ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ, ಫೆ.11 :144 ವರ್ಷಗಳಿಗೊಮ್ಮೆ ನಡೆಯುವ ಪ್ರಯಾಗ್ ರಾಜ್ ನ ಮಹಾ ಕುಂಭ ಮೇಳಕ್ಕೆ ತೆರಳ ಬೇಕು ಎನ್ನುವ ಅಸಂಖ್ಯಾತ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಭಾಗದ ಹಿಂದೂಗಳ ಆಸೆಗೆ ಪೂರಕವಾಗಿ ಉಡುಪಿಯಿಂದ ಕೊಂಕಣ ಮಾರ್ಗದಲ್ಲಿ ವಿಶೇಷ ಕುಂಭ ಮೇಳ ರೈಲು ಓಡಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರ ಬಳಿ ಮನವಿ ಮಾಡಿದ್ದು, ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶೀಘ್ರದಲ್ಲೇ ಕುಂಭ ಮೇಳ ವಿಶೇಷ ರೈಲನ್ನು ಉಡುಪಿ ಪ್ರಯಾಗ್ ರಾಜ್ ನಡುವೆ ಓಡಿಸುವುದಾಗಿ ಸಂಸದರಿಗೆ ತಿಳಿಸಿದ್ದಾರೆ.
ಮಕರ ಸಂಕ್ರಾಂತಿಯಿಂದ ಶಿವರಾತ್ರಿ ನಡುವೆ ನಡೆಯುವ ಕುಂಭ ಮೇಳ ಈ ಬಾರಿ ಅತ್ಯಂತ ವಿಶಿಷ್ಟವಾಗಿದ್ದು 144 ವರ್ಷಗಳಿಗೆ ಮಾತ್ರ ಬರುವ ಮಹಾ ಕುಂಭ ಮೇಳ ಈ ಬಾರಿ ಘಟಿಸಲಿದ್ದು, ಶಿವರಾತ್ರಿಗೂ ಹತ್ತುದಿನ ಮುಂಚಿತವಾಗಿ ಪೆಬ್ರವರಿ 16-17 ರ ಸುಮಾರಿಗೆ ಓಡುವ ಸಮಯ ಪಟ್ಟಿ ಇರುವ ವಿಶೇಷ ರೈಲನ್ನು ಘೋಷಿಸ ಬೇಕು ಎಂಬ ಬೇಡಿಕೆ ಇಟ್ಟು ಸಂಸದರು ಇದೇ ತಿಂಗಳ 9ನೇ ತಾರೀಕಿನಂದು ದೆಹಲಿಯಲ್ಲಿ ಸಚಿವರನ್ನು ಭೇಟಿಯಾಗಿದ್ದರು.
ದೇಶಾದ್ಯಂತ ಎಲ್ಲಾ ನಗರಗಳಿಂದಲೂ ವಿಶೇಷ ರೈಲುಗಳು ಓಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯ ಕುಂಭ ಮೇಳ ಸೇವೆಗಳು ಉಡುಪಿ ಜಿಲ್ಲೆಯ ಅಸಂಖ್ಯಾತ ಭಕ್ತರಿಗೂ ಲಭಿಸ ಬೇಕು ಎನ್ನುವ ಕಾರಣದಿಂದ ಸಂಸದರು ವಿಶೇಷ ಪ್ರಯತ್ನ ನಡೆಸಿದ್ದು, ದೇಶಾದ್ಯಂತ ರೈಲು ಬೋಗಿಗಳ ಕೊರತೆಯ ಕಾರಣಗಳನ್ನು ಇಲಾಖೆ ನೀಡುತಿದ್ದರೂ ,ಸಾಮಾನ್ಯ ಜನರಿಗೂ ಕೈಗೆಟುಕಲಿ ಎಂಬ ದ್ರಷ್ಟಿಯಿಂದ, ಜನರಲ್ ಮತ್ತು ಎಸಿ ಕೋಚ್ ಇರುವ ರೈಲಿನ ವ್ವವಸ್ತೆಗೆ ಸಂಸದರು ಮನವಿ ಇಟ್ಟಿದ್ದು , ಈ ಬಗ್ಗೆ ಶೀಘ್ರ ಪ್ರಕಟಣೆ ಹೊರ ಬರುವ ನಿರೀಕ್ಷೆ ಇದೆ.











