ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ರಸ್ತೆಯಲ್ಲಿ ಯಾರ ವಿರುದ್ದವೋ ಮಾತನಾಡುವುದರಿಂದ ದೇಶಪ್ರೇಮ ಜಾಗೃತವಾಗುವುದಿಲ್ಲ. ಸಮಾಜದಲ್ಲಿ ಶಾಂತಿ-ಸಾಮರಸ್ಯ, ಭಾವೈಕ್ಯಕತೆ ಹಾಗೂ ಬಂಧುತ್ವದ ಮೂಲಕ ನಮ್ಮ ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸುವ ಸಂಸ್ಕಾರಯುತ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕುವುದೇ ನಿಜವಾದ ದೇಶಪ್ರೇಮ ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಾನುವಾರ ನಡೆದ ಸಂಸ್ಥಾಪಕರ ದಿನಾಚರಣೆ, ವಾರ್ಷಿಕೋತ್ಸವ ಹಾಗೂ ‘ ಬ್ಯಾರೀಸ್ ನಾಲೆಡ್ಜೆ ಕ್ಯಾಂಪಸ್ ‘ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಸಕರು, ಸಂಸದರು, ಮಂತ್ರಿಗಳು, ವ್ಯಾಪಾರಸ್ಥರು, ಉದ್ಯಮಿಗಳು, ಅಧಿಕಾರಿಗಳು ಬಲಿಷ್ಠರಾಗೋದರಿಂದ ದೇಶ ಬಲಿಷ್ಠವಾಗೋದಿಲ್ಲ. ಭವಿಷ್ಯದ ಕನಸಿನ ಗುರಿ ಸಾಧನೆಗಾಗಿ ತರಗತಿ ಹಾಗೂ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಸೃಜನಶೀಲರಾದಾಗ ದೇಶ ಬಲಿಷ್ಠವಾಗುತ್ತದೆ. ಜನರ ಎಲ್ಲ ಕಷ್ಟಗಳು ಸರ್ಕಾರದಿಂದ ಪರಿಹಾರವಾಗೋದಿಲ್ಲ, ಮಕ್ಕಳಲ್ಲಿ ಇಚ್ಛಾ ಶಕ್ತಿ ಇದ್ದಾಗ ಮಾತ್ರ ಪೋಷಕರ ಸಂಕಷ್ಟಗಳು ಪರಿಹಾರವಾಗುತ್ತದೆ. ಸ್ವಾಭಿಮಾನದ ಬದುಕು, ತಾಳ್ಮೆ, ಸಹೋದರತೆಯ ಭಾವನೆಗಳನ್ನು ಒಳಗೊಂಡ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣಗಳು ಮಾತ್ರ ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಅಪಮಾನ, ನಿಂದನೆ, ಟೀಕೆಗಳನ್ನು ಸಹಿಸಿಕೊಂಡಾಗ ಮಾತ್ರ ಸಮಾಜಮುಖಿಯಾಗಿ ಎತ್ತರದ ಸ್ಥಾನ ಪಡೆಯಲು ಸಾಧ್ಯ. ಸಾಮಾಜಿಕ ಜಾಲತಾಣಗಳ ಆರೋಗ್ಯಕರವಲ್ಲದ ಟೀಕೆಗಳನ್ನು ನಿರ್ಲಕ್ಷ್ಯ ಮಾಡಬೇಕು. ಸಂಸ್ಕಾರಯುತವಾದ ಶಿಕ್ಷಣ ದೊರಕಿದಾಗ ಮಾತ್ರ ವ್ಯಕ್ತಿ ಉತ್ತಮ ಪ್ರಜೆಯಾಗಲು ಸಾಧ್ಯ. ಉನ್ನತ ಶಿಕ್ಷಣ ಪಡೆದವರೆಲ್ಲ ಆದರ್ಶ ಬದುಕನ್ನು ಬಾಳುತ್ತಿಲ್ಲ. ಎಷ್ಟೋ ಐಎಎಸ್ ಪದವಿ ಪಡೆದುಕೊಂಡವರು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಸಮಾಜ ಘಾತಕ ಕೃತ್ಯಗಳನ್ನು ಮಾಡುವವರು ಉನ್ನತ ಶಿಕ್ಷಣವನ್ನ ಪಡೆದುಕೊಂಡವರು ಆಗಿದ್ದಾರೆ. ದೇಶದ ಭವಿಷ್ಯಕ್ಕಾಗಿ ಒಳ್ಳೆಯ ಶಿಕ್ಷಣ ಸಂಸ್ಥೆಗಳ ಅಗತ್ಯ ಇದೆ. ಈ ನಿಟ್ಟಿನಲ್ಲಿ ಕೋಡಿಯ ಬ್ಯಾರೀಸ್ ಗ್ರೂಪ್ಸ್ ಅವರ ಶೈಕ್ಷಣಿಕ ಸೇವೆ ಅನುಕರಣೀಯ ಎಂದರು.
ಬಾರೀಸ್ ಎಜುಕೇಶನ್ ಲೋಗೋ ಅನಾವರಣ ಮಾಡಿ ಮಾತನಾಡಿದ ರಾಜ್ಯ ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು, ಶ್ರೀಮಂತಿಕೆ ಕನಸನ್ನು ನನಸು ಮಾಡೋದಿಲ್ಲ. ದೈವಿಕ ಪ್ರೇರಣೆ ಹಾಗೂ ಬದ್ಧತೆಗಳು ಮಾತ್ರ ಕನಸನ್ನು ಆರಳಿಸುತ್ತದೆ. ಸಾಮಾನ್ಯ ವಿದ್ಯಾರ್ಥಿಗೂ ಯೋಗ್ಯ ಶಿಕ್ಷಣವನ್ನು ನೀಡಿ ಅವರನ್ನು ಪ್ರತಿಭಾನ್ವೀತರನ್ನಾಗಿಸುವುದೇ ಶಿಕ್ಷಣದ ನಿಜವಾದ ಆಶಯ. ಸ್ವಚ್ಚಂದ ಹಾಗೂ ನೈಸರ್ಗಿಕ ಪ್ರಕೃತಿಯ ವಾತಾವರಣಗಳು, ಸಂಸ್ಕಾರಯುತ ಶಿಕ್ಷಣವನ್ನು ಪ್ರೇರೇಪಿಸುತ್ತದೆ. ಮಕ್ಕಳ ಭವಿಷ್ಯವನ್ನು ಅವರೇ ರೂಪಿಸಿಕೊಳ್ಳಬೇಕು. ಅವಕಾಶವಾದಿಗಳಾಗದೆ, ಆಶಾವಾದಿಗಳಾಗಬೇಕು. ಶ್ರಮ ಮತ್ತು ಓದು ಪ್ರತಿಯೊಬ್ಬರ ಬದುಕನ್ನು ರೂಪಿಸುತ್ತದೆ. ಡಾ.ಅಂಬೇಡ್ಕರ್, ಡಾ.ಅಬ್ದುಲ್ ಕಲಂ ಅವರ ಜೀವನದ ಯಶೋಗಾಥೆ ನಮ್ಮ ಮಕ್ಕಳಿಗೆ ಆದರ್ಶವಾಗಬೇಕು. ಅಡ್ಡದಾರಿಗಳು ನಮ್ಮ ಭವಿಷ್ಯದ ಕನಸುಗಳನ್ನು ನುಚ್ಚುನೂರು ಮಾಡುತ್ತದೆ ಎನ್ನುವ ನಿತ್ಯಸತ್ಯಗಳು ಮನನವಾಗಬೇಕು. ನಮ್ಮ ದೇಶದ ಶಾಶ್ವತ ಆಸ್ತಿಗಳಾದ ಮಕ್ಕಳು ಹಾಗೂ ಯುವ ಸಮುದಾಯವನ್ನು ಸರಿದಾರಿಯಲ್ಲಿ ನಡೆಸಿಕೊಂಡುಹೋಗುವ ಜವಾಬ್ದಾರಿಯನ್ನು ಎಲ್ಲರೂ ಬದ್ಧತೆಯಿಂದ ನಿರ್ವಹಿಸಬೇಕು ಎಂದರು.
ಧ್ವಜಾರೋಹಣ ನೆರವೇರಿಸಿದ ಶಾಸಕ ಎ.ಕಿರಣ್ಕುಮಾರ ಕೊಡ್ಗಿ ಮಾತನಾಡಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಲಸಿ ಗೌಡ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಸಬ್ಬ ಪಿ ಬ್ಯಾರಿ ಅವರನ್ನು ಗೌರವಿಸಲಾಯಿತು. ಪಂದ್ಯಾಟದಲ್ಲಿ ವಿಜೇತರಾದವರಿಗೆ ಹಾಗೂ ಶೈಕ್ಷಣಿಕ ಸಾಧನೆ ಮಾಡಿದವರನ್ನು ಅಭಿನಂದಿಸಲಾಯಿತು.
ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ ಮುಖ್ಯ ಶಿಕ್ಷಕಿ ಅಶ್ವಿನಿ ಶೆಟ್ಟಿ ಸ್ವಾಗತಿಸಿದರು, ಕೆ.ಮೊಹ್ದೀನ್ ಬ್ಯಾರಿ ಎಜುಕೇಶನ್ ಟ್ರಸ್ಟ್ನ ಆಡಳಿತ ಟ್ರಸ್ಟಿ ಸೈಯದ್ ಮೊಹಮ್ಮದ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಬ್ಯಾರೀಸ್ ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯಶೀಲ ಶೆಟ್ಟಿ ಹಾಗೂ ಬ್ಯಾರೀಸ್ ಶಿಕ್ಷಕರ ತರಬೇತಿ ಕಾಲೇಜಿನ ಪ್ರಾಂಶುಪಾಲೆ ಡಾ.ಫಿರ್ದೋಸ್ ವರದಿ ಮಂಡಿಸಿದರು, ಬ್ಯಾರೀಸ್ ಪಿ.ಯು ಕಾಲೇಜಿನ ಉಪನ್ಯಾಸಕಿ ಝಿಯಾನ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಶಮೀರ್ ವಂದಿಸಿದರು, ಉಪನ್ಯಾಸಕರಾದ ಪ್ರೊ.ಹಯವದನ ಹಾಗೂ ಸಂದೀಪ್ ಶೆಟ್ಟಿ ನಿರೂಪಿಸಿದರು.











