ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಶಿರೂರು ಟೋಲ್ಗೇಟ್ನಲ್ಲಿ ಸ್ಥಳೀಯರಿಗೆ ನೀಡುತ್ತಿದ್ದ ಟೋಲ್ ರಿಯಾಯತಿ ಮುಂದುವರಿಸಬೇಕೆಂದು ಆಗ್ರಹಿಸಿ ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ಗುರುವಾರ ಮನವಿ ನೀಡಲಾಯಿತು. ಟೋಲ್ ಆರಂಭಿಸುವ ವೇಳೆ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆ ಸಭೆ ನಡೆಸಿ ಶಿರೂರಿನ 5 ಕಿ.ಮೀ ವ್ಯಾಪ್ತಿಯ ವಾಹನಗಳಿಗೆ ಟೋಲ್ ರಿಯಾಯತಿ ನೀಡಲು ನಿರ್ಧರಿಸಲಾಗಿತ್ತು. ಆದರೆ ಕಳೆದೊಂದು ವಾರದಿಂದ ಶಿರೂರಿನ ಸ್ಥಳೀಯ ವಾಹನಗಳಿಗೆ ತಿಂಗಳ ಪಾಸ್ ಮಾಡಿಸಿಕೊಳ್ಳಲು ಟೋಲ್ ಸಿಬ್ಬಂದಿಗಳು ತಿಳಿಸಿದ್ದಾರೆ. ಈಗಾಗಲೆ ಸಾಸ್ತಾನ ಮತ್ತು ಹೆಜಮಾಡಿಯಲ್ಲಿ ಈ ಕುರಿತು ಹೋರಾಟ ಆರಂಭವಾಗಿದ್ದು ಶಿರೂರಿನಲ್ಲಿ ಯಾವುದೇ ಕಾರಣಕ್ಕೂ ಟೋಲ್ ರಿಯಾಯತಿ ಹಿಂಪಡೆಯಬಾರದು ಮತ್ತು ಈ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಿ ನಿರ್ಧಾರ ತೆಗೆದುಕೊಳ್ಳಬೇಕು. ಒಂದೊಮ್ಮೆ ಏಕಾಎಕಿ ನಿರ್ಣಯ ಕೈಗೊಂಡರೆ ಸಾರ್ವಜನಿಕ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಇದಲ್ಲದೇ ಮಳೆಗಾಲ ಸಮೀಪಿಸುತ್ತಿದ್ದು ಕಾಮಗಾರಿ ನಡೆಸುತ್ತಿರುವ ಕಂಪೆನಿ ಯಾವುದೇ ಮುಂಜಾಗೃತೆ ಕೈಗೊಂಡಿಲ್ಲ. ಕಳೆದ ವರ್ಷ ಹೆದ್ದಾರಿ ಪಕ್ಕದ ಹೊಲ ಗದ್ದೆಗಳು ಮತ್ತು ಮನೆಗಳಿಗೆ ನೀರು ನುಗ್ಗಿತ್ತು. ಹೆದ್ದಾರಿಯಲ್ಲಿ ಮಳೆ ನೀರು ನಿಲ್ಲುವುದರಿಂದ ಅಪಘಾತಗಳು ಹೆಚ್ಚುತ್ತಿದೆ. ಇವುಗಳನ್ನು ಶೀಘ್ರವಾಗಿ ಸರಿಪಡಿಸಬೇಕು. ಶಿರೂರು ಟೋಲ್ಗೇಟ್ನಲ್ಲಿ ಉದ್ಯೋಗ ಹಾಗೂ ಇತರ ಅವಕಾಶಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು. ಬೀದಿ ದೀಪ, ಸರ್ವಿಸ್ ರಸ್ತೆ, ಸೂಚನಾ ಫಲಕ, ಬಸ್ ನಿಲ್ದಾಣ ಬೇಡಿಕೆ, ಬಪ್ಪನಬೈಲು ಭಾಗದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವುದು, ಸಾರ್ವಜನಿಕರು ಮತ್ತು ಸ್ಥಳೀಯರ ಜೊತೆ ಟೋಲ್ ಸಿಬಂಧಿಗಳು ಸೌಜನ್ಯದಿಂದ ವರ್ತಿಸುವುದು, ಪಂಚಾಯತ್ ಮನವಿಗಳಿಗೆ ಸ್ಪಂದಿಸಬೇಕು. ಒಂದು ತಿಂಗಳೊಳಗೆ ಎಲ್ಲಾ ಸಮಸ್ಯೆಗೆ ಪರಿಹಾರ ನೀಡಬೇಕು ಎಂಬುದಾಗಿ ಮನವಿಯಲ್ಲಿ ಆಗ್ರಹಿಸಲಾಗಿದೆ.
ಐ.ಆರ್.ಬಿ ಟೋಲ್ ವ್ಯವಸ್ಥಾಪಕ ರಾಜನ್ ನಾಯರ್ ರವರಿಗೆ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಿರೂರಿನ ವಿವಿಧ ಪ್ರಮುಖರು, ಗ್ರಾ.ಪಂ ಉಪಾಧ್ಯಕ್ಷರು, ಗ್ರಾ.ಪಂ ಸದಸ್ಯರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು, ಆರಕ್ಷಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ಹಾಜರಿದ್ದರು.











