ಕುಂದಾಪುರ :ಕೋಡಿ ಉಪ್ಪು ನೀರು ನುಗ್ಗಿದ ಪ್ರದೇಶಗಳಿಗೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭೇಟಿ, ಶಾಶ್ವತ ಪರಿಹಾರದ ಭರವಸೆ

0
638

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕುಂದಾಪುರ ಪುರಸಭಾ ವ್ಯಾಪ್ತಿಯ ಕೋಡಿ ಪರಿಸರದಲ್ಲಿ ಕೃಷಿ ಜಮೀನು ಮತ್ತು ಮನೆಗಳಿಗೆ ಉಪ್ಪು ನೀರು ನುಗ್ಗಿ ಹಾನಿಯಾದ ಪ್ರದೇಶಗಳಿಗೆ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Click Here

ಕೋಡಿ ಪರಿಸರದಲ್ಲಿ ಕಳೆದ 20 ವರ್ಷಗಳಿಂದ ನದಿಗಳಿಂದ ಉಪ್ಪು ನೀರು ಉಕ್ಕಿ ಕೃಷಿ ಜಮೀನು ಮತ್ತು ಮನೆಗಳಿಗೆ ನುಗ್ಗುತ್ತಿದ್ದು ಈ ಸಮಸ್ಯೆಯಿಂದ ಕೋಡಿ ಭಾಗದ ಜನ ವಸತಿ ಪ್ರದೇಶದ ಗ್ರಾಮಸ್ಥರು ದಿನ ನಿತ್ಯ ಸಮಸ್ಯೆಗೆ ಒಳಗಾಗಿದ್ದು ಉಪ್ಪು ನೀರು ನುಗ್ಗುವುದರಿಂದ ನೂರಾರು ಎಕರೆ ಕೃಷಿ ಜಮೀನಿನಲ್ಲಿ ಕೃಷಿ ಮಾಡಲಾಗುತ್ತಿಲ್ಲ ಕುಡಿಯುವ ನೀರು ಸಹ ಉಪ್ಪಾಗಿದ್ದು ಹಾಗೂ ಉಪ್ಪು ನೀರು ನಿಲ್ಲುವುದರಿಂದ ಹುಲ್ಲು ಮತ್ತು ಗಿಡಗಳು ಕೊಳೆತು ವಿಪರೀತ ಸೊಳ್ಳೆ ಉತ್ಪತ್ತಿಯಾಗುತ್ತಿದ್ದು ಸಾಂಕ್ರಮಿಕ ರೋಗ ಹರಡುವ ಸಾಧ್ಯತೆ ಇರುವುದರಿಂದ ಈ ಭಾಗದ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ಬಾರಿ ನುಗ್ಗಿದ ಉಪ್ಪು ನೀರು ಕೃಷಿ ಜಮೀನಿನಿಂದ ಇನ್ನೂ ಇಳಿದಿಲ್ಲ. ಉದ್ದು, ಆವಡೆ ಮೊದಲಾದ ದ್ವಿದಳ ಧಾನ್ಯಗಳ ಬೇಸಾಯ ಮಾಡಿದ ರೈತರು ಸಂಪೂರ್ಣ ನಷ್ಟ ಅನುಭವಿಸಿದ್ದಾರೆ. ಕೂಡಲೇ ಶಾಶ್ವತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ತರು ಶಾಸಕರಲ್ಲಿ ಆಗ್ರಹಿಸಿದರು.

ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕರು, ಈ ಸಮಸ್ಯೆಯನ್ನು ಶಾಶ್ವತ ಪರಿಹಾರಕ್ಕೆ ಈಗಾಗಲೇ ನದಿ ದಂಡೆ ಸಂರಕ್ಷಣೆಗೆ ಅನುದಾನ ಮಂಜೂರು ಮಾಡಲು ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‍ಎಸ್ ಬೋಸರಾಜ ಅವರಿಗೆ ಮನವಿ ಮಾಡಿದ್ದೇನೆ. ಅವರು ಭರವಸೆ ನೀಡಿದ್ದಾರೆ. ಈ ಭಾಗದ ಉಪ್ಪು ನೀರು ಸಮಸ್ಯೆ ನಮ್ಮ ಗಮನದಲ್ಲಿದೆ. ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಲು ನಾವೆಲ್ಲಾ ಬದ್ಧರಿದ್ದೇವೆ. ಕೂಡಲೇ ತುರ್ತು ಪರಿಹಾರ ಏನು ಆಗಬೇಕು ಎನ್ನುವುದರ ಬಗ್ಗೆ ಚರ್ಚೆ ಮಾಡಿ ತಾತ್ಕಾಲಿಕವಾಗಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಪ್ಪು ನೀರು ಕೆಲವೊಂದು ಅವೈಜ್ಞಾನಿಕ ಕಾಮಗಾರಿಯಿಂದ ನೀರು ಒಳ ನುಸುಳುತ್ತಿದೆ. ಇದರ ಬಗ್ಗೆ ಗಮನ ಹರಿಸಿ ಸಮಸ್ಯೆ ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಮೋಹನದಾಸ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮತಿ ಅಧ್ಯಕ್ಷ ಪ್ರಭಾಕರ, ತಹಶೀಲ್ದಾರ್ ಮಲ್ಲಿಕಾರ್ಜುನ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಅರುಣ್ ಭಂಡಾರಿ, ಪುರಸಭಾ ಸದಸ್ಯರಾದ ಕಮಲ ಮಂಜುನಾಥ, ಆಶ್ಫಕ್, ದೇವಕಿ ಸಣ್ಣಯ್ಯ, ಶ್ವೇತ ಸಂತೋಷ್, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ ಕಾವೇರಿ, ಸ್ಥಳೀಯ ಪ್ರಮುಖರಾದ ಅಶೋಕ್ ಪೂಜಾರಿ ಕೋಡಿ, ಗೋಪಾಲ ಪೂಜಾರಿ, ಗಂಗಾಧರ ಪೂಜಾರಿ,ಶಂಕರ ಪೂಜಾರಿ, ಸುಬ್ರಹ್ಮಣ್ಯ ಪೂಜಾರಿ ಮೊದಲಾದರು ಉಪಸ್ಥಿತರಿದ್ದರು.

ಮಾತಿನ ಚಕಮಕಿ:
ಉಪ್ಪು ನೀರು ನುಗ್ಗಿದ ಪ್ರದೇಶಗಳ ವೀಕ್ಷಣೆ ಸಂದರ್ಭ ಸ್ಥಳೀಯ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನೆಡೆಯಿತು. ಕೆಲಹೊತ್ತು ಇದೇ ವಿಚಾರವಾಗಿ ವಾಗ್ವಾದ ನಡೆಯತು. ಸಮಸ್ಯೆಯ ವಿಚಾರವಾಗಿ ಗಂಭೀರ ಸ್ವರೂಪ ಪಡೆದುಕೊಂಡಿತು. ಶಾಸಕರ ಸಮ್ಮುಖದಲ್ಲಿ ಸ್ಥಳೀಯ ಮಹಿಳೆಯರು ಸಮಸ್ಯೆಯನ್ನು ತೆರೆದಿಟ್ಟರು. ಪ್ರತಿ ವರ್ಷವೂ ಸಮಸ್ಯೆ ಅನುಭವಿಸುತ್ತಿದ್ದೇವೆ. ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸುವುದೇ ಇಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

Click Here

LEAVE A REPLY

Please enter your comment!
Please enter your name here