ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ನ. 27ರ ಸೋಮವಾರ ಸಂಜೆ ಪಾರಂಪರಿಕ ಮಹಾ ಮೂಡು ಗಣಪತಿ ಸೇವೆಯನ್ನು ಕೋಟ ಮಾಗಣೆಯ ಹದಿನಾಲ್ಕು ಗ್ರಾಮಗಳ ಮೊಕ್ತೇಸರರ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು.
ಶ್ರೀ ಗುರುನರಸಿಂಹ ದೇವರಿಗೆ ಸಹಸ್ರ ನಾರಿಕೇಳ ಮತ್ತು ಪರಿವಾರ ದೇವತೆಗಳಾದ ಮಹಾ ಗಣಪತಿ, ದುರ್ಗಾಪರಮೇಶ್ವರಿ ಮತ್ತು ನಾಗದೇವರಿಗೆ ಕಟ್ಟು ಕಟ್ಟಳೆಯಂತೆ ನಾರಿಕೇಳ ಸಹಿತ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಆಂಜನೇಯ ದೇವರ ಸನ್ನಿಧಿಯಲ್ಲಿಯೂ ನಾರಿಕೇಳ ಸಮರ್ಪಣಾ ಸೇವೆಯನ್ನು ಮಾಡಲಾಯಿತು. ಸಾಮೂಹಿಕ ಫಲ ಪ್ರಾರ್ಥನೆಯ ನಂತರ ಅರ್ಚಕ ಜನಾರ್ದನ ಅಡಿಗ ಮತ್ತವರ ಸಹಾಯಕರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಮಂಗಳ ವಾದ್ಯದೊಂದಿಗೆ ಸಂಪನ್ನಗೊಂಡ ಮೂಡು ಗಣಪತಿಯ ಸೇವೆಯ ನಂತರ ವಾಡಿಕೆಯಂತೆ ಗ್ರಾಮಸ್ಥರಿಗೆ ಮತ್ತು ಪರವೂರ ಭಕ್ತಾದಿಗಳಿಗೆ ಮೊಕ್ತೇಸರರ ಸಮಕ್ಷಮ ಪ್ರಸಾದ ರೂಪದಲ್ಲಿ ತೆಂಗಿನ ಕಾಯಿಕಡಿಗಳನ್ನು ವಿತರಿಸಲಾಯಿತು. ಈ ವೇಳೆ ಶ್ರೀ ಗುರುನರಸಿಂಹ ದೇವಳದ ಅಧ್ಯಕ್ಷ ಡಾ. ಕೆ ಎಸ್ ಕಾರಂತ್ ಮತ್ತಿತರರು ಇದ್ದರು.











