ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: 25 ವರ್ಷಗಳನ್ನು ಪೂರೈಸಿರುವ ಶ್ರೀ ವಿನಾಯಕ ಯುವಕ ಸಂಘದ ರಜತ ಮಹೋತ್ಸವ “ನೆಂಪು ಉತ್ಸವ”ಕ್ಕೆ ಸಿದ್ಧತೆ ನಡೆಸಿದೆ. ಫೆಬ್ರವರಿ 24ರ ಶನಿವಾರದಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಂಪುವಿನಲ್ಲಿ “ನೆಂಪು ಉತ್ಸವ”ದಲ್ಲಿ ಸಹಾಯ ಹಸ್ತ, ರಜತ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸಂಸ್ಥೆಯ ಆರಂಭದಿಂದಲೂ ಒಂದಲ್ಲ ಒಂದು ರೀತಿಯ ಸೇವಾ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿರುವ ಶ್ರೀ ವಿನಾಯಕ ಯುವಕ ಸಂಘವು ನೆಂಪು ಉತ್ಸವದಲ್ಲಿಯೂ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಉತ್ಸವ ವೇದಿಕೆಯಲ್ಲಿ ಹತ್ತು ಅಶಕ್ತ ಕುಟುಂಬಕ್ಕೆ ನೆರವಾಗುವುದು ಹಾಗೂ ವಿದ್ಯಾರ್ಥಿ ವೇತನ ವಿತರಿಸಲಾಗುತ್ತದೆ. ಅದರ ಜೊತೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರಣಕಟ್ಟೆ ಶ್ರೀ ಕೃಷ್ಣಮೂರ್ತಿ ಮಂಜರಿಗೆ ರಜತ ಪುರಸ್ಕಾರ ಅರ್ಪಿಸಿ ಗೌರವಿಸಲಾಗುತ್ತದೆ. ಉದ್ಯಮ ಕ್ಷೇತ್ರದಲ್ಲಿ ಸಾಧನೆಗೈದು, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮೂವರು ಹಟ್ಟೂರ ಸಾಧಕರಾದ ಸೀತಾರಾಮ್ ಶೆಟ್ಟಿ ನೆಂಪು, ಶ್ರೀನಿವಾಸ್ ಮೆಂಡನ್ ಬಳ್ಳಿಹಿತ್ಲು, ಶಿವರಾಮ್ ಮಂಗಲಸನಕಟ್ಟೆಯವರಿಗೆ ಹುಟ್ಟೂರು ಸನ್ಮಾನ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗ್ರಾಮದ ಸಾಧಕರನ್ನು ಸನ್ಮಾನಿಸಲಾಗುತ್ತದೆ.
ಜುಗಲ್ ಬಂಧಿ ಭರತನಾಟ್ಯ, ಜೊತೆಗೆ X TREAM DANCE ACADEMY UDUPI ಇವರಿಂದ ನೃತ್ಯೋತ್ಸವ, ಪ್ರಸಿದ್ಧ ಸಿನಿ ಗಾಯಕರಿಂದ ಸಂಗೀತೋತ್ಸವ, ಕಲಾಚಿಗುರು ಕಲಾತಂಡ ಹಳ್ಳಾಡಿ ಇವರಿಂದ ತ್ರಿವಳಿ ಚೇತನ್ ರವರ ಅಭಿನಯದ “ಹೆಂಗ್ಸ್ರ ಪಂಚೆತಿ” ಹಾಗೂ ತೆಂಕು ಬಡಗು ಸ್ಪರ್ಧಾತ್ಮಕ ಗಾನ ವೈಭವ “ನೆಂಪು ಯಕ್ಷ ಕಂಪು”, ಜೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಜೇತೆ “ಸಮೃದ್ಧಿ ಕುಂದಾಪುರ” ಇವರಿಂದ ಯಕ್ಷಗಾನ ನೃತ್ಯವನ್ನೊಳಗೊಂಡ ಬಹುದೊಡ್ಡ ವೇದಿಕೆಯ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.











