ಉತ್ತಮ ಭವಿಷ್ಯ ರೂಪಿಸುವ ಶಿಕ್ಷಣಕ್ಕೆ ಒತ್ತು ನೀಡಬೇಕು – ಎಂ.ಕೃಷ್ಣಮೂರ್ತಿ ಮಂಜ
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ರಿ., ಮಾರಣಕಟ್ಟೆ, ಚಿತ್ತೂರು, ವತಿಯಿಂದ ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜರವರ ಸಂಸ್ಮರಣಾ ಕಾರ್ಯಕ್ರಮ ‘ಕಲ್ಪವೃಕ್ಷ’ ಕಾರ್ಯಕ್ರಮದಡಿ ನೆರವು, ಸಾಧಕರಿಗೆ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮ ಎಪ್ರಿಲ್ 16 ಮಂಗಳವಾರ ಸಂಜೆ ಮಾರಣಕಟ್ಟೆ ‘ಅನುಗ್ರಹ’ದ ವಠಾರದಲ್ಲಿ ನಡೆಯಿತು.
ಟ್ರಸ್ಟ್ನ ಗೌರವಾಧ್ಯಕ್ಷರಾದ ಶ್ರೀಧರ ಮಂಜರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ.ಕುಂದರ್ ಮಾತನಾಡಿ, ಒಬ್ಬ ಮನುಷ್ಯ ಹಿಂದಿನ ಕಷ್ಟಗಳನ್ನು ಮರೆಯದೇ ತನ್ನ ಸಂಪಾದನೆಯನ್ನು ಸದ್ವಿನಿಯೋಗ ಮಾಡಿದಾಗ ಆ ಮನುಷ್ಯ ಶ್ರೇಷ್ಠ ಎನಿಸಿಕೊಳ್ಳುತ್ತಾನೆ. ಅದಕ್ಕೆ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಸೂಕ್ತ ನಿರ್ದಶನ. ಅವರ ಸೇವಾ ಕೈಂಕರ್ಯಗಳು ಹೀಗೆ ಮುಂದುವರಿಯಲಿ, ಅವರ ಉದ್ಯಮದಲ್ಲಿ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು.
ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಎಂ.ಕೃಷ್ಣಮೂರ್ತಿ ಮಂಜರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡುವ ಕೆಲಸ ಟ್ರಸ್ಟ್ ಮಾಡುತ್ತಿದೆ. ಇದನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಮಹತ್ವಕಾಂಕ್ಷಿಯ ಯೋಜನೆಯನ್ನು ಹಾಕಿಕೊಂಡಿದೆ. ಊಟ ಕೊಟ್ಟರೆ ಆವತ್ತಿಗೆ ಆಗುತ್ತದೆ. ಊಟದ ಸಮಸ್ಯೆ ಇವತ್ತು ಯಾರಿಗೂ ಇಲ್ಲ, ಈಗ ಅಗತ್ಯವಿರುವುದು ಬದುಕನ್ನು ರೂಪಿಸುವ ಶಿಕ್ಷಣ, ಮಗುವಿಗೆ ಒಳ್ಳೆಯ ಶಿಕ್ಷಣ ಕೊಟ್ಟರೆ ಆತ ಏನೂ ಆಗಬಲ್ಲ, ಭವಿಷ್ಯ ರೂಪಿಸುವ ಶಿಕ್ಷಣಕ್ಕೆ ನಾವಿಂದು ಒತ್ತು ನೀಡಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಸದಾಶಿವ ಶೆಟ್ಟಿ, ಹಿರಿಯ ನ್ಯಾಯವಾದಿ ಎ.ಎಸ್.ಎನ್ ಹೆಬ್ಬಾರ್, ಪಾಂಡೇಶ್ವರದ ಅಷ್ಟಾಂಗ ಯೋಗ ಗುರುಕುಲದ ವಿದ್ವಾನ್ ಡಾ.ವಿಜಯ ಮಂಜರು, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ವಿಘ್ನೇಶ್ವರ ಮಂಜರು, ಟ್ರಸ್ಟಿನ ಕಾರ್ಯಾಧ್ಯಕ್ಷರಾದ ನಾಗರಾಜ ಮಂಜರು, ಟ್ರಸ್ಟಿನ ಸದಸ್ಯ ಸುಬ್ರಹ್ಮಣ್ಯ ಉಡುಪ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವೈದಿಕ ರತ್ನ ಪ್ರಶಸ್ತಿಯನ್ನು ಇಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ವೇ.ಮೂ.ಸೀತಾರಾಮ ಅಡಿಗ ಅವರಿಗೆ, ಅಮೂಲ್ಯ ರತ್ನ ಪ್ರಶಸ್ತಿಯನ್ನು ಬಾಳೆಕುದ್ರು ರಾಮಚಂದ್ರ ಉಪಾಧ್ಯಾಯ ಬೆಂಗಳೂರು ಇವರಿಗೆ, ಸೇವಾರತ್ನ ಪ್ರಶಸ್ತಿಯನ್ನು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗೇಶ್ ಅವರಿಗೆ, ಕಲಾ ರತ್ನ ಪ್ರಶಸ್ತಿಯನ್ನು ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕರು, ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಎಚ್.ಶ್ರೀಧರ್ ಹಂದೆಯವರಿಗೆ ಪ್ರದಾನ ಮಾಡಲಾಯಿತು. ಡಾಕ್ಟರೇಟ್ ಪದವಿ ಪಡೆದ ಉಪನ್ಯಾಸಕ ಡಾ.ವೆಂಕಟರಮಣ ಭಟ್ ನೆಂಪು ಇವರನ್ನು ವಿಶೇಷವಾಗಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಧರ ಹಂದೆಯವರು ಮಂಜರು ನಿಜವಾಗಿ ಕಲ್ಪವೃಕ್ಷ. ಅವರು ಮಾರಣಕಟ್ಟೆಯ ಧರ್ಮಾಧಿಕಾರಿ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ನೆರವು, ಶಿಕ್ಷಣ, ಗೃಹ ನಿರ್ಮಾಣ, ವಿವಾಹಕ್ಕೆ ನೆರವು ವಿತರಿಸಲಾಯಿತು.
ಟ್ರಸ್ಟಿನ ಗೌರವಾಧ್ಯಕ್ಷ ಶ್ರೀಧರ ಮಂಜರು ಸ್ವಾಗತಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಶಶಿಧರ ಶೆಟ್ಟಿ ವಂಡ್ಸೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉದಯ ಕುಮಾರ್ ಶೆಟ್ಟಿ ವಂಡ್ಸೆ, ಶಿಕ್ಷಕ ಚಂದ್ರ ಶೆಟ್ಟಿ, ರವಿರಾಜ ಶೆಟ್ಟಿ, ರಾಘವೇಂದ್ರ ಶೆಟ್ಟಿ ಸನ್ಮಾನಿತರ ಪರಿಚಯಿಸಿದರು. ದಾಮೋದರ ಶರ್ಮ ಬಾರಕೂರು ಕಾರ್ಯಕ್ರಮ ನಿರ್ವಹಿಸಿದರು. ಚಿತ್ತೂರು ಪ್ರಭಾಕರ ಆಚಾರ್ಯ ವಂದಿಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ರೂಪಕ ‘ಪರಶುರಾಮನ ಪಿತೃಭಕ್ತಿ’ ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ಇವರ ನಿರ್ದೇಶನದಲ್ಲಿ ಬೈಂದೂರಿನ ಸುರಭಿ ಕಲಾವಿದರು ಪ್ರಸ್ತುತಗೊಂಡಿತು. .ರಾತ್ರಿ 9.30ರಿಂದ ಮೆಕ್ಕೆಕಟ್ಟು ಮೇಳದವರಿಂದ ಯಕ್ಷಗಾನ ವಾಲಿ ಸುಗ್ರೀವ ಹಾಗೂ ಕನಕಾಂಗಿ ಕಲ್ಯಾಣ ಪ್ರದರ್ಶನಗೊಂಡಿತು.











