ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕಲಿಯುಗದ ಈ ಕಾಲದಲ್ಲಿ ಭಜನೆ ನಾಮಸಂಕೀರ್ತನೆಯ ಮೂಲಕ ಅತಿ ಶೀಘ್ರವಾಗಿ ದೇವರ ಅನುಗ್ರಹವನ್ನು ಪಡೆಯಬಹುದು. ಭಜನೆಯಲ್ಲಿ ಯಾವುದೇ ವಿಭಜನೆ ಇಲ್ಲ. ಭಜನೆ ಒಗ್ಗಟ್ಟಿನ ಸಂಕೇತವೆಂದು ಸುರತ್ಕಲ್ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ನುಡಿದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಕುಂಭಾಸಿ ಇವರ ನೇತೃತ್ವದಲ್ಲಿ ಕುಂದಾಪುರ ಭಜನಾ ಮಂಡಳಿಗಳ ಸಹಯೋಗದಲ್ಲಿ ದೇವಳದ ವಠಾರದಲ್ಲಿ ಭಾನುವಾರ ಜರುಗಿದ ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ ಮತ್ತು ಭಕ್ತಿಗಾನ ನೃತ್ಯ ಜೋಡಿ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಶುಭಾಶೀರ್ವಚನ ನೀಡಿದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವಿಶ್ರಾಂತ ಆಡಳಿತ ಮೊಕ್ತೇಸರ ಕೆ.ಸೂರ್ಯನಾರಾಯಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಯುಗದಲ್ಲಿ ಮಾನವನ ಮನಸ್ಸನ್ನು ಸನ್ಮಾರ್ಗಕ್ಕೆ ಕೊಂಡೊಯ್ಯುವಂತೆ ಮಾಡಿದವರು ಪುರಂದಾರ ದಾಸರು. ಹುಟ್ಟು ಸಾವಿನ ನಡುವೆ ಭಗವಂತನ ಅನುಗ್ರಹ ಪಡೆಯುವ ಕೆಲಸವನ್ನು ಮಾಡಬೇಕು. ನಮ್ಮ ಅಂತ್ಯ ಕಾಲದಲ್ಲಿ ನಮ್ಮನ್ನು ಕಾಪಾಡುವುದೇ ನಾವು ಮಾಡಿದ ಪುಣ್ಯದ ಕೆಲಸಗಳು. ಮನುಷ್ಯನ ಜನ್ಮವನ್ನು ಸಾರ್ಥಕ ಪಡೆದುಕೊಳ್ಳುವುದಕ್ಕೆ ಭಜನೆಯೊಂದೇ ಸುಲಭ ಸಾಧನ ಮಾರ್ಗ ಎಂದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಕೆ.ಶ್ರೀರಮಣ ಉಪಾಧ್ಯಾಯ ಇವರು ಭವ್ಯ ಪುರಮೆರವಣಿಗೆಗೆ ಚಾಲನೆ ನೀಡಿ, ವೇದ ಉಪನಿಷತ್ತ್ಗಳ ಸಾರವೇ ಈ ಭಜನೆ. ಇತಂಹ ಭಜನೆಯಿಂದ ನಮ್ಮ ಜೀವನವು ಪಾವನವಾಗಲಿದೆ. ಸಮಾಜವನ್ನು ಮುನ್ನಡೆಸಲು ಬೇಕಾಗಿರುವುದೇ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮ. ಭಗವಂತನನ್ನು ನೆನೆಯುವುದೇ ಭಜನೆ. ದಿವ್ಯ ಚೇತನವನ್ನು ನೀಡುವಲ್ಲಿ ಭಜನೆ ಸಹಕರಿಯಾಗುತ್ತದೆ ಎಂದರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ಸಮಿತಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂಭಾಸಿ ಗ್ರಾಪಂ ಅಧ್ಯಕ್ಷ ಆನಂದ ಪೂಜಾರಿ ಹೆಗ್ಗೂರಬೆಟ್ಟು, ಧಾರ್ಮಿಕ ಮುಖಂಡರಾದ ಕೊರ್ಗಿ ವಿಠಲ್ ಶೆಟ್ಟಿ, ಬಸವರಾಜ್ ಶೆಟ್ಟಿಗಾರ್, ಶ್ರೀರಾಮ ಕೋಟೇಶ್ವರ ಕಲಾ ಸಂಘದ ಅಧ್ಯಕ್ಷ ಬಿ.ಜಿ ಸೀತಾರಾಮ ಧನ್ಯ ಗೋಪಾಡಿ, ಕುಂದಾಪುರ ಖಾರ್ವಿಕೇರಿ ಮಹಾಕಾಳಿ ದೇವಸ್ಥಾನದ ಜಯಾನಂದ ಖಾರ್ವಿ ಕುಂದಾಪುರ, ದೇವಸ್ಥಾನದ ಮ್ಯಾನೇಜರ್ ನಟೇಶ ಕಾರಂತ ಉಪಸ್ಥಿತರಿದ್ದರು.
ಈ ಸಂದರ್ಭ ಸಮಿತಿ ವತಿಯಿಂದ ಶ್ರೀಪಾದರನ್ನು ಗೌರವಿಸಲಾಯಿತು. ಆನೆಗುಡ್ಡೆ ಸ್ವಾಗತ ಗೋಪುರದಿಂದ ದೇವಳದ ತನಕ ವಿವಿಧ ಭಜನಾ ಮಂಡಳಿಗಳ ನೇತೃತ್ವದಲ್ಲಿ ಭವ್ಯ ಪುರಮೆರವಣಿಗೆ ನಡೆಯಿತು.
ಸಂಚಾಲಕ ರಾಘವೇಂದ್ರ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಅಕ್ಷಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಬಾಬಣ್ಣ ಪೂಜಾರಿ ವಂದಿಸಿದರು.











