ಕುಂದಾಪುರ ಮಿರರ್ ಸುದ್ದಿ…
ಕೋಟ: ಗುರುಗಳ ಬಗ್ಗೆ ವಿಶೇಷ ಗೌರವ ಹಾಗೂ ಅವರ ನೆನಪಿನ ಮೂಲಕ ಶಿಷ್ಯ ವರ್ಗ ಗೌರವ ಸಲ್ಲಿಸುವ ಕಾರ್ಯ ಶ್ರೇಷ್ಠವಾದದ್ದು ಎಂದು ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ನುಡಿದರು.
ಭಾನುವಾರ ಕೋಟ ಮಣೂರು ಕೆ.ಸಿ ಕುಂದರ್ ಸಭಾಂಗಣದಲ್ಲಿ ಪಡುಕರೆ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಹಿಂದಿನ ವಿದ್ಯಾರ್ಥಿಗಳು ಹಮ್ಮಿಕೊಂಡ ಪುನರ್ ಮಿಲನ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ ಶೈಕ್ಷಣಿಕ ಜೀವನದ ಪರಿಭಾಷೆಗೆ ಮುನ್ನುಡಿ ಬರೆದ ಶಿಕ್ಷಕರು ತಮ್ಮ ಶಿಷ್ಯವೃಂದಕ್ಕೆ ಬದುಕಿನ ದಾರಿದೀಪ ನೀಡಿ ಆ ವಿದ್ಯಾರ್ಥಿಗಳಿಂದ ಗೌರವ ಸಲ್ಲಿಸಿಕೊಳ್ಳುವುದೇ ಬಹುದೊಡ್ಡ ಭಾಗ್ಯವಾಗಿದೆ. ಶಾಲಾ ಜೀವನವನ್ನು ಮತ್ತೆ ನೆನೆಪಿಸಿ ಆ ಮೂಲಕ ಆಗಿನ ಗುರುಗಳಿಗೆ ವಿಶೇಷ ಗೌರವ ಕಾಣಿಕೆ ಸಲ್ಲಿಸಿದ ಕಾರ್ಯ ನಿಜಕ್ಕೂ ಸಂತೋಷ ನೀಡಿದೆ ಇಂಥಹ ಕಾರ್ಯಕ್ರಮಗಳು ಆಗಾಗ ನಡೆದರೆ ಆ ಗುರುಗಳಿಗೆ ನೀಡುವ ಬಹುದೊಡ್ಡ ಗೌರವವಾಗಿದೆ ಎಂದು ಪುನರ್ ಮಿಲನ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಈ ವೇಳೆ 1995-99ರವರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಭವಾನಿ ಟೀಚರ್, ಗಾಯಿತ್ರಿ, ಸಹದೇವಿ ಕೋಟ್ಯಾನ್, ಬಸವ ಪೂಜಾರಿ, ಗಜೇಂದ್ರ ಶೆಟ್ಟಿ, ಸಂಜೀವ ಶೆಟ್ಟಿ, ರಾಜೀವ ಶೆಟ್ಟಿ, ಪ್ರಸಿಲ್ಲಾ, ಹರಿದಾಸ್ ಕಿಣಿ, ಕೃಷ್ಣ ಮಾಸ್ಟರ್, ಜ್ಞಾನೇಶ್ಚರಿ,ಶೇಖರ್ ಶೆಟ್ಟಿ, ನಾಗರತ್ನ, ಲಿನೇಖ ಟೀಚರ್, ಶೇಕರಪ್ಪ, ರುದ್ರಾಚಾರ್, ಜ್ಯೋತಿ, ವಿಠ್ಠಲ್ ವಿ ಗಾಂವ್ಕರ್, ರಾಮಚಂದ್ರ ಜೋಶಿ, ನಾಗೇಶ್ ಶ್ಯಾನುಭಾಗ್, ವಿಜಯ ಕುಮಾರ್, ರೇಖಾ ಸಿ ನಾಯಕ್, ಉಮಾಮದೇವಿ ಇವರುಗಳಿಗೆ ಗುರುವಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಆಗಿನ ಕಾಲದಲ್ಲಿ ಐಸ್ಕ್ಯಾಂಡಿ ವ್ಯಾಪಾರಿ ಸುಬ್ಬಣ್ಣ ಗಾಣಿಗ ಇವರಿಗೆ ವಿಶೇಷ ಸನ್ಮಾನ ನೀಡಲಾಯಿತು.
ಈ ವೇಳೆ ಶಿಷ್ಯವೃಂದದಿಂದ ಅನಿಸಿಕೆ, ಗುರುಗಳ ನೆನಪಿನ ಬುತ್ತಿ ವೇದಿಕೆಯಲ್ಲಿ ಅನಾವರಣಗೊಂಡಿತು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ಕೆಎಸ್, ಪ್ರೌಢಶಾಲಾ ವಿಭಾಗದ ಶಿಕ್ಷಕ ರಾಮದಾಸ್ ನಾಯಕ್ , ಉಪಸ್ಥಿತರಿದ್ದರು. ಸನ್ಮಾನ ಪತ್ರವನ್ನು ಪ್ರೀತಿಕಾ, ಚಂದ್ರಶೇಖರ್ ವಾಚಿಸಿದರು. ಹಳೆವಿದ್ಯಾರ್ಥಿ ವಿಮಲ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸರಿತಾ ನಿರೂಪಿಸಿದರು. ಲಕ್ಷ್ಮೀ ವಂದಿಸಿದರು. ನಾಗರಾಜ್ ಪಡುಕರೆ ಗಿಡಗಳನ್ನು ವಿತರಿಸಿದರು.











