ಸಹಕಾರ ಸಂಸ್ಥೆಗಳು ಲಾಭದ ದೃಷ್ಟಿಕೋನವನ್ನು ಇರಿಸಿಕೊಳ್ಳದೇ ಸೇವಾ ಮನೋಭಾವದಿಂದ ಮುನ್ನೆಡೆಯುತ್ತಿವೆ – ಡಾ.ಎಂ.ಎನ್ ರಾಜೇಂದ್ರ ಕುಮಾರ್
Video:-
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸಹಕಾರ ಸಂಸ್ಥೆಗಳು ಲಾಭದ ದೃಷ್ಟಿಕೋನವನ್ನು ಇರಿಸಿಕೊಳ್ಳದೇ ಸೇವಾ ಮನೋಭಾವದಿಂದ ಮುನ್ನೆಡೆಯುತ್ತಿವೆ. ಕೃಷಿಪತ್ತಿನ ಸಹಕಾರ ಸಂಘಗಳು ಸರ್ಕಾರ ನೀಡುವ ನಿಬಡ್ಡಿ ಸಾಲ, ಶೇ.3% ಬಡ್ಡಿ ಸಾಲಗಳನ್ನು ನೀಡಿ ರೈತರನ್ನು ಪ್ರೋತ್ಸಾಹಿಸುತ್ತಿವೆ. ಮರುಪಾವತಿಯಲ್ಲಿಯೂ ಕೂಡಾ ಅವಿಭಜಿತ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಇಲ್ಲಿ ಸಾಲ ಪಾವತಿಸಲಾಗದ ರೈತರ ಆತ್ಮಹತ್ಯೆ ಪ್ರಕರಣಗಳು ಇಲ್ಲ. ಕಾರಣ ವಿಶ್ವಾಸ, ಸದೃಢತೆ ಬಂದಿದೆ ಎಂದು ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು.
ಅವರು ಕುಂದಾಪುರ ತಾಲೂಕು ಗೋಳಿಯಂಗಡಿಯಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ನ ಎಟಿಎಂ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ 25 ವರ್ಷಗಳಿಂದ ಮಹಿಳೆಯರು ನವೋದಯ ಸ್ವಸಹಾಯ ಗುಂಪುಗಳ ಮೂಲಕ ಆರ್ಥಿಕವಾಗಿ ಸದೃಢರಾಗಿದ್ದಾರೆ. ನಾವು ಚಕ್ರಬಡ್ಡಿ ವಿಧಿಸುತ್ತಿಲ್ಲ. ಶೇ.12 ಬಡ್ಡಿದರದಲ್ಲಿ ಸ್ವಸಹಾಯ ಗುಂಪುಗಳಿಗೆ ಸಾಲ ನೀಡುತ್ತಿದ್ದೇವೆ ಎಂದರು.
ಎಟಿಎಂ ಉದ್ಘಾಟಿಸಿದ ಕುಂದಾಪುರದ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರ ಸಂಸ್ಥೆಗಳು ಎಲ್ಲ ಸ್ತರದ ಜನರಿಗೂ ಸರಳ ವ್ಯವಹಾರದಿಂದ ಆಪ್ತವಾಗಿದೆ ಎಂದು ಹೇಳಿದ ಅವರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಕಷ್ಟು ಸಾಧನೆಗಳನ್ನು ಮಾಡಿದೆ. ಕೃಷಿ ಪತ್ತಿನ ಸಹಕಾರ ಸಂಘಗಳು ಕೂಡಾ ಬೆಳೆದಿವೆ. ಈ ಸಾಧನೆಗಳ ಹಿಂದಿನ ಪ್ರೇರಕ ಶಕ್ತಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಎಂದರು.
ಈ ಸಂದರ್ಭದಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ಎ.ಕಿರಣ್ ಕುಮಾರ್ ಕೊಡ್ಗಿಯವರನ್ನು ದಕಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಗೌರವಿಸಲಾಯಿತು.
ಗೋಳಿಯಂಗಡಿಗೆ ಎಟಿಎಂ ಮಂಜೂರುಗೊಳಿಸಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಗೌರವಿಸಲಾಯಿತು. ಕಟ್ಟಡ ಮಾಲೀಕ ನಾಗರಾಜ ಭಟ್ ಅವರನ್ನು ಸನ್ಮಾನಿಸಲಾಯಿತು.
ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಚಂದ್ರಶೇಖರ ಶೆಟ್ಟಿ, ಕಟ್ಟಡ ಮಾಲಿಕರಾದ ನಾಗರಾಜ ಭಟ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಠೇವಣಿ ಪತ್ರ, ಸಾಲಪತ್ರ, ವಾಹನ ಸಾಲಪತ್ರವನ್ನು ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು. ಹೊಸದಾಗಿ ರಚನೆಗೊಂಡ ನವೋದಯ ಸ್ವಸಹಾಯ ಗುಂಪುಗಳನ್ನು ಉದ್ಘಾಟಿಸಲಾಯಿತು. ಸ್ವಸಹಾಯ ಗುಂಪುಗಳಿಗೆ ಸಾಲಪತ್ರ ವಿತರಣೆ ಮಾಡಲಾಯಿತು.ಚೈತನ್ಯ ವಿಮಾ ಪರಿಹಾರ ಮೊತ್ತವನ್ನು ಹಸ್ತಾಂತರ ಮಾಡಲಾಯಿತು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಂ.ಮಹೇಶ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ, 2007ರಲ್ಲಿ ಗೋಳಿಯಂಡಿಗಡಿಯಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಶಾಖೆ ಆರಂಭವಾಯಿತು. 2022ರಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಆ ಸಂದರ್ಭದಲ್ಲಿ ಎಟಿಎಂ ಬೇಡಿಕೆ ಸಲ್ಲಿಸಲಾಯಿತು. ತೀರಾ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡ ಗೋಳಿಯಂಡಿಗೆ ಕುಂದಾಪುರ ತಾಲೂಕಿನ 2ನೇ ಎಟಿಎಂನ್ನು ಡಾ.ಎಂ.ಎನ್,ರಾಜೇಂದ್ರ ಕುಮಾರ್ ಮಂಜೂರುಗೊಳಿಸಿದ್ದಾರೆ ಎಂದರು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ಗೋಪಾಲಕೃಷ್ಣ ಭಟ್ ಕೆ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.











