ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಶೈಕ್ಷಣಿಕ ಕ್ಷೇತ್ರದ ಉತ್ಕೃಷ್ಟ ಉದಾಹರಣೆಯಾಗಿ, ಇಡೀ ದೇಶದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಳಿಂದ ಹೆಗ್ಗುರುತಾಗಿ ಬೆಳೆಯುತ್ತಿದೆ. “ಆಳ್ವಾಸ್ ಪ್ರಗತಿ” ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 2007ರಿಂದ ನಡೆಸಿಕೊಂಡು ಬರುತ್ತಿರುವ ಬೃಹತ್ ಉದ್ಯೋಗ ಮೇಳವಾಗಿದ್ದು, ಸಂಸ್ಥೆಯ ಸಿಎಸ್ಆರ್ ಚಟುವಟಿಕೆಯ ಭಾಗವಾಗಿ ಗ್ರಾಮೀಣ ಭಾಗದ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ಉಚಿತವಾಗಿ ವಿಶೇಷ ಔದ್ಯೋಗಿಕ ನೆರವು ನೀಡುವ ಉದ್ದೇಶವನ್ನು ವ್ಯವಸ್ಥಿತವಾಗಿ ಪೂರೈಸುತ್ತಾ ಬಂದಿದ್ದು, ಜೂನ್ 7 ಹಾಗೂ 8ರಂದು ಇಲ್ಲಿನ ವಿದ್ಯಾಗಿರಿಯ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರಸಾದ್ ಶೆಟ್ಟಿ ತಿಳಿಸಿದರು.
ಅವರು ಕುಂದಾಪುರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪತಿಷ್ಠಾನದವತಿಯಿಂದ ಆಯೋಜಿಸಲ್ಪಡುತ್ತಿರುವ ಬೃಹತ್ ಉದ್ಯೋಗ ಮೇಳ ಈ ಬಾರಿ 14ನೇ ಆವೃತ್ತಿಯದ್ದಾಗಿದೆ. ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ, ಐಟಿಎಸ್, ಮ್ಯಾನುಫ್ಯಾಕ್ಚರಿಂಗ್, ಹೆಲ್ತ್ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಹಾಸ್ಪಿಟಾಲಿಟಿ, ಟೆಲಿಕಾಂ, ಮಾಧ್ಯಮ, ಶಿಕ್ಷಣ ಮತ್ತು ಎನ್ಜಿಓಗಳನ್ನು ಪ್ರತಿನಿಧಿಸುವ ಉನ್ನತ ಕಂಪೆನಿಗಳು ಆಳ್ವಾಸ್ ಪ್ರಗತಿಯಲ್ಲಿ ನೇಮಕಾತಿ ನಡೆಸಲಿವೆ. ಈ ಕಂಪೆನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ ಎಸ್ಎಸ್ಎಲ್ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ ಎಂದರು.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕಂಪೆನಿಗಳ ವಿವರ ಹಾಗೂ ನವೀಕೃತ ಮಾಹಿತಿಗಳನ್ನು ಅಧಿಕೃತ ವೆಬ್ಸೈಟ್ www.alvaspragati.comನಲ್ಲಿ ಪ್ರಕಟಿಸಲಾಗಿದೆ. ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು ಈ ವೆಬ್ಸೈಟ್ನಲ್ಲಿ ಕಡ್ಡಾಯವಾಗಿ ಉಚಿತ ಆನ್ಲೈನ್ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಆಳ್ವಾಸ್ ಸಂಸ್ಥೆಯ ಪರಿಣತ ತಂಡದಿಂದ `ಆಳ್ವಾಸ್ ಪ್ರಗತಿ’ಯಲ್ಲಿ ಉದ್ಯೋಗ ನೀಡುವ ಕಂಪೆನಿಗಳ ಮಾಹಿತಿ, ಸಂದರ್ಶನಾ ಕೌಶಲ್ಯಗಳ ತರಬೇತಿಯನ್ನು ವಿವಿಧ ಕಡೆಗಳಲ್ಲಿ ನೀಡಲಾಗುವುದು ಎಂದರು.
200ಕ್ಕೂ ಅಧಿಕ ಕಂಪೆನಿಗಳು ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇರುವುದರಿಂದ ವಿವಿಧ ಕಾಲೇಜುಗಳ ಪ್ರಾಂಶುಪಾಲರಿಗೆ ಮುಂಚಿತವಾಗಿ ತಿಳಿಸಿ, ಅಲ್ಲಿನ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಉತ್ತೇಜಿಸಲಾಗುತ್ತಿದೆ ಎಂದರು.
ಆಳ್ವಾಸ್ ಪ್ರಗತಿಗೆ ಈವರೆಗೆ 134 ಕಂಪನಿಗಳು ನೋಂದಾಯಿಸಿಕೊಂಡಿದ್ದು ಮತ್ತು ಹೆಚ್ಚುವರಿಯಾಗಿ 70 ಕಂಪನಿಗಳು ಪಾಲ್ಗೊಳ್ಳುವ ಭರವಸೆ ನೀಡಿವೆ. ಒಟ್ಟು 200ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಎಂಬಿಎ, ಎಂ.ಕಾಂ, ಬಿ.ಕಾಂ, ಬಿಬಿಎ, ಬಿಎಸ್ಸಿ, ಬಿಎ, ಬಿಸಿಎ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಹೈದರಬಾದ್ನ ಫ್ಯಾಕ್ಟ್ಸೆಟ್ ಸಂಸ್ಥೆ, ಇಎಕ್ಸ್ಎಲ್ ಸರ್ವೀಸ್, ಮಹೀಂದ್ರಾ ಫಿನಾನ್ಸ್, ಪ್ರತಿಷ್ಠಿತ ಬ್ಯಾಂಕ್ಗಳಾದ ಎಚ್ಡಿಎಫ್ಸಿ, ಆ್ಯಕ್ಸಿಸ್, ಐಡಿಎಫ್ಸಿ ಫಸ್ಟ್ ಬ್ಯಾಂಕ್, ಬಂಧನ್ ಬ್ಯಾಂಕ್ ಹಾಗೂ ಇನ್ನಿತರ ಸಂಸ್ಥೆಗಳು ಬಹುಅವಕಾಶಗಳನ್ನು ನೀಡಲಿವೆ.
ಲಾಜಿಸ್ಟಿಕ್ ಸಪ್ಲೈ ಚೈನ್ ಕಂಪೆನಿ ಫ್ಲಿಪ್ಕಾರ್ಟ ಎಂಬಿಎ ಹಾಗೂ ಇಂಜಿನಿಯರಿಂಗ್ ಪದವೀಧರರಿಗೆ ಅವಕಾಶ ನೀಡಲಿದೆ. ಪ್ರತಿಷ್ಠಿತ ಇವೈ ಕಂಪೆನಿ ಬಿಕಾಂ ಹಾಗೂ ಎಂಬಿಎ ಪದವೀಧರರನ್ನು ನೇಮಿಸಿಕೊಳ್ಳಲಿದೆ. ಮ್ಯಾಕ್ಸ್ ಹೈಪರ್ ಮಾರ್ಕೆಟ್, ಜಾಯ್ ಅಲುಕ್ಕಾಸ್ ಯಾವುದೇ ಪದವಿ ಹಿನ್ನಲೆಯವರನ್ನು ನೇಮಕಾತಿ ಮಾಡಿಕೊಳ್ಳಲಿದೆ. ಅಮೆಜಾನ್ ಕಂಪೆನಿ ಯಾವುದೇ ಪದವಿ ಹಿನ್ನಲೆಯವರನ್ನು ಆಯ್ಕೆ ಮಾಡಿಕೊಳ್ಳಲಿದೆ. ಟೆಕ್ ಮಹೇಂದ್ರ, ಎಕ್ಸ್ರ್ಪಟೈಸ್ ಕಂಪೆನಿಯು ಇಂಜಿನಿಯರಿಂಗ್ ಪದವಿಯ ಉದ್ಯೋಗಾಕಾಂಕ್ಷಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಉತ್ಪಾದನಾ ವಲಯದಲ್ಲಿ ಕಿರ್ಲೋಸ್ಕರ್ ಟೊಯೋಟಾ ಟೆಕ್ಸಟೈಲ್ ಮೆಷಿನರಿ, ಉಷಾ ಆರ್ಮರ್ ಮುಂತಾದ ಕಂಪೆನಿಗಳು ಭಾಗವಹಿಸಲಿವೆ. ಐಟಿ ವಲಯದಲ್ಲಿ ಇನ್ಫೋಮೆಟಿಕಾ, ಇಜಿಡಿಕೆ ಪ್ರೈ. ಲಿ, ವೆಲಂಕಣಿ ಸಾಫ್ಟವೇರ್ ಪ್ರೈ.ಲಿ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ದಿಯಾ ಸಿಸ್ಟಮ್ಸ್, 24*7, ಕಾನ್ಸೆಂಟ್ರಿಕ್ಸ್, ವಿನ್ಮ್ಯಾನ್ ಸಾಫ್ಟ್ವೇರ್ ಕಂಪೆನಿಗಳು ಯಾವುದೇ ಹಿನ್ನಲೆಯ ಪದವೀಧರರನ್ನು ನೇಮಿಸಿಕೊಳ್ಳಲಿವೆ. ಮಾರಾಟ ವಲಯದಲ್ಲಿ ಕಲ್ಟ್ಫಿಟ್, ಐಟಿಸಿ ಲಿಮಿಟೆಡ್, ಬ್ಲೂಸ್ಟೋನ್ ಜ್ಯುವೆಲ್ಲರಿಗಳು ಪದವೀಧರರಿಗೆ ಉದ್ಯೋಗ ನೀಡಲಿವೆ. ಅಜಾಕ್ಸ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್, ಬುಹ್ಲರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ನೆಕ್ಸ್ಟೀರ್ ಆಟೋಮೋಟಿವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ವಂಡರ್ಲಾ ಹಾಲಿಡೇಸ್ನಂತಹ ಕಂಪೆನಿಗಳು ಮೆಕ್ಯಾನಿಕಲ್ ಇಂಜಿನಿಯರ್ಗಳಿಗೆ 50ಕ್ಕೂ ಹೆಚ್ಚಿನ ಉದ್ಯೋಗಾವಕಾಶ ನೀಡಲಿವೆ. ವೋಲ್ವೋಗ್ರೂಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಹಿಳಾ ಮೆಕ್ಯಾನಿಕಲ್ ಪದವೀಧರರಿಗೆ ಉದ್ಯೋಗ ನೀಡಲಿದೆ. ಆ್ಯಂಥಮ್ ಬಯೋ, ರೆಸಿ ಫಾರ್ಮಾ, ಹೈದರಾಬಾದ್ನ ಎಂಎಸ್ಎನ್ ಲ್ಯಾಬೋರೇಟರೀಸ್ ಹಾಗೂ ಹಿಟಿರೋ ಲ್ಯಾಬ್ಸ್ ಎಂಎಸ್ಸಿ ಹಾಗೂ ಬಿಎಸ್ಸಿ ಪದವೀಧರರಿಗೆ ಉದ್ಯೋಗ ಕಲ್ಪಿಸಲಿವೆ. ಸನ್ಸೆರಾ ಇಂಜಿನಿಯರಿಂಗ್ ಲಿಮಿಟೆಡ್., ಏರೋಸ್ಪೇಸ್ ಡಿವಿಶನ್, ಸೆರಾಟಿಜಿಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕಿರ್ಲೋಸ್ಕರ್ ಟೊಯೋಟಾ ಟೆಕ್ಸ್ಟೈಲ್ ಮೆಷಿನರಿ ಪ್ರೈ ಲಿಮಿಟೆಡ್, ವೋಲ್ವೋ ಗ್ರೂಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸುಂದರಂ ಆಟೋ ಕಾಂಪೆÇನೆಂಟ್ಸ್ ಲಿಮಿಟೆಡ್, ಹಿಮಾಲಯ ವೆಲ್ನೆಸ್, ಮಾಂಡೋವಿ ಮೋಟಾರ್ಸ್, ಪ್ರಥಮ್ ಮೋಟಾರ್ಸ್, ಅರವಿಂದ್ ಮೋಟಾರ್ಸ್, ಸುಪ್ರೀಮ್ ಆಟೋ ಮತ್ತು ಇನ್ನೂ ಅನೇಕ ಕಂಪೆನಿಗಳು ಐಟಿಐ ಹಾಗೂ ಡಿಪ್ಲೊಮೋ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಿವೆ.
ನರ್ಸಿಂಗ್ ಪದವೀಧರ ಅಭ್ಯರ್ಥಿಗಳಿಗೆ ಪ್ರಮುಖ ಆಸ್ಪತ್ರೆಗಳಾದ ಹಿರಾನಂದನಿ ಆಸ್ಪತ್ರೆ, ಮುಂಬೈಯ ಅಪೆÇಲೊ ಆಸ್ಪತ್ರೆ, ಕೆಎಂಸಿ ಆಸ್ಪತ್ರೆ ಹಾಗೂ ಇನ್ನಿತರ ವೈದ್ಯಕೀಯ ಸಂಸ್ಥೆಗಳು ಉದ್ಯೋಗ ನೀಡಲಿವೆ. ಎಂದರು.
ಈ ತನಕ 31,896 ಉದ್ಯೋಗಗವಕಾಶ:
ಸಂಸ್ಥೆಯು ಈವರೆಗೆ 20 ಬೃಹತ್ ಉದ್ಯೋಗ ಮೇಳಗಳನ್ನು ಬಹಳ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿದೆ. ಸರ್ಕಾರ ಮತ್ತು ಸಾಮಾಜಿಕ ಸಂಸ್ಥೆಗಳ ಸಹಯೋಗದೊಂದಿಗೆ ಚಿಕ್ಕಬಳ್ಳಾಪುರ, ಮಂಗಳೂರು, ಬೆಳ್ತಂಗಡಿ ಮತ್ತು ಬಂಟ್ವಾಳ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಇದಕ್ಕಾಗಿ ಈವರೆಗೆ ಸುಮಾರು 5 ಕೋಟಿಗಳಷ್ಟು ಹಣವನ್ನು ವ್ಯಯಿಸಿದೆ. ಕರ್ನಾಟಕವು ಸೇರಿದಂತೆ ಕೇರಳ, ತಮಿಳುನಾಡು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಅಭ್ಯರ್ಥಿಗಳು ಈ ಉದ್ಯೋಗ ಮೇಳದ ಹೆಚ್ಚಿನ ಲಾಭ ಪಡೆದಿದ್ದಾರೆ. ಒಟ್ಟು 1,60,000 ಆಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರೆ, 55,564 ಅಭ್ಯರ್ಥಿಗಳು ವಿವಿಧ ಕಂಪೆನಿಗಳಿಗೆ ಶಾರ್ಟ್ ಲೀಸ್ಟ್ ಗೊಂಡಿದ್ದಾರೆ. ಪ್ರತೀ ಉದ್ಯೋಗ ಮೇಳದಲ್ಲಿ ಸುಮಾರು 200ರಷ್ಟು ಪ್ರತಿಷ್ಠಿತ ಕಂಪನಿಗಳು ಪಾಲ್ಗೊಂಡು, ಇಲ್ಲಿವರೆಗೆ ಒಟ್ಟು 31,896 ಉದ್ಯೋಗಗಳನ್ನು ನೀಡಿವೆ. ಆಳ್ವಾಸ್ ಪ್ರಗತಿಯಲ್ಲಿ ನಿರುದ್ಯೋಗ ಪರಿಹರಿಸುವ ಪ್ರಭಾವಶಾಲಿ ಪ್ರಯತ್ನವನ್ನು ಫ್ರಾನ್ಸ್ ಟಿವಿ ಸೇರಿದಂತೆ ವಿವಿಧ ಮಾಧ್ಯಮಗಳು ಗಮನ ಸೆಳೆದಿವೆ ಎಂದರು.
ವಿಶೇಷ ಸೂಚನೆ:
ಹೊರ ಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಜೂನ್ 6ರಿಂದ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಐಟಿಐ, ಡಿಪ್ಲೋಮಾ ಹಿನ್ನಲೆಯವರಿಗೆ ಆಳ್ವಾಸ್ನಿಂದ ಬಸ್ಸಿನ ವ್ಯವಸ್ಥೆ ಒದಗಿಸಲಾಗುವುದು.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9008907716, 9663190590, 7975223865, 9741440490. ಅಭ್ಯರ್ಥಿಗಳ ನೊಂದಾವಣೆ ಹಾಗೂ ಉದ್ಯೋಗ ನೀಡಲಿರುವ ಕಂಪೆನಿಗಳ ಮಾಹಿತಿಗೆ:www.alvaspragati.com
ಕಂಪೆನಿಗಳ ನೊಂದಾವಣೆ ಹಾಗೂ ಇತರ ಮಾಹಿತಿಗೆ: 8971250414 ಸಂಪರ್ಕಿಸಬಹುದು ಎಂದರು.
ಅಭ್ಯರ್ಥಿಗಳು ಲಗತ್ತಿಸಬೇಕಾದ ಅಗತ್ಯ ದಾಖಲಾತಿಗಳು:
*5-10 ಪಾಸ್ಪೋರ್ಟ್ ಭಾವಚಿತ್ರಗಳು
*ಸಂಪೂರ್ಣ ಶೈಕ್ಷಣಿಕ ಮಾಹಿತಿಗಳನ್ನೊಳಗೊಂಡ ರೆಸ್ಯೂಮೆ
*ಅಂಕ ಪಟ್ಟಿಗಳು (ನೆರಳಚ್ಚು ಪ್ರತಿಗಳು) (XEROX)
*ಆನ್ಲೈನ್ ರಿಜಿಸ್ಟ್ರೇಶನ್ ನಂಬರ್/ಐಡಿ
* ಅಭ್ಯರ್ಥಿಗಳು ಉದ್ಯೋಗ ಮೇಳದಂದು ಬೆಳಿಗ್ಗೆ 8 ಗಂಟೆಗೆ ವಿದ್ಯಾಗಿರಿ ಕ್ಯಾಂಪಸ್ನಲ್ಲಿ ಹಾಜರಿರಬೇಕು.
ಸುದ್ಧಿಗೋಷ್ಠಿಯಲ್ಲಿ ಆಳ್ವಾಸ್ ಪ್ರಗತಿ 2024ರ ಐಟಿಇಎಸ್ ಸೆಕ್ಟರ್ ಮುಖ್ಯಸ್ಥರಾದ ಡಾ.ಗುರುಪ್ರಸಾದ್ ಪೈ ಬಿ ಉಪಸ್ಥಿತರಿದ್ದರು.











