ಕುಂದಾಪುರ ಮಿರರ್ ಸುದ್ದಿ…

ಕೋಟ: ಭಜನೆ ಒಂದು ವಿಶೇಷವಾದ ಶಕ್ತಿವುಳ್ಳ ವ್ಯವಸ್ಥೆ ಆದರೆ ಅದನ್ನು ಆಧುನಿಕ ವ್ಯವಸ್ಥೆ ಕಸಿದುಕೊಂಡಿದೆ ಎಂದು ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಹೇಳಿದರು.
ಕೊಮೆ ಕೊರವಡಿ ಶ್ರೀ ಪಟ್ಟಾಭಿರಾಮಚಂದ್ರ ದೇಗುಲದ ಸುವರ್ಣ ಮಹೋತ್ಸವ ಹಾಗೂ ನೂತನ ಮಂದಿರ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿ ಆಗಿನ ಕಾಲದಲ್ಲೆ ಶ್ರದ್ಧಾ ಭಕ್ತಿಯ ತಾಣವಾಗಿ ಭಜನಾ ಮಂದಿರಗಳು ರೂಪುಗೊಂಡಿದ್ದವು ಆದರೆ ಕಾಲಕ್ರಮೇಣ ಅದು ಮೊಬೈಲ್ ಟಿ.ವಿ ಮಾಧ್ಯಮಗಳ ಹಾವಳಿಯಿಂದ ಕುಂಠಿತಗೊಂಡಿತು. ಆದರೆ ಇದೀಗ ಮತ್ತೆ ಭಜನಾ ಸಂಸ್ಕಾರ ಪುಟಿದೇಳುಲು ಆರಂಭಿಸಿದೆ ಇದೊಂದು ಸಂಸ್ಕಾರ ಬಿತ್ತುವ ಆಶಾದಾಯಕ ಬೆಳೆವಣಿಗೆಯಾಗಿದೆ. ಅವಿಭಜಿತ ಜಿಲ್ಲೆಗಳ ಕರಾವಳಿ ಭಾಗದ ಜನರಿಂದ ಭಜನೆ ಉಳಿವು ಕಂಡಿದೆ. ಭಜನೆಯ ಮೂಲಕ ಭಗವಂತನನ್ನು ಸುಲಭವಾಗಿ ಕಾಣುವ ಶಕ್ತಿ ಕೇಂದ್ರವಾಗಿದೆ. ಇಂದಿನ ಯುವ ಸಮೂಹ ಭಜನೆಯನ್ನು ಉಳಿಸಿ ಬೆಳೆಸಿ ಬಿಡುವಿನ ಸಯಮವನ್ನು ಸದುಪಯೋಗಿಸಿ ಮುಂದಿನ ಜನಾಂಗಕ್ಕೆ ಕೊಂಡ್ಯೊಯುವ ಕಾರ್ಯ ಮಾಡಲಿ ಆ ಮೂಲಕ ಪಟ್ಟಾಭಿರಾಮಚಂದ್ರ ಮಂದಿರ ಕಡಲೂರ ಸಂಸ್ಕ್ರತಿ ಕೇಂದ್ರ ಸ್ಥಾನವಾಗಿ ಬೆಳಗಲಿ ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಕೊಮೆ ಕೊರವಡಿ ಬೊಬ್ಬರ್ಯ ಮತ್ತು ಹಳೆಯಮ್ಮ ಪರಿವಾರ ದೇವಸ್ಥಾನದ ಮುಕ್ತೇಸರ ಕೆ.ಅಶೋಕ್ ಹತ್ವಾರ್ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂಡಳಿ ಅಧ್ಯಕ್ಷ ಕೆ.ಚಂದ್ರ ಕಾಂಚನ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೋಟ ಜನತಾ ಫಿಶ್ಮೀಲ್ ನಿರ್ದೇಶಕ ಪ್ರಶಾಂತ್ ಎ ಕುಂದರ್,ಉಡುಪಿ ಭಜನಾ ಮಂಡಳಿಗಳ ಒಕ್ಕೂಟ ಅಧ್ಯಕ್ಷ ಭೋಜರಾಜ ಕಿದಿಯೂರು, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ, ತೆಕ್ಕಟ್ಟೆ ಗ್ರಾಮಪಂಚಾಯತ್ ಅಧ್ಯಕ್ಷೆ ಮಮತಾ ದೇವಾಡಿಗ, ಕುಂಭಾಶಿ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ವೇತ ಎಸ್ ಆರ್, ಶನೇಶ್ಚರ ದೇವಸ್ಥಾನ ಕೊಮೆ ಅಧ್ಯಕ್ಷ ಕೆ.ಎಸ್ ಗಣೇಶ್ ಉಪಸ್ಥಿತರಿದ್ದರು.
ಪಟ್ಟಾಭಿರಾಮಚಂದ್ರ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ವಿಠ್ಠಲ ಅನಂತ ಪೈ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯದಶಿ ರಾಜು ಪೂಜಾರಿ ಸ್ವಾಗತಿಸಿದರು.
ಕಾರ್ಯಕ್ರವನ್ನು ಹರೀಶ್ ಚಂದನ್ ಕೊರವಡಿ ನಿರೂಪಿಸಿ ವಂದಿಸಿದರು.











