Category: ಸುದ್ದಿ

  • ಕುಂದಾಪುರ :ಇಂದಿರಾ ಕ್ಯಾಂಟೀನ್ನಲ್ಲಿ ಇಂದಿರಾಗಾಂಧಿ ಜನ್ಮ ದಿನಾಚರಣೆ

    ಕುಂದಾಪುರ :ಇಂದಿರಾ ಕ್ಯಾಂಟೀನ್ನಲ್ಲಿ ಇಂದಿರಾಗಾಂಧಿ ಜನ್ಮ ದಿನಾಚರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಬ್ಯಾಂಕುಗಳ ರಾಷ್ಟ್ರೀಕರಣ, ಭೂ ಸುಧಾರಣೆ ಮತ್ತು ಗರೀಬಿ ಹಟಾವೋ ಮೂಲಕ ದೇಶವನ್ನು ಅಭಿವೃದ್ಧಿಯತ್ತ ತಂದ ಭಾರತದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿ. ಅವರ ದೂರ ದೃಷ್ಟಿಯ ಪ್ರತಿಫಲವಾಗಿ ಇಂದು ಈ ದೇಶ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಅಗ್ರಗಣ್ಯ ಎನಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಹೇಳಿದರು.

    ಭಾನುವಾರ ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಉಪಹಾರ ನೀಡಿ ಮಾತನಾಡಿದರು.

    ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕಾಸ್ಟೋ ಪ್ರಾಸ್ತಾವಿಕ ಮಾತನಾಡಿ , ದೇಶದ ಕಟ್ಟಕಡೆಯ ಜನರನ್ನು ಸಮಾನತೆಯ ಮೂಲಕ ಮುಖ್ಯ ವಾಹಿನಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ . ಪ್ರಸ್ತುತ ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಕಾರ್ಯಕ್ರಮಗಳು ಅದರ ಒಂದು ಮುಂದುವರಿದ ಭಾಗ ಎಂದು ಹೇಳಿದರು.

    ಮಹಿಳಾ ಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ ,ಪುರಸಭೆ ಸದಸ್ಯರಾದ ಶ್ರೀಧರ್ ಶೇರಿಗಾರ , ಅಬ್ಬು ಮಹಮ್ಮದ್ ,ಪ್ರಭಾವತಿ ಶೆಟ್ಟಿ , ಪಂಚಾಯತ್ ಸದಸ್ಯರಾದ ವಿಜಯಧರ್ ಕೆ ವಿ , ಜಿಲ್ಲಾ ಸೋಶಿಯಲ್ ಮೀಡಿಯಾ ಅಧ್ಯಕ್ಷ ರೋಷನ್ ಶೆಟ್ಟಿ, ಎನ್ ಎಸ್ ಯು ಐ ಅಧ್ಯಕ್ಷ ಸುಜನ್ ಶೆಟ್ಟಿ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರೇವತಿ ಶೆಟ್ಟಿ ಹಿರಿಯರಾದ ಗಂಗಾಧರ ಶೆಟ್ಟಿ ,ಬ್ಲಾಕ್ ಕಾಂಗ್ರೆಸ್ ಉಪಸಮಿತಿಗಳ ಅಧ್ಯಕ್ಷರಾದ ಚಂದ್ರಮೀನ್ ಅಶ್ವತ್ ಕುಮಾರ್ , ಮುನಾಫ ಕೋಡಿ ,ಐ ಟಿ ಸೇಲ್ ನ ಚಂದ್ರಶೇಖರ್ ಶೆಟ್ಟಿ ,ನ್ಯಾಯವಾದಿ ಸಚ್ಚಿದಾನಂದ್ ಎಂ ಎಲ್ ,ಆಶಾ ಕರ್ವಾಲ್ಲೊ , ಕುಮಾರ ಖಾರ್ವಿ, ಜ್ಯೋತಿ ನಾಯ್ಕ್ ,ಅಶೋಕ್ ಸುವರ್ಣ, ಶೋಭಾ ಸಚ್ಚಿದಾನಂದ , ಕೇಶವ ಭಟ್ ,ಅಭಿಜಿತ್ ಪೂಜಾರಿ , ವಿಠ್ಠಲ್ ಕಾಂಚನ್ , ಕೆ ಸುರೇಶ್ ,ವಿವೇಕಾನಂದ , ವೇಣುಗೋಪಾಲ್ , ಎಡಾಲ್ಫ್ ಡಿಕೋಸ್ತಾ, ಮಧುಕರ ಬಡೆಕಟ್ಟು ,ಸುನಿಲ್ ಪೂಜಾರಿ , ಆನಂದ ಪೂಜಾರಿ ,ಎಂ ಉದಯಕುಮಾರ್ , ರಮೇಶ , ಸತೀಶ, ಸದಾನಂದ ಖಾರ್ವಿ, ದಿನೇಶ ಬೆಟ್ಟ ಇನ್ನಿತರರು ಉಪಸ್ಥಿತರಿದ್ದರು.

  • ಪ್ರಸಕ್ತ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

    ಪ್ರಸಕ್ತ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ : ಜಿಲ್ಲೆಯಾದ್ಯಂತ ಮುಂಬರುವ ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.

    ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬಂದಿರುವ ಹಿನ್ನೆಲೆ, ಅಂತರ್ಜಲ ಮಟ್ಟವು ಶೇ. 24 ರಷ್ಟು ಕುಸಿದಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಇವೆ. ಅಧಿಕಾರಿಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಈಗಾಗಲೇ ಕೈಗೊಳ್ಳುತ್ತಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಿ, ನೀರಿನ ಮಿತ ಬಳಕೆ ಮಾಡುವುದರೊಂದಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಕಾರ್ಯಪ್ರವೃತ್ತರಾಗಬೇಕು ಎಂದರು.

    ಈಗಿನಿಂದಲೇ ಸ್ಥಳೀಯವಾಗಿ ನೀರಿನ ಲಭ್ಯತೆ, ಖಾಸಗಿ ಬೋರ್‌ವೆಲ್‌ಗಳಿಂದ ನೀರನ್ನು ಪಡೆದು, ವಿತರಿಸುವ ಬಗ್ಗೆ ನೀಲನಕ್ಷೆಯನ್ನು ತಯಾರಿಸಬೇಕು. ತೀರ ಅಗತ್ಯವಿದ್ದಲ್ಲಿ ಮಾತ್ರ ಟ್ಯಾಂಕರ್‌ಗಳ ಮೂಲಕ ನೀರನ್ನು ಸಾರ್ವಜನಿಕರಿಗೆ ನೀಡಬೇಕು. ಈ ಸಂಬಂಧ ಈಗಿನಿಂದಲೇ ಏಜೆನ್ಸಿಗಳನ್ನು ವಿವಿಧ ಷರತ್ತುಗಳನ್ನು ವಿಧಿಸುವುದರೊಂದಿಗೆ ಗುರುತಿಸಿ, ತಯಾರಿ ನಡೆಸಬೇಕು ಎಂದರು.

    ಸಾರ್ವಜನಿಕರಿಗೆ ನೀರಿನ ಮಿತ ಬಳಕೆಯ ಬಗ್ಗೆ ಅರಿವು ಮೂಡಿಸಬೇಕು. ಹೊಸದಾಗಿ ಮನೆ ಹಾಗೂ ವಸತಿ ಸಮುಚ್ಚಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ಪರವಾನಿಗೆ ನೀಡುವಾಗ ಮಳೆ ನೀರಿನ ಕೊಯ್ಲನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.

    ಜಿಲ್ಲೆಯಲ್ಲಿ ಈಗಾಗಲೇ ಕಾರ್ಕಳ, ಬ್ರಹ್ಮಾವರ ಹಾಗೂ ಹೆಬ್ರಿ ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ. ಇಲ್ಲಿನ ಬರ ಪರಿಸ್ಥಿತಿಗಳ ನಿರ್ವಹಣೆಗೆ ಸ್ಥಳೀಯ ಶಾಸಕರುಗಳನ್ನೊಳಗೊಂಡಂತೆ ತಹಶೀಲ್ದಾರರ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಪ್ರತೀ ಹದಿನೈದು ದಿನಗಳಿಗೊಮ್ಮೆ ಸಭೆ ಸೇರಿ ಬರ ನಿರ್ವಹಣೆ ಕುರಿತು ಯೋಜನೆ ರೂಪಿಸಿ, ಅನುಷ್ಠಾನಗೊಳಿಸಬೇಕು ಎಂದರು.

    ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು. ಜಾನುವಾರುಗಳ ಮೇವಿಗೆ ಕೊರತೆ ಉಂಟಾಗದಂತೆ ಸಹ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ರೈತರಿಗೆ ಮೇವಿನ ಕಿಟ್ಟನ್ನು ವಿತರಿಸಬೇಕು. ಗೋಶಾಲೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಅರಣ್ಯ ಇಲಾಖೆಯ ಜಮೀನುಗಳಲ್ಲಿ ಮೇವನ್ನು ಬೆಳೆಯಲು ಮುಂದಾಗಬೇಕು. ಜಿಲ್ಲೆಯಲ್ಲಿ ಉತ್ಪತ್ತಿಯಾಗಿರುವ ಮೇವನ್ನು ಹೊರ ಜಿಲ್ಲೆಗೆ ಹೋಗದಂತೆ ಚೆಕ್‌ಪೋಸ್ಟ್ಗಳಲ್ಲಿ ತಡೆಹಿಡಿಯಬೇಕು ಎಂದು ಸೂಚಿಸಿದರು.
    ಜಿಲ್ಲೆಯ ಪ್ರತಿಯೊಂದು ಕಿಂಡಿ ಆಣೆಕಟ್ಟುಗಳಿಗೆ ತಡೆ ಹಲಗೆಗಳನ್ನು ಅಳವಡಿಸಬೇಕು ಜಿಲ್ಲೆಯಲ್ಲಿ ಒಟ್ಟು 603 ಕಿಂಡಿ ಆಣೆಕಟ್ಟುಗಳಲ್ಲಿ 210 ಕ್ಕೆ ಮಾತ್ರ ಹಲಗೆಗಳನ್ನು ಅಳವಡಿಸಲಾಗಿದೆ. ಈಗಾಗಲೇ ಹಿಂದಿನ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ತಡೆ ಹಲಗೆಗಳನ್ನು ಅಳವಡಿಸಲು ಸೂಚನೆ ನೀಡಿದ್ದರೂ ಅಳವಡಿಸದೇ ಇರುವ ಬಗ್ಗೆ ವಿಷಾಧ ವ್ಯಕ್ತಪಡಿಸಿದ ಅವರು, ಶೀಘ್ರದಲ್ಲಿಯೇ ಅಳವಡಿಸುವಂತೆ ಸೂಚನೆ ನೀಡಿದರು.

    ಸಕಾಲ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿಗೊಳಿಸಬೇಕು ಎಂದ ಅವರು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಕೈಗೊಂಡ ಎಲ್ಲಾ ನಿರ್ಣಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಕಡ್ಡಾಯವಾಗಿ ಪಾಲನೆ ಮಾಡಬೇಕು. ತಪ್ಪಿದ್ದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಕಾನೂನು ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವ ಪ್ರದೇಶಗಳ ಪಟ್ಟಿ ತಯಾರಿಸಿ, ಮುಂದಿನ ದಿನಗಳಲ್ಲಿ ಆ ಸ್ಥಳಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರದಂತೆ ಕ್ರಮ ವಹಿಸಬೇಕು ಎಂದರು.

    ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ತಾತ್ಕಾಲಿಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲು ಕ್ರಮ ವಹಿಸಬೇಕು. ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದರು.

    ಸಭೆಯಲ್ಲಿ ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಪೌರಾಯುಕ್ತ ರಾಯಪ್ಪ, ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  • ಲೋಕಸಭಾ ಚುನಾವಣೆಯ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

    ಲೋಕಸಭಾ ಚುನಾವಣೆಯ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ :ಮುಂಬರುವ ಲೋಕಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಆಯೋಗ ನೀಡಿರುವ ಮಾರ್ಗದರ್ಶನ ಹಾಗೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಹೇಳಿದರು.

    ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಪೊಲೀಸ್ ಸೆಕ್ಟರ್ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸೆಕ್ಟರ್ ಅಧಿಕಾರಿಗಳಾಗಿ ನೇಮಕಗೊಂಡಿರುವ ಪ್ರತಿಯೊಬ್ಬ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಮತಗಟ್ಟೆಗಳಿಗೆ ಭೇಟಿ ನೀಡಿ, ಲಭ್ಯವಿರುವ ಮೂಲಭೂತ ಸೌಕರ್ಯಗಳ ಬಗ್ಗೆ, ಈ ಹಿಂದೆ ಭೀತಿ ಹುಟ್ಟಿಸುವ ಪ್ರಕರಣಗಳು ನಡೆದಿವೆಯೇ ಎಂಬ ಬಗ್ಗೆ ಶೀಘ್ರದಲ್ಲಿ ವರದಿ ನೀಡಬೇಕು ಎಂದರು.

    ಚುನಾವಣೆಗೆ ನೇಮಿಸಿರುವ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮುಂದಾಗಬೇಕು. ಯಾವುದೇ ಅಧಿಕಾರಿಗಳನ್ನು ಚುನಾವಣೆ ಕರ್ತವ್ಯದಿಂದ ಮುಕ್ತಿಗೊಳಿಸಲು ಆಸ್ಪದವಿಲ್ಲ ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಮಾತನಾಡಿ, ಪೊಲೀಸ್ ಸೆಕ್ಟರ್ ಆಫೀಸರ್ ಹಾಗೂ ಇತರ ಇಲಾಖೆಯ ಅಧಿಕಾರಿಗಳು ಸಮನ್ವಯದೊಂದಿಗೆ ಕೆಲಸ ಮಾಡುವುದರೊಂದಿಗೆ ಚುನಾವಣೆಯಲ್ಲಿ ಯಾವುದೇ ಗೊಂದಲಗಳಾಗದಂತೆ ಎಚ್ಚರ ವಹಿಸಬೇಕು. ಚುನಾವಣಾ ಆಯೋಗ ತಿಳಿಸಿರುವ ವರದಿಯನ್ನು ಶೀಘ್ರದಲ್ಲಿಯೇ ನೀಡಬೇಕೆಂದು ತಿಳಿಸಿದರು.

    ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಮಾತನಾಡಿ, ಪೊಲೀಸ್ ಸೆಕ್ಟರ್ ಆಫೀಸರ್ ಹಾಗೂ ಇತರ ಇಲಾಖೆಯ ಅಧಿಕಾರಿಗಳು ತಮ್ಮ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಇ.ವಿ.ಎಂ ಮತಯಂತ್ರ ಹಾಗೂ ಮತದಾನ ಪ್ರಕ್ರಿಯೆ ಕುರಿತು ನವೆಂಬರ್ 25 ರಿಂದ ಫೆಬ್ರವರಿ ಮೊದಲ ವಾರದೊಳಗೆ ಸಾರ್ವಜನಿಕರಿಗೆ ಪಾತ್ಯಕ್ಷಿಕೆ ನೀಡುವ ಮೂಲಕ ಅರಿವು ಮೂಡಿಸುವುದರೊಂದಿಗೆ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.

    ಕಾರ್ಯಕ್ರಮದಲ್ಲಿ ಡಯಟ್ ಪ್ರಾಂಶುಪಾಲ ಹಾಗೂ ನೋಡೆಲ್ ಅಧಿಕಾರಿ ಡಾ. ಅಶೋಕ್ ಕಾಮತ್ ಪೊಲೀಸ್ ಸೆಕ್ಟರ್ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳಿಗೆ ಚುನಾವಣಾ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಕುರಿತು ತರಬೇತಿಯನ್ನು ಸವಿಸ್ತಾರವಾಗಿ ನೀಡಿದರು.
    ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಸೆಕ್ಟರ್ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಸೆಕ್ಟರ್ ಅಧಿಖಾರಿಗಳು ಉಪಸ್ಥಿತರಿದ್ದರು.

  • ಕುಂದಾಪುರ :ಬೀಜಾಡಿ ಮೀನುಗಾರರ ಸಹಕಾರಿ ಸಂಘಕ್ಕೆ “ಉತ್ತಮ ಮೀನುಗಾರರ ಸಹಕಾರಿ ಸಂಘ ಪ್ರಶಸ್ತಿ”

    ಕುಂದಾಪುರ :ಬೀಜಾಡಿ ಮೀನುಗಾರರ ಸಹಕಾರಿ ಸಂಘಕ್ಕೆ “ಉತ್ತಮ ಮೀನುಗಾರರ ಸಹಕಾರಿ ಸಂಘ ಪ್ರಶಸ್ತಿ”

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :70ನೇ ಅಖಿಲಭಾರತ ರಾಜ್ಯಮಟ್ಟದ ಸಹಕಾರಿ ಸಪ್ತಾಹದಲ್ಲಿ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಕಾರ್ಯವೈಖರಿ ಗುರುತಿಸಿ ಸಹಕಾರಿ ಸಚಿವರಾದ ಕೆ. ಎನ್ ರಾಜಣ್ಣ ರವರು ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಹಕಾರಿ ಸಪ್ತಾಹದಲ್ಲಿ “ಉತ್ತಮ ಮೀನುಗಾರರ ಸಹಕಾರಿ ಸಂಘ ಪ್ರಶಸ್ತಿ” ಪ್ರದಾನ ಮಾಡಿದರು.

    ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಬಿ.ಮಂಜುನಾಥ್ ಕುಂದರ್ ಚಾತ್ರಬೆಟ್ಟು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ್ ಕಾಂಚನ್, ಉಪಾಧ್ಯಕ್ಷ ರಾಜು ತೋಟದಬೆಟ್ಟು, ನಿರ್ದೇಶಕರಾದ ಅಶೋಕ್ ಪೂಜಾರಿ, ಶ್ರೀನಿವಾಸ್ ಮರಕಾಲ, ಬಿ.ಶಿವರಾಮ ಅಮೀನ್, ಬಿ.ಶೇಖರ್ ಮೊಗವೀರ, ಅಣ್ಣಯ್ಯ ಪುತ್ರನ್, ಜಾನಕಿ, ಅನೂಷಾ, ಶಾಖಾ ವ್ಯವಸ್ಥಾಪಕರಾದ ಗಣೇಶ್ ಹಾಗೂ ಶ್ರೀಧರ್ ಉಪಸ್ಥಿತರಿದ್ದರು.

  • ಕುಂದಾಪುರ :ಶ್ರೀ ವೆಂಕಟರಮಣ ಪಿ. ಯು ಕಾಲೇಜಿನಲ್ಲಿ ವ್ಯವಹಾರದ ದಿನ (Business Day)

    ಕುಂದಾಪುರ :ಶ್ರೀ ವೆಂಕಟರಮಣ ಪಿ. ಯು ಕಾಲೇಜಿನಲ್ಲಿ ವ್ಯವಹಾರದ ದಿನ (Business Day)

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ಆರ್ಥಿಕತೆ ಬೆಳೆಯುವಲ್ಲಿ ಯುವ ಪೀಳಿಗೆಯ ಕೌಶಲ್ಯ ಅಗತ್ಯ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ವಾಣಿಜ್ಯ ಕೌಶಲ್ಯ ಉಳಿದ ಎಲ್ಲಾ ಕಡೆಗಳಿಗಿಂತ ಭಿನ್ನ ಸತ ವಿಶೇಷ. ವಿದ್ಯಾರ್ಥಿಗಳಿಗೆ ಕಾಲೇಜು ಕ್ಯಾಂಪಸ್‌ವೊಂದರಲ್ಲಿ ವಾಣಿಜ್ಯ ಮೇಳವೊಂದನ್ನು ಇಷ್ಟು ಸೃಜನಾತ್ಮಕವಾಗಿ ಆಯೋಜಿಸುತ್ತಿರುವುದು ಸ್ತುತ್ಯಾರ್ಹ ಎಂದು ಕೆನರಾ ಬ್ಯಾಂಕ್ ಮಣಿಪಾಲ ಇದರ ಜನರಲ್ ಮ್ಯಾನೇಜರ್ ಎಂ. ಜಿ. ಪಂಡಿತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಧೇಶ್ ಪ್ಲಾಸ್ಟಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕೋಟೇಶ್ವರ ಇದರ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಡಿ. ಕಾಮತ್, ವಾಣಿಜ್ಯೋದ್ಯಮದಲ್ಲಿ ಕಲ್ಪನೆ ಮತ್ತು ಕೌಶಲ್ಯ ಪ್ರಮುಖಾಂಶ. ಕಲ್ಪನೆ ಮತ್ತು ಕೌಶಲ್ಯಗಳನ್ನು ಕಾರ್ಯಗತಗೊಳಿಸುವುದು ಕೂಡ ಅಷ್ಟೇ ಮುಖ್ಯ.ವಾಣಿಜ್ಯೋದ್ಯಮದಲ್ಲಿ ಅಸ್ತಿತ್ವದಲ್ಲಿ ಉಳಿದುಕೊಳ್ಳುವುದಕ್ಕೆ ಹೊಸತನ, ಆವಿಷ್ಕಾರ ಹಾಗೂ ದೂರದೃಷ್ಟಿ ಅಗತ್ಯ ಎಂದು ಅವರು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ವೆಂಕಟರಮಣ ದೇವ್ ಎಜುಕೇಶನಲ್ ಅಂಡ್ ಕಲ್ಬರಲ್ ಟ್ರಸ್ಟ್(ರಿ.) ಕುಂದಾಪುರದ ಅಧ್ಯಕ್ಷ ಕೆ. ರಾಮಕೃಷ್ಣ ಕಾಮತ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಶ್ರೀ ವೆಂಕಟರಮಣ ದೇವ್ ಎಜುಕೇಶನಲ್ ಅಂಡ್ ಕಲ್ಬರಲ್ ಟ್ರಸ್ಟ್(ರಿ.) ಕುಂದಾಪುರದ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ, ಶ್ರೀ ವೆಂಕಟರಮಣ ಸಂಸ್ಥೆಯ ಖಜಾಂಚಿ ಶ್ರೀ ಲಕ್ಷ್ಮಿ ನಾರಾಯಣ ಶೆಣೈ,ಕೆನರಾ ಬ್ಯಾಂಕ್ ಕುಂದಾಪುರ ಇಲ್ಲಿನ ಶಾಖಾಧಿಕಾರಿ ಶ್ರೀಮತಿ ಭಾರತಿ, ಆಡಳಿತಾಧಿಕಾರಿ ಪ್ರಭಾಕರ್ ಶಾನುಭೋಗ್,ಶ್ರೀ ವೆಂಕಟರಮಣ ಹೈಸ್ಕೂಲ್‌ನ ಮುಖ್ಯ ಶಿಕ್ಷಕ ಕೃಷ್ಣ ಅಡಿಗ, ಪ್ರೈಮರಿ ಸ್ಕೂಲ್‌ನ ಮುಖ್ಯ ಶಿಕ್ಷಕಿ ರೇಷ್ಮಾ ಡಿ’ಸೋಜಾ, ಪ್ರೀ ಪ್ರೈಮರಿ ಸ್ಕೂಲ್‌ನ ಮುಖ್ಯ ಶಿಕ್ಷಕಿ ಪ್ರಮಿಳಾ ಡಿ’ಸೋಜಾ ಉಪಸ್ಥಿತರಿದ್ದರು.

    ಕಾಲೇಜಿನ ಪ್ರಾಂಶುಪಾಲೆ ರಾಗಿಣಿ ಸ್ವಾಗತಿಸಿದರು, ರಸಾಯನ ಶಾಸ್ತ್ರ ಉಪನ್ಯಾಸಕ ಸಂದೀಪ್, ಸಂಖ್ಯಾ ಶಾಸ್ತ್ರ ಉಪನ್ಯಾಸಕಿ ವಿದ್ಯಾಶ್ರೀ ಅತಿಥಿಗಳನ್ನು ಪರಿಚಯಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಮಂಜುನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕಾರ್ಯಕ್ರಮ ಸಂಯೋಜಕಿ, ಉಪನ್ಯಾಸಕಿ ಲತಾ ಪೈ ವಂದಿಸಿದರು. ಇಂಗ್ಲೀಷ್ ಉಪನ್ಯಾಸಕಿ ಅಮೃತಾ ಕಾರ್ಯಕ್ರಮ ನಿರ್ವಹಿಸಿದರು.

    55 ಅಂಗಡಿಗಳನ್ನೊಳಗೊಂಡ ಬೃಹತ್ ವಾಣಿಜ್ಯ ಮೇಳ :
    ವಿದ್ಯಾರ್ಥಿಗಳಿಗೆ ವಾಣಿಜ್ಯ ಕ್ಷೇತ್ರದ ಪ್ರಜ್ಞೆ ಮೂಡಿಸಬೇಕು ಎಂಬ ದೃಷ್ಟಿಯಲ್ಲಿ ಕಾಲೇಜಿನ ಕ್ಯಾಂಪಸ್‌ನಲ್ಲಿ 55 ಅಂಗಡಿಗಳನ್ನು ಹಾಕಲಾಗಿತ್ತು. ವಾಣಿಜ್ಯ ವಿದ್ಯಾರ್ಥಿಗಳು ಮಾತ್ರವಲ್ಲದೇ ಸೈನ್ಸ್ ವಿಭಾಗದ ವಿದ್ಯಾರ್ಥಿಗಳೂ ಕೂಡ ಈ ವಾಣಿಜ್ಯ ಮೇಳದಲ್ಲಿ ಅಂಗಡಿಗಳನ್ನು ಹಾಕಿರುವುದು ವಿಶೇಷ. ಐಸ್ ಕ್ರೀಂ ಸ್ಟಾಲ್, ಗೋಲಿ ಸೋಡಾ ಅಂಗಡಿ, ಬೇಕಡ್ ಅಂಡ್ ಪ್ರೈಡ್ ಸ್ಟ್ಯಾಕ್ಸ್ ಸ್ಟಾಲ್, ಸ್ವೀಟ್ಸ್ ಸ್ಟಾಲ್, ಲೇಡಿಸ್ ಡ್ರೆಸಸ್ ಶಾಪ್, ಫಾಸ್ಟ್ ಫುಡ್ ಸ್ಟಾಲ್, ಮೆನ್ಸ್ ವೇರ್ ಶಾಪ್, ಚಾಟ್ಸ್ ಶಾಪ್, ಜ್ಯೂಸ್ ಸೆಂಟರ್ ಸೇರಿ ಇನ್ನಿತರ ಅಂಗಡಿಗಳ ಒಂದು ದೊಡ್ಡ ವಾಣಿಜ್ಯ ಮೇಳವೇ ಕಾಲೇಜ್ ಕ್ಯಾಂಪಸ್‌ನಲ್ಲಿ ಕಳೆಕಟ್ಟಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ವಾಣಿಜ್ಯ ಮೇಳದಲ್ಲಿ ಪಾಲ್ಗೊಂಡರು.

  • ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ‘ನಾ ಕಂಡಂತೆ ಪೊಲೀಸ್’ ಪ್ರಬಂಧ ಸ್ಪರ್ಧೆ ಉದ್ಘಾಟನೆ

    ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ‘ನಾ ಕಂಡಂತೆ ಪೊಲೀಸ್’ ಪ್ರಬಂಧ ಸ್ಪರ್ಧೆ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಪೊಲೀಸರು ಎಂದರೆ ಸಮಾಜದ ಒಂದು ಭಾಗ. ಪೊಲೀಸರ ಬಗ್ಗೆ ಭಯ ಬೇಡ, ಸಾರ್ವಜನಿಕ ವಲಯದಲ್ಲಿ ಉತ್ತಮ ಭಾವನೆ ಮೂಡಿಸುವ ಕೆಲಸ ವಿದ್ಯಾರ್ಥಿದಿಸೆಯಿಂದಲೇ ಆದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ‘ನಾ ಕಂಡಂತೆ ಪೊಲೀಸ್’ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಿರುವುದು ಅರ್ಥಪೂರ್ಣ ಎಂದು ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ಹೇಳಿದರು.

    ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕುಂದಾಪುರ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವದ ಅಂಗವಾಗಿ ಕನ್ನಡ ಶಾಲೆ ಉಳಿವಿಗಾಗಿ ಮತ್ತು ಪ್ರೋತ್ಸಾಹಕ್ಕಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ‘ನಾ ಕಂಡಂತೆ ಪೊಲೀಸ್’ ಎಂಬ ವಿಷಯದ ಕುರಿತು ಕುಂದಾಪುರ ಬೋರ್ಡ್ ಹೈಸ್ಕೂಲ್‍ನ ಕಲಾಮಂದಿರದಲ್ಲಿ ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಪೊಲೀಸರ ಬಗ್ಗೆ ವ್ಯಕ್ತವಾಗುವ ಅಭಿವ್ಯಕ್ತಿ ಮುಕ್ತವಾಗಿರಲಿ. ವಿದ್ಯಾರ್ಥಿಗಳ ಕಂಡ ಹಾಗೆ ಪೊಲೀಸರ ಬಗ್ಗೆ ಬರೆಯಿರಿ. ಅದರಲ್ಲಿ ವಿಷಯಗಳು ನಮಗೆ ಅಗತ್ಯವಾಗುತ್ತದೆ. ತಿದ್ಧಿಕೊಳ್ಳಲು, ಬದಲಾವಣೆ ತಂದುಕೊಳ್ಳಲು, ಇನ್ನಷ್ಟು ಪರಿಣಾಮಕಾರಿಯಾಗಿ ಸಾರ್ವಜನಿಕ ಸೇವೆ ನೀಡಲು ಈ ಟಿಪ್ಪಣಿಗಳು ಅಗತ್ಯವಾಗುತ್ತದೆ. ಆಯ್ದ ಪ್ರಬಂಧಗಳನ್ನು ಸಾರ್ವಜನಿಕ ಪ್ರಕಟಣೆಗೊಂಡರೆ ಅನುಕೂಲವಾಗುತ್ತದೆ ಎಂದರು.

    ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಗಣಪತಿ ಮಾತನಾಡಿ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆಗೆ ಅವಿನಾಭಾವ ಸಂಬಂಧವಿದೆ. ಶಾಲೆಗಳಲ್ಲಿ ಕಾನೂನು ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ಇಲಾಖೆ ಮಾಡುತ್ತಿದೆ. ವಿದ್ಯಾರ್ಥಿಗಳು ಶಿಸ್ತನ್ನು ಮೈಗೂಡಿಸಿಕೊಳ್ಳುವ ಮೂಲಕ ಕಾನೂನನ್ನು ಪಾಲನೆ ಮಾಡಬೇಕು. ನಾವು ಕಾನೂನು ಪಾಲನೆ ಮಾಡಿದರೆ ಕಾನೂನು ನಮ್ಮನ್ನು ಪಾಲಿಸುತ್ತದೆ. ಶಿಕ್ಷಣವೆಂದರೆ ಕೇವಲ ಅಂಕ ಗಳಿಕೆ ಮಾತ್ರವಲ್ಲ ವ್ಯಕ್ತಿತ್ವ ವಿಕಸನ, ಸಭ್ಯ ನಾಗರಿಕರಾಗಿ ರೂಪಿಸುವುದು ನಿಜವಾದ ಶಿಕ್ಷಣ ಎಂದು ಹೇಳಿದ ಅವರು, ವಿದ್ಯಾರ್ಥಿಗಳು ಮಾದಕ ವಸ್ತುಗಳತ್ತ ಆಕರ್ಷಿತರಾಗದೇ ಜ್ಞಾನರ್ಜನೆಯ ಕಡೆಗೆ ಒಲವು ಹರಿಸಬೇಕು. ನಿರ್ದಿಷ್ಟ ಗುರಿಯ ಕಡೆಗೆ ಗಮನ ವಿರಲಿ. ಇವತ್ತು ಸುದ್ಧಿಯನ್ನು ಬಿತ್ತರಿಸುವ ಪತ್ರಕರ್ತರು ಸಮಾಜದ ಜವಬ್ದಾರಿಯನ್ನು ಅರಿತು ಈ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಇದು ಸ್ತುತ್ಯರ್ಹವಾದುದು ಎಂದರು.

    ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಮಾತನಾಡಿ ರಜತ ಮಹೋತ್ಸವ ಸಂಭ್ರಮದಲ್ಲಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಜತ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳಿಗೆ ಕ್ವೀಜ್ ಸ್ಪರ್ಧೆ, ಕುಗ್ರಾಮ ಪ್ರದೇಶದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಯೋಜನೆ ಆಳವಡಿಸಿಕೊಂಡಿದ್ದೇವೆ ಎಂದರು.

    ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು.
    ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿನಯ ಪಾಯಸ್, ಛಾಯಾಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಗಿರೀಶ್ ಜಿ.ಕೆ., ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಟಿ.ಲೋಕೇಶ ಆಚಾರ್ಯ ತೆಕ್ಕಟ್ಟೆ ಉಪಸ್ಥಿತರಿದ್ದರು.
    ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಘವೇಂದ್ರ ಪೈ ಗಂಗೊಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗಣೇಶ ಎಸ್.ಬೀಜಾಡಿ ವಂದಿಸಿದರು. ಹಿರಿಯ ಪತ್ರಕರ್ತ ಕೆ.ಜಿ ವೈದ್ಯ ಕಾರ್ಯಕ್ರಮ ನಿರ್ವಹಿಸಿದರು.
    ಕುಂದಾಪುರ ತಾಲೂಕಿನ ಸರಕಾರಿ ಪ್ರೌಢಶಾಲೆ ಮತ್ತು ಅನುದಾನಿತ ಸೇರಿದಂತೆ ಒಟ್ಟು 27 ಶಾಲೆಗಳ 99 ಎಸ್‍ಎಸ್‍ಎಲ್ಸಿ ವಿದ್ಯಾರ್ಥಿಗಳು ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

  • ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಅಣುಕು ಯುವ ಸಂಸತ್ ಸ್ಪರ್ಧೆ

    ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಅಣುಕು ಯುವ ಸಂಸತ್ ಸ್ಪರ್ಧೆ

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ: ಸಂಸದೀಯ ವ್ಯವಹಾರಗಳ ಇಲಾಖೆ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ ವಿಭಾಗ) ಹಾಗೂ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಪದವಿಪೂರ್ವ ವಿಭಾಗದ ಅಣುಕು ಯುವ ಸಂಸತ್ ಸ್ಪರ್ಧೆ ನಡೆಯಿತು.

    ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಾರುತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಇಂದಿನ ವಿದ್ಯಾರ್ಥಿಗಳು ಮುಂದಿನ ಪ್ರಜೆಗಳು ಅಣುಕು ಯುವ ಸಂಸತ್ ನಿಮ್ಮ ಮುಂದಿನ ಭವಿಷ್ಯಕ್ಕೆ ಉತ್ತಮವಾದ ಕಾರ್ಯಕ್ರಮ ಎಂದು ಶುಭ ಹಾರೈಸಿದರು.

    ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರರವರು ಅಧ್ಯಕ್ಷತೆ ವಹಿಸಿ ಪದವಿಪೂರ್ವ ಶಿಕ್ಷಣ ಇಲಾಖೆಯ ಅತ್ಯತ್ತಮ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಭವಿಷ್ಯದ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದರು.

    ಸಮಾರಂಭದಲ್ಲಿ ಕಟ್ ಬೇಲ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೈಶಾಲಿ, ಹೆಮ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೇತ್ರಾವತಿ, ಕಾಲೇಜಿನ ಉಪ-ಪ್ರಾಂಶುಪಾಲರಾದ ರಮೇಶ ಪೂಜಾರಿ, ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ದಯಾನಂದ, ಬ್ರಹ್ಮಾವರ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ವಾಸು ಉಪಸ್ಥಿತರಿದ್ದರು.

    ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿರುವ 40 ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ಸೂಕ್ತ ತರಬೇತಿ ನೀಡಿ ಅಂತಿಮ ಸ್ಪರ್ಧೆಯನ್ನು ನಡೆಸಲಾಯಿತು. ಈ ಸ್ಪರ್ಧೆಯಲ್ಲಿ ತೀರ್ಪುಗಾರರ ತೀರ್ಪುಗಾರಿಕೆಯ ಮೂಲಕ
    5ಜನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಈ ಸ್ಪರ್ಧೆಯಲ್ಲಿ ಬಸ್ರೂರು ಶಾರದಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಧ್ರುವ ಪ್ರಥಮ ಸ್ಥಾನ, ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿಸರ್ಗ ದ್ವಿತೀಯ ಸ್ಥಾನ, ಉಡುಪಿ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಲಕ್ಷ್ಮಿಕಾಂತ್ ತೃತೀಯ ಸ್ಥಾನ, ಗೋಳಿಯಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವಿನಾಯಕ ಚತುರ್ಥ ಸ್ಥಾನ ಹಾಗೂ ಬ್ರಹ್ಮಾವರದ ಎಸ್,ಎಮ್,ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೇಯಾ ಐದನೇಯ ಸ್ಥಾನ ಪಡೆದರು. ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು. ಇದರೊಂದಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಇಬ್ಬರು ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಂದ ಆಗಮಿಸಿರುವ ರಾಜ್ಯಶಾಸ್ತ್ರ ಉಪನ್ಯಾಸಕರು,ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಬೋಧಕ/ಬೋಧಕೇತರ ವ್ರಂದದವರು ಉಪಸ್ಥಿತರಿದ್ದರು.

    ಜನತಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಕಾರ್ಯಕ್ರಮ ಸಂಯೋಜಕರಾದ ಉದಯ ನಾಯ್ಕ್ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

  • ವಂಡ್ಸೆ :ಭಾರತೀಯ ಸೇನೆಗೆ ಆಯ್ಕೆಗೊಂಡಿರುವ ಸುನೀತಾ ಪೂಜಾರಿ ಅವರಿಗೆ ಮಾತೃಭೂಮಿ ಯುವ ಸಂಘಟನೆಯಿಂದ ಸನ್ಮಾನ

    ವಂಡ್ಸೆ :ಭಾರತೀಯ ಸೇನೆಗೆ ಆಯ್ಕೆಗೊಂಡಿರುವ ಸುನೀತಾ ಪೂಜಾರಿ ಅವರಿಗೆ ಮಾತೃಭೂಮಿ ಯುವ ಸಂಘಟನೆಯಿಂದ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಬಿ.ಎಸ್.ಎಫ್ ಕ್ಯಾಂಪ್ ನಲ್ಲಿ ತರಬೇತಿ ಪಡೆದು ಭಾರತ ಸೇನೆಯಿಂದ ಭಾರತ-ಬಾಂಗ್ಲಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸಲು ತೆರಳುತ್ತಿರುವ ಹೆಮ್ಮಾಡಿಯ ಸುನೀತಾ ಪೂಜಾರಿ ಅವರನ್ನು ಇತ್ತೀಚೆಗೆ ವಂಡ್ಸೆಯ ಆತ್ರಾಡಿ ಮಾತೃಭೂಮಿ ಯುವ ಸಂಘಟನೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

    ವಂಡ್ಸೆಯ ಶ್ರೀಯಾ ಕನ್ವನ್‍ಷನ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ ಭಾರತೀಯ ಸೇನೆಗೆ ಆಯ್ಕೆಗೊಂಡು ಕರ್ತವ್ಯಕ್ಕೆ ತೆರಳಲು ಸಜ್ಜಾಗಿರುವ ಸುನೀತಾ ಪೂಜಾರಿ ಅವರನ್ನು ಸನ್ಮಾನಿಸಿ, ಅಭಿನಂದನಾ ಮಾತುಗಳನ್ನಾಡಿದರು.

    ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಅವಿನಾಶ್, ಗ್ರಾ.ಪಂ. ನಿಕಟಪೂರ್ವಾಧ್ಯಕ್ಷರು, ಮಾತೃಭೂಮಿ ಯುವ ಸಂಘಟನೆ ಗೌರವ ಸಲಹೆಗಾರರಾದ ಉದಯ ಕುಮಾರ್ ಶೆಟ್ಟಿ, ಗ್ರಾ.ಪಂ. ಮಾಜಿ ಅಧ್ಯಕ್ಷರು, ಮಾತೃಭೂಮಿ ಯುವ ಸಂಘಟನೆ ಗೌರವಾಧ್ಯಕ್ಷರಾದ ಶ್ರೀನಿವಾಸ ಪೂಜಾರಿ ಕಲ್ಮಡಿ, ಮಾತೃಭೂಮಿ ಯುವ ಸಂಘಟನೆ ಅಧ್ಯಕ್ಷ ಶಶಿಧರ ಆಚಾರ್ಯ, ಕಾರ್ಯದರ್ಶಿ ವಿನಂತ ಗಾಣಿಗ, ಗ್ರಾ.ಪಂ.ಪಂಚಾಯತ್ ಉಪಾಧ್ಯಕ್ಷ ಗೋವರ್ಧನ್ ಜೋಗಿ, ತಾ.ಪಂ. ಮಾಜಿ ಸದಸ್ಯ ಉದಯ ಜಿ ಪೂಜಾರಿ, ಜೆಸಿಐ ಮಾರಣಕಟ್ಟೆ ಅಧ್ಯಕ್ಷ ಗುರುಪ್ರಸಾದ್, ಮಾತೃಭೂಮಿ ಯುವ ಸಂಘಟನೆ ನಿಕಟಪೂರ್ವಾಧ್ಯಕ್ಷ ಪ್ರಸಾದ್ ಆಚಾರ್ಯ, ಮಾಜಿ ಅಧ್ಯಕ್ಷರಾದ ಸಂದೇಶ್ ಶೆಟ್ಟಿ, ರಮೇಶ ಪೂಜಾರಿ ಬಳಿಹಿತ್ಲು, ಗ್ರಾ.ಪಂ. ಮಾಜಿ ಸದಸ್ಯ ಗುಂಡು ಪೂಜಾರಿ ಹರವರಿ, ವಂಡ್ಸೆ ವ್ಯವಸಾಯಿಕ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಪೂಜಾರಿ, ಹಕ್ಲಾಡಿ ಗ್ರಾ.ಪಂ. ಸದಸ್ಯ ಅಶೋಕ್ ಪೂಜಾರಿ, ಮಾತೃಭೂಮಿ ಯುವ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

    ವಾಸು ಜಿ.ನಾಯ್ಕ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

  • ಶಂಕರನಾರಾಯಣ :ಪ್ರತೀ ಜಿಲ್ಲಾ ಪಂಚಾಯತ್ ಗೆ ಎರಡು ಆಸ್ಪತ್ರೆ – ಸಂಸದ ಬಿ.ವೈ.ಆರ್ ಭರವಸೆ

    ಶಂಕರನಾರಾಯಣ :ಪ್ರತೀ ಜಿಲ್ಲಾ ಪಂಚಾಯತ್ ಗೆ ಎರಡು ಆಸ್ಪತ್ರೆ – ಸಂಸದ ಬಿ.ವೈ.ಆರ್ ಭರವಸೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಮುಂದಿನ ದಿನಗಳಲ್ಲಿ ಪ್ರತೀ‌ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಎರಡರಂತೆ ಸರ್ಕಾರೀ ಸುಸಜ್ಜಿತ ಆಸ್ಪತ್ರೆಗಳನ್ನು ತೆರೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಹೇಳಿದ್ದಾರೆ ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ಶಂಕರನಾರಾಯಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು.

    ರಾಮ ರಾಜ್ಯದ ಕನಸನ್ನು ಬಿಜೆಪಿ ಸರ್ಕಾರ ಅನುಷ್ಠಾನಕ್ಕೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಗಾಂಧೀಜಿ ಕಂಡ ಕನಸು ಪ್ರತಿ ಗ್ರಾಮಗಳು ಸ್ವರಾಜ್ಯವಾಗಬೇಕು ಎನ್ನುವುದಾದರೆ ಹಿಂದಿನ 70 ವರ್ಷದ ಕಾಂಗ್ರೆಸ್ ಸರ್ಕಾರ ಜನರ ತೆರಿಗೆ ಹಣವನ್ನು ಅಭಿವೃದ್ಧಿಗೆ ಯಾಕೆ ಬಳಸಿಲ್ಲ? ಎಂದು ಪ್ರಶ್ನಿಸಿದ ಅವರು, ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಪ್ರತಿ ಗ್ರಾಮಗಳಲ್ಲೂ ಅಭಿವೃದ್ಧಿಯನ್ನು ಕಾಣುತ್ತಿದ್ದೇವೆ ಎಂದರು.

    ಶಂಕರನಾರಾಯಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 80 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿದ್ದು ಸರ್ವತೋಮುಖ ಅಭಿವೃದ್ಧಿಯನ್ನು ಕಂಡಿದೆ ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

    ಇದೇ ಸಂದರ್ಭ ಶಂಕರನಾರಾಯಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಸಂಸದ ಬಿ ವೈ ರಾಘವೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಿದರು.

    ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪ್ರಸ್ತಾವಿಸಿದರು, ಸ್ಥಳೀಯ ಮುಖಂಡರಾದ ಶಂಕರನಾರಾಯಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಕಲಗದ್ದೆ ಸ್ವಾಗತಿಸಿದರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

  • ಎಕ್ಸಲೆಂಟ್ ಕುಂದಾಪುರ: ವಾರ್ಷಿಕ ಕ್ರೀಡಾ ಕೂಟ ಉದ್ಘಾಟನೆ

    ಎಕ್ಸಲೆಂಟ್ ಕುಂದಾಪುರ: ವಾರ್ಷಿಕ ಕ್ರೀಡಾ ಕೂಟ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಲಿಟ್ಲ್ ಸ್ಟಾರ್ ಅಂಗ್ಲ ಮಾಧ್ಯಮ ಶಾಲೆ ಸುಣ್ಣಾರಿ ಕುಂದಾಪುರ ಇದರ ಜಂಟಿ ವಾರ್ಷಿಕ ಕ್ರೀಡಾಕೂಟವು ನವೆಂಬರ್ 17 ರಂದು ಎಕ್ಸಲೆಂಟ್ ಕ್ರೀಡಾಂಗಣದಲ್ಲಿ ಕುಂದಾಪುರ ಆರಕ್ಷಕ ಠಾಣೆಯ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಪ್ರಸಾದ್ ಕೆ ಅವರಿಂದ ಉದ್ಘಾಟನೆಗೊಂಡಿತು.

    ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟನೆಗೊಳಿಸಿದ ಪ್ರಸಾದ್ ಕೆ ಮಾತನಾಡುತ್ತಾ ಕ್ರೀಡೆ ವಿದ್ಯಾರ್ಥಿಗಳಲ್ಲಿ ಆತ್ಮ ಸ್ಥೈರ್ಯವನ್ನು ತುಂಬುತ್ತದೆ. ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು, ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗುತ್ತದೆ ಎಂದರು.

    ಎಕ್ಸಲೆಂಟ್, ಪದವಿ ಪೂರ್ವ ಕಾಲೇಜು ಮತ್ತು ಲಿಟ್ಲ್ ಸ್ಟಾರ್ ಅಂಗ್ಲ ಮಾಧ್ಯಮ ಶಾಲೆಗಳು 1400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಮೂಡಿ ಬಂದು ಮುಖ್ಯ ಅಥಿತಿಗಳು ಧ್ವಜ ವಂದನೆ ಸ್ವೀಕರಿಸಿದರು. ಎಕ್ಸಲೆಂಟ್ ಕಾಲೇಜಿನ ರಾಷ್ಟ್ರಮಟ್ಟದ ಕ್ರೀಡಾಪಟು ಮಾನಸ ಕ್ರೀಡಾ ಜ್ಯೋತಿ ಹೊತ್ತು ಸಾಗಿದರೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಜೊತೆಯಾದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಂ.ಎಂ ಹೆಗ್ಡೆ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಎಮ್ ಮಹೇಶ್ ಹೆಗ್ಡೆ ಅವರು ಮಾತನಾಡುತ್ತಾ ನಾನು ಗ್ರಾಮೀಣ ಭಾಗದಲ್ಲಿ ಸೃಷ್ಟಿಸಿದ ವಿದ್ಯಾಸಂಸ್ಥೆ ಬೆಳೆಯುತ್ತಿರುವ ರೀತಿ ನೋಡಿದರೆ ಬಹಳ ಸಂತೋಷವಾಗುತ್ತದೆ. ಮಿನಿ ಒಲಂಪಿಕ್ ರೀತಿಯಲ್ಲಿ ಆಯೋಜನೆಗೊಂಡಿರುವ ಈ ಕ್ರೀಡಾಕೂಟ ಎಲ್ಲರಿಗೂ ಮಾದರಿಯಾಗಲಿ ಎಂದರು.

    ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಡಾ| ರಮೇಶ ಶೆಟ್ಟಿ, ಲಿಟ್ಲ್ ಸ್ಟಾರ್ ಅಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಅಗಸ್ಟಿನ್ ಕೆ.ಎ ಉಪಸ್ಥಿತರಿದ್ದರು. ಖಜಾಂಚಿ ಭರತ್‌ ಶೆಟ್ಟಿ ಸ್ವಾಗತಿಸಿ ವಾಸ್ತವಿಕ ಮಾತನಾಡಿದರು. ಅಮೃತ ಭಾರತಿ ಎಜುಕೇಶನಲ್ ಟ್ರಸ್ಟ್‌ನ ಪಿ.ಆರ್.ಒ ವಿಜಯ್ ಕುಮಾರ್ ಶೆಟ್ಟಿ, ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಸತೀಶ್‌ ವಂದಿಸಿದರು.