Category: ಸುದ್ದಿ

  • ಕುಂದಾಪುರ :ಅ.1ರಂದು ಕ್ಲೀನ್ ಕುಂದಾಪುರ ಪ್ರಾಜೆಕ್ಟ್ 201ನೇ ಸ್ವಚ್ಛತಾ ವಾರ

    ಕುಂದಾಪುರ :ಅ.1ರಂದು ಕ್ಲೀನ್ ಕುಂದಾಪುರ ಪ್ರಾಜೆಕ್ಟ್ 201ನೇ ಸ್ವಚ್ಛತಾ ವಾರ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಗಾಂಧಿ ಜಯಂತಿಯ ಅಂಗವಾಗಿ ದೇಶದಾದ್ಯಂತ ಜರುಗಲಿರುವ ಸ್ವಚ್ಛತಾ ಆಂದೋಲನದ ಅಂಗವಾಗಿ ಅ.1 ಭಾನುವಾರ ಬೆಳಿಗ್ಗೆ 7 ರಿಂದ 9 ರ ತನಕ ಕೋಡಿ ಲೈಟ್ ಹೌಸ್ ಬಳಿಯಲ್ಲಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನೇತೃತ್ವದಲ್ಲಿ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಬೆಂಗಳೂರು, ಪುರಸಭೆ ಕುಂದಾಪುರ, ವಕೀಲರ ಸಂಘ ಕುಂದಾಪುರ, ತಾಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರ, ವಾದಿರಾಜ ಇಂಜಿನಿಯರಿಂಗ್ ಕಾಲೇಜು ಬಂಟಕಲ್ಲು, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ, ರೆಡ್ ಕ್ರಾಸ್ ಕುಂದಾಪುರ, ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಸ್ವಚ್ಛತಾ ಕಾರ್ಯ ಜರುಗಲಿದೆ.

    ಸ್ವಚ್ಚತಾ ಕಾರ್ಯದಲ್ಲಿ ಪ್ರಮುಖವಾಗಿ ಕುಂದಾಪುರದ ನ್ಯಾಯಾಂಗ ಇಲಾಖೆಯ ನ್ಯಾಯಮೂರ್ತಿಗಳು ಹಾಗೂ ಕುಂದಾಪುರ ಸಹಾಯಕ ಆಯುಕ್ತೆ ಭಾಗವಹಿಸಲಿದ್ದಾರೆ. ಪರಿಸರಾಸಕ್ತರು ಭಾಗವಹಿಸುವಂತೆ ಕೋರಲಾಗಿದೆ ಎಂದು ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಸಂಚಾಲಕ ಭರತ್ ಬಂಗೇರ ತಿಳಿಸಿದ್ದಾರೆ.

  • ಕುಂಭಾಶಿ – ಮಲ್ಲಿಗೆ ಕೃಷಿಯಲ್ಲಿ ಸ್ವಾವಲಂಬಿ ಬದುಕು ಸಾಧ್ಯ – ಜಿ.ಪಂ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ

    ಕುಂಭಾಶಿ – ಮಲ್ಲಿಗೆ ಕೃಷಿಯಲ್ಲಿ ಸ್ವಾವಲಂಬಿ ಬದುಕು ಸಾಧ್ಯ – ಜಿ.ಪಂ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೃಷಿಯಲ್ಲಿ ನಾನಾ ರೀತಿಯ ಕೃಷಿಗಳಿರಬಹುದು ಆದರೆ ಮಲ್ಲಿಗೆ ಕೃಷಿಯ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬುವುದನ್ನು ಪ್ರೇಮ ಕುಂಭಾಶಿ ತೊರಿಸಿಕೊಟ್ಟಿದ್ದಾರೆಂದು ಜಿ.ಪಂ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಹೇಳಿದರು.

    ಗುರುವಾರ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗೆಳೆಯರ ಬಳಗ ಕಾರ್ಕಡ,ರೈತಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಸಹಯೋಗದೊಂದಿಗೆ ರೈತರೆಡೆಗೆ ನಮ್ಮನಡಿಗೆ 29ನೇ ಮಾಲಿಕೆ ಕಾರ್ಯಕ್ರಮ ಕುಂಭಾಶಿ ಪ್ರೇಮ ಇವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಮಲ್ಲಿಗೆ ಕೃಷಿ ಅದೊಂದು ಲಾಭದಾಯಕ ಕೃಷಿಯಾಗಿದೆ. ಆದರೆ ಅದರ ಬಗ್ಗೆ ಸಾಮಾನ್ಯ ಕೃಷಿಕರು ನಿರಾಸಕ್ತಿ ತೊರಸುವ ಕಾಲಘಟ್ಟದಲ್ಲಿ ಪ್ರೇಮ ಕುಂಭಾಶಿ ಮನೆ ಟೆರಸಿ, ವಠಾರದಲ್ಲಿ ಮಲ್ಲಿಗೆ ಕೃಷಿಮಯಗೊಳಿಸಿದ್ದಾರೆ. ಮಲ್ಲಿಗೆ ಹೂವು ಅರಳುವುದಲ್ಲದೆ ಎಲ್ಲರ ಮನದಲ್ಲೂ ಅರಳಿದ್ದಾರೆ.ಇದೊಂದು ಕ್ರಾಂತಿಕಾರಿ ಕೃಷಿಯಾಗಿ ಇತರರಿಗೆ ಮಾದರಿಯಾಗಿದೆ. ಪಂಚವರ್ಣ ಸಂಸ್ಥೆ ಇವರನ್ನು ಗೌರವಿಸವ ಕಾರ್ಯ ನಿಜಕ್ಕೂ ಅರ್ಥಪೂರ್ಣ ಎಂದರು.

    ಮಲ್ಲಿಗೆ ಮನೆಯಲ್ಲಿ ಸ್ವಚ್ಛತಾ ಹೀ ಸೇವಾ ಪಾಠ
    ಮಲ್ಲಿಗೆ ಕೃಷಿ ಕಾಯಕ ಜೀವಿ ಪ್ರೇಮ ಕುಂಭಾಶಿ ಮನೆಯಲ್ಲಿ ಜಿ.ಪಂ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಸರಕಾರದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಹಿನ್ನಲ್ಲೆಯಲ್ಲಿ ಪರಿಸರದ ಜನರಿಗೆ ಪ್ಲಾಸ್ಟಿಕ್ ಮುಕ್ತ ಪರಿಸರ,ಅದರಿಂದಾಗುವ ಸಮಸ್ಯೆಗಳು,ಹಸಿರು ಕ್ರಾಂತಿ ಪಸರಿಸುವ ಕುರಿತು ನೆರೆದಿದ್ದವರಿಗೆ ಪಾಠ ಮಾಡಿದರು. ಅಲ್ಲದೆ ಪ್ರೇಮ ಕುಂಭಾಶಿ ಹಸಿ ಕಸವನ್ನು ಸಾವಯವ ಗೊಬ್ಬರ ಮಾಡುವ ವಿಧಾನವನ್ನು ಪ್ರಶಂಸಿದರು.

    ಈ ಸಂದರ್ಭದಲ್ಲಿ ಪ್ರೇಮ ಕುಂಭಾಶಿ ದಂಪತಿಗಳಿಗೆ ರೈತರೆಡೆಗೆ ನಮ್ಮ ನಡಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಕುಂಭಾಶಿ ಗ್ರಾಮಪಂಚಾಯತ್ ಅಧ್ಯಕ್ಷ ಆನಂದ ಪೂಜಾರಿ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ದೇವಪ್ಪ ಪಟೆಗಾರ್, ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ಇದ್ದರು.

    ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ವಸಂತಿ ಹಂದಟ್ಟು ಸ್ವಾಗತಿಸಿದರೆ,ಸದಸ್ಯೆ ಶಕೀಲ ಸನ್ಮಾನಪತ್ರ ವಾಚಿಸಿದರು.ಸದಸ್ಯೆ ಸುಜಾತ ಬಾಯರಿ ಪ್ರಾಸ್ತಾವನೆ ಸಲ್ಲಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿ ವಂದಿಸಿದರು.

  • ಐರೋಡಿ – ಕರ್ಣಾಟಕ ಬ್ಯಾಂಕ್ ವತಿಯಿಂದ ತರಗತಿ ಕೊಠಡಿ ಕೊಡುಗೆ

    ಐರೋಡಿ – ಕರ್ಣಾಟಕ ಬ್ಯಾಂಕ್ ವತಿಯಿಂದ ತರಗತಿ ಕೊಠಡಿ ಕೊಡುಗೆ

    ಕನ್ನಡ ಮಾಧ್ಯಮದಲ್ಲಿ ಕಲಿತು ಚಂದ್ರಲೋಕದ ಮೇಲೆ ಬೆಳಕು ಚಲ್ಲಿದ್ದಾರೆ ಕನ್ನಡ ಮಾಧ್ಯಮದ ಮೇಲೆ ಕೀಳರಿಮೆ ಬಿಟ್ಟುಬಿಡಿ – ಕರ್ಣಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಶಾಲೆ ಮತ್ತು ದೇವಸ್ಥಾನಗಳು ಊರಿನ ಹಿರಿಮೆ ಅದೇ ರೀತಿ ಅಲ್ಲಿನ ಅರ್ಚಕರು ಮತ್ತು ಶಿಕ್ಷಕರು ತಮ್ಮ ಕಾರ್ಯವೈಖರಿಯ ತಳಹದಿಯ ಮೇಲೆ ಆ ಎರಡು ಸಂಸ್ಥೆ ಅವಲಂಬಿತವಾಗಿದೆ ಎಂದು ಕರ್ಣಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ ಹೇಳಿದರು.

    ಶುಕ್ರವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ ಐರೋಡಿ ಸಾಸ್ತಾನ ಇಲ್ಲಿ ಕರ್ಣಾಟಕ ಬ್ಯಾಂಕ್ ವತಿಯಿಂದ ನಿರ್ಮಿಸಿಕೊಟ್ಟ ಶಾಲಾ ತರಗತಿ ಕೊಠಡಿಯನ್ನು ಉದ್ಘಾಟಿಸಿ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಕೀರಿಮೆ ಸಲ್ಲ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತವರು ವೈಜ್ಞಾನಿಕ ಲೋಕದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಶೈಕ್ಷಣಿಕ ಹಿನ್ನಲ್ಲೆಗೆ ಭಾಷೆಯೇ ಅಂತಿಮವಲ್ಲ ಬದಲಾಗಿ ಎಲ್ಲಾ ಭಾಷೆಗಳನ್ನು ಸಮನಾಗಿ ಸ್ವೀಕರಿಸಿ ಅದರ ಆಯಾಮದ ಮೇಲೆ ಮುಂದುವರೆಯಬೇಕು, ಮಾತೃಭಾಷೆಯ ಮೇಲೆ ಅಭಿಮಾನ ಇಟ್ಟು ವ್ಯವಹರಿಸಬೇಕು ಈ ಹಿನ್ನಲ್ಲೆಗಾಗಿ ಕರ್ಣಾಟಕ ಬ್ಯಾಂಕ್ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿ ಅದರ ಅಭಿವೃದ್ಧಿಗೆ ಸದಾ ಶ್ರಮಿಸಲಿದೆ, ಸಾಮಾಜಿಕ ಕ್ಷೇತ್ರದಲ್ಲಿ ಕರ್ಣಾಟಕ ಬ್ಯಾಂಕ್ ತನ್ನದೇ ಆದ ಕೊಡುಗೆ ನೀಡುತ್ತಿದೆ ಇನ್ನಷ್ಟು ಸೇವೆ ನೀಡಲಿದೆ ಎಂದರು.

    ಇದೇ ವೇಳೆ ಕರ್ಣಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ, ಎ.ಜಿ.ಎಂ ರಾಜ್‍ಗೋಪಾಲ್ ಬಿ ಹಾಗೂ ಕಟ್ಟಡ ಗುತ್ತಿಗೆದಾರ ಮಂಜುನಾಥ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

    ಅಧ್ಯಕ್ಷತೆಯನ್ನು ಐರೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಸಕು ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ತಾಲೂಕು ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಪಿ,ಬ್ರಹ್ಮಾವರ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಂದ ಗಾಣಿಗ, ನಿವೃತ್ತ ಶಿಕ್ಷಕ ರಾಮದೇವ ಹಂದೆ, ಕೂಟ ಮಹಾಜಗತ್ತು ಅಂಗಸಂಸ್ಥೆ ಸಾಲಿಗ್ರಾಮ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಪಂಚಾಯತ್ ಸದಸ್ಯರಾದ ನಟರಾಜ್ ಗಾಣಿಗ, ಶೇಖರ್ ಪೂಜಾರಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ರೇಖಾ ಉಡುಪ, ಸಿಆರ್ ಪಿ ಅನುಪಮ, ಕರ್ಣಾಟಕ ಬ್ಯಾಂಕ್ ಚೀಫ್ ಮ್ಯಾನೇಜರ್ ಚಕ್ರಪಾಣಿ ವಿ.ವಿ, ಐರೋಡಿ ಶಾಖೆಯ ಪ್ರಭಂಧಕ ಮಂಜುನಾಥ್ ಸೇಟ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಪ್ರಸಿಲ್ಲಾ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿ ಉಷಾರಾಣಿ ನಿರೂಪಿಸಿದರು. ಶಿಕ್ಷಕಿ ವೀಣಾ ಪ್ರಾಸ್ತಾವನೆ ಸಲ್ಲಿಸಿ ವಂದಿಸಿದರು.

  • ಕೋಟ :ನೆಲ ಜಲ ಸಂರಕ್ಷಣೆಗೆ ಜಿಲ್ಲಾಡಳಿತದಿಂದ ನಿರಂತರ ಕಾರ್ಯಕ್ರಮ- ಜಿಲ್ಲಾಧಿಕಾರಿ ವಿದ್ಯಾ ಕುಮಾರಿ

    ಕೋಟ :ನೆಲ ಜಲ ಸಂರಕ್ಷಣೆಗೆ ಜಿಲ್ಲಾಡಳಿತದಿಂದ ನಿರಂತರ ಕಾರ್ಯಕ್ರಮ- ಜಿಲ್ಲಾಧಿಕಾರಿ ವಿದ್ಯಾ ಕುಮಾರಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ನೆಲ-ಜಲ ಸಂರಕ್ಷಣೆ ಪ್ರತಿಯೊಬ್ಬರ ಆಧ್ಯ ಕರ್ತವ್ಯ ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ತಿಳಿಸಿದರು.

    ಅವರು ಉಡುಪಿ ಜಿ.ಪಂ. ನೇತೃತ್ವದಲ್ಲಿ ಕೋಡಿ ಹಾಗೂ ಕೋಟತಟ್ಟು ಗ್ರಾ.ಪಂ. ಆಶ್ರಯದಲ್ಲಿ, ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್ ನೇತೃತ್ವದಲ್ಲಿ ವಿಶ್ವ ಕಡಲ ದಿನದ ಅಂಗವಾಗಿ ಸೆ.28ರಂದು ಪಾರಂಪಳ್ಳಿಯ ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್‍ನಲ್ಲಿ ಜರಗಿದ ನದಿ ತೀರ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ನಮ್ಮ ಮುಂದಿನ ಪೀಳಿಗೆಗೆ ಪ್ರಕೃತಿಉಳಿಸಿಕೊಡಬೇಕಾದರೆ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ಸ್ವಚ್ಛ ವಾತವರಣ ನಾವು ಮುಂದಿನ ಜನಾಂಗಕ್ಕೆ ಕೊಡಬಹುದಾದ ದೊಡ್ಡ ಉಡುಗೊರೆಯಾಗಿದೆ ಎಂದರು.

    ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಮಾತನಾಡಿ, ನದಿ ಪಾತ್ರಗಳ ಸ್ವಚ್ಛತೆ ಕೂಡ ಇತರ ಸ್ವಚ್ಛತೆಯಷ್ಟೇ ಪ್ರಾಮುಖ್ಯತೆ ಹೊಂದಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಬೇಕಿದೆ ಎಂದರು.

    ಕುಂದಾಪುರ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್., ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಎಸ್.ಬಿ. ಎಂ. ಸಂಯೋಜಕ ರಘುನಾಥ್ ಜಾರ್ಕಳ, ಜೆ.ಜೆ.ಎಂ. ಸಂಯೋಜಕ ಸುಧೀರ್, ಜೋಸೆಫ್ ಜಿ. ಎಮ್. ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಕೆ.ಸತೀಶ್ ಕುಂದರ್ ಬಾರಿಕೆರೆ , ಉಪಾಧ್ಯಕ್ಷೆ ಸರಸ್ವತಿ, ಕಾರ್ಯದರ್ಶಿ ಸುಮತಿ ಅಂಚನ, ಕೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ್ ಮೆಂಡನ್, ಕಾರ್ಯದರ್ಶಿ ಉಷಾ ಶೆಟ್ಟಿ, ಮಣಿಪಾಲ ವಿಶ್ವ ವಿದ್ಯಾನಿಲಯದ ಉಪನ್ಯಾಸಕ ಸಂತೋಷ್ ಹಾಗೂ ವಿದ್ಯಾರ್ಥಿಗಳು, ಕಯಾಕಿಂಗ್ ಪಾಯಿಂಟ್‍ನ ಮುಖ್ಯಸ್ಥರಾದ ಮಿಥುನ್ ಮೆಂಡನ್, ಲೋಕೇಶ್, ವಿನಯ ಮೊದಲಾದವರು ಉಪಸ್ಥಿತರಿದ್ದರು.

    ಕಾಂಡ್ಲವನ ಸ್ವಚ್ಚತೆ :-
    ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತ, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಅಧಿಕಾರಿಗಳು, ಗ್ರಾ.ಪಂ. ಸದಸ್ಯರು, ಮಣಿಪಾಲ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕಯಾಕಿಂಗ್ ಮೂಲಕ ಕಾಂದ್ಲವನಕ್ಕೆ ತೆರಳಿ ಕಾಂಡ್ಲವನದ ಸ್ವಚ್ಛತೆ ಕೈಗೊಂಡರು ಹಾಗೂ ಈ ಸಂದರ್ಭ ಸಾಲಿಗ್ರಾಮ ಕಾಯಕಿಂಗ್ ಪಾಯಿಂಟ್ ವತಿಯಿಂದ ನಿರಂತರವಾಗಿ ನಡೆಯಲಿರುವ ಸ್ವಚ್ಛ ಸೀತಾ ನದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

  • ಕುಂದಾಪುರ: ಶ್ರೀಮಹಾಲಕ್ಷ್ಮೀ ಪ್ರಾಥಮಿಕ ಸೇವಾ ಸಹಕಾರಿ ಸಂಘ ಲೋಕಾರ್ಪಣೆ

    ಕುಂದಾಪುರ: ಶ್ರೀಮಹಾಲಕ್ಷ್ಮೀ ಪ್ರಾಥಮಿಕ ಸೇವಾ ಸಹಕಾರಿ ಸಂಘ ಲೋಕಾರ್ಪಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಇತ್ತೀಚಿನ ದಿನಗಳಲ್ಲಿ ಸಹಕಾರಿ ಸಂಸ್ಥೆಗಳ ಬಗ್ಗೆ ಜನರು ಒಲವು ತೋರಿಸುತ್ತಿದ್ದಾರೆ. ಅದಕ್ಕೆ ಬಹುಮುಖ್ಯ ಕಾರಣ ರಾಷ್ಟ್ರೀಕೃತ ಬ್ಯಾಂಕುಗಳ ಸಿಬ್ಬಂದಿಗಳಿಗೆ ಇರುವ ಭಾಷಾ ಸಮಸ್ಯೆ. ಈ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

    ಗುರುವಾರ ನಗರದ ಇಲ್ಲಿನ ವಿಕ್ರಮ್ ಸ್ಕ್ಯಾನಿಂಗ್ ಸೆಂಟರ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಲೋಕಾರ್ಪಣೆಗೊಂಡ ಶ್ರೀ ಮಹಾಲಕ್ಷ್ಮೀ ಪ್ರಾಥಮಿಕ ಸೇವಾ ಸಹಕಾರಿ ಸಂಘ ಉದ್ಘಾಟಿಸಿ ಮಾತನಾಡಿದರು.

    ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕಿನಷ್ಟೇ ಪ್ರಬಲವಾಗಿ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಘವು ಗ್ರಾಹಕರಿಗೆ ಉತ್ತಮ ಸೇವೆ ನೀಡುವುದನ್ನು ಆದ್ಯತೆ ಆಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

    ಕುಂದಾಪುರ ಉಪಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್‍ಕುಮಾರ್ ಭದ್ರತಾ ಕೋಶ, ದಲಿತ ದೌರ್ಜನ್ಯ ಪ್ರಕರಣಗಳ ಸರಕಾರಿ ವಿಶೇಷ ಅಭಿಯೋಜಕ ಸತೀಶ್ಚಂದ್ರ ಕಾಳಾವರ್ಕರ್ ಗಣಕಯಂತ್ರ ಉದ್ಘಾಟಿಸಿದರು. ಕಟ್ಟಡದ ಮಾಲೀಕ ಡಾ.ರಾಘವೇಂದ್ರ ಉಪಾಧ್ಯ ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಗಿರಿಜಾ ಟ್ರೇಡರ್ಸ್ ಮಾಲೀಕ ಬಿ.ವೆಂಕಟೇಶ್ ಶೇರುಗಾರ್ ನಗದು ಉದ್ಘಾಟಿಸಿದರು. ವಿಘ್ನೇಶ್ವರ ಪಾಲಿ ಪ್ರಾಡಕ್ಟ್ ಮಾಲೀಕ, ಸಂಘದ ಉಪಾಧ್ಯಕ್ಷ ಕೆ. ಪ್ರಕಾಶ್ ಬೆಟ್ಟಿನ್ ಸಾಲ ಡಿಡಿ ವಿತರಿಸಿದರು. ಸಂಘದ ಅಧ್ಯಕ್ಷ ಎಚ್.ಶಂಕರ ಶೇರುಗಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕರಾದ ರಾಜೇಶ ಕಾವೇರಿ, ಶರತ್‍ಕುಮಾರ್ ಕೆ.ಸಿ., ಚಂದ್ರಶೇಖರ ಬಿ.ಎಂ., ದಯಾನಂದ ಗಾಣಿಗ, ಕೆ.ಎಸ್.ಸಂತೋಷಕುಮಾರ್, ಅರುಣಕುಮಾರಿ, ಪೂರ್ಣಿಮಾ ಭವಾನಿಶಂಕರ್, ಜಯಲಕ್ಷ್ಮೀ ಎಂ.ವಿ., ಕೆ.ಉಮೇಶ್ ಮಧ್ಯಸ್ಥ, ಕೆ.ವಿ.ಭಾಸ್ಕರ್, ಉದ್ಯಮಿ ಸತೀಶ್ ಕಾವೇರಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಶಲಿತಾ ಪ್ರಾರ್ಥಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ನಾಯ್ಕ್ ಸ್ವಾಗತಿಸಿದರು. ನ್ಯಾಯವಾದಿ ರಾಘವೇಂದ್ರ ಚರಣ್ ನಾವಡ ಕಾರ್ಯಕ್ರಮ ನಿರ್ವಹಿಸಿದರು.

  • ಕುಂದಾಪುರ :ಮೂರನೇ ದಿನಕ್ಕೆ ಕಾಲಿರಿಸಿದ ಲಾರಿ ಮಾಲಿಕರ ಹೋರಾಟ – ಎತ್ತಿನಬಂಡಿ, ಕಂಬಳದ ಕೋಣ ಹಿಡಿದು ಪ್ರತಿಭಟಿಸಿದ ಪ್ರತಿಭಟನಾಕಾರರು

    ಕುಂದಾಪುರ :ಮೂರನೇ ದಿನಕ್ಕೆ ಕಾಲಿರಿಸಿದ ಲಾರಿ ಮಾಲಿಕರ ಹೋರಾಟ – ಎತ್ತಿನಬಂಡಿ, ಕಂಬಳದ ಕೋಣ ಹಿಡಿದು ಪ್ರತಿಭಟಿಸಿದ ಪ್ರತಿಭಟನಾಕಾರರು

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕಳೆದ ಮೂರು ದಿನಗಳಿಂದ ಕೋಟ ಮೂರ್‍ಕೈ ಬಳಿ ಕೋಟ ವಲಯ ಲಾರಿ ಮಾಲಿಕ ಹಾಗೂ ಚಾಲಕರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲಿಸ್ ಇಲಾಖೆಯ ಆದೇಶದ ವಿರುದ್ಧ ಹೋರಾಟ ಮೂರನೆ ದಿನಕ್ಕೆ ಕಾಲಿರಿಸಿದ್ದು ಗುರುವಾರ ಕಂಬಳದ ಕೋಣ ಹಾಗೂ ಎತ್ತಿನ ಬಂಡಿ ಹಿಡಿದು ಕೋಟದಿಂದ ಸಾಲಿಗ್ರಾಮದವರೆಗೆ ಮೆರವಣಿಗೆ ಮೂಲಕ ಪ್ರತಿಭಟಿಸಿತು.

    ಈ ಸಂದರ್ಭದಲ್ಲಿ ಮಾತನಾಡಿದ ಬೈಂದೂರು ಲಾರಿ ಮಾಲಕ ಹಾಗೂ ಚಾಲಕ ಸಂಘದ ಅಧ್ಯಕ್ಷ ದಿವಾಕರ್ ಶೆಟ್ಟಿ ಮಾತನಾಡಿ ಈ ವರೆಗೆ ಇಲ್ಲದ ಕಾನೂನನ್ನು ಪ್ರಸ್ತುತ ಹೇರಿರುವ ಕ್ರಮದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಕಾನೂನು ಆದೇಶಿಸಿ ಆದರೆ ಉಡುಪಿ ಜಿಲ್ಲೆ ಇಲ್ಲಿ ತುಂಡು ಭೂಮಿಗಳನ್ನು ಹೊಂದಿದ್ದು ಇಲ್ಲಿಯ ಮಣ್ಣು ಕಲ್ಲುಗಳನ್ನು ಕಾನೂನು ಬದ್ಧಗೊಳಿಸಲು ಸಾಧ್ಯವೇ ನಿಮ್ಮ ಈ ಮಧ್ಯಂತರ ಕಾನೂನಿನಿಂದ ಅದೆಷ್ಟೊ ಕುಟುಂಬಗಳು ಬೀದಿಗೆ ಬಂದಿವೆ ಇದರ ಹೊಣೆ ನೀವೆ ಹೊರಬೇಕಾಗಿದೆ. ಕೂಲಿ ಕಾರ್ಮಿಕರು ಅತಂತ್ರರಾಗಿದ್ದಾರೆ. ಸಮಸ್ಯೆಯನ್ನು ಶೀಘ್ರ ಪರಿಹರಿಸಿ ಎಂದು ಆಗ್ರಹಿಸಿದರು.
    ಇದೇ ವೇಳೆ ಕೋಟ ಮೂರ್ ಕೈ ಯಿಂದ ಹೊರಟ ಮೆರವಣಿಗೆ ಸಾಲಿಗ್ರಾಮ ಪ್ರವೇಶಿಸಿ ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಲಾಯಿತು.

    ಪಂಜು ಹಿಡಿದು ಪ್ರತಿಭಟನೆ
    ಬುಧವಾರ ರಾತ್ರಿ ಪ್ರತಿಭಟನಾ ಸ್ಥಳದಲ್ಲಿ ಪಂಜು ಹಿಡಿದು ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ತಮ್ಮ ಅಕ್ರೋಶವನ್ನು ಹೊರಹಾಕಿದರು.

    ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಶೀಘ್ರ ಬಗೆಹರಿಸಲು ಪ್ರತಿಭಟನಾಕಾರರು ಆಗ್ರಹಿಸಿದರು.

    ಪ್ರತಿಭಟನೆಯಲ್ಲಿ ಲಾರಿ ಮಾಲಿಕರ ಪರವಾಗಿ ಬಿಜೆಪಿ ಮುಖಂಡರಾದ ಐರೋಡಿ ವಿಠ್ಠಲ ಪೂಜಾರಿ, ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ, ಲಾರಿ ಮಾಲಿಕ ಚಾಲಕ ಸಂಘದ ಪ್ರಮುಖರಾದ ಶಿರಿಯಾರ ಗಣೇಶ್ ಪ್ರಸಾದ್ ಕಾಂಚನ್, ಗುಣಕರ ಶೆಟ್ಟಿ , ಭೋಜ ಪೂಜಾರಿ,ಮಹಾಬಲ ಪೂಜಾರಿ,ದಿನಕರ್ ಪೂಜಾರಿ,ಸುಧೀರ್ ಮಲ್ಯಾಡಿ,ಗಣೇಶ್ ಪೂಜಾರಿ, ಜನಾರ್ದನ್ ಪೂಜಾರಿ ಮತ್ತಿತರರು ಇದ್ದರು.

  • ಕುಂದಾಪುರ :ಮಣಿಪಾಲ ಆರೋಗ್ಯ ಕಾರ್ಡ್ 2023ರ ನೋಂದಾವಣಿ ಪ್ರಕ್ರಿಯೆಗೆ ಚಾಲನೆ

    ಕುಂದಾಪುರ :ಮಣಿಪಾಲ ಆರೋಗ್ಯ ಕಾರ್ಡ್ 2023ರ ನೋಂದಾವಣಿ ಪ್ರಕ್ರಿಯೆಗೆ ಚಾಲನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಮಣಿಪಾಲ ಆರೋಗ್ಯ ಕಾರ್ಡ್ 2023ರ ನೋಂದಾವಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನೊಂದಾವಣಿಗೆ ನವಂಬರ್ 30 ಕೊನೆಯ ದಿನವಾಗಿದೆ ಎಂದು ಕಸ್ತೂರ್ಬಾ ಆಸ್ಪತ್ರೆಯ ಮಣಿಪಾಲದ ವ್ಯವಸ್ಥಾಪಕ ಮೋಹನ ಶೆಟ್ಟಿ ಹೇಳಿದರು.

    ಕುಂದಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ದೂರದೃಷ್ಟಿಯ ಸಂಸ್ಕಾಪಕ ನಾಯಕ ಡಾ.ಟಿ.ಎಂ.ಎ. ಪೈ ಅವರ 125ನೇ ವರ್ಷದ ಜನ್ಮದಿನಾಚರಣೆಯನ್ನು ಆಚರಿಸುತ್ತಿದೆ. ಅವರ ಉದಾತ್ತ ಕಾರ್ಯವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಭಾರತೀಯ ಆರೋಗ್ಯ, ವ್ಯವಸ್ಥೆಯನ್ನು ಸಮಾಜಕ್ಕೆ ಸುಲಭವಾಗಿ ದೊರೆಯುವಂತೆ ಮಾಡಿದ ಸ್ಫೂರ್ತಿದಾಯಕ ಅಪರೂಪದ ನಾಯಕ ಡಾ. ಟಿ.ಎಂ.ಎ. ಪೈ. ಮಣಿಪಾಲ್ ಆರೋಗ್ಯ ಕಾರ್ಡ್ 2023ರ ನೋಂದಣಿ ಪ್ರಾರಂಭವಾಗಿದೆ. ಮಣಿಪಾಲ್ ಆರೋಗ್ಯ ಕಾರ್ಡ್ ಅನ್ನು ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ, ಇದು ಆಸ್ಪತ್ರೆಯ ಎಲ್ಲಾ ಆರೋಗ್ಯ ಸೇವೆಗಳ ಮೇಲೆ ರಿಯಾಯಿತಿ ನೀಡುತ್ತದೆ. ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ, ಯಾರಾದರೂ ಸದಸ್ಯರಾಗಬಹುದು ಮತ್ತು ಪ್ರಯೋಜನಗಳನ್ನು ಪಡೆಯಬಹುದು. ಕಾರ್ಡ್ ಖರೀದಿಸಲು ಹೂಡಿಕೆ ಮಾಡಿದ ಹಣವನ್ನು ಕೇವಲ ಎರಡು ಅಥವಾ ಮೂರು ಕಾರ್ಡ್ ಬಳಕೆಗಳಲ್ಲಿ ರಿಯಾಯಿತಿಯ ರೂಪದಲ್ಲಿ ಹಿಂಪಡೆಯಬಹುದು. “ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ” ಎಂಬುದು ಮಣಿಪಾಲ್ ಆರೋಗ್ಯ ಕಾರ್ಡ್‍ನ ಧ್ಯೆಯವಾಕ್ಯ. ಮಾಹೆ ಮಣಿಪಾಲದ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಮಣಿಪಾಲ ಆರೋಗ್ಯ ಕಾರ್ಡ್ ಅನ್ನು 2000 ರಲ್ಲಿ ಪ್ರಾರಂಭಿಸಲಾಯಿತು. ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಲು ಸಾಧ್ಯ ವಾಗದಿದ್ದರೂ ಎಲ್ಲರಿಗೂ ರಿಯಾಯಿತಿ ದರದಲ್ಲಿ ಲಭ್ಯವಾಗಬೇಕು ಎಂಬುದು ಇದರ ಉದ್ದೇಶವಾಗಿತ್ತು. ಸದಸ್ಯತ್ವ ಶುಲ್ಕವಾಗಿ ಒಂದು ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಯಾರಾದರೂ ಸದಸ್ಯತ್ವವನ್ನು ಪಡೆಯಬಹುದು ಮತ್ತು ಅವರು ಕಾರ್ಡಿನ ಕೇವಲ ಎರಡು ಅಥವಾ ಮೂರು ಬಳಕೆಗಳಲ್ಲಿ ರಿಯಾಯಿತಿಗಳ ರೂಪದಲ್ಲಿ ಅವರ ಹೂಡಿಕೆಯನ್ನು ಮರಳಿ ಪಡೆಯಬಹುದಾಗಿದೆ ಎಂದರು.

    ಮಣಿಪಾಲ್ ಆರೋಗ್ಯ ಕಾರ್ಡ್ 2023ರ ಯೋಜನೆಯು “ಒಂದು ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವವು ಒಬ್ಬರಿಗೆ ರೂ.300, ಕೌಟಂಬಿಕ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳಿಗೆ ರೂ.600 ಮತ್ತು ಕುಟುಂಬ ಪ್ಲಸ್ ಯೋಜನೆಗೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೆÇೀಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ ರೂ. 750. ಇದೊಂದು ಹೆಚ್ಚುವರಿ ಲಾಭವಾಗಿದೆ. 2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ ರೂ. 500 ಕುಟುಂಬಕ್ಕೆ ರೂ.800 ಮತ್ತು ಕೌಟಂಬಿಕ ಪ್ಲಸ್ ಯೋಜನೆಗೆ ರೂ. 950 ಆಗಿರುತ್ತದೆ ಎಂದರು.

    ಹೊರರೋಗಿ ವಿಭಾಗದಲ್ಲಿ ತಜ್ಞ ಅಥವಾ ಸೂಪರ್ ಸ್ಪೆಷಲಿಸ್ಟ್ ವೈದ್ಯರ ಸಮಾಲೋಚನೆಯಲ್ಲಿ ಶೇ.50 ರಿಯಾಯತಿ, ಪ್ರಯೋಗಾಲಯ ಪರೀಕ್ಷೆಯಲ್ಲಿ ಶೇ.30 ರಿಯಾಯತಿ, ಸಿಟಿ, ಎಂಆರ್‍ಐ, ಆಲ್ಟ್ರಾ ಸೌಂಡ್‍ಗಳಲ್ಲಿ ಶೇ.20 ರಿಯಾಯತಿ, ಹೊರರೋಗಿ ವಿಭಾಗದಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ ಶೇ.20 ರಿಯಾಯತಿ, ಒಳರೋಗಿ ವಿಭಾಗದಲ್ಲಿ ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾಗಿದ್ದಲ್ಲಿ ಉಪಯೋಗಿಸುವ ವಸ್ತುಗಳನ್ನು ಹೊರತುಪಡಿಸಿ ಶೇ.25 ರಿಯಾಯತಿ ಪಡೆಯಬಹುದು. ಔಷಧಾಲಯಗಳಲ್ಲಿ ಶೇ.12ವರೆಗೆ ರಿಯಾಯತಿ ಸಿಗಲಿದೆ ಎಂದರು.

    ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಕರಾವಳಿ ಕರ್ನಾಟಕ ಮತ್ತು ಗೋವಾದ ಮಣಿಪಾಲ್ ಗ್ರೂಪ್ ಆಸ್ಪತ್ರೆಗಳಿಗೆ ಈ ಯೋಜನೆ ಅನ್ವಯಿಸುತ್ತದೆ. ಇದರಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ.ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿ ಮತ್ತು ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ, ಕೆಎಂಸಿ ಆಸ್ಪತ್ರೆ ಅತ್ತಾವರ ಮತ್ತು ಅಂಬೇಡ್ಕರ್ ಸರ್ಕಲ್ ಮಂಗಳೂರು ಮತ್ತು ದುರ್ಗಾ ಸಂಜೀವನಿ ಮಣಿಪಾಲ ಆಸ್ಪತ್ರೆ ಕಟೀಲ್ ಮತ್ತು ಮಣಿಪಾಲ್ ಆಸ್ಪತ್ರೆ ಗೋವಾ, ಮಣಿಪಾಲ ಮತ್ತು ಮಂಗಳೂರಿನಲ್ಲಿರುವ ಚಿಕಿತ್ಸಾ ಅಸ್ಪತ್ರೆಗಳಲ್ಲಿ ರಿಯಾಯಿತಿ ಪುಯೋಜನಗಳನ್ನು ಪಡೆಯಬಹುದು. ಮಣಿಪಾಲ ಆರೋಗ್ಯ ಕಾರ್ಡ್‍ನ್ನು ಒಂದು ಅಥವಾ ಎರಡು ವರ್ಷದ ಅವಧಿಗೆ ಎಷ್ಟು ಬಾರಿಯಾದರೂ ಉಪಯೋಗಿಸಬಹುದು. ಕಾರ್ಡ್ ನೋಂದಾಯಿಸಿದ ಮೊಬೈಲ್ ಸಂಖ್ಯೆಯಿಂದ 8867579797 ಗೆ ಮಿಸ್ ಕಾಲ್ ಕೊಡುವುದರ ಮೂಲಕ ನೋಂದಣಿ ಮಾಡಿದ ಆರೋಗ್ಯ ಕಾರ್ಡ್‍ನ ಮಾಹಿತಿ ಪಡೆಯಬಹುದು. ಕಳೆದ 22 ವರ್ಷಗಳಲ್ಲಿ, ಸಾಮಾಜಿಕ ಕಾಳಜಿಯೊಂದಿಗೆ ನಾವು ಲಕ್ಷಾಂತರ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ರಿಯಾಯಿತಿ ದರದಲ್ಲಿ ಒದಗಿಸುತ್ತಿದ್ದೇವೆ. ಇತರ ಆಸ್ಪತ್ರೆಗಳ ರಿಯಾಯಿತಿ ಮಾದರಿಗಳನ್ನು ತಿಳಿಯಲು ಮತ್ತು ಹೆಚ್ಚಿನ ವಿವರಗಳನ್ನು www.manipalhealthcard com ಗೆ ಲಾಗ್ ಇನ್ ಆಗುವುದರ ಮೂಲಕ ತಿಳಿದುಕೊಳ್ಳಬಹುದು. ಸಾರ್ವಜನಿಕರು ಮಣಿಪಾಲ್ ಆರೋಗ್ಯ ಕಾರ್ಡ್ ಅನ್ನು ಎಲ್ಲಾ ಅಧಿಕೃತ ಪ್ರತಿನಿಧಿಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 9980854700/ 08202923748 ಗೆ ಸಂಪರ್ಕಿಸಬಹುದು ಎಂದರು.
    2023ರ ನೋಂದಾವಣಿಗಾಗಿ ಈ ಭಾಗದ ನಮ್ಮ ಅಧಿಕೃತ ಪ್ರತಿನಿಧಿಗಳಾದ ನಾಗರಾಜ-9916888916, ಭದ್ರಯ್ಯ-9448872666, ಸೈಂಟ್ ಮಿಲಾಗ್ರೇಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್-8884459066, ವಂಡ್ಸೆ-ರಕ್ಷಿತ್ ಕುಮಾರ್-9743366746, ಕೋಟ ಸಹಕಾರಿ ವ್ಯವಸಾಯಕ ಸಂಘ (ಸಿ) (ಎಲ್ಲಾ ಶಾಖೆಗಳು) 9448761312 ಇಲ್ಲಿ ನೊಂದಾವಣಿ ಮಾಡಬಹುದು ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಮಾರುಕಟ್ಟೆ ವಿಭಾಗದ ಪ್ರತಿನಿಧಿ ಅಕ್ಷಯ್ ಕುಮಾರ್, ಅನಿಲ್, ಪ್ರತಿನಿಧಿ ಭದ್ರಯ್ಯ ಕೋಟೇಶ್ವರ ಉಪಸ್ಥಿತರಿದ್ದರು.

     

  • ಕೋಟ: ಈದ್ ಮಿಲಾದ್ ರ್ಯಾಲಿ – ಹಿಂದೂ ಮುಸ್ಲಿಂ ಸೌಹಾರ್ದದತೆಗೆ ಸಾಕ್ಷಿಯಾದ ಕೋಟತಟ್ಟು ಪಡುಕರೆ

    ಕೋಟ: ಈದ್ ಮಿಲಾದ್ ರ್ಯಾಲಿ – ಹಿಂದೂ ಮುಸ್ಲಿಂ ಸೌಹಾರ್ದದತೆಗೆ ಸಾಕ್ಷಿಯಾದ ಕೋಟತಟ್ಟು ಪಡುಕರೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಲೋಕ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜನುಮದಿನದ ಪ್ರಯುಕ್ತ ಬ್ರಹ್ಮಾವರ ತಾಲೂಕಿನ ಕೋಟತಟ್ಟುನಿಂದ ಕೋಡಿ ಕನ್ಯಾಣದವರೆಗೆ ಮುಸ್ಲಿಮರು ಬಹು ಸಂಖ್ಯೆಯಲ್ಲಿ ಮದರಸ ಮಕ್ಕಳು, ಕಿರಿಯರು, ಹಿರಿಯರು ಸೇರಿ ಕಾಲ್ನಡಿಗೆಯಲ್ಲಿ ಈದ್ ಮಿಲಾದ್ ಸಂದೇಶ ರ್ಯಾಲಿಯನ್ನು ನಡೆಸಿದರು.

    ಈ ಸಂದರ್ಭದಲ್ಲಿ ಹಿಂದೂ ಬಾಂಧವರು ಕೂಡಾ ಈ ರ್ಯಾಲಿಗೆ ಸಹಕಾರ ನೀಡುವ ಮೂಲಕ ಹಿಂದೂ – ಮುಸ್ಲಿಂ ಸೌಹಾರ್ದಾತೆಗೆ ಸಾಕ್ಷಿಯಾದರು. ರ್ಯಾಲಿ ಸಾಗುವ ದಾರಿಯಲ್ಲಿ ಹಿಂದೂ ಬಾಂಧವರು ಐಸ್ ಕ್ರೀಮ್, ತಂಪು ಪಾನೀಯಗಳನ್ನು ವಿತರಿಸಿ ರ್ಯಾಲಿಯಲ್ಲಿ ಬಳಲಿದವರ ದಣಿವಾರಿಸಿದರು.

    ಕೋಟತಟ್ಟು ಪಡುಕರೆಯ ರತ್ನಾಕರ ಶ್ರೀಯಾನ್ ಅವರ ಮುಂದಾಳತ್ವದಲ್ಲಿ, ಕೋಟ ಸಿ. ಎ. ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ ಅವರ ಉಪಸ್ಥಿತಿಯಲ್ಲಿ ರ್ಯಾಲಿಯಲ್ಲಿ ಬಂದ ಮುಸ್ಲಿಮರಿಗೆ ಐಸ್ ಕ್ರೀಮ್ ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು.

    ಈ ಸಂದರ್ಭ ತಿಮ್ಮ ಬಿ. ಪೂಜಾರಿ, ರೇಖಾ ಪಿ. ಸುವರ್ಣ, ರತ್ನಾಕರ ಶ್ರೀಯಾನ್, ಮಹಾಬಲ ದೇವಾಡಿಗ, ಪ್ರತಾಪ್ ಪೂಜಾರಿ ಪಾರಂಪಳ್ಳಿ, ಉಮೇಶ್ ಪಡುಕರೆ, ನಾಗರಾಜ್, ಗಿರೀಶ್ ಪಡುಕರೆ ಮೊದಲದವರು ಭಾಗಿಯಾಗಿದ್ದರು. ಮುಸ್ಲಿಂ ಮುಖಂಡರು ಧನ್ಯವಾದಗಳನ್ನು ಸಲ್ಲಿಸಿದರು.

  • ಕುಂದಾಪುರ :ಕರಾಟೆಯಲ್ಲಿ ಪ್ರಥಮ ಸ್ಥಾನ ಪಡೆದ ಅಮೈರಾ

    ಕುಂದಾಪುರ :ಕರಾಟೆಯಲ್ಲಿ ಪ್ರಥಮ ಸ್ಥಾನ ಪಡೆದ ಅಮೈರಾ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಮಣಿಪಾಲದಲ್ಲಿ ಇತ್ತೀಚೆಗೆ ಆಯೋಜಿಸಲಾದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಸ್ಪರ್ಧೆಯ ಬಾಲಕಿಯರ ವಿಭಾಗಲ್ಲಿ ನಡೆದ ಕುಮಿಟೆ ಮತ್ತು ಕಟಾ ಎರಡೂ ಸ್ಪರ್ಧೆಗಳಲ್ಲಿ ಕುಂದಾಪುರದ ಓಕ್ ವುಡ್ ಇಂಡಿಯನ್ ಸ್ಕೂಲ್ ನ 3ನೇ ತರಗತಿ ವಿದ್ಯಾರ್ಥಿನಿಯಾಗಿರುವ ಅಮೈರಾ ಶೋಲಾಪುರ್ ಪ್ರಥಮ ಸ್ಥಾನಗಳಿಸಿದ್ದಾಳೆ. ಈಕೆ ಹೆಮ್ಮಾಡಿ ಸಂತೋಷ್ ನಗರದ ನಿವಾಸಿ ರಝಿಯಾ ಸುಲ್ತಾನ ಮತ್ತು ಯಾಸೀನ್ ಫೈರೋಜ್ ದಂಪತಿಗಳ ಪುತ್ರಿಯಾಗಿದ್ದಾಳೆ. ಕುಂದಾಪುರದ ಕರಾಟೆ ಶಿಕ್ಷಕರಾದ ಕಿಯೊಶಿ ಕಿರಣ್, ಶಿಹಾನ್ ಸಂದೀಪ್, ಸಿಹಾನ್ ಶೇಕ್ ಹಾಗೂ ನಟರಾಜ್ ಅವರಲ್ಲಿ ತರಬೇತಿ ಪಡೆದಿರುತ್ತಾಳೆ.

  • ಅಂತರ್ ಕಾಲೇಜು ಭಕ್ತಿಗೀತೆ ಸ್ಪರ್ಧೆಯಲ್ಲಿ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಕೇದಾರ್ ಮರವಂತೆ ದ್ವಿತೀಯ ಸ್ಥಾನ

    ಅಂತರ್ ಕಾಲೇಜು ಭಕ್ತಿಗೀತೆ ಸ್ಪರ್ಧೆಯಲ್ಲಿ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಕೇದಾರ್ ಮರವಂತೆ ದ್ವಿತೀಯ ಸ್ಥಾನ

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ: ಶ್ರೀ ಶಾರದಾ ಪದವಿಪೂರ್ವ ಕಾಲೇಜು ಬಸ್ರೂರು ಇವರು ಆಯೋಜಿಸಿದ ಅಂತರ್ ಕಾಲೇಜು ಭಕ್ತಿಗೀತೆ ಸ್ಪರ್ಧೆಯಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ಕೇದಾರ್ ಮರವಂತೆ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ.

    ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.