ಕುಂದಾಪುರ ಮಿರರ್ ಸುದ್ದಿ…
ಕೊಲ್ಲೂರು: ಇಲ್ಲಿಗೆ ಸಮೀಪದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಗುರುವಾರ ಮಹಾ ನವರಾತ್ರಿ ಉತ್ಸವದ ಅಂಗವಾಗಿ ರಾತ್ರಿ 8 ಕ್ಕೆ ನಡೆದ ಶ್ರೀ ದೇವಿಯ ವೈಭವದ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ನವರಾತ್ರಿ ಪ್ರಾರಂಭವಾದ ದಿನದಿಂದ ನವರಾತ್ರಿಯವರೆಗೂ ದೇವಸ್ಥಾನದಲ್ಲಿ ವಿವಿಧ ಪೂಜೆ ಹಾಗೂ ಧಾರ್ಮಿಕ ಆಚರಣೆಯನ್ನು ಮಾಡಲಾಗಿತ್ತು. ಗುರುವಾರ ಸಂಜೆಯ ಬಳಿಕ ದೇಗುಲದಿಂದ ಹೊರಕ್ಕೆ ತರಲಾದ ಶ್ರೀ ದೇವಿಯ ಉತ್ಸವ ಮೂರ್ತಿಯ ಪ್ರದಕ್ಷಿಣಿ ಹಾಗೂ ಬಲಿ ಸೇವೆ ನಡೆದ ಬಳಿಕ ಶ್ರೀ ದೇವಿಯನ್ನು ಅಲಂಕರಿಸಿದ ಮರದ ಪುಷ್ಪ ರಥದಲ್ಲಿ ಕುಳ್ಳಿರಿಸಲಾಯಿತು.


ದೇವಸ್ಥಾನದ ತಂತ್ರಿ ರಾಮಚಂದ್ರ ಅಡಿಗರು ರಥಾರೋಹಣಳಾದ ಶ್ರೀ ದೇವಿಗೆ ಪೂಜೆ ನೆರವೇರಿಸಿ, ಮಂಗಳಾರತಿ ಎತ್ತಿದ ಬಳಿಕ, ರಥ ಪೂಜೆಯ ನಡೆಸಲಾಯಿತು. ನಂತರ ಸೇರಿದ್ದ ಸಾವಿರಾರು ಜನರು ಶ್ರೀ ದೇವಿಯ ಜಯ ಘೋಷದೊಂದಿಗೆ ರಥವನ್ನು ಎಳೆದರು. ದೇವಳದ ಒಳ ಪ್ರಾಂಗಣದಲ್ಲಿ ಸುತ್ತು–ಬಂದು ಮತ್ತೆ ರಥ ಮೂಲ ಸ್ಥಾನವನ್ನು ತಲುಪಿದ ಬಳಿಕ ರಥದ ಮೇಲಿನಿಂದ ಅರ್ಚಕರು ಎಸೆದ ನಾಣ್ಯವನ್ನು ಪಡೆದುಕೊಳ್ಳಲು ಭಕ್ತರು ಹರಸಾಹಸ ಪಟ್ಟರು. ಉತ್ಸವ ಮೂರ್ತಿಯನ್ನು ರಥದಿಂದ ಕೆಳಕ್ಕೆ ತರುವ ಕ್ಷಣಗಳಿಗಾಗಿ ಕಾಯುತ್ತಿದ್ದ ಭಕ್ತ ವರ್ಗ, ಕ್ಷಣ ಮಾತ್ರದಲ್ಲಿ ರಥಕ್ಕೆ ಅಲಂಕರಿಸಿದ್ದ ಹೂಗಳನ್ನು ಕಿತ್ತು ಅಲಂಕೃತ ರಥವನ್ನು ಬರಿದುಗೊಳಿಸಿದರು.
ಮರದ ರಥಕ್ಕೆ ಮನ್ನಣೆ
ಕಳೆದ ಹಲವು ವರ್ಷಗಳಿಂದ ನವರಾತ್ರಿಯ 9ನೇ ದಿನದ ಉತ್ಸವದ ಅಂಗವಾಗಿ ನಡೆಯುವ ರಥೋತ್ಸವದಲ್ಲಿ ಶ್ರೀ ದೇವಿಯನ್ನು ಮರದಿಂದ ಮಾಡಿದ ಪುಪ್ಪ ರಥದಲ್ಲಿ ಇಟ್ಟು ರಥೋತ್ಸವ ಮಾಡುವ ಪದ್ಧತಿಗಳು ಇತ್ತು. ಕಳೆದ ವರ್ಷ ಕೆಲವೊಂದು ತಾಂತ್ರಿಕ ಕಾರಣದಿಂದ ಚಿನ್ನದ ರಥದಲ್ಲಿ ರಥೋತ್ಸವ ಮಾಡಲಾಗಿತ್ತು. ಆದರೆ ಈ ಬಾರಿ ದೇವಸ್ಥಾನದ ಉತ್ಸವ ಆಚರಣೆಯ ಪರಂಪರೆಯಂತೆ ಚಿನ್ನದ ರಥದ ಬದಲು ಮರದ ರಥದಲ್ಲಿಯೇ ಉತ್ಸವ ಆಚರಣೆ ನಡೆಸಬೇಕು ಎಂದು ವ್ಯವಸ್ಥಾಪನಾ ಸಮಿತಿ ನಿಶ್ಚಯ ಮಾಡಿ, ಆದೇಶ ನೀಡಿದ್ದರಿಂದಾಗಿ ಪುಷ್ಪಾಲಂಕೃತಗೊಂಡ ಮರದ ರಥದಲ್ಲಿ ಶ್ರೀ ಮೂಕಾಂಬಿಕಾ ದೇವಿಯ ವೈಭವದ ರಥೋತ್ಸವ ನಡೆಯಿತು.
ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ದೇವಸ್ಥಾನದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಕೇರಳದ ಅಪರಾಧ ವಿಭಾಗದ ಎಡಿಜಿಪಿ ಸತ್ಯಜಿತ್, ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಸುರೇಂದ್ರನ್, ಮಂಜೇಶ್ವರ ಉದ್ಯಮಿ ವಿಜಯ್ ರೈ ಇದ್ದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಪ ವಿಭಾಗಾಧಿಕಾರಿ ಕೆ.ರಾಜು, ಸಮಿತಿ ಸದಸ್ಯರಾದ ಗಣೇಶ್ ಕಿಣಿ ಬೆಳ್ವೆ, ಜಯಾನಂದ ಹೋಬಳಿದಾರ್, ಡಾ.ಅತುಲಕುಮಾರ ಶೆಟ್ಟಿ, ಗೋಪಾಲಕೃಷ್ಣ ನಾಡಾ, ಕೆ.ಪಿ.ಶೇಖರ, ಸಂಧ್ಯಾ ರಮೇಶ್, ರತ್ನಾ ಕುಂದರ್, ಕಾರ್ಯನಿರ್ವಹಣಾಧಿಕಾರಿ ಪಿ.ಬಿ.ಮಹೇಶ್, ವಂಡಬಳ್ಳಿ ಜಯರಾಮ ಶೆಟ್ಟಿ, ರಮೇಶ್ ಗಾಣಿಗಾ ಕೊಲ್ಲೂರು, ಕಿಶೋರ ಹೆಗ್ಡೆ, ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತಕುಮಾರ ಶೆಟ್ಟಿ ಉಪ್ಪುಂದ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ, ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ.ವಿಕಾಶ್ ಹೆಗ್ಡೆ, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ, ಕೊಲ್ಲೂರು ಠಾಣಾಧಿಕಾರಿ ನಾಸೀರ್ ಹುಸೇನ್ ಇದ್ದರು.
ಶುಕ್ರವಾರ ವಿಜಯದಶಮಿ ಆಚರಣೆಯ ಅಂಗವಾಗಿ ಬೆಳಿಗ್ಗೆ 4 ಗಂಟೆಯಿಂದ ಪುಟಾಣೆ ಮಕ್ಕಳಿಗೆ ದೇವಸ್ಥಾನದ ಋತ್ವೀಜರ ಮೂಲಕ ಅಕ್ಷರಾಭ್ಯಾಸ ಕಾರ್ಯಕ್ರಮ, ಕದಿರು ಹಬ್ಬದ ಆಚರಣೆ ಹಾಗೂ ನವನ್ನಾಪ್ರಾಶನ ಹಾಗೂ ಸಂಜೆ ವಿಜಯೋತ್ಸವ ನಡೆಯಿತು.











