ಕುಂದಾಪುರ ಮಿರರ್ ಸುದ್ದಿ…
ಕೋಟ: ಅಖಿಲ ಭಾರತೀಯ ಗ್ರಾಹಕ ಪಂಚಾಯತ್, ಕರ್ನಾಟಕ ಪ್ರಾಂತ ಮತ್ತು ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಶಿಬಿರವು ಮಾ.28ರಂದು ಗುರುವಾರ ಕೋಟ ಸಹಕಾರಿ ವ್ಯವಸಾಯಕ ಸಂಘದ ಪ್ರಧಾನ ಕಛೇರಿಯಲ್ಲಿ ಜರಗಿತು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್, ಕರ್ನಾಟಕ ಪ್ರಾಂತದ ಕೋಶಾಧ್ಯಕ್ಷ ನರಸಿಂಹ ನಕ್ಷತ್ರಿ ಇವರು ಕಾರ್ಯಕ್ರಮದ ಹಿನ್ನೆಲೆ ಬಗ್ಗೆ ತಿಳಿಸಿ, ಅಭ್ಯಾಗತರನ್ನು ಪರಿಚಯಿಸಿದರು. ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ ಇದರ ಅಧ್ಯಕ್ಷ ಜಿ. ತಿಮ್ಮ ಪೂಜಾರಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪಕ್ಷಿನೋಟದ ಕುರಿತು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ನೇಹಾ ಸಂತೋಷ್ ಜೋಶಿ.ಜಿ ಇವರು ಸಮಾಜದಲ್ಲಿ ಗ್ರಾಹಕ ಪಂಚಾಯತ್ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ನ ಕರ್ನಾಟಕ ಮಹಿಳಾ ಘಟಕದ ಪ್ರಮುಖ ಮತ್ತು ರಾಷ್ಟ್ರೀಯ ಆಹಾರ ಆಂದೋಲನದ ಪ್ರಮುಖ ಗಾಯತ್ರಿ ನಾಡಿಗ್ ಟಿ. ಆರ್. ಇವರು ಗ್ರಾಹಕ ಪಂಚಾಯತ್ ಕಾರ್ಯ ಚಟುವಟಿಕೆಗಳು, ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಹಾಗೂ ಬ್ಯಾಂಕಿಂಗ್ ಒಂಬಡಸನ್ ಬಗ್ಗೆ ಮಾಹಿತಿ ನೀಡಿದರು. ನಂತರ ಗಣ್ಯರನ್ನು ಸಂಘದ ಪರವಾಗಿ ಆತ್ಮೀಯವಾಗಿ ಗೌರವಿಸಲಾಯಿತು.
ಸಂಘದ ನಿರ್ದೇಶಕರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಘದ ನಿವೃತ್ತ ಮತ್ತು ಹಾಲಿ ಸಿಬ್ಬಂದಿಗಳು, ಸಲಹಾ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ ಕುಮಾರ್ ಶೆಟ್ಟಿ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು. ಸಂಘದ ಸಿಬ್ಬಂದಿ ಶಾಲಿನಿ ಹಂದೆ ಇವರು ಕಾರ್ಯಕ್ರಮ ನಿರೂಪಿಸಿದರು.











