Video :
ಲಿಟಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಶಿಬಿರ “ಮಂಥನ” ಉದ್ಘಾಟನೆ

ಕುಂದಾಪುರ :ಬೇಸಿಗೆ ಶಿಬಿರಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ, ಪಠ್ಯೇತರ ಚಟುವಟಿಕೆಗಳಿಗೊಂದು ಉತ್ತಮ ವೇದಿಕೆ. ಈ ನಿಟ್ಟಿನಲ್ಲಿ ಎಲ್ಲಾ ಶಿಬಿರಾರ್ಥಿಗಳು ಸದುಪಯೋಗ ಪಡೆದುಕೊಳ್ಳುವಂತೆ ಖ್ಯಾತ ಚಲನ ಚಿತ್ರ ನಟರಾದ ಪ್ರಮೋದ್ ಶೆಟ್ಟಿಯವರು ಶಿಬಿರಾರ್ಥಿಗಳಿಗೆ ಮನವಿ ಮಾಡಿದರು.
ಸುಣ್ಣಾರಿಯ ಎಕ್ಸಲೆಂಟ್ ಹಾಗೂ ಯಡಾಡಿ ಮತ್ಯಾಡಿಯ ಲಿಟಲ್ ಸ್ಟಾರ್ ಆಂಗ್ಲ ಮಾಧ್ಯಮ ಸಂಸ್ಥೆಗಳ ಸಹಯೋಗದಲ್ಲಿ ಲಿಟಲ್ ಸ್ಟಾರ್ ಸಂಸ್ಥೆಯ ಆವರಣದಲ್ಲಿ ಮಕ್ಕಳಿಗೆ ಆಯೋಜಿಸಲಾದ ಬೇಸಿಗೆ ಶಿಬಿರ ಮಂಥನವನ್ನು ಉದ್ಘಾಟಿಸಿ ಮಾತನಾಡಿ ರಜಾದ ದಿನಗಳನ್ನು ಮಕ್ಕಳು ಉತ್ಸಾಹ ಹಾಗೂ ಉತ್ಪಾದಕವಾಗಿ ಬಳಸಿಕೊಳ್ಳಬೇಕು. ಇಂತಹ ಶಿಬಿರಗಳಲ್ಲಿ ವೈವಿಧ್ಯಮಯ ಚಟುವಟಿಕೆಗಳಿರುವುದರಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವುದು ಎಂದು ಹೇಳಿದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಯವರು, ಮಕ್ಕಳಿಗೆ ಪಠ್ಯದ ಜೊತೆ, ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸುವುದರ ಮೂಲಕ ಮಕ್ಕಳ ಸುಪ್ತ ಪ್ರತಿಭೆಗಳಿಗೆ ಉತ್ತಮ ಹೊಳಪನ್ನು ನೀಡಿ, ಕ್ರಿಯಾಶೀಲ ಹಾಗೂ ಸೃಜನಾತ್ಮಕ ಮನೋಭಾವಗಳನ್ನು ಉತ್ತೇಜಿಸುವಲ್ಲಿ ಇಂತಹ ಶಿಬಿರಗಳು ಸಹಕರಿಸುತ್ತವೆ. ಸದೃಢ ವ್ಯಕ್ತಿತ್ವ ನಿರ್ಮಾಣಕ್ಕೆ ಶಿಬಿರಗಳ ಕೊಡುಗೆ ಮಹತ್ತರವಾದುದು ಎಂದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಪ್ರತಾಪ್ ಚಂದ್ರ ಶೆಟ್ಟಿಯವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಎಲೆಕ್ಟ್ರಾನಿಕ್ ಗ್ಯಾಜೆಟ್ಗಳ ದಾಸರಾಗುತ್ತಿದ್ದು, ಅದನ್ನು ತಪ್ಪಿಸಲು ಈ ರೀತಿಯ ಬೇಸಿಗೆ ಶಿಬಿರಗಳಿಂದ ಸಾಧ್ಯ. ಮಕ್ಕಳು ಇಂತಹ ಉಪಕರಣಗಳ ದಾಸರಾಗದೇ ಉತ್ತಮ ಜೀವನ ಕೌಶಲ್ಯಗಳನ್ನು ಗಳಿಸಿಕೊಳ್ಳಬೇಕು ಎಂದು ಪೋಷಕರಿಗೆ ಹಾಗೂ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿ ಭರತ್ ಶೆಟ್ಟಿಯವರು ಶಿಬಿರದ ರೂಪರೇಷೆಗಳು, ಉದ್ದೇಶ ಹಾಗೂ ಉಪಯೋಗಗಳ ಬಗ್ಗೆ ಪ್ರಾಸ್ತವಿಕ ಮಾತನಾಡಿದರು.
ಬೇಸಿಗೆ ಶಿಬಿರ ಮಂಥನದ ಉದ್ಘಾಟನಾ ವೇದಿಕೆಯಲ್ಲಿ ಭ್ರಮಾಲೋಕ ಸೃಷ್ಟಿ ಮಾಡುವುದರ ಮೂಲಕ ಶಿಬಿರದ ಎಲ್ಲಾ ಚಟುವಟಿಕೆಗಳನ್ನು ಜಾದೂಪ್ರದರ್ಶನದಿಂದ ಅರ್ಥಪೂರ್ಣವಾಗಿ ಖ್ಯಾತ ಜಾದುಗಾರರಾಗಿರುವ ಸತೀಶ್ ಹೆಮ್ಮಾಡಿಯವರು ಚಾಲನೆ ಕೊಟ್ಟರು.
ಬೇಸಿಗೆ ಶಿಬಿರದಲ್ಲಿ 400 ಶಿಬಿರಾರ್ಥಿಗಳಿದ್ದು ಶಿಬಿರವು ಏ.8 ರಿಂದ 12ರವರೆಗೆ ನಡೆಯಲಿರುವುದು.
ಲಿಟಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಪ್ರದೀಪ್ ವಂದಿಸಿದರು. ಅರ್ಥಶಾಸ್ತ್ರದ ಉಪನ್ಯಾಸಕ ಶ್ರೀನಿವಾಸ ವೈದ್ಯ ಕಾರ್ಯಕ್ರಮ ನಿರೂಪಿಸಿದರು.











