ಕುಂದಾಪುರ ಮಿರರ್ ಸುದ್ದಿ…
ಕೋಟ: ನಬಾರ್ಡ್ನ ಡಿಡಿಎಮ್ ಸಂಗೀತಾ ಎಸ್. ಕರ್ತಾ ಮತ್ತು ನಬಾರ್ಡ್ ಅಧಿಕಾರಿ ಜೈಶಂಕರ್ ಇವರ ನೇತೃತ್ವದಲ್ಲಿ ಬ್ರೀಡ್ನಿಂದ ಹೊಸದಾಗಿ ನೇಮಕಗೊಂಡ ಲಕ್ನೋದ 30 ಅಭಿವೃದ್ಧಿ ಸಹಾಯಕ ಅಧಿಕಾರಿಗಳು ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಂಘದ ವ್ಯವಹಾರದ ಅಭಿವೃದ್ಧಿ ಕುರಿತು ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಮಾಹಿತಿ ನೀಡಿ ಸಂಘವು ನಡೆದು ಬಂದ ದಾರಿ, ಸದಸ್ಯರಿಗೆ ಸಂಘದಿಂದ ದೊರಕುವ ವಿವಿಧ ಸಾಲಗಳು, ಸ್ವ ಸಹಾಯ ಸಂಘ ರಚನೆ, ಉಳಿತಾಯ ಕ್ರೋಢೀಕರಣ, ಸಾಲ ವಿತರಣೆ ಮತ್ತು ವಸೂಲಾತಿ, ಸಂಘದ ಸ್ವಂತ ಕಟ್ಟಡಗಳು ಮತ್ತು ಗೋದಾಮುಗಳು ಮತ್ತು ಸದಸ್ಯರಿಗೆ ಸಂಘದಿಂದ ದೊರಕುವ ವಿವಿಧ ಯೋಜನೆಗಳ ಬಗ್ಗೆ ಕುರಿತು ವಿವರವಾಗಿ ಮಾಹಿತಿ ನೀಡಿದರು. ಸದಸ್ಯರು ತಾವು ಬೆಳೆದ ಬೆಳೆಗಳನ್ನು ಉತ್ತಮ ಧಾರಣೆ ಸಿಗುವ ತನಕ ತಮ್ಮ ಸ್ವಂತ ಗೋದಾಮು ಅಥವಾ ಸಂಘದ ಗೋದಾಮಿನಲ್ಲಿ ದಾಸ್ತಾನು ಮಾಡಿ ಅವುಗಳ ಜವಾಬ್ದಾರಿ ಮೇಲೆ ಉತ್ಪತ್ತಿ ಈಡಿನ ಸಾಲ ಪಡೆದು ವ್ಯವಹರಿಸುವುದನ್ನು ಬ್ರೀಡ್ನ ಅಧಿಕಾರಿಗಳು ಗಮನಿಸಿ ಹರ್ಷ ವ್ಯಕ್ತಪಡಿಸಿದರು ಮತ್ತು ಮಾಹಿತಿ ಪಡೆದು ಚರ್ಚೆಯ ಮೂಲಕ ವಿಚಾರ ವಿನಿಮಯ ಮಾಡಿಕೊಂಡು ಸಂಘದ ವ್ಯವಸ್ಥಿತ ಕಾರ್ಯವೈಖರಿ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಅಭಿವೃದ್ಧಿಯನ್ನು ಶ್ಲಾಘಿಸಿದರು. ಸಂಘದ ನೂತನ ವಿಶಿಷ್ಟ ಯೋಜನೆಗಳಲ್ಲಿ ಒಂದಾದ ‘ಸಕಲ’ ಕೃಷಿ ಉಪಕರಣಗಳ ಮಾರಾಟ ಮಳಿಗೆಗೆ ಅವರು ಭೇಟಿ ನೀಡಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ ಕುಮಾರ್ ಶೆಟ್ಟಿ ಇವರು ಭೇಟಿ ನೀಡಿದ ಅಧಿಕಾರಿಗಳನ್ನು ಸ್ವಾಗತಿಸಿ ವಂದನಾರ್ಪಣೆ ನೆರವೇರಿಸಿದರು.











