ ಸಿದ್ಧಲಿಂಗಪ್ಪ

    ಕುಂದಾಪುರ :ಪೊಲೀಸರು – ಪತ್ರಕರ್ತರದು ಥ್ಯಾಂಕ್ಸ್ ಲೆಸ್ ಕಾರ್ಯ : ಎಎಸ್ಪಿ ಸಿದ್ಧಲಿಂಗಪ್ಪ

    ಕುಂದಾಪುರ :ಪ್ರಬಂಧ ಸ್ಪರ್ಧೆ : ಬಹುಮಾನ ವಿತರಣಾ ಸಮಾರಂಭ

    ಕುಂದಾಪುರ ಮಿರರ್ ಸುದ್ದಿ…


    ಕುಂದಾಪುರ,: ಪೊಲೀಸರು ಹಾಗೂ ಪತ್ರಕರ್ತರು ದಿನದ 24 ಗಂಟೆಯೂ ಚಲನಶೀಲರಾಗಿರುತ್ತಾರೆ. ಆದರೂ ಇಬ್ಬರದು ಒಂದು ರೀತಿಯ ಥ್ಯಾಂಕ್ಸ್ ಲೆಸ್ ಜಾಬ್. ಆದರೆ ಸಮುದಾಯದ ಹಿತದೃಷ್ಟಿಯಿಂದ ಇಬ್ಬರದು ಉತ್ತಮ ಕಾರ್ಯ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಈ ಇಬ್ಬರದೂ ದೊಡ್ಡ ಪರಿಶ್ರಮವಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ. ಸಿದ್ಧಲಿಂಗಪ್ಪ ಹೇಳಿದರು.

    ಅವರು ಶನಿವಾರ ಇಲ್ಲಿನ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ಕುಂದಾಪುರ ತಾಲೂಕು ಕಾರ್‍ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕುಂದಾಪುರ, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವದ ಅಂಗವಾಗಿ ಕನ್ನಡ ಶಾಲೆಗಳ ಉಳಿವಿಗಾಗಿ ಮತ್ತು ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ‘ನಾ ಕಂಡಂತೆ ಪೊಲೀಸ್’ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ, ಮಾತನಾಡಿದರು.

    ಸರಕಾರಿ ಶಾಲಾ ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ. ಕನ್ನಡ ಭಾಷೆ ಅದರಲ್ಲೂ ಕುಂದಾಪ್ರ ಕನ್ನಡ ವಿಶಿಷ್ಟ ಭಾಷೆ. ಬೇರೆ ಬೇರೆ ಕಡೆಗಳಲ್ಲಿ ಇಂತಹ ವಿಭಿನ್ನವಾದ ಭಾಷೆಗಳಿವೆ. ಗ್ರಾಮ್ಯ ಮಟ್ಟದಲ್ಲಿ ಕನ್ನಡ ಇಂದಿಗೂ ತನ್ನ ಛಾಪನ್ನು ಕಳೆದುಕೊಂಡಿಲ್ಲ. ಅದಕ್ಕೆ ಕುಂದಾಪ್ರ ಕನ್ನಡವೇ ಸಾಕ್ಷಿ. ಕನ್ನಡ ಮಾತನಾಡುವುದರಿಂದ ಭಾವನೆ ಅರಿಯಲು ಸಾಧ್ಯ. ಪೊಲೀಸ್ ಅಧಿಕಾರಿಗಳು ಸಹ ಬೇರೆ ಜಿಲ್ಲೆಗಳಿಂದ ಬಂದವರು ಸಹ ಕನ್ನಡ ಕಲಿತು ಜನರೊಂದಿಗೆ ವ್ಯವಹರಿಸುತ್ತಾರೆ ಎಂದವರು ಹೇಳಿದರು.

    ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಮಾತನಾಡಿ, ಕನ್ನಡವನ್ನು ನಾವು ಹೆಚ್ಚೆಚ್ಚು ಮಾತನಾಡುವುದರಿಂದ ಮಾತ್ರ ಉಳಿಸಲು ಸಾಧ್ಯ. ಸರಕಾರಿ ಶಾಲೆಗಳು ಹಾಗೂ ಮಾತೃಭಾಷೆ ಉಳಿಸುವ ನಿಟ್ಟಿನಲ್ಲಿ ಹಾಗೂ ಸಮಾಜದ ಸದಾ ಕಾಳಜಿ ವಹಿಸುವ ಪೊಲೀಸರ ಬಗೆಗಿನ ವಿಷಯವನ್ನು ಆಯ್ದುಕೊಂಡಿರುವ ಪತ್ರಕರ್ತರ ಸಂಘದ ಆಯ್ಕೆ ನಿಜಕ್ಕೂ ಶ್ಲಾಘನೀಯ ಎಂದರು.

    ಈ ಸ್ಪರ್ಧೆಯ ಮೂಲಕ ಪೊಲೀಸರ ಬಗ್ಗೆ ಮಕ್ಕಳಿಗೆ ತಿಳಿಯುವ ಅವಕಾಶ ಒದಗಿಸಿಕೊಟ್ಟಿದ್ದಾರೆ. ಮಕ್ಕಳಲ್ಲಿ ವಿಭಿನ್ನವಾಗಿ ಯೋಚಿಸುವ, ಕ್ರಿಯಾಶೀಲತೆಯನ್ನು ಒರೆಗೆ ಹಚ್ಚುವ ಪ್ರಯತ್ನ ಮಾಡಿದ ಕುಂದಾಪುರ ತಾಲೂಕು ಪತ್ರಕರ್ತರ ಸಂಘಕ್ಕೆ ಅಭಿನಂದನೆಗಳು ಎಂದು ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಹೇಳಿದರು.

    ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

    ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿನಯ ಪಾಯಸ್, ಪ್ರ. ಕಾರ್‍ಯದರ್ಶಿ ನಝೀರ್ ಪೊಲ್ಯ, ರಜತ ಮಹೋತ್ಸವ ಸಮಿತಿ ಸಂಚಾಲಕ ಮೊಹಮ್ಮದ್ ಷರೀಫ್ ಮಾತನಾಡಿದರು.

    ತೀರ್ಪುಗಾರರಾದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಕುಮಾರ್ ಶೆಟ್ಟಿ ಕೋವಾಡಿ, ಲೇಖಕಿ ಪೂರ್ಣಿಮಾ ಕಮಲಶಿಲೆ ಹಾಗೂ ಹೆಸ್ಕತ್ತೂರು ಸರಕಾರಿ ಹಿ.ಪ್ರಾ. ಶಾಲಾ ಶಿಕ್ಷಕ ಅಶೋಕ ತೆಕ್ಕಟ್ಟೆ ಅನುಭವ ಹಂಚಿಕೊಂಡರು. ಬಹುಮಾನ ವಿಜೇತರಾದ ಪ್ರಗತಿ ಆರ್. ಅಮಿನ್, ಪ್ರತೀಕ್ಷಾ, ಹರ್ಷಿಣಿ ಅನಿಸಿಕೆ ವ್ಯಕ್ತಪಡಿಸಿದರು.
    ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಲೋಕೇಶ್ ಆಚಾರ್ ತೆಕ್ಕಟ್ಟೆ ಉಪಸ್ಥಿತರಿದ್ದರು.
    ಸಂಘದ ಪ್ರಶಾಂತ್ ಪಾದೆ ಸ್ವಾಗತಿಸಿ, ಪ್ರಧಾನ ಕಾರ್‍ಯದರ್ಶಿ ಗಣೇಶ ಬೀಜಾಡಿ ವಂದಿಸಿದರು. ಶ್ರೀಕಾಂತ್ ಹೆಮ್ಮಾಡಿ ಬಹುಮಾನಿತರ ಪಟ್ಟಿ ವಾಚಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್‍ಯಕ್ರಮ ನಿರೂಪಿಸಿದರು.

    ಬಹುಮಾನ ವಿಜೇತರು

    ಹೆಸ್ಕತ್ತೂರು ಸರಕಾರಿ ಪ್ರೌಢಶಾಲೆಯ ಪ್ರಗತಿ ಆರ್. ಅಮಿನ್ ಪ್ರಥಮ, ಬಸ್ರೂರು ಸರಕಾರಿ ಪ್ರೌಢಶಾಲೆಯ ಪ್ರತೀಕ್ಷಾ ದ್ವಿತೀಯ ಹಾಗೂ ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಹರ್ಷಿಣಿ ತೃತೀಯ ಬಹುಮಾನ ಪಡೆದಿದ್ದಾರೆ. ಕಾಳಾವರ ಸರಕಾರಿ ಪ್ರೌಢಶಾಲೆಯ ರಾಧಿಕಾ, ದೀಕ್ಷಾ, ಸಾಹಿತ್ಯ, ಆರ್ಡಿ- ಅಲ್ಬಾಡಿ ಸರಕಾರಿ ಪ್ರೌಢಶಾಲೆಯ ಶ್ರಾವ್ಯ, ಶಂಕರನಾರಾಯಣ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಅನನ್ಯ, ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಸ್ಪಂದನಾ ಉಳ್ಳೂರು, ಶ್ರೀಶಾಂತ್, ವಕ್ವಾಡಿ ಸರಕಾರಿ ಪ್ರೌಢಶಾಲೆಯ ಸೃಷ್ಟಿ, ಬಸ್ರೂರು ಸರಕಾರಿ ಪ್ರೌಢಶಾಲೆಯ ನವ್ಯಾ, ಕೋಟೇಶ್ವರ ಕೆಪಿಎಸ್‌ನ ಶ್ರೀಲಕ್ಷ್ಮಿ, ಕೆದೂರು ಸರಕಾರಿ ಪ್ರೌಢಶಾಲೆಯ ಅನುಶ್ರೀ, ಗಂಗೊಳ್ಳಿ ಸ್ಟೆಲ್ಲಾ ಮೇರಿಸ್ ಪ್ರೌಢಶಾಲೆಯ ಶ್ರಾವ್ಯ, ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಅರ್ಚನಾ ಸಮಾಧಾನಕರ ಬಹುಮಾನ ಗಳಿಸಿದ್ದಾರೆ.

  • ಕುಂದಾಪುರ :ಸರ್ಕಾರಿ ಪ್ರೌಢಶಾಲೆ ಕಾಳಾವರದಲ್ಲಿ ಕರಾಟೆ ತರಬೇತಿ ಉದ್ಘಾಟನೆ

    ಕುಂದಾಪುರ :ಸರ್ಕಾರಿ ಪ್ರೌಢಶಾಲೆ ಕಾಳಾವರದಲ್ಲಿ ಕರಾಟೆ ತರಬೇತಿ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಸರ್ಕಾರಿ ಪ್ರೌಢಶಾಲೆ ಕಾಳಾವರದಲ್ಲಿ ಸರಕಾರದ ಅನುದಾನ ದೊಂದಿಗೆ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ಆರಂಭಗೊಂಡಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಮುಖ್ಯೋಪಾಧ್ಯಾಯ ಅರುಣ್ ಕುಮಾರ್ ವಹಿಸಿದ್ದರು.

    ಕರಾಟೆ ತರಬೇತಿ ಉದ್ಘಾಟನೆಯನ್ನು ಕರಾಟೆಯಲ್ಲಿ ಬ್ಲೇಕ್ ಬೆಲ್ಟ್ ಪಡೆದು ಜಿಲ್ಲಾಮಟ್ಟ ಪ್ರತಿನಿಧಿಸಿದ 10ನೆಯ ತರಗತಿ ವಿದ್ಯಾರ್ಥಿನಿ ದೀಕ್ಷಾ ದೀಪ ಬೆಳಗಿಸಿ ನೆರವೇರಿಸಿದರು. ಕರಾಟೆ ಗುರು ಕೇಶವ ಜೋಗಿ, ಸಲ್ವಾಡಿ ಮಾತನಾಡಿ ತರಬೇತಿಯ ನಂತರ ಸತತ ಅಭ್ಯಾಸ ಅಗತ್ಯ ಎಂದರು. ಶಿಕ್ಷಕ ರವಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

  • ಕುಂದಾಪುರ :ಆನೆಗುಡ್ಡೆಯಲ್ಲಿ ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ

    ಕುಂದಾಪುರ :ಆನೆಗುಡ್ಡೆಯಲ್ಲಿ ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಕುಂಭಾಸಿ ಇವರ ನೇತೃತ್ವದಲ್ಲಿ ಕುಂದಾಪುರ ಭಜನಾ ಮಂಡಳಿಗಳ ಸಹಯೋಗದಲ್ಲಿ ರಾಜ್ಯ ಮಟ್ಟದ ಭಜನಾ ಸ್ಪರ್ಧೆ, ಭಕ್ತಿಗಾನ ನೃತ್ಯ ಜೋಡಿ ಭಜನಾ ಸ್ಪರ್ಧೆ ಡಿ.3 ರವಿವಾರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ ಎಂದು ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆಯ ಸಮಿತಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ತಿಳಿಸಿದರು.

    ಅವರು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿದರು.

    ಡಿ.3ರ ಬೆಳಿಗ್ಗೆ 8.30ಕ್ಕೆ ಭವ್ಯ ಪುರಮೆರವಣಿಗೆಗೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿಗಳಾದ ಶ್ರೀ ರಮಣ ಉಪಾಧ್ಯಾಯರು ಚಾಲನೆ ನೀಡಿಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆಯನ್ನು ಸುರತ್ಕಲ್ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ಸಭಾಧ್ಯಕ್ಷತೆಯನ್ನು ಶ್ರೀಕ್ಷೇತ್ರ ಆನೆಗುಡ್ಡೆ ವಿನಾಯಕ ದೇವಸ್ಥಾನದ ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ವಹಿಸಲಿದ್ದಾರೆ ಎಂದರು.

    ಬೆಳಿಗ್ಗೆ 10 ಗಂಟೆಗೆ ಭಕ್ತಿಗಾನ ನೃತ್ಯ ಜೋಡಿ ಭಜನಾ ಸ್ಪರ್ಧೆ ಆರಂಭಗೊಳ್ಳಲಿದೆ. ರಾಜ್ಯ ಮಟ್ಟದ 48 ಭಜನಾ ತಂಡಗಳು ಇದರಲ್ಲಿ ಭಾಗವಹಿಸಲಿವೆ. ಸಂಜೆ 7.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಆನಂದ ಸಿ.ಕುಂದರ್ ಸಭಾಧ್ಯಕ್ಷತೆ ವಹಿಸಲಿದ್ದಾರೆ ಎಂದರು.

    ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿಗಳಾದ ಶ್ರೀ ರಮಣ ಉಪಾಧ್ಯಾಯರು ಮಾತನಾಡಿ, ಹಿಂದೆ ಶ್ರೀ ಕ್ಷೇತ್ರದಲ್ಲಿ ನೆಡೆದ ಭಜನಾ ಕಮ್ಮಟಗಳು ಈ ರಾಜ್ಯ ಮಟ್ಟದ ಭಜನಾ ಸ್ಪರ್ಧೆಗೆ ಸ್ಪೂರ್ತಿಯಾಗಿದೆ. ಸಮಾಜ ಪ್ರತಿಯೋರ್ವರು ಕೂಡಾ ಧಾರ್ಮಿಕ ಶ್ರದ್ಧೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಧಾರ್ಮಿಕವಾಗಿ, ಸಾಂಸ್ಕøತಿಕ ವಿಕಸನಕ್ಕೆ ಭಜನೆ ಅನುಕೂಲವಾಗುತ್ತದೆ. ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು.

    ಶ್ರೀರಾಮ ಕೋಟೇಶ್ವರ ಕಲಾ ಸಂಘದ ಅಧ್ಯಕ್ಷರಾದ ಬಿ.ಜಿ ಸೀತಾರಾಮ ಧನ್ಯ ಗೋಪಾಡಿ ಮಾತನಾಡಿ, ಭಕ್ತಿಗಾನ ನೃತ್ಯ ಜೋಡಿ ಭಜನಾ ಸ್ಪರ್ಧೆ ಹೊಸ ರೀತಿಯ ಪ್ರಯೋಗ. ಇಲ್ಲಿ ಭಜನೆ ಹೇಳುವವರಿಗೆ ಪ್ರತ್ಯೇಕ ವೇದಿಕೆ ಇರುತ್ತದೆ. ನಾಲ್ಕು ಜನ ಭಜನೆ ಹಾಡುವವರು ಇರುತ್ತಾರೆ. ಹಾಡಿಗೆ ತಕ್ಕಂತೆ ಜೋಡಿ ವೇದಿಕೆಗಳಲ್ಲಿ ಎರಡು ತಂಡದವರ ಕುಣಿತ ಭಜನೆ ನಡೆಯುತ್ತದೆ. 8 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಪ್ರತಿ ಭಜನಾ ತಂಡದಲ್ಲಿ 12ರಿಂದ 16 ಜನರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಏಕಕಾಲದಲ್ಲಿ ಎರಡು ವೇದಿಕೆಗಳಲ್ಲಿ ಸ್ಪರ್ಧೆ ನಡೆಯುತ್ತದೆ. ತಾಳ, ಹಾವ ಭಾವ, ಕುಣಿತವನ್ನು ಮಾತ್ರ ಪರಿಗಣಿಸಲಾಗುತ್ತದೆ. ಈಗಾಗಲೇ 90ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ಇಚ್ಛೆ ವ್ಯಕ್ತ ಪಡಿಸಿದ್ದು ಕೊನೆಗೆ 48 ತಂಡಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

    ಸಂಚಾಲಕರಾದ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ ಜೋಡಿ ಭಜನಾ ಸ್ಪರ್ಧೆ ಇದೊಂದು ಹೊಸ ಪ್ರಯೋಗ. ಏಕಕಾಲದಲ್ಲಿ ಜೋಡಿ ಭಜನಾ ಸ್ಪರ್ಧೆ ನಡೆಯುತ್ತದೆ. ಭಜನೆ ಹೇಳುವವರು ಯಾವ ಭಜನೆ ಹೇಳುತ್ತಾರೋ ಅದಕ್ಕೆ ಕುಣಿತ ಭಜನಾ ತಂಡಗಳು ಕುಣಿಯಬೇಕು. ಇದೊಂದು ವಿಭಿನ್ನವಾದ ಸ್ಪರ್ಧೆಯಾಗಿದೆ. ಎಂದರು.

    ಸುದ್ಧಿಗೋಷ್ಠಿಯಲ್ಲಿ ದೇವಸ್ಥಾನದ ಮೆನೇಜರ್ ನಟೇಶ ಕಾರಂತ, ಬಾಬಣ್ಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

  • ಕುಂದಾಪುರ :ಕುಡಿಯುವ ನೀರಿಗೆ ಬಳಸುವ ಪ್ಲಾಸ್ಟಿಕ್ ಬಾಟಲಿಗಳು ಅತೀ ಅಪಾಯಕಾರಿ – ಉದ್ಯಮಿ ಡಾ.ಜಿ.ರಾಮಕೃಷ್ಣ ಆಚಾರ್

    ಕುಂದಾಪುರ :ಕುಡಿಯುವ ನೀರಿಗೆ ಬಳಸುವ ಪ್ಲಾಸ್ಟಿಕ್ ಬಾಟಲಿಗಳು ಅತೀ ಅಪಾಯಕಾರಿ – ಉದ್ಯಮಿ ಡಾ.ಜಿ.ರಾಮಕೃಷ್ಣ ಆಚಾರ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ದೇಶದಲ್ಲಿ ಪ್ಲಾಸ್ಟಿಕ್ ಹಾಗೂ ರಾಸಾಯನಿಕಗಳಿಂದಾಗಿ ಕುಡಿಯುವ ನೀರು ಹಾಗೂ ನದಿಗಳು ಸಂಪೂರ್ಣ ಕಲುಶಿತಗೊಂಡಿವೆ. ಆದಕ್ಕಾಗಿ ನೀರಿನ ಬಾಟಲಿಗಳಂತಹಾ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸೃಷ್ಟಿಸುವ ಯಾವುದೇ ವಸ್ತುಗಳನ್ನು ದೇಶದಲ್ಲಿ ನಿರ್ಭಂಧಿಸಬೇಕು ಮತ್ತು ಶುದ್ಧ ಕುಡಿಯುವ ನೀರಿನ ಮರು ಹೂರಣ ಮಾಡಬೇಕು ಎಂದು ಹೇಳಿದರು. ಅವರು ಯಡಾಡಿ – ಮತ್ಯಾಡಿ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಗೆ ರೂ.1.75ಲಕ್ಷ ಮೌಲ್ಯದ ವಾಟರ್ ಪ್ಯೂರಿಪಯರ್ ಕೊಡುಗೆ ನೀಡಿ ಮಾತನಾಡಿದರು.

    ಕುಡಿಯುವ ನೀರಿನ ಬಗ್ಗೆ ನಾವು ಸಮಗ್ರವಾಗಿ ಅಧ್ಯಯನ ನಡೆಸಿದ್ದೇವೆ. ದೇಶದಾದ್ಯಂತ ಸುಮಾರು 1 ಮಿಲಿಯದಷ್ಟು ನಾವು ತಯಾರಿಸಿರುವ ಘಟಕಗಳನ್ನು ಸ್ಥಾಪಿಸಿದರೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದು ಮತ್ತು ಕುಡಿಯುವ ನೀರಿನ ಬಾಟಲಿಗಳನ್ನು ನಿರ್ಬಂಧಿಸಬಹುದು ಎಂದು ಅವರು ಹೇಳಿದರು.

    ಇದೇ ಸಂದರ್ಭದಲ್ಲಿ ದಾನಿಗಳಾದ ಉದ್ಯಮಿ ಡಾ.ಜಿ.ರಾಮಕೃಷ್ಣ ಆಚಾರ್ ಇವರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಸುಜ್ಜಾನ್ ಎಜುಕೇಶನ್ ಟ್ರಸ್ಟ್ ನ ಕೋಶಾಧಿಕಾರಿ ಭರತ್ ಶೆಟ್ಟಿ, ಶ್ರೀ ರಾಮಕೃಷ್ಣ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲ ಎಂ.ಬಾಲಕೃಷ್ಣ ಶೆಟ್ಟಿ ಶಿಕ್ಷಕ ಬಾಲಕೃಷ್ಣ ಶೆಟ್ಟಿ, ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅರುಣ್ ಹೆಗ್ಡೆ, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ, ದೈಹಿಕ ಶಿಕ್ಷಕ ಉಮೇಶ್ ಶೆಟ್ಟಿ, ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಪ್ರದೀಪ್ ಉಪಸ್ಥಿತರಿದ್ದರು. ಸುಜ್ಜಾನ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ರಮೇಶ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಪ್ರೇಮ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

  • ಕುಂದಾಪುರ :ಸರ್ಕಾರಿ ಪ್ರೌಢಶಾಲೆ ಕಾಳಾವರದಲ್ಲಿ ವಾರ್ಷಿಕ ಕ್ರೀಡಾಕೂಟ

    ಕುಂದಾಪುರ :ಸರ್ಕಾರಿ ಪ್ರೌಢಶಾಲೆ ಕಾಳಾವರದಲ್ಲಿ ವಾರ್ಷಿಕ ಕ್ರೀಡಾಕೂಟ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಸರ್ಕಾರಿ ಪ್ರೌಢಶಾಲೆ ಕಾಳಾವರದಲ್ಲಿ ವಾರ್ಷಿಕ ಕ್ರೀಡಾಕೂಟ ಬುಧವಾರದಂದು ನಡೆಯಿತು. ಕ್ರೀಡಾಕೂಟದ ರಮೇಶ್ ಆಚಾರ್ ಪಥ ಸಂಚಲನಕ್ಕೆ ಹಸಿರು ನಿಶಾನೆ ತೋರಿದರು. ನಂತರ ವಿದ್ಯಾರ್ಥಿಗಳಿಂದ ಶಿಸ್ತುಬದ್ಧ ಸುಂದರ ಪಥ ಸಂಚಲನ ನಡೆಯಿತು. ಕಾಳಾವರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಮಂಜುನಾಥ ಶೆಟ್ಟಿಗಾರ್ ಗೌರವ ವಂದನೆ ಸ್ವೀಕರಿಸಿದರು. ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳು ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು. ಕ್ರೀಡಾ ಮಂತ್ರಿ ಸುಶಾಂತ್ ಕ್ರೀಡಾ ಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

    ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗರು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅರುಣ್ ಕುಮಾರ್ ವಂದಿಸಿದರು ಹಾಗೂ ರವಿರಾಜ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.

    ಕ್ರೀಡಾ ಕೂಟದಲ್ಲಿ ತೀರ್ಮಾನಕಾರಕರಾಗಿ ಬಸ್ರೂರು ಪ್ರೌಢಶಾಲೆಯ ಸುಧಾಕರ ಶೆಟ್ಟಿ, ಸರ್ಕಾರಿ ಪ್ರಾಥಮಿಕ ಶಾಲೆ ಕಾಳಾವರದ ಬಾಲಕೃಷ್ಣ ಶೆಟ್ಟಿ, ಕುಂದಾಪುರ ಸಂತ ಪಿಯೂಸ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ರತ್ನಾಕರ ಶೆಟ್ಟಿಯವರು ಭಾಗವಹಿಸಿ ಕ್ರೀಡಾ ಕೂಟ ಯಶಸ್ವಿಗೊಳಿಸಿದರು.