ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಡಿ ಕನ್ಯಾಣ ಶ್ರೀ ರಾಮಾಂಜನೇಯ ವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಇದರ ಹತ್ತನೇ ವಾರ್ಷಿಕ ಮಹಾಸಭೆಯು ಸೆ.2ರ ಶನಿವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿ ಕನ್ಯಾನದ ಸಭಾಂಗಣದಲ್ಲಿ ಜರುಗಿತು.
ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇದರ ನಿರ್ದೇಶಕರಾದ ಮಂಜುನಾಥ ಎಸ್.ಕೆ ಮಾತನಾಡಿ ದಶಮ ಸಂಭ್ರಮದಲ್ಲಿರುವ ಶ್ರೀ ರಾಮಾಂಜನೇಯ ಸೌಹಾರ್ದದ ಆಡಳಿತ ಮಂಡಳಿಗೆ ಶುಭ ಹಾರೈಸಿ ಸಂಸ್ಥೆಯು ವಿವಿಧ ರೀತಿಯ ಸೇವಾ ಚಟುವಟಿಕೆ ಮತ್ತು ಆರ್ಥಿಕ ವ್ಯವಹಾರಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ವಾರ್ಷಿಕ ಮಹಾಸಭೆಯ ಕಾರ್ಯಕಲಾಪಗಳನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ರಾಘವೇಂದ್ರ ಕರ್ಕೇರ ವಿವರವಾಗಿ ಮಂಡಿಸಿದರು. 2022-23 ನೇ ಸಾಲಿನ ವಾರ್ಷಿಕ ವರದಿಯನ್ನು ವ್ಯವಸ್ಥಾಪಕಿ ಪ್ರತಿಮಾ ವಾಚಿಸಿದರು. ಹಿಂದಿನ ಸಾಲಿನ ನಡವಳಿಗಳನ್ನು ಸಿಬ್ಬಂದಿ ಸ್ವಾತಿರವರು ವಾಚಿಸಿದರು.
ಈ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಾಧನೆಗೈದ ಶ್ರೇಷ್ಠ ಸಹಕಾರಿಗಳಾದ ಅಂಪಾರು ಜಗನ್ನಾಥ ಶೆಟ್ಟಿ ಮತ್ತು ಅಶೋಕ ಪ್ರಭು ಸಾಹೇಬಕಟ್ಟೆ ಇವರುಗಳನ್ನು ಆಡಳಿತ ಮಂಡಳಿ ಗೌರವಿತವಾಗಿ ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅಂಪಾರು ಜಗನ್ನಾಥ ಶೆಟ್ಟಿ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘ ಉಡುಪಿ ಜಿಲ್ಲೆಯಲ್ಲಿ ಒಂದು ಮಾದರಿ ಸೌಹಾರ್ದ ಸಹಕಾರಿ ಸಂಘ ಎನ್ನುವುದರ ಮೂಲಕ ಸಂಸ್ಥೆಯ ಕಾರ್ಯ ಚಟುವಟಿಕೆ, ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಅಗಾಧವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ಶಂಭು ಪೂಜಾರಿ ಸಂಸ್ಥೆಯ ಮುಂದಿನ ದಿನಗಳಲ್ಲಿ ದಶಮಾನೋತ್ಸವ ಸಂಭ್ರಮ ಆಚರಿಸುವುದರ ಮೂಲಕ ನಮ್ಮ ಸಂಸ್ಥೆಗೆ ಏಳಿಗೆಗೆ ಕಾರಣಿಕರ್ತರಾದ ಪ್ರತಿಯೊಂದು ಸದಸ್ಯರನ್ನು ಗುರುತಿಸಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಕಾರ್ಯಕ್ರಮವನ್ನು ಆಡಳಿತ ಮಂಡಳಿ ಈಗಾಗಲೇ ಹಮ್ಮಿಕೊಂಡಿದೆ. ಲಾಭಗಳಿಸುವುದು ಒಂದೇ ಉದ್ದೇಶವನ್ನು ಇರಿಸಿಕೊಳ್ಳದೆ ಹೆಚ್ಚಿನ ಸೇವಾ ಚಟುವಟಿಕೆ ಹಮ್ಮಿಕೊಳ್ಳುವುದರ ಮೂಲಕ ಸಂಸ್ಥೆಗೆ ಇನ್ನಷ್ಟು ಮೆರುಗು ನೀಡಲು ಪ್ರಯತ್ನಿಸುತ್ತೇವೆ ಎಂದರು.
ವಿವಿಧ ಶಾಲೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೂ ವಿಶೇಷವಾಗಿ ಪುರಸ್ಕಾರ ಸನ್ಮಾನ ಹಮ್ಮಿಕೊಳ್ಳಲಾಯಿತು. ಸದಸ್ಯರಿಗೆ 13 ಶೇಕಡಾ ಡಿವಿಡೆಂಡ್ ಘೋಷಣೆ ಮಾಡಲಾಯಿತು. ಸಹಕಾರಿಯ ವ್ಯವಸ್ಥಾಪಕ ಸಂದೀಪ್ ಕರ್ಕೇರ ನಿರೂಪಿಸಿದರು. ಉಪಾಧ್ಯಕ್ಷ ಮಹಾಬಲ ಕುಂದರ್ ಧನ್ಯವಾದ ಸಮರ್ಪಿಸಿದರು.











