ಸುಜ್ಞಾನ್ ಪ.ಪೂ. ಕಾಲೇಜು ಕುಂದಾಪುರ : ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ – 7 ದಿನಗಳ ಬೇಸಿಗೆ ಶಿಬಿರ ‘ಮಂಥನ’ ಸಂಪನ್ನ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಬಾಲ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕಿದೆ. ನಮ್ಮ ಸುತ್ತಮುತ್ತಲಿರುವ ಕಲಾವಿದರನ್ನು ವಿದ್ಯಾಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಿದರೆ ಮಾತ್ರ ಅವರ ಕಲೆಯನ್ನು ಬೆಳೆಸಲು ಉಳಿಸಲು ಸಾಧ್ಯವಾಗುತ್ತದೆ. ಬದುಕು ಕಟ್ಟಿಕೊಳ್ಳಲು ಸರಿಯಾದ ಚಿಂತನೆ, ಆಲೋಚನೆ ಮಾಡಿದರೆ ಎಲ್ಲಾ ಕಲೆಗಳಲ್ಲೂ ನಾವು ನಮ್ಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲಾ ಕಲೆಗಳಲ್ಲೂ ಅದಕ್ಕೆ ಆದ ಸಾಮಥ್ರ್ಯ, ಬೆಲೆ ಇದೆ. ಅದನ್ನು ಮಕ್ಕಳು ನೋಡಿ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ.ರಮೇಶ ಶೆಟ್ಟಿ ಹೇಳಿದರು.
ಕುಂದಾಪುರದ ಯಡಾಡಿ-ಮತ್ಯಾಡಿಯ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಪ್ರಾಯೋಜಿತ ಸುಜ್ಞಾನ ಪಿಯು ಕಾಲೇಜು, ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ಆಶ್ರಯದಲ್ಲಿ ವಿದ್ಯಾರಣ್ಯ ಕ್ಯಾಂಪಸ್ನಲ್ಲಿ ಜರಗಿದ ಮಂಥನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಂದಾಪುರ, ಬೈಂದೂರು ಹಾಗೂ ಬ್ರಹ್ಮಾವರ ತಾಲೂಕಿನ ವಿವಿಧ ಶಾಲೆಗಳಿಂದ ಸುಮಾರು ಒಂದು ಸಾವಿರ ಮಕ್ಕಳನ್ನು ಒಂದೆಡೆ ಸೇರಿಸಿಕೊಂಡು ಅವರಿಗೆ ಬೇಕಾದ ಜ್ಞಾನವನ್ನು ಕೊಡುವ ಕೆಲಸ ಬೇಸಿಗೆ ಶಿಬಿರದಲ್ಲಿ ಮಾಡಲಾಗಿದೆ. ಸುಮಾರು 35ಕ್ಕೂ ಮಿಕ್ಕಿ ರಾಜ್ಯ ಮಟ್ಟದ ಕಲಾವಿದರು ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಕ್ಕಳಿಗೆ ಮನಸ್ಸಿಗೆ ಮುಟ್ಟುವ ರೀತಿಯಲ್ಲಿ ಅವರಿಗೆ ಮಾಹಿತಿ ಮಾರ್ಗದರ್ಶನ ನೀಡಿದ್ದಾರೆ. ಮಂಥನ ಬೇಸಿಗೆ ಶಿಬಿರ ಅದ್ಭುತವಾಗಿ ಮೂಡಿಬಂದಿದ್ದು, ಶಿಬಿರದ ಯಶಸ್ಸಿನಲ್ಲಿ ಸಂಸ್ಥೆಯ ಬೋಧಕ-ಬೋಧಕೇತರ ಸಿಬ್ಬಂದಿಗಳ ಸಹಕಾರ ಅವಿಸ್ಮರಣೀಯ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಪ್ರಸಿದ್ಧ ಕನ್ನಡ ಹಾಸ್ಯ ಭಾಷಣಗಾರ ಕೋಗಳಿ ಕೊಟ್ರೇಶ್ ಕೂಡ್ಲಿಗಿ ಶುಭಾಶಂಸನೆಗೈದರು. ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಮತ್ತು ಕೋಶಾಧಿಕಾರಿ ಭರತ್ ಶೆಟ್ಟಿ ಮಾತನಾಡಿದರು. ರಾಷ್ಟ್ರೀಯ ಮಟ್ಟದ ಯೋಗಪಟು ಸೃಷ್ಟಿ ಕೆ.ವೈ. ದಾವಣಗೆರೆ ಅವರನ್ನು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ವತಿಯಿಂದ ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಪರೀಕ್ಷಿತ್, ಸ್ಮತಿಶ್ರೀ ಮತ್ತು ರಾಮನಾಥ ಹಾಗೂ ಪೋಷಕರಾದ ಸಚಿನ್ ಕುಮಾರ್ ಶೆಟ್ಟಿ, ಅಜಯ್ ಶೆಟ್ಟಿ ಮತ್ತು ರೇಖಾ ಕುಲಾಲ್ ಶಿಬಿರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಸುಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಂಜನ್ ಶೆಟ್ಟಿ ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರದೀಪ ಕೆ. ಉಪಸ್ಥಿತರಿದ್ದರು. ರಾಷ್ಟ್ರೀಯ ಮಟ್ಟದ ಯೋಗಪಟು ಸೃಷ್ಟಿ ಕೆ.ವೈ. ಅವರು ಯೋಗ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದರು. ಇವರು ಸುಮಾರು 10 ನಿಮಿಷಗಳ ಕಾಲ ನೀಡಿದ ಯೋಗ ಪ್ರದರ್ಶನ ಎಲ್ಲರ ಮೆಚ್ಚುಗೆಗೂ ಪಾತ್ರವಾಯಿತು.
ಶಿಕ್ಷಕಿ ಪ್ರೇಮಾ ಸ್ವಾಗತಿಸಿದರು. ಶಿಕ್ಷಕ ರಜತ್ ಭಟ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.